ಚಿಕ್ಕಬಳ್ಳಾಪುರ : ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಶ್ರೀ ವರಮಹಾಲಕ್ಷ್ಮೀ ಹಬ್ಬವನ್ನು ಶುಕ್ರವಾರ ಜಿಲ್ಲಾದ್ಯಂತ ಸಂಭ್ರಮದಿMದ ಆಚರಿಸಿದರು.
ಹೆಣ್ಣು ಮಕ್ಕಳು ಮನೆಯ ಮುಂದೆ ವಿವಿಧ ಬಣ್ಣಗಳಿಂದ ರಂಗೋಲಿಯನ್ನಿಟ್ಟು, ಮನೆಯ ಬಾಗಿಲು ಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮನೆಯನೆಲ್ಲಾ ಶೃಂಗರಿಸಿ ಹೊಸ ಸೀರೆಯನ್ನುಟ್ಟು ಭಕ್ತಿ ಭಾವದಿಂದ ವರಮಹಾಲಕ್ಷ್ಮೀಗೆ ಪೂಜೆ ಸಲ್ಲಿಸಿದರು.
ಹಲವು ಮಹಿಳೆಯರು ಮನೆಯಲ್ಲಿಯೇ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಕಳಸದ ಮೇಲೆ ಲಕ್ಷ್ಮೀದೇವಿ ಮುಖವಾಡವನಿಟ್ಟು ಕೆಲವರು ಪೂಜಿಸಿದರೆ, ಹಲವರು ತೆಂಗಿನಕಾಯಿಗೆ ಮೂಗು ಕಣ್ಣು ಕಿವಿ ಮಾಡಿ, ಒಡವೆಗಳು ಹಾಕಿ, ಹೊಸ ಸೀರೆಯಿಂದ ಅಲಂಕರಿಸಿ, ಅದರ ಸುತ್ತಲೂ ಮಾವಿನ ಎಲೆ ಕಟ್ಟಿ, ಬಾಳೆಕಂಬಗಳನ್ನು ಇಟ್ಟು, ಪುಷ್ಪಾಲಂಕಾರ ಮಾಡಿ ವ್ರತಾಚರಣೆ ಮಾಡಿದರು. ಲಕ್ಷ್ಮೀದೇವಿಗೆ ಪೂಜೆ ನೆರವೇರಿಸಿದ ನಂತರದಲ್ಲಿ ಅಕ್ಕಪಕ್ಕದ ಮನೆಯ ಸುಮಂಗಲಿಯರನ್ನು ಮನೆಗೆ ಕರೆದು ಅರಿಶಿನ, ಕುಂಕುಮ, ಹೂವು, ರವಿಕೆ ಬಟ್ಟೆ ಹಾಗೂ ಎಲೆ, ಅಡಿಕೆ, ಬಾಳೆಹಣ್ಣು ಕೊಟ್ಟು ಕಳುಹಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಇದನ್ನೂ ಓದಿ: Chikkaballapur News: “ನೀರ ಜಾಡು” ಯುವ ಕೃಷಿಕರ ಅಧ್ಯಯನ ಯಾತ್ರೆಗೆ ಚಾಲನೆ
ಲಕ್ಷ್ಮೀದೇವಿಯ ಮೂರ್ತಿ ಮುಂಭಾಗ ಹಣ್ಣು, ಹಂಪಲು ಹಾಗೂ ವಿಶೇಷ ಸಿಹಿ ತಿನಿಸುಗಳನ್ನಿಡ ಲಾಗಿತ್ತು. ಹಬ್ಬದ ಪ್ರಯುಕ್ತ ಬಹುತೇಕರು ಮನೆಯಲ್ಲಿ ಸಿಹಿ ತಿನಿಸು ಮಾಡಲಾಗಿತ್ತು. ಹೋಳಿಗೆ, ಪಾಯಸ, ಜೊತೆಗೆ ಹಪ್ಪಳ, ತರಕಾರಿ ಪಲ್ಯ ಮತ್ತಿತರ ಖಾದ್ಯಗಳನ್ನು ತಯಾರಿಸಿ ವರ ಮಹಾಲಕ್ಷ್ಮೀಗೆ ನೈವೈದ್ಯ ಮಾಡಿದರು.
ಚಿಕ್ಕಬಳ್ಳಾಪುರದ ಮೈಲಪ್ಪನಹಳ್ಳಿ ಸಮೀಪವಿರುವ ಮಹಾಲಕ್ಷ್ಮೀ ದೇವಾಲಯದಲ್ಲಿ ವರಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ವರ ಮಹಾಲಕ್ಷ್ಮಿಯನ್ನು ಭಕ್ತಿ ಭಾವದಿಂದ ನಮಿಸಿದರು.