ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Bride: ಕನ್ಯೆ ಎಂದು ನಂಬಿಸಿ 2 ಮಕ್ಕಳ ತಾಯಿ ಜತೆ ಕೊಪ್ಪಳದ ಯುವಕನಿಗೆ ಮದುವೆ; 4 ಲಕ್ಷ ವಂಚನೆ!

Fake Bride: ಐದು ದಿನ ವಧುವಾಗಿ ನಟಿಸಿದರೆ 50 ಸಾವಿರ ಕೊಡುತ್ತೇವೆ ಎಂದು ವಿವಾಹಿತ ಯುವತಿಗೆ ಬ್ರೋಕರ್ಸ್‌ ಆಮಿಷ ಒಡ್ಡಿದ್ದರು. ಅದರಂತೆ ಹುಡುಗನಿಂದ 4 ಲಕ್ಷ ಹಣ ಪಡೆದು, ಇಬ್ಬರು ಮಕ್ಕಳ ತಾಯಿ ಜತೆ ಮದುವೆ ಮಾಡಿಸಿದ್ದಾರೆ. ಇದೀಗ ನ್ಯಾಯಕ್ಕಾಗಿ ಪೊಲೀಸರಿಗೆ ಯುವಕ ದೂರು ನೀಡಿದ್ದಾನೆ.

ಕನ್ಯೆ ಎಂದು ನಂಬಿಸಿ 2 ಮಕ್ಕಳ ತಾಯಿ ಜತೆ ಕೊಪ್ಪಳದ ಯುವಕನಿಗೆ ಮದುವೆ!

Profile Prabhakara R Jun 17, 2025 5:42 PM

ಕೊಪ್ಪಳ: ಇಬ್ಬರು ಮಕ್ಕಳ ತಾಯಿಯನ್ನು ಅವಿವಾಹಿತೆ ಎಂದು ನಂಬಿಸಿ ಯುವಕನೊಬ್ಬನ ಜತೆ ಮದುವೆ ಮಾಡಿಸಿ, 4 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ದುರ್ಗಾ ಪ್ರಸಾದ್‌ (34) ಮೋಸ ಹೋದವರು. ಮದುವೆಯಾದ (Fake Bride) ಐದು ದಿನಗಳಿಗೆ ಬ್ರೋಕರ್‌ಗಳಿಂದ ತಾನು ಮೋಸ ಹೋಗಿದ್ದೇನೆ ಎಂದು ಅರಿತ ಯುವಕ, ಇದೀಗ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಕೆಲ ದಿನಗಳ ಹಿಂದೆ ಕೊಪ್ಪಳದಲ್ಲಿನ ಶ್ರೀದೇವಿ ಎಂಬ ಬ್ರೋಕರ್‌ (marriage broker) ಅನ್ನು ದುರ್ಗಾ ಪ್ರಸಾದ್‌ ಪೋಷಕರು ಸಂಪರ್ಕಿಸಿದ್ದರು. ಆಕೆ ಮೂಲಕ ಆಂಧ್ರದ ವಿಜಯವಾಡದ ತಾಯಾರು ಎಂಬ ಬ್ರೋಕರ್‌ ಪರಿಚಯವಾಗಿದ್ದಾಳೆ. ಈ ತಾಯಾರು ತನ್ನ ಗ್ಯಾಂಗ್‌ನ ಪಾರ್ವತಿ, ವಿಮಲಾ, ಆಟೋ ಡ್ರೈವರ್‌ ಅಪ್ಪಾರಾವ್‌ ಜತೆ ಸೇರಿ ವಿಜಯವಾಡದ ಕೃಷ್ಣಲಂಕೆಯ ಪಲ್ಲವಿ ಅಲಿಯಾಸ್‌ ಆಮನಿ ಎಂಬ ಯುವತಿಯನ್ನು ಪರಿಚಯ ಮಾಡಿಸಿದ್ದಾರೆ. ಹೀಗಾಗಿ ಕನ್ಯೆ ನೋಡಲು ದುರ್ಗಾ ಪ್ರಸಾದ್‌ ಕುಟುಂಬಸ್ಥರು ಹೋಗಿದ್ದರು. ಯುವತಿ ಪಲ್ಲವಿ ಇಷ್ಟವಾಗಿದ್ದರಿಂದ ಮದುವೆಗೆ ಹುಡುಗನ ಕಡೆಯವರು ಒಪ್ಪಿದ್ದರು.

ಬಳಿಕ ಪಲ್ಲವಿ ತಂದೆ-ತಾಯಿಗೆ ಆರೋಗ್ಯ ಸರಿ ಇಲ್ಲ, ಅವರ ಚಿಕಿತ್ಸೆಗೆ ಹಣ ಬೇಕು ಎಂದು ಹುಡುಗನಿಂದ 3.5 ಲಕ್ಷ ರೂ.ಗಳನ್ನು ಬ್ರೋಕರ್‌ಗಳು ವಸೂಲಿ ಮಾಡಿದ್ದಾರೆ. ಅದಾದ ನಂತರ ಜೂನ್‌ 5 ರಂದು ವಿಜಯವಾಡದ ಕನಕದುರ್ಗಾ ದೇವಸ್ಥಾನದಲ್ಲಿ ಮದುವೆ ನಡೆದಿತ್ತು. ಜೂನ್‌ 7ರಂದು ಗಂಗಾವತಿಯಲ್ಲಿ ಯುವಕನ ಮನೆಯಲ್ಲಿ ಅದ್ಧೂರಿಯಾಗಿ ಅರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇನ್ನು ಪಲ್ಲವಿ ಜತೆ ಬಂದಿದ್ದ ಸಹೋದರ ಹರೀಶ್‌, ಆರತಕ್ಷತೆ ಆದ ಮೇಲೆ ತಾಯಿಗೆ ಅನಾರೋಗ್ಯ ಎಂದು ಹೇಳಿ, ಚಿಕಿತ್ಸೆಗಾಗಿ 50 ಸಾವಿರ ರೂ. ಪಡೆದು ನಾಪತ್ತೆಯಾಗಿದ್ದಾನೆ. ಇದಾದ ಬಳಿಕ ಗಂಡನ ಜತೆ ಸಂಸಾರ ಮಾಡಲು ಪಲ್ಲವಿ ನಿರಾಕರಿಸಿದ್ದಾಳೆ. ಯಾಕೆ ಎಂದು ದುರ್ಗಾ ಪ್ರಸಾದ್ ಪ್ರಶ್ನಿಸಿದಾಗ, ತನಗೆ ಈ ಮೊದಲೇ ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ. ಗಂಡ ಬಿಟ್ಟಿದ್ದರಿಂದ ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಇದರಿಂದ ವರನ ಕುಟುಂಬಸ್ಥರಿಗೆ ಆಘಾತವಾಗಿದೆ.

ಐದು ದಿನದ ಮದುವೆಗಾಗಿ 50 ಸಾವಿರ ರೂ.!

ಐದು ದಿನ ವಧುವಾಗಿ ನಟಿಸಿದರೆ 50 ಸಾವಿರ ಕೊಡುತ್ತೇವೆ ಎಂದು ಬ್ರೋಕರ್ಸ್‌ ಆಮಿಷ ಒಡ್ಡಿದ್ದರು. ತಾಯಾರು, ಪಾರ್ವತಿ, ವಿಮಲಾ, ಅಪ್ಪಾರಾವ್‌ ಎಂಬ ದಳ್ಳಾಳಿಗಳ ಮಾತು ನಂಬಿ, ಈ ಮದುವೆ ಮಾಡಿಕೊಂಡಿದ್ದೇನೆ. 50 ಸಾವಿರ ರೂ.ಗಳಲ್ಲಿ ಕೇವಲ 35 ಸಾವಿರ ರೂ. ನೀಡಿದ್ದಾರೆ. ಉಳಿದ ಹಣವನ್ನೂ ಬ್ರೋಕರ್‌ಗಳೇ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ತನ್ನ ಹೆಸರು ಪಲ್ಲವಿ ಅಲ್ಲ, ಆಮನಿ ಎಂದು ಯುವತಿ ಹೇಳಿದ್ದಾಳೆ. ಹೀಗಾಗಿ ಮೋಸ ಹೋದ ಯುವಕ ದುರ್ಗಾ ಪ್ರಸಾದ್‌, ನ್ಯಾಯ ಕೊಡಿಸಬೇಕು ಎಂದು ವಿಜಯವಾಡದ ಕೃಷ್ಣಲಂಕಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.