ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರ ನಡೆದಿದ್ದು, ಅವುಗಳಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿಲ್ಲ, ಈ (B Y Vijayendra) ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ. ಧರ್ಮಸ್ಥಳದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ, ಧರ್ಮಸ್ಥಳ, ದೇವರು, ಅಣ್ಣಪ್ಪ ಸ್ವಾಮಿ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅಸಂಖ್ಯಾತ ಭಕ್ತರಲ್ಲಿ ಗೊಂದಲ ಸೃಷ್ಟಿಸುವ ಷಡ್ಯಂತ್ರವೂ ನಡೆದಿದೆ ಎಂದು ತಿಳಿಸಿದರು.
ಎಡಪಂಥೀಯರ ಗುಂಪುಗಳ ಒತ್ತಡಕ್ಕೆ ಮಣಿದು ಎಸ್ಐಟಿ ರಚಿಸಿದ್ದಾರೆ ಎಂಬ ಮಾಹಿತಿಯನ್ನು ಸಚಿವ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ ಎಂದು ಮಾಧ್ಯಮಗಳ ಗಮನಕ್ಕೆ ತಂದರು. ಧರ್ಮಸ್ಥಳದ ಬಗ್ಗೆ ಇನ್ನೆಷ್ಟು ಅಪಪ್ರಚಾರ ನಡೆಯಬೇಕು ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು. ಈ ಅಪಪ್ರಚಾರದ ಹಿಂದಿನ ಶಕ್ತಿಗಳ ಕುರಿತು ಸರಕಾರ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದರು. ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನಾನೂ ಧರ್ಮಸ್ಥಳ ಮಂಜುನಾಥೇಶ್ವರನ ಪರಮ ಭಕ್ತ ಎಂದು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರು ಮೊನ್ನೆ ಸದನದಲ್ಲೂ ಹೇಳಿದ್ದಾರೆ. ಅವರು ನಿಜಕ್ಕೂ ಪರಮ ಭಕ್ತನಾಗಿದ್ದರೆ ತಡ ಮಾಡದೇ ಪಿತೂರಿ, ಷಡ್ಯಂತ್ರದ ಹಿಂದೆ ಇರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕು ಎಂದು ಆಗ್ರಹವನ್ನು ಮುಂದಿಟ್ಟರು.
ಡಿಸಿಎಂ, ಷಡ್ಯಂತ್ರವನ್ನು ಬಹಿರಂಗಪಡಿಸಬೇಕು
ನಿಷ್ಪಕ್ಷಪಾತ- ಪಾರದರ್ಶಕ ತನಿಖೆಗೆ ಬಿಜೆಪಿ ಒತ್ತಾಯಿಸಿತ್ತು. ಬಿಜೆಪಿ ರಾಜಕಾರಣ ಮಾಡಿದ್ದರೆ ಇಷ್ಟು ದಿನ ಕಾಯುವ ಅವಶ್ಯಕತೆ ಇರಲಿಲ್ಲ. ಇವತ್ತು ಕೋಟ್ಯಂತರ ಭಕ್ತರು ನೋವಿನಲ್ಲಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಇದನ್ನು ಷಡ್ಯಂತ್ರ ಎಂದಿರುವ ಉಪ ಮುಖ್ಯಮಂತ್ರಿಗಳು ಆ ಷಡ್ಯಂತ್ರವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಇದರ ಹಿಂದೆ ಎಡಪಂಥೀಯ ಸಂಘಟನೆಗಳಿರುವ ಕುರಿತು ಸ್ವತಃ ಸಚಿವ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ. ಇದೆಲ್ಲವುಗಳ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ತನಿಖೆ ಕುರಿತು ಮಧ್ಯಂತರ ವರದಿಯನ್ನು ರಾಜ್ಯ ಸರಕಾರ ಮಂಡಿಸಬೇಕೆಂದು ಸದನದಲ್ಲೂ ಆಗ್ರಹಿಸಿದ್ದೇವೆ ಎಂದು ಗಮನ ಸೆಳೆದರು. ಹುಚ್ಚಾಟ ನಿಲ್ಲಿಸಿ ಎಂದು ಅವರು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ: DK Shivakumar: ಧರ್ಮಸ್ಥಳಕ್ಕೆ ಡಿಕೆಶಿ ಬೆಂಬಲ; ವೀರೇಂದ್ರ ಹೆಗ್ಗಡೆ, ದೇವಸ್ಥಾನ, ಧಾರ್ಮಿಕ ಸೇವೆ ಬಗ್ಗೆ ಬಿಜೆಪಿಗಿಂತ ಹೆಚ್ಚು ಕಾಳಜಿ, ನಂಬಿಕೆ ನಮಗಿದೆ ಎಂದ ಡಿಸಿಎಂ
ಅಪಪ್ರಚಾರದಿಂದ ನೊಂದಿರುವ ಧರ್ಮಾಧಿಕಾರಿಗಳು
ತನಿಖೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಿಂದ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ನೊಂದಿರುವುದು ಗೊತ್ತಾಗುತ್ತದೆ ಹಿಂದೂ ಧರ್ಮ, ಪರಂಪರೆ, ಸಂಸ್ಕಂತಿಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಶ್ರೀ ಕ್ಷೇತ್ರದ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ಬರಬಾರದು ಎಂಬುದೇ ನಮ್ಮೆಲ್ಲರ ಮೂಲ ಉದ್ದೇಶ ಎಂದು ಅವರು ಹೇಳಿದ್ದಾರೆ.