ಕಲಬುರ್ಗಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳವು ಆರೋಪ ಮಾಡಿದ್ದು, ದೇಶದಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ರಾಜ್ಯ ಸರ್ಕಾರ ಆಳಂದ ಕ್ಷೇತ್ರದಲ್ಲಿ ಮತಗಳ್ಳತನದ ಕೇಸ್ ತನಿಖೆ ನಡೆಸುವಂತೆ ಸೂಚಿಸಿದ್ದು, ಎಸ್ಐಟಿ ರಚನೆ ಮಾಡಿದೆ. ವೋಟ್ ಚೋರಿ’ ಕೇಸ್ ತನಿಖೆ ಕೈಗೆತ್ತಿಕೊಂಡಿರುವ ಎಸ್ಐಟಿ ಈಗ ಮತ್ತೊಮ್ಮೆ ಸ್ಫೋಟಕ ವಿಚಾರಗಳನ್ನು ಬಯಲು ಮಾಡಿದೆ. ಪ್ರತಿ ಮತದಾರನ ಹೆಸರು ಕೈ ಬಿಡಲು ಹಾಕಲಾಗಿದ್ದ ಒಂದು ಅರ್ಜಿಗೆ, ಡೇಟಾ ಸೆಂಟರ್ಗೆ 80 ರೂಪಾಯಿ ಪಾವತಿಯಾಗಿತ್ತು ಎಂಬ ವಿಚಾರ ಬಯಲಾಗಿದೆ. ಈ ಕೃತ್ಯಕ್ಕೆ ಸಮಾಜದ ದುರ್ಬಲ ವಿಭಾಗದವರ 75 ಮೊಬೈಲ್ ನಂಬರಗಳನ್ನು ಬಳಸಲಾಗಿದೆಯೆಂದು ಎಸ್ಐಟಿ ಹೇಳಿದೆ.
ಮತದಾರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು 6,018 ನಕಲಿ ಅರ್ಜಿಗಳು ಆನ್ಲೈನ್ನಲ್ಲಿ ಸಲ್ಲಿಕೆಯಾಗಿದ್ದವು. ಈ ಕೃತ್ಯವನ್ನೆಸಗುವಲ್ಲಿ ಅಕ್ರಮ್, ಅಶ್ಫಾಕ್, ಮುಸ್ತಾಕ್ ಮತ್ತು ನದೀಮ್ ಎಂಬ ನಾಲ್ವರ ಕೈವಾಡವಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು 25 ರಿಂದ 30 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳು ಡಾಟಾ ಸೆಂಟರ್ನಲ್ಲಿದ್ದ 5 ಕಂಪ್ಯೂಟರ್ಗಳ ಮೂಲಕ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಅಕ್ರಮವಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳಲ್ಲಿ ಓರ್ವ ಆನ್ಲೈನ್ ರಾಜಕೀಯ ಸಮೀಕ್ಷಕ/ಮಾರ್ಗದರ್ಶಿ, ಇನ್ನೋರ್ವ ಡಾಟಾ ಆಪರೇಟರ್ ಆಗಿದ್ದು, ಉಳಿದ ಇಬ್ಬರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುತ್ತಿದ್ದರು. ಮತಗಳ್ಳತನದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), 6,018 ಅರ್ಜಿಗಳಿಗೆ ಲಾಗಿನ್ ಐಡಿಗಳನ್ನು ರಚಿಸಲು ದೇಶಾದ್ಯಂತದ ಸಮಾಜದ ದುರ್ಬಲ ವರ್ಗಗಳ ಜನರ 75 ಮೊಬೈಲ್ ಫೋನ್ ಸಂಖ್ಯೆಗಳನ್ನು ದುಷ್ಕರ್ಮಿಗಳು ಬಳಸಿದ್ದಾರೆ ಎಂದು ಹೇಳಿದೆ.
ಈ ಸುದ್ದಿಯನ್ನೂ ಓದಿ: Fire Accident: ಆಳಂದದಲ್ಲಿ ಪುಸ್ತಕ ಗೋದಾಮಿಗೆ ಬೆಂಕಿ; ಕೋಟ್ಯಂತರ ರೂ. ಮೌಲ್ಯದ ಪಠ್ಯ ಪುಸ್ತಕಗಳು ಸುಟ್ಟು ಭಸ್ಮ
ಅಕ್ರಮ್, ನದೀಮ್ ಮತ್ತು ಮುಷ್ತಾಕ್ರನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿದ್ದು, ದುಬೈನಲ್ಲಿರುವ ಅಶ್ಫಾಕ್ನನ್ನು ವಿಚಾರಣೆಗಾಗಿ ವಾಪಸ್ ಕರೆತರಲು ಯೋಚಿಸುತ್ತಿದೆ. 2023 ರಲ್ಲಿ ಆಳಂದದಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ಕಲಬುರಗಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಇದೇ ಪ್ರಕರಣದ ವಿಚಾರಣೆಯ ನಂತರ ಅಶ್ಫಾಕ್ ದುಬೈಗೆ ತೆರಳಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಇಸಿಐ ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.