ಚಾಮರಾಜನಗರ: ಗಾಳೀಪುರ ಸಮೀಪದ ರಿಂಗ್ ರಸ್ತೆಯಲ್ಲಿ ಸಂಭವಿಸಿದ್ದ ಲಾರಿ, ಕಾರು ಹಾಗೂ ಮೊಪೆಡ್ ನಡುವಿನ ಸರಣಿ ಅಪಘಾತದಲ್ಲಿ (Road Accident) ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮೊಪೆಡ್ ನಲ್ಲಿ ಹೋಗುತ್ತಿದ್ದ ನಾಲ್ವರ ಪೈಕಿ ಸ್ಥಳದಲ್ಲೇ ಮೆರಾನ್ ಎಂಬ ಬಾಲಕ ಸಾವನ್ನಪ್ಪಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರೆಹಾನ್, ಆದಾನ್ ಪಾಷಾ, ಫೈಜಲ್ ಎಂಬ ಬಾಲಕರನ್ನು ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂವರು ಸಾವನ್ನಪ್ಪಿದ್ದಾರೆ
ವಿಷಯ ತಿಳಿದ ಕೂಡಲೇ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹನುಮಂತ ಉಪ್ಪಾರ್ ಹಾಗೂ ಪೇದೆಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಗಾಯಗೊಂಡಿರುವ ಬಾಲಕರಾದ ಫೈಸಲ್, ರಿಹಾನ್, ಅಜಾನ್ ಪಾಷಾ ಎಂಬುವರನ್ನು ನಗರದ ಹೊರ ವಲಯದ ಸಿಮ್ಸ್ ಬೋಧನಾ ಆಸ್ಪತ್ರೆಗೆ ಕರೆದೊಯ್ದಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆ ಹಾಗೂ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಸಿಮ್ಸ್ ಆಸ್ಪತ್ರೆಗೆ ತೆರಳಿ ಮೃತ ಬಾಲಕರ ಪೋಷಕರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Road Accident: ಕಾರು- ಟ್ರಕ್ ನಡುವೆ ಭೀಕರ ಅಪಘಾತ; ಐವರು ಉದ್ಯಮಿಗಳು ಸ್ಥಳದಲ್ಲಿಯೇ ಸಾವು
ಪ್ರತ್ಯೇಕ ಘಟನೆಯಲ್ಲಿ, ಬಿಹಾರದ ಪಾರ್ಸಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಯಾ ಮೋರ್ ಬಳಿಯ ಪಾಟ್ನಾ-ಗಯಾ-ದೋಭಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 83 ರಲ್ಲಿ ಗುರುವಾರ ನಡೆದ ಭೀಕರ ಅಪಘಾತದಲ್ಲಿ ಐವರು ಉದ್ಯಮಿಗಳು ದಾರುಣವಾಗಿ ಅಂತ್ಯ ಕಂಡಿದ್ದಾರೆ. ವೇಗವಾಗಿ ಬಂದ ಕಾರು ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಉದ್ಯಮಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಅಪಘಾತವು ಬೆಳಗಿನ ಜಾವ 12.45 ರ ಸುಮಾರಿಗೆ ಸಂಭವಿಸಿದ್ದು, ಡಿಕ್ಕಿ ಎಷ್ಟು ತೀವ್ರವಾಗಿತ್ತೆಂದರೆ ಕಾರಿನ ಮುಂಭಾಗವು ಟ್ರಕ್ಗೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ.