ಬೆಂಗಳೂರು: 2012ರಲ್ಲಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ನಾನೂ ಒತ್ತಾಯ ಮಾಡುತ್ತೇನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರೆ, ಕೋರ್ಟ್ ಮೊರೆ ಹೋಗಬೇಕು. ಅದನ್ನು ಬಿಟ್ಟು ಜೇಬಲ್ಲಿ ಪ್ರೂಫ್ ಇಟ್ಟುಕೊಟ್ಟು ಓಡಾಡುತ್ತಿರುವುದು ಯಾಕೆ? ಯಾರಾದರೂ ಗಿರೀಶ್ ಮಟ್ಟಣ್ಣನವರ್ ಮೊಬೈಲ್ ಕದ್ದು ಪೊಲೀಸರಿಗೆ ಕೊಟ್ಟಿದ್ದರೆ ಸೌಜನ್ಯಾಗೆ ನ್ಯಾಯ ಸಿಗುತ್ತಿತ್ತು. ಆದರೆ, ಮಟ್ಟಣ್ಣನವರ್ ಬಳಿ ಇರುವ ಸಾಕ್ಷ್ಯಗಳೆಲ್ಲಾ ಸುಜಾತಾ ಭಟ್ ರೀತಿಯದ್ದು ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದರು.
ಬೆಂಗಳೂರಿನ ಸಂಜಯ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಧರ್ಮ ಜಾಗೃತಿ ಸಭೆಯಲ್ಲಿ ಧರ್ಮಸ್ಥಳ ಪರ ಹೋರಾಟಗಾರ ವಸಂತ್ ಗಿಳಿಯಾರ್ ಅವರು ಮಾತನಾಡಿದರು.
ಅಣ್ಣಪ್ಪ ಹಾಗೂ ಮಂಜುನಾಥನ ಸೇವಕರಾಗಿ ವೀರೇಂದ್ರ ಹೆಗ್ಗಡೆಯವರನ್ನು ಕಳೆದ ಒಂದೆರಡು ದಶಕದಿಂದ ನಾನು ನೋಡಿದ್ದೇನೆ. ಆದರೆ, ಅವರು ತಪ್ಪು ಮಾಡಿಲ್ಲ ಪಕ್ಕದವರು ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದರು. ಈ ಬಗ್ಗೆ ಹೆಗ್ಗಡೆಯವರಿಗೆ ತುಂಬಾ ಆತ್ಮೀಯರೊಬ್ಬರನ್ನು ಕೇಳಿದಾಗ, ಧರ್ಮಾಧಿಕಾರಿಗಳು ಎಷ್ಟು ಸೂಕ್ಷ್ಮ ಎಂದರೆ ಸುತ್ತಲೂ ಎಂತವರನ್ನು ಇಟ್ಟುಕೊಳ್ಳಬೇಕು ಎಂದು ಹಲವು ಬಾರಿ ಯೋಚನೆ ಮಾಡಿ, ನಿರ್ಧರಿಸುತ್ತಿದ್ದರು. ನಾನು ಸವಾಲು ಮಾಡಿ ಹೇಳಬಲ್ಲೆ, ಅರೋಪಗಳಲ್ಲಿ ಒಂದು ಪರ್ಸೆಂಟ್ ಕೂಡ ಸತ್ಯವಲ್ಲ ಎಂದು ಅವರು ಹೇಳಿದ್ದಾಗಿ ತಿಳಿಸಿದರು.
ನೀವು ಏನು ಮಾಡ್ತೀರೋ ಮಾಡಿ, ನ್ಯಾಯಾಲಯದ ಮೆಟ್ಟಿಲ ಮೇಲೆ ನಿಮ್ಮ ತೀರ್ಮಾನ ಮಾಡುತ್ತೇನೆ ಎಂದು ಅಣ್ಣಪ್ಪ ಹೇಳಿದ್ದಾನೆ. ದೊಡ್ಡವರು ಏನು ಬೇಕಾದರೂ ಮಾಡುತ್ತಾರೆ ಎಂದು ಕೆಲ ಜನ ಹೇಳುತ್ತಾರೆ. ಆದರೆ, ದೊಡ್ಡವರು ಎನಿಸಿಕೊಂಡವರು ಹಲವು ಮಂದಿ ಜೈಲಿಗೆ ಹೋಗಿದ್ದಾರೆ. ಈ ನೆಲದ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ತಿಳಿಸಿದರು.
ಆರೋಪದಿಂದ ಕೋರ್ಟ್ ಮುಕ್ತ ಮಾಡಿದರೂ ಅವರು ದೊಡ್ಡ ಮನುಷ್ಯರು ಎಂದು ಕೆಲವರು ಹೇಳಿದ್ದರು. ಒಬ್ಬ ಸೌಜನ್ಯಾಗೆ ನ್ಯಾಯ ಕೊಡಿಸಲು ಅನೇಕ ಹೆಣ್ಣುಮಕ್ಕಳ ಬದುಕು ಹಾಳು ಮಾಡುವ ಜನರಿದ್ದಾರೆ. ಸುಜಾತಾ ಭಟ್ ನಿಜ ಹೇಳಿದ್ದರಿಂದ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಕುರಿತ ಸತ್ಯಾಂಶ ಹೊರಗೆ ಬಂದಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Dharmasthala Case: ಧರ್ಮಸ್ಥಳಕ್ಕೆ ಕಳಂಕ ಅಂಟಿಸಿದವರನ್ನು ಅಣ್ಣಪ್ಪ ಸರ್ವನಾಶ ಮಾಡುತ್ತಾನೆ: ವಸಂತ್ ಗಿಳಿಯಾರ್