Rohith Vemula Bill 2025: ಸಂವಿಧಾನ ವಿರೋಧಿ ಕರ್ನಾಟಕ ರೋಹಿತ್ ವೇಮುಲ ಬಿಲ್ಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವಿರೋಧ
Hindu Rashtra Samanvaya Samiti: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಎರಡು ವಿವಾದಾತ್ಮಕ ಮಸೂದೆಗಳಾದ ಕರ್ನಾಟಕ ರೋಹಿತ್ ವೇಮುಲ ಬಿಲ್-2025 ಮತ್ತು ಕರ್ನಾಟಕ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆ ಕಾಯಿದೆ-2025 ವಿರೋಧಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಮನವಿ ನೀಡಿದ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸದಸ್ಯರು.

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಮುಂಬರುವ ಮಳೆಗಾಲ ಅಧಿವೇಶನದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಎರಡು ವಿವಾದಾತ್ಮಕ ಮಸೂದೆಗಳಾದ ಕರ್ನಾಟಕ ರೋಹಿತ್ ವೇಮುಲ ಬಿಲ್-2025 (Rohith Vemula Bill 2025) ಮತ್ತು ಕರ್ನಾಟಕ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆ ಕಾಯಿದೆ-2025 (Karnataka Hate Speech and Hate Crimes Prevention Act-2025) ವಿರೋಧಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ (Hindu Rashtra Samanvaya Samiti) ನೇತೃತ್ವದಲ್ಲಿ ಅನೇಕ ಶಾಸಕರು, ಸಂಸದರಿಗೆ ಮನವಿ ಸಲ್ಲಿಸಲಾಯಿತು. ʼʼಈ ಮನವಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ಸಿ.ಕೆ. ರಾಮಮೂರ್ತಿ (ಜಯನಗರ), ಎಸ್.ಆರ್. ವಿಶ್ವನಾಥ್ (ಯಲಹಂಕ), ಮುನಿರಾಜು (ದಾಸರಹಳ್ಳಿ), ಎಚ್.ಕೆ. ಸುರೇಶ್ (ಬೇಲೂರು) ಮತ್ತು ಹಲವು ವಿಧಾನ ಪರಿಷತ್ ಸದಸ್ಯರಿಗೆ ಸಲ್ಲಿಸಲಾಯಿತುʼʼ ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಸಂಯೋಜಕ ಬಿ.ಎನ್. ಮಹೇಶ ಕುಮಾರ್ ತಿಳಿಸಿದ್ದಾರೆ.
ಮಸೂದೆಗಳ ವಿರೋಧದ ಪ್ರಮುಖ ಅಂಶಗಳು
- ಸಂವಿಧಾನ ಬದ್ಧ ಸಮಾನತೆಗೆ ಧಕ್ಕೆ: ರೋಹಿತ್ ವೇಮುಲ ಮಸೂದೆ ನಿರ್ಧಿಷ್ಟ ಸಮುದಾಯಕ್ಕೆ ವಿಶೇಷ ಕಾನೂನು ರಕ್ಷಣೆ ನೀಡುವ ಮೂಲಕ, ಹಿಂದೂ ವಿದ್ಯಾರ್ಥಿಗಳನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲು ಪ್ರಯತ್ನಿಸುತ್ತದೆ.
- ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ: ಮಸೂದೆ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹಿಡಿತವನ್ನು ಹೆಚ್ಚಿಸುತ್ತದೆ ಹಾಗೂ ಭಿನ್ನಾಭಿಪ್ರಾಯದ ಮೇಲೆ ತಾರತಮ್ಯ ರೂಪಿಸುವ ಭೀತಿ ಉಂಟು ಮಾಡುತ್ತದೆ.
- ದ್ವೇಷ ಭಾಷಣ ಮಸೂದೆಯಲ್ಲಿ ವ್ಯಾಖ್ಯಾನ ಸ್ಪಷ್ಟವಿಲ್ಲ: ಹಿಂದುಳಿದ ವರ್ಗ, ಹಿಂದೂ ಸಂಘಟನೆಗಳ ಧ್ವನಿಯನ್ನು ದ್ವೇಷ ಭಾಷಣ ಎಂದು ಬಣ್ಣಿಸಿ ದಮನ ಮಾಡುವ ಸಾಧ್ಯತೆ ಇದೆ.
- ಹಿಂದೂ ಧರ್ಮ ಪ್ರಚಾರದ ಮೇಲೆ ಪ್ರಭಾವ: ಹಿಂದುತ್ವ ಪರವಾದ ಚಟುವಟಿಕೆಗಳು, ಐತಿಹಾಸಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಅಪರಾಧವೆಂದು ಪರಿಗಣಿಸುವ ಸಾಧ್ಯತೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಸಕ ವಿಶ್ವನಾಥ ಅವರಿಗೆ ಮನವಿ ನೀಡಲಾಯಿತು.

ಸಿ.ಕೆ. ರಾಮಮೂರ್ತಿ ಅವರಿಗೆ ಮನವಿ ನೀಡಲಾಯಿತು.

ಶಾಸಕ ಗೋಪಾಲಯ್ಯ ಅವರಿಗೆ ಮನವಿ ನೀಡಲಾಯಿತು.
ಹೆಚ್ಚಿನ ಆತಂಕಕಾರಿ ಅಂಶಗಳು
ಮಸೂದೆಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಗಳ ಕೊರತೆ, ದುರುಪಯೋಗಕ್ಕೆ ಅವಕಾಶ, ಸಂವಿಧಾನದ 14ನೇ ವಿಧಿಗೆ ವಿರುದ್ಧವಾದ ತಾರತಮ್ಯ ಮತ್ತು ಜಾತಿಯ ಮೇಲೆ ವಿಭಜನೆ ಮಾಡುವ, ಹಿಂದೂಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಾಗುವ ಅಂಶಗಳು ಇದೆ.
ಈ ಸುದ್ದಿಯನ್ನೂ ಓದಿ: Bengaluru News: ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆಯಿಂದ ಮಹಿಳಾ ಉತ್ಸವ- 2025 ಕಾರ್ಯಕ್ರಮ
ಸಮಿತಿಯ ಬೇಡಿಕೆಗಳು
- ಮಸೂದೆಗಳನ್ನು ಸಾರ್ವಜನಿಕವಾಗಿ ತಿರಸ್ಕರಿಸಿ.
- ವಿಧಾನಸಭೆಯಲ್ಲಿ ಈ ಮಸೂದೆಗಳ ವಿರುದ್ಧ ಧ್ವನಿ ಎತ್ತಿ.
- ಮಸೂದೆಗಳ ಅಪಾಯಗಳನ್ನು ಸರಕಾರದ ಗಮನಕ್ಕೆ ತಂದು ತಡೆಯಿರಿ.
- ತಜ್ಞರ ಸಮಿತಿಯನ್ನು ರಚಿಸಿ ಸಮಗ್ರ ಪರಿಶೀಲನೆ ನಡೆಸಬೇಕು.
- ಭವಿಷ್ಯದ ಯಾವುದೇ ಮಸೂದೆ ಸಮಾನತೆ, ನೈಸರ್ಗಿಕ ನ್ಯಾಯ ಮತ್ತು ಸಂವಿಧಾನ ಸಿದ್ಧಾಂತಗಳಿಗೆ ಧಕ್ಕೆ ಉಂಟು ಮಾಡಬಾರದು.
ಹಿಂದೂ ಸಮುದಾಯದ ಧ್ವನಿಗೆ ಪ್ರತಿಧ್ವನಿಯಾಗಿ, ಈ ಮಸೂದೆಗಳನ್ನು ತಡೆಗಟ್ಟುವಲ್ಲಿ ನಿಷ್ಠೆ, ಧೈರ್ಯ ಹಾಗೂ ನ್ಯಾಯ ಪರ ಧೋರಣೆಯ ಅಗತ್ಯವಿದೆ ಎಂಬ ನಂಬಿಕೆಯಿಂದ ಈ ಮನವಿಯನ್ನು ಸಲ್ಲಿಸಲಾಗಿದೆ ಎಂದು ಮಹೇಶ ಕುಮಾರ್ ವಿವರಿಸಿದ್ದಾರೆ.