ಮಂಗಳೂರು: ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವಗಳನ್ನು ಹೂತಿದ್ದೆ ಎಂದು ಮಾಸ್ಕ್ಮ್ಯಾನ್ ಚಿನ್ನಯ್ಯ (Mask man chinnayya) ತಂದಿದ್ದ ತಲೆಬುರುಡೆ (Skull) ಪ್ರಕರಣದಲ್ಲಿ ಇದೀಗ ಕೇರಳದ ಕಮ್ಯೂನಿಸ್ಟ್ (CPI MP) ಸಂಸದರೊಬ್ಬರ ಕೈವಾಡ ಇದೆ ಎಂಬ ವಿಚಾರ ಬಯಲಾಗಿದೆ. ಈ ಕಮ್ಯುನಿಸ್ಟ್ ಸಂಸದ ಹಾಗೂ ರಾಜ್ಯಸಭಾ ಸದಸ್ಯರ ಹೆಸರು ಸಂದೋಷ್ ಕುಮಾರ್. ತಲೆಬುರುಡೆಯನ್ನು ತೆಗೆದುಕೊಂಡು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಕೇರಳದ ಸಂಸದನ ಬಳಿ ತೆರಳಿ ಅವರ ಮುಂದೆ ವಿಚಾರ ಪ್ರಸ್ತಾಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಎಸ್ಐಟಿ ತನಿಖೆ ವೇಳೆ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ ಈ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದೆ. ಈ ನಡುವೆ, ತಲೆಬುರುಡೆಯನ್ನು ಕೊಟ್ಟಿದ್ದು ಜಯಂತ್. ತಾನು ಅದನ್ನು ಧರ್ಮಸ್ಥಳದಿಂದ ತಂದೇ ಇಲ್ಲವೆಂದು ಚೆನ್ನಯ್ಯ ಎಸ್ಐಟಿ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಜಯಂತ್ ಮಾತ್ರ ಬುರುಡೆಯನ್ನು ಗಿರೀಶ್ ಮಟ್ಟಣ್ಣವರ್ ಕೊಟ್ಟಿದ್ದು ಎಂದಿದ್ದಾನೆ. ಮಟ್ಟಣ್ಣವರ್ ಇದನ್ನು ನಿರಾಕರಿಸಿದ್ದಾನೆ. ಈ ಬೆಳವಣಿಗೆಗಳ ಮಧ್ಯೆ ಕೇರಳ ಸಂಸದನ ಹೆಸರು ಪ್ರಕರಣದಲ್ಲಿ ತಳಕುಹಾಕಿಕೊಂಡಿದೆ.
11 ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ
ತಲೆಬುರುಡೆ ಪ್ರಕರಣ ಹಾಗೂ ಒಟ್ಟಾರೆ ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ಪೊಲೀಸರು ಈವರೆಗೆ ಒಟ್ಟು 11 ಸೆಕ್ಷನ್ಗಳ ಅಡಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದ ವಿಚಾರಗಳನ್ನು ಆಧರಿಸಿ ಸೆಕ್ಷನ್ಗಳನ್ನು ಅಳವಡಿಕೆ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ FIR ನಂಬರ್ 39/2025 ರಲ್ಲಿ BNS 211(A), 336, 230, 231, 229, 227, 228, 240, 236, 233, 248 ಸೆಕ್ಷನ್ ಅಳವಡಿಕೆ ಮಾಡಲಾಗಿದೆ.
ಯಾವ್ಯಾವ ಸೆಕ್ಷನ್ಗಳ ಅಡಿ ಕೇಸ್?
BNS 211(A) – ಅಧಿಕಾರಿಗೆ ಕಾನೂನಾತ್ಮಕವಾಗಿ ನೀಡಬೇಕಾದ ಮಾಹಿತಿಯನ್ನು ನೀಡದೆ ಉದ್ದೇಶಪೂರ್ವಕವಾಗಿ ತಪ್ಪಿಸುವುದು.
BNS 336 – ನಕಲಿ ದಾಖಲೆ ಸೃಷ್ಟಿಸುವುದು.
BNS 230 – ಸುಳ್ಳು ಸಾಕ್ಷಿ ಕೊಡಲು ಅಥವಾ ಸುಳ್ಳು ಸಾಕ್ಷಿ ತಯಾರಿಸುವುದು.
BNS 231 – ಜೀವಾವಧಿ ಶಿಕ್ಷೆ ಅಥವಾ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧದ ಬಗ್ಗೆ ಸುಳ್ಳು ಸಾಕ್ಷ್ಯ ನೀಡುವುದು ಅಥವಾ ಅದನ್ನು ಸೃಷ್ಟಿಸುವುದು.
BNS 229 – ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸುಳ್ಳು ಪುರಾವೆ ನೀಡಿದರೆ.
BNS 227 – ಸುಳ್ಳೆಂದು ತಿಳಿದಿದ್ದರು ಸುಳ್ಳು ಸಾಕ್ಷ್ಯವನ್ನು ಹೇಳೋದು.
BNS 228 – ನ್ಯಾಯಾಂಗ ಅಥವಾ ಕಾನೂನು ಪ್ರಕ್ರಿಯೆಯನ್ನು ದಾರಿತಪ್ಪಿಸುವ ಉದ್ದೇಶದಿಂದ, ಪುಸ್ತಕಗಳು ಅಥವಾ ದಾಖಲೆಗಳಲ್ಲಿ ಸುಳ್ಳು ನಮೂದುಗಳನ್ನು ಮಾಡುವುದು.
BNS 240 – ಅಪರಾಧದ ಬಗ್ಗೆ ತಪ್ಪು ಮಾಹಿತಿ ನೀಡುವುದು.
BNS 236 – ನ್ಯಾಯಾಲಯಕ್ಕೆ ತಾನು ನೀಡಿದ ಮಾಹಿತಿ ಸುಳ್ಳು ಎಂದು ತಿಳಿದಿದ್ದರೂ ಅಥವಾ ನಂಬದಿದ್ದರೂ, ಅದನ್ನು ನಿಜವೆಂದು ಹೇಳುವುದು.
BNS 233 – ನ್ಯಾಯಾಲಯದಲ್ಲಿ ಸುಳ್ಳು ಎಂದು ತಿಳಿದಿರುವ ಯಾವುದೇ ಪುರಾವೆಯನ್ನು ನಿಜವಾದ ಪುರಾವೆಯಂತೆ ಬಳಸಲು ಪ್ರಯತ್ನಿಸುವುದು, ಈಗಾಗಲೇ ಸುಳ್ಳು ಎಂದು ತಿಳಿದಿರುವ ಪುರಾವೆಯನ್ನು ಬಳಸೋದು.
BNS 248 – ಒಬ್ಬ ವ್ಯಕ್ತಿಯನ್ನು ಹಾನಿ ಮಾಡುವ ದುರುದ್ದೇಶದಿಂದ, ಅವನ ಮೇಲೆ ಯಾವ ಕಾನೂನು ಆಧಾರಗಳೂ ಇಲ್ಲದಿದ್ದರೂ ಸುಳ್ಳು ಅಪರಾಧದ ಆರೋಪ ಹೊರಿಸುವುದು.
ಇದನ್ನೂ ಓದಿ: Dharmasthala case: ಇಂದು ಮಾಸ್ಕ್ ಮ್ಯಾನ್ ಚಿನ್ನಯ್ಯನ ಎಸ್ಐಟಿ ಕಸ್ಟಡಿ ಅಂತ್ಯ, ನ್ಯಾಯಾಂಗ ಬಂಧನ ಸಾಧ್ಯತೆ