CM Siddaramaiah: ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
Sri Sharanabasaveshwar Samsthan: ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಲಿಂಗೈಕ್ಯ ಡಾ. ಶರಣಬಸಪ್ಪ ಅಪ್ಪಾ ಅವರ ಪತ್ನಿ ದಾಕ್ಷಾಯಣಿ ಅವ್ವ ಹಾಗೂ ಅವರ ಪುತ್ರ, 9 ನೇ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪಾ ಅವರನ್ನು ಸಿಎಂ ಭೇಟಿಯಾಗಿ ಸಾಂತ್ವನ ಹೇಳಿದರು.

-

ಕಲಬುರಗಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನಗರಕ್ಕೆ ಬುಧವಾರ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಶ್ರೀ ಶರಣಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿ, ಇತ್ತೀಚೆಗೆ ಲಿಂಗೈಕ್ಯರಾದ ಶ್ರೀ ಶರಣಬಸಪ್ಪ ಅಪ್ಪಾ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ಲಿಂಗೈಕ್ಯ ಡಾ. ಶರಣಬಸಪ್ಪ ಅಪ್ಪಾ ಅವರ ಪತ್ನಿ ದಾಕ್ಷಾಯಣಿ ಅವ್ವ ಹಾಗೂ ಅವರ ಪುತ್ರ, 9 ನೇ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪಾ ಅವರನ್ನು ಸಿಎಂ (CM Siddaramaiah) ಭೇಟಿಯಾಗಿ ಸಾಂತ್ವನ ಹೇಳಿದರು.
ಈ ವೇಳೆ ಶರಣಬಸಪ್ಪ ಅಪ್ಪಾ ಅವರ ಜನ ಸೇವೆ, ಶಿಕ್ಷಣ ಕ್ರಾಂತಿಯನ್ನು ಸಿಎಂ ಸಿದ್ದರಾಮಯ್ಯ ಕೊಂಡಾಡಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಕೆಕೆಆರ್ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್ ಇತರರು ಸಿಎಂ ಜೊತೆಗಿದ್ದರು.
ಸಿಎಂಗೆ ಮುತ್ತಿಗೆ ಎಚ್ಚರಿಕೆ ನೀಡಿದ ರೈತ ಮುಖಂಡರ ಬಂಧನ

ಕಲಬುರಗಿ: ಕಳೆದ ವರ್ಷದ ಬಾಕಿ ಬೆಳೆ ವಿಮೆ ಹಾಗೂ ಈ ವರ್ಷದ ಮಳೆ ಹಾನಿ ಪರಿಹಾರ ಘೋಷಣೆಗೆ ಆಗ್ರಹಿಸಿ ಸಿಎಂಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ರೈತ ಮುಖಂಡರನ್ನು (Farmers Protest) ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷದ 321 ಕೋಟಿ ರೂಪಾಯಿ ಬಾಕಿ ವಿಮೆ ಇನ್ನೂ ಬಿಡುಗಡೆಗೊಳಿಸಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಪರಿಹಾರ ನೀಡಬೇಕು ಎಂದು ಕಲಬುರಗಿಯಲ್ಲಿ ರೈತ ಮುಖಂಡರು ಬುಧವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರು.
ಸ್ಥಳಕ್ಕೆ ಯಾವ ಸಚಿವ ಪ್ರತಿನಿಧಿಗಳು ಭೇಟಿ ನೀಡದ ಹಿನ್ನೆಲೆ ರೊಚ್ಚಿಗೆದ್ದ ರೈತರು, ಅಲ್ಲಿಂದ ಮುಂದೆ ಹೋಗಲು ಶುರು ಮಾಡಿದರು. ಈ ವೇಳೆ ರ್ಯಾಪಿಡ್ ಆಕ್ಷನ್ ಫೋರ್ಸ್ ಕೆಲ ಕಾಲ ಅವರನ್ನು ತಡೆಯುವ ಪ್ರಯತ್ನ ಮಾಡಿತು. ಹೋರಾಟಗಾರರು ಯಾವುದಕ್ಕೂ ಮಣಿಯದ ಕಾರಣ ಅವರನ್ನು ಬಂಧಿಸಲಾಗಿದೆ.
ನಗರದಲ್ಲಿನ ಕಾರ್ಯಕ್ರಮಗಳಿಗೆ ಸಿಎಂ ಬಂದಿದ್ದಾರೆ. ಆದರೆ ರೈತರ ಬಳಿ ಬರಲು ಅವರಿಗೆ ಸಮಯವಿಲ್ಲ ಎಂಬುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಇದೊಂದು ರೈತ ವಿರೋಧಿ ಸರ್ಕಾರವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Rain Damage: ಶೀಘ್ರ ಸಮೀಕ್ಷೆ ಮುಗಿಸಿ ಮಳೆ ಹಾನಿ ಪರಿಹಾರ ನೀಡಿ: ಅಧಿಕಾರಿಗಳಿಗೆ ಸಿಎಂ ಸೂಚನೆ
ರೈತ ಹೋರಾಟಗಾರರ ದಯಾನಂದ ಪಾಟೀಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.