ಚಿಕ್ಕಬಳ್ಳಾಪುರ : ನಾಗರೀಕರು ಹಿಂದೆ ಮುಂದೆ ನೋಡದೆ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಅಪಾಯದಲ್ಲಿರುವ ಜೀವಗಳನ್ನು ಉಳಿಸಬಹುದು ಎಂದು ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ಕಿರಣ್ ತಿಳಿಸಿದರು.
ನಗರದಲ್ಲಿ ಶಾಲಾಕಾಲೇಜು ಮಕ್ಕಳಿಂದ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಬಗ್ಗೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ನಿರಂತರ ರಚನಾತ್ಮಕ ಅಧ್ಯಯನದಿಂದ ದೊಡ್ಡ ಸಾಧನೆ ಸಾಧ್ಯ : ಐಐಟಿ ವಿದ್ಯಾರ್ಥಿ ಕಿಶೋರ್ ಪ್ರೀತಂ
ಪಂಚಗಿರಿ ವಿದ್ಯಾ ಸಂಸ್ಥೆಯ ೨೯ನೇ ದತ್ತಿ ದಿನಾಚರಣೆ ಹಾಗೂ ಸಿ.ವಿ.ವೆಂಕಟರಾಯಪ್ಪಯವರ ೧೧೦ನೇ ಜಯಂತಿಯನ್ನು ಜು.೨೩ರ ಬುಧವಾರ ನಗರದ ಹೊರವಲಯದ ಸಿವಿವಿ ಕ್ಯಾಂಪಸ್ನಲ್ಲಿ ನಡೆಸಲಾಗುತ್ತಿದೆ.ಇದರ ಅಂಗವಾಗಿ ಪ್ರತಿ ವರ್ಷ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ. ಇದೊಂದು ಪರೋಪಕಾರದ ಕೆಲಸವಾಗಿದ್ದು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜು.೨೩ರಂದು ನಡೆಯಲಿರುವ ಮೆಗಾ ರಕ್ತದಾನ ಶಿಬಿರಕ್ಕೆ ಅಗತ್ಯ ಸಿದ್ದತೆ ಹಮ್ಮಿಕೊಳ್ಳಲಾಗಿದೆ. ಕನಿಷ್ಟ ೫ ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಶಿಬಿರದ ಅಂಗವಾಗಿ ದಿನವಿಡಿ ಅನ್ನದಾನ ನಡೆಯಲಿದ್ದು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಪ್ರಾಣದಾತರಾಗಬೇಕೆಂದು ಕೆ.ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಕೋರಿದರು.
ನಗರದ ರಾಜಬೀದಿಗಳಲ್ಲಿ ಸಾಗಿದ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಜಾಥಾ ನಡೆಸುವ ಮೂಲಕ ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಜನಜಾಗೃತಿ ಮೂಡಿಸಿದರು.