CM Siddaramaiah: ನಮ್ಮದು ಮುಸ್ಲಿಂ ಬಜೆಟ್ ಅಲ್ಲ, ಸರ್ವೋದಯದ ಬಜೆಟ್: ಮೀಸಲು ಬಗ್ಗೆ ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರ
14 ಪರ್ಸೆಂಟ್ ಇರುವ ಮುಸ್ಲಿಂ ಸಮುದಾಯವನ್ನು ಅಭಿವೃದ್ಧಿಯ ಹಾದಿಗೆ ತರದೆ ಜಿಎಸ್ಡಿಪಿ/ ಜಿಡಿಪಿಗಳನ್ನು ಹೆಚ್ಚು ಮಾಡಲು ಹೇಗೆ ಸಾಧ್ಯ? ಇದಷ್ಟೇ ಅಲ್ಲ. ಈ ಸಮುದಾಯಗಳನ್ನು ದೂರವಿಡುವುದು ಸಂವಿಧಾನ ವಿರೋಧಿ ನಡೆಯೂ ಕೂಡ ಆಗಿದೆ ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಮ್ಮದು ಸರ್ವರಿಗಾಗಿ ಇರುವ ಸರ್ವೋದಯದ ಬಜೆಟ್. (Budget) ನಾವು ಸಂವಿಧಾನದ ಆಶಯಗಳ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ಹಾಗಾಗಿ ನಾವು ಸರ್ವೋದಯವಾಗಲಿ ಸರ್ವರಲಿ ಎಂಬುದನ್ನು ಮಾತಿಗೋಸ್ಕರ ಬಳಸುವುದಿಲ್ಲ. ಬದಲಾಗಿ ಅದನ್ನು ನಮ್ಮ ಸಿದ್ಧಾಂತವಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಮುಸ್ಲಿಂ (Muslim) ಸಮುದಾಯಕ್ಕೆ ಶೇ.4ರಷ್ಟು ಗುತ್ತಿಗೆ ಮೀಸಲು (Reservation) ನೀಡುತ್ತಿರುವ ವಿಚಾರದಲ್ಲಿ ವಿಪಕ್ಷಗಳ ವಿರೋಧಕ್ಕೆ ಅವರು ವಿಧಾನಸಭೆಯಲ್ಲಿ ವಿವರವಾದ ಉತ್ತರ ನೀಡಿದರು.
ರಾಷ್ಟ್ರಕವಿ ಕುವೆಂಪು ಅವರು ಬರೆದ "ಬಾರಿಸು ಕನ್ನಡ ಡಿಂಡಿಮವ" ಪದ್ಯವನ್ನು ಉಲ್ಲೇಖಿಸಿದ ಸಿಎಂ, "ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು" ಎಂಬ ಸಾಲುಗಳನ್ನು ಉಲ್ಲೇಖಿಸಿ "ಇನ್ನೆಷ್ಟು ದಿನ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ದ್ವೇಷ, ಹಿಂಸೆ, ಅಸಹನೆಯನ್ನು ಹುಟ್ಟು ಹಾಕುತ್ತೀರಿ? ಒಟ್ಟಿಗೆ ಬಾಳಲು ಯಾವ ಸಮಸ್ಯೆಯಿದೆ?" ಎಂದು ಪ್ರಶ್ನಿಸಿದರು.
ಅವರ ವಿವರವಾದ ಉತ್ತರ ಇಲ್ಲಿದೆ:
ವಿರೋಧ ಪಕ್ಷದ ನಾಯಕರಾದಿಯಾಗಿ ವಿರೋಧ ಪಕ್ಷದ ಅನೇಕರು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿರುವ ವಿಚಾರದ ಕುರಿತು ಆಕ್ಷೇಪದ ಧ್ವನಿಯಲ್ಲಿ ಮಾತನಾಡಿದ್ದಾರೆ. ರಿಲೀಜನ್ ಬೇಸ್ ಮೇಲೆ ಮೀಸಲಾತಿ ಕೊಟ್ಟಿರುವುದು ತಪ್ಪು ಎಂದು ಆರ್. ಅಶೋಕ್ ಅವರು ಪ್ರಸ್ತಾಪಿಸಿದ್ದಾರೆ.
1) ಅಶೋಕ್ ಅವರು ಎಸ್ಸಿಪಿ ಟಿಎಸ್ಪಿ ವಿಚಾರಗಳನ್ನು ಮಾತನಾಡುವಾಗ ಕರ್ನಾಟಕದ ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ ಮಾತನಾಡಿದ್ದಾರೆ. ಅವರು ಪ್ರಸ್ತಾಪ ಮಾಡಿದ್ದು ಒಳ್ಳೆಯದಾಯಿತು. 2022 ರಲ್ಲಿ ಬೊಮ್ಮಾಯಿಯವರು ಮುಖ್ಯಮಂತ್ರಿಗಳಿದ್ದಾಗ ಹಿಂದಿನ ಸರ್ಕಾರ ಕರ್ನಾಟಕ ಮಾನವ ಅಭಿವೃದ್ಧಿ ವರದಿಯನ್ನು ಬಿಡುಗಡೆ ಮಾಡಿದೆ. ಸದರಿ ವರದಿಯಲ್ಲಿ ಮಕ್ಕಳ ಮರಣ, ಆರೋಗ್ಯ, ಶಾಲಾ ದಾಖಲಾತಿ, ಮಹಿಳಾ ಶಿಕ್ಷಣ, ಶಿಕ್ಷಣ ಸೂಚ್ಯಂಕ, ಸುಧಾರಿತ ಕುಡಿಯುವ ನೀರು, ಸುಧಾರಿತ ವಿದ್ಯುತ್ ಲಭ್ಯತೆ, ಸುಧಾರಿತ ಶೌಚಾಲಯ, ಶೇ.ವಾರು ಪಕ್ಕಾ ಮನೆ, ಸುಧಾರಿತ ಅಡುಗೆ ಇಂಧನ, ವರಮಾನ ಸೂಚ್ಯಂಕಗಳನ್ನು ಆಧರಿಸಿ ಒಟ್ಟಾರೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಯಾವ ಯಾವ ಪ್ಯಾರಾಮೀಟರುಗಳಲ್ಲಿ ಎಷ್ಟೆಷ್ಟು ಅಂಶಗಳನ್ನು ಗಳಿಸಲಾಗಿದೆ ಎಂಬುದು ಈ ಅಧ್ಯಯನದಿಂದ ದೃಢಪಡುತ್ತದೆ.
2) ಅದರ ಪ್ರಕಾರ
ವಿವಿಧ ಸಾಮಾಜಿಕ ಗುಂಪುಗಳು
2022 ರ ಒಟ್ಟಾರೆ ಮಾನವ ಅಭಿವೃದ್ಧಿ
ಸೂಚ್ಯಂಕ
ಪರಿಶಿಷ್ಟ ಜಾತಿ
0.49
ಪರಿಶಿಷ್ಟ ಪಂಗಡ
0.44
ಅಲ್ಪಸಂಖ್ಯಾತ
0.37
ಸಾಮಾನ್ಯ ವರ್ಗ
0.644
3) ಕರ್ನಾಟಕದ ಸಾಮಾನ್ಯ ವರ್ಗಗಳ ಮಾನವ ಅಭಿವೃದ್ಧಿ ಸೂಚ್ಯಂಕ 0.644 ರಷ್ಟಿದೆ. ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ನಡುವೆ 0.274 ಅಂಶಗಳ ವ್ಯತ್ಯಾಸವಿದೆ. ಪರಿಶಿಷ್ಟ ಪಂಗಡಗಳಿಗೆ 0.204 ಅಂಶಗಳಷ್ಟು ವ್ಯತ್ಯಾಸವಿದೆ. ಪರಿಶಿಷ್ಟ ಜಾತಿಗಳ ನಡುವೆ 0.154 ಅಂಶಗಳಷ್ಟು ವ್ಯತ್ಯಾಸವಿದೆ.
ವಿವಿಧ ಸೂಚ್ಯಂಕಗಳು
ಸಾಮಾಜಿಕ ಸಮುದಾಯ
ಆರೋಗ್ಯದ ಸೂಚ್ಯಂಕ
ಶಿಕ್ಷಣದ
ಸೂಚ್ಯಂಕ
ಗುಣಮಟ್ಟದ
ಜೀವನದ
ಸೂಚ್ಯಂಕ
2022ರ
ಮಾನವ
ಅಭಿವೃದ್ಧಿ
ಸೂಚ್ಯಂಕ
ಪರಿಶಿಷ್ಟ ಜಾತಿ
0.58
0.36
0.60
0.49
ಪರಿಶಿಷ್ಟ ಪಂಗಡ
0.63
0.29
0.52
0.44
ಅಲ್ಪ ಸಂಖ್ಯಾತ
0.62
0.23
0.42
0.37
4) ಈ ಮಾಹಿತಿಯು ಹಲವು ಸತ್ಯಗಳನ್ನು ಹೇಳುತ್ತಿದೆ. ನಾನು ವಿರೋಧ ಪಕ್ಷದವರನ್ನು ಕೇಳಬಯಸುತ್ತೇನೆ. ಸಮಾಜದ ಒಂದು ವರ್ಗ ಸಂಪೂರ್ಣ ಅಂಗವಿಕಲವಾದರೆ ಇಡೀ ಸಮಾಜವನ್ನು ಮುನ್ನಡೆಸಲು ಹೇಗೆ ಸಾಧ್ಯ? ಅಲ್ಪಸಂಖ್ಯಾತರ ಪ್ರಮಾಣ ಸುಮಾರು ಶೇ.15 ರಷ್ಟಿದೆ. ಇಷ್ಟು ದೊಡ್ಡ ಜನಸಂಖ್ಯೆಯ ಸಮುದಾಯದ ಕಲ್ಯಾಣಕ್ಕೆ ಈ ಬಾರಿಯ ಬಜೆಟ್ನಲ್ಲಿ 4514 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಇದು ಒಟ್ಟಾರೆ ಬಜೆಟ್ನಲ್ಲಿ ಶೇ.1.1 ರಷ್ಟು ಮಾತ್ರ. ಇಷ್ಟಕ್ಕೆ ಇಷ್ಟೊಂದು ದ್ವೇಷ ಯಾಕೆ?
5) ಶಿಕ್ಷಣ, ಆರೋಗ್ಯ, ಗುಣ ಮಟ್ಟದ ಜೀವನದ ವಿಚಾರದಲ್ಲಿ ಪರಿಶಿಷ್ಟ ಪಂಗಡಗಳಿಗಿಂತಲೂ ದಯನೀಯ ಸ್ಥಿತಿಯಲ್ಲಿ ಇರುವುದರ ಕುರಿತು ಹಿಂದಿನ ಸರ್ಕಾರವೇ ಮಾಡಿರುವ ವರದಿಯು ಹೇಳುತ್ತಿದೆ.
6) ಶೇ.14 ರಷ್ಟು ಜನರಿಗೆ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಮನೆ, ಶೌಚಾಲಯ ಮುಂತಾದವುಗಳನ್ನು ಇಲ್ಲವಾಗಿಸಿ ಭಾರತವನ್ನು ವಿಶ್ವಗುರುವಾಗಿಸುವುದು ಹೇಗೆ?
7) 14 ಪರ್ಸೆಂಟ್ ಜನರನ್ನು ಅಭಿವೃದ್ಧಿಯ ಹಾದಿಗೆ ತರದೆ ಜಿಎಸ್ಡಿಪಿ/ ಜಿಡಿಪಿಗಳನ್ನು ಹೆಚ್ಚು ಮಾಡಲು ಹೇಗೆ ಸಾಧ್ಯ?
8) ಇದಷ್ಟೇ ಅಲ್ಲ. ಈ ಸಮುದಾಯಗಳನ್ನು ದೂರವಿಡುವುದು ಸಂವಿಧಾನ ವಿರೋಧಿ ನಡೆಯೂ ಕೂಡ ಆಗಿದೆ.
9) ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸಲು ಈ ಬಾರಿಯ ಬಜೆಟ್ನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆ ಕ್ರಮಗಳಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿಯೂ ಸೇರಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಪ್ರವರ್ಗ-1, 2ಎ ಮತ್ತು 2ಬಿಗಳನ್ನು ಸೇರಿಸಿ ಈ ಕ್ರಮ ತೆಗೆದುಕೊಂಡಿದ್ದೇವೆ. ಈ ವರ್ಗಗಳಲ್ಲಿ ಗುತ್ತಿಗೆದಾರರೇ ಇಲ್ಲವೆನ್ನುವಷ್ಟು ಕಡಿಮೆ ಇದ್ದಾರೆ.
ಎರಡನೆಯ ಅಂಶ; ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು, ಅವರಿಗೆ ಮೀಸಲಾತಿ ಕೊಡಬಾರದಿತ್ತು ಎಂದು ಆಕ್ಷೇಪಗಳನ್ನು ಎತ್ತಿದ್ದಾರೆ. ಅಶೋಕ್ ಹಾಗೂ ವಿರೋಧ ಪಕ್ಷದವರು ಸ್ವಲ್ಪ ಇತಿಹಾಸವನ್ನು ಓದಿಕೊಂಡರೆ ಒಳ್ಳೆಯದು ಎನ್ನುವುದು ನನ್ನ ಭಾವನೆ. ಇತಿಹಾಸದ ತಿಳುವಳಿಕೆ ಇರುವವರು ಹೀಗೆ ಮಾತನಾಡುವುದಿಲ್ಲ.
1.) 1919 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಸಮಿತಿಯನ್ನು ರಚಿಸಿದರು. ಸಮಿತಿಯು ಮುಸ್ಲಿಂ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಶೇ. 82 ರಷ್ಟು, ಬ್ರಾಹ್ಮಣರಿಗೆ ಶೇ. 20 ರಷ್ಟು ಮೀಸಲಾತಿಯನ್ನು [10 ಹುದ್ದೆಗಳಿದ್ದರೆ 2 ಹುದ್ದೆ ಬ್ರಾಹ್ಮಣರಿಗೆ, 8 ಹುದ್ದೆ ಮುಸ್ಲಿಂ ಮತ್ತು ಹಿಂದುಗಳಿಗೆ] ಕೊಡಲು ಶಿಫಾರಸ್ಸು ಮಾಡಿತು. ವಿಶ್ವೇಶ್ವರಯ್ಯನವರ ನಂತರ ಕಾಂತರಾಜ ಅರಸ್ ಅವರು ದಿವಾನರಾಗಿದ್ದಾಗ ಈ ವರದಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದರು.
2.) ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕರ್ನಾಟಕ ಸರ್ಕಾರಗಳು ಸಂವಿಧಾನದ ಆರ್ಟಿಕಲ್ 15[4], 16[4] ರ ಪ್ರಕಾರ ಮೀಸಲಾತಿಯನ್ನು ಕೊಟ್ಟುಕೊಂಡು ಬಂದಿವೆ. ಯಾಕೆಂದರೆ ಈ ಸಮುದಾಯವು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿವೆ ಎಂಬ ಕಾರಣದಿಂದಲೆ ಮೀಸಲಾತಿಯನ್ನು ಕೊಡಲಾಗಿದೆ. ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ಮೀಸಲಾತಿಯನ್ನು ಕೊಡಬಹುದೆಂದು ರಾಜ್ಯದ ಹಲವು ಸಮಿತಿಗಳು ಹಾಗೂ ಆಯೋಗಗಳು ಶಿಫಾರಸ್ಸು ಮಾಡಿವೆ.
3) ಕರ್ನಾಟಕದ ಮೊದಲ ಹಿಂದುಳಿದ ವರ್ಗಗಳ ಆಯೋಗ ಎಂದು ಕರೆಸಿಕೊಳ್ಳುವ ಎಲ್.ಜಿ.ಹಾವನೂರ ರವರ ಆಯೋಗವು 4 ಪ್ರವರ್ಗಗಳನ್ನು ಗುರುತಿಸಿದೆ. 1) ಹಿಂದುಳಿದ ಸಮುದಾಯಗಳು 2) ಹಿಂದುಳಿದ ಜಾತಿಗಳು 3) ಹಿಂದುಳಿದ ಬುಡಕಟ್ಟುಗಳು 4) ವಿಶೇಷ ಸಮುದಾಯಗಳು ಎಂದು ವ್ಯಾಖ್ಯಾನಿಸಿ ವರದಿಯನ್ನು ಹಾವನೂರ ಆಯೋಗ ಕೊಟ್ಟಿದೆ. ಇದನ್ನು ಆಧರಿಸಿ, ಸರ್ಕಾರಿ ಆದೇಶ ಸಂಖ್ಯೆ: ಡಿಪಿಎಆರ್ 01 ಎಸ್ಬಿಸಿ 1977, ದಿನಾಂಕ: 04.03.1977 ರ ಆದೇಶದ ಪ್ರಕಾರ ಮುಸ್ಲಿಮರನ್ನು ಹಿಂದುಳಿದ ಸಮುದಾಯಗಳ ವ್ಯಾಪ್ತಿಯಲ್ಲಿ ವ್ಯಾಖ್ಯಾನಿಸಲಾಗಿದೆ.
4) ದಿನಾಂಕ: 04.03.1977 ರ ಸರ್ಕಾರದ ಆದೇಶವನ್ನು ಸೋಮಶೇಖರಪ್ಪ v/s ಕರ್ನಾಟಕ ಸರ್ಕಾರ ಹಾಗೂ ಇತರರು ರಿಟ್ ಪಿಟಿಷನ್ ಸಂಖ್ಯೆ 4371/1977 ರಂತೆ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಗೌರವಾನ್ವಿತ ಉಚ್ಛ ನ್ಯಾಯಾಲಯವು ತನ್ನ ಆದೇಶದ ಪ್ಯಾರಾ ನಂ.42 ರಲ್ಲಿ ಈ ರೀತಿ ಆದೇಶ ಮಾಡಿದೆ.
“So far as the Muslims are concerned the Commission was unwise in excluding them from the list of Backward Classes solely on the ground that they belong to a religious minority. The Commission has, however, found that the Muslims are socially and educationally backward and also do not have adequate representation in the Civil Service. The fact that they are a religious minority is no ground to exclude them from the list of Backward Classes. The Government, in our opinion, was perfectly justified in listing the Muslims in the list of Bwckward Classes.”
5) ಹಿಂದುಳಿದ ಸಮುದಾಯಗಳ ವ್ಯಾಪ್ತಿಯಲ್ಲಿ ತರಬಹುದೆಂದು ಗೌರವಾನ್ವಿತ ಉಚ್ಛ ನ್ಯಾಯಾಲಯವು ವ್ಯಾಖ್ಯಾನಿಸಿ ಅರ್ಜಿದಾರರ ರಿಟ್ ಅರ್ಜಿಯನ್ನು ತಿರಸ್ಕರಿಸಿತು.
6) ಆನಂತರ, ಶ್ರೀ ವೆಂಕಟಸ್ವಾಮಿ ಯವರ ಆಯೋಗವು ಒಟ್ಟು 5 ವರ್ಗಗಳನ್ನು ಗುರುತಿಸಿ ‘ಎ’, ‘ಬಿ’, ‘ಸಿ’, ‘ಡಿ’ ಮತ್ತು ‘ಇ’ ವರ್ಗಗಳೆಂದು ವ್ಯಾಖ್ಯಾನಿಸಿತು. ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಗ್ರೂಪ್ ‘ಸಿ’ ಯಲ್ಲಿ ಸೇರಿಸಿತು.
7) ನಂತರ, ಓ. ಚಿನ್ನಪ್ಪರೆಡ್ಡಿ ಆಯೋಗವು ಕೆಟಗರಿ-1, ಕೆಟಗರಿ-2ಎ, ಕೆಟಗರಿ-2ಬಿ, ಕೆಟಗರಿ-3ಎ, ಕೆಟಗರಿ-3ಬಿ ಮತ್ತು ಕೆಟಗರಿ-4 ಎಂದು ಗುರುತಿಸಿತು. ಆಗ, ಮುಸ್ಲಿಂ ಸಮುದಾಯವನ್ನು ಪ್ರತ್ಯೇಕವಾಗಿ 2ಬಿ ವರ್ಗದಲ್ಲಿ ಗುರುತಿಸಿ ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತು.
8) ಆನಂತರದ ಪ್ರೊ. ರವಿವರ್ಮ ಕುಮಾರ್ ಆಯೋಗವು ಕೆಟಗರಿ-1, ಕೆಟಗರಿ-2ಎ, ಕೆಟಗರಿ-2ಬಿ, ಕೆಟಗರಿ-3ಎ, ಮತ್ತು ಕೆಟಗರಿ-3ಬಿ ಗಳೆಂದು 5 ಪ್ರವರ್ಗಗಳಾಗಿ ಗುರುತಿಸಿತು. ಇವತ್ತಿಗೂ ಇದೇ ಪದ್ಧತಿ ಮುಂದುವರೆದಿದೆ. ಪ್ರೊ. ರವಿವರ್ಮ ಕುಮಾರ್ ಆಯೋಗವು ಕೂಡ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗಗಳ ಕೆಟಗರಿ-2ಬಿ ನಲ್ಲಿ ಸೇರಿಸಿದೆ. ಹಾಗಾಗಿ, ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಗಳಿಗೆ ಸಂಬಂಧಪಟ್ಟ ಸಮಿತಿಗಳು ಹಾಗೂ ಆಯೋಗಗಳು ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗ ಎಂದು ಗುರುತಿಸಿವೆ.
9) ಆದರೆ, ನಿಮ್ಮ ಸರ್ಕಾರ ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರಗಿಡಲು ಪ್ರಯತ್ನಿsಸಿತ್ತು. ಆದರೆ ಅದು ಅನೂರ್ಜಿತವಾಗುತ್ತದೆ ಎಂದು ತಿಳಿದ ಕೂಡಲೇ ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಸಂಖ್ಯೆ: ರಿಟ್ ಪಿಟಿಷನ್(ಸಿವಿಲ್)ನಂ.435/2023 ರಲ್ಲಿ ಸಾಲಿಸಿಟರ್ ಜನರಲ್ರವರು ತಿಳಿಸಿದ ಅಭಿಪ್ರಾಯಗಳನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿದೆ.
“We further record the following statements made by the learned solicitor General:
(1) The impugned orders dated 27.03.2023 shall not be implemented till the next date of hearing.
(2) He further submits that the earlier regime relating to reservation viz., Notification dated 30.03.2002 will continue to hold the field till the next date of hearing.
He undoubtedly submits that this submission which he made is without prejudice to his contentions.”
10) ರಾಜಕಾರಣವನ್ನು ಪ್ರಾಮಾಣಿಕ ಕಾಳಜಿಯಿಂದ ಮಾಡಬೇಕು. ಅದು ಅರ್ಥಬದ್ಧವಾಗಿರಬೇಕು. ನಮ್ಮ ರಾಜಕಾರಣ ಪ್ರಾಮಾಣಿಕವಾಗಿರುವುದು ಮುಖ್ಯ. ಇಲ್ಲದಿದ್ದರೆ, ಓಟಿನ ಗಿಮಿಕ್ಕಿಗಾಗಿ ರಾಜಕಾರಣ ಮಾಡಿದರೆ ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಜನರ ಮುಂದೆ ಒಂದು ತೀರ್ಮಾನ ತೆಗೆದುಕೊಂಡು, ಸುಪ್ರೀಂ ಕೋರ್ಟಿನಲ್ಲಿ ಒಂದು ನಿಲುವನ್ನು ತೆಗೆದುಕೊಂಡಂತೆ ಎಲ್ಲ ವಿಚಾರಗಳಿಗೂ ಅನ್ವಯವಾಗುತ್ತದೆ.
ಒಟ್ಟಾರೆ ನಮ್ಮ ಸರ್ಕಾರವು ನಾಡಿನ ಸಮಗ್ರ ಅಭಿವೃದ್ಧಿಗಾಗಿ ದುಡಿಯುತ್ತಿದೆ. ಸುಸ್ಥಿರ ಅಭಿವೃದ್ಧಿಯತ್ತ ಕರ್ನಾಟಕವನ್ನು ಮುನ್ನಡೆಸುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ರಾಜಸ್ವ ಕೊರತೆಯನ್ನು ಹೋಗಲಾಡಿಸಿ ರೆವಿನ್ಯೂ ಸರ್ಪ್ಲಸ್ ಬಜೆಟ್ ಮಂಡಿಸುವುದೂ ಕೂಡ ನಮ್ಮ ಧ್ಯೇಯ.
ಇದು ಸರ್ವರ ಬಜೆಟ್. ಹಾಗೆಯೇ ಸರ್ವೋದಯದ ಬಜೆಟ್ ಎಂದು ಮತ್ತೊಮ್ಮೆ ತಮಗೆ ತಿಳಿಸಬಯಸುತ್ತೇನೆ. ನಮ್ಮ ಬಜೆಟ್ನಲ್ಲಿ ಈ ಬಾರಿ ಅನೇಕ ಹೊಸ ಕಾರ್ಯಕ್ರಮಗಳನ್ನು ತಂದಿದ್ದೇವೆ. ಪಶುಪಾಲಕರ ಕುರಿ, ಮೇಕೆ, ಎತ್ತು, ಹಸು ಆಕಸ್ಮಿಕವಾಗಿ ಮೃತಪಟ್ಟರೆ ಪರಿಹಾರ ಧನ ಹೆಚ್ಚು ಮಾಡುವುದರಿಂದ ಹಿಡಿದು, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ತಂದಿದ್ದೇವೆ. ಕೃಷಿ ಕ್ಷೇತ್ರಕ್ಕೆ ಕೊಡಲಾಗಿತ್ತು. ಈ ಬಾರಿ ನಾವು ಸಮಗ್ರ ಕೃಷಿ ಕ್ಷೇತ್ರಕ್ಕೆ 51,339 ಕೋಟಿ ರೂ.ಗಳನ್ನು ಕೊಟ್ಟಿದ್ದೇವೆ.
2022-23 ರಲ್ಲಿ ಮಹಿಳಾ ಅಭಿವೃದ್ಧಿಗೆ 43,188 ಕೋಟಿ ರೂ. ಕೊಡಲಾಗಿತ್ತು. 2025-26 ರಲ್ಲಿ 94,084 ಕೋಟಿ ರೂ. ಕೊಟ್ಟಿದ್ದೇವೆ.
ಮಕ್ಕಳ ಬಜೆಟ್ಟಿಗಾಗಿ 2022-23 ರಲ್ಲಿ 40,944 ಕೋಟಿ ರೂ. ಗಳನ್ನು ಕೊಡಲಾಗಿತ್ತು. 2025-26 ರಲ್ಲಿ 62,033 ಕೋಟಿ ರೂ. ಕೊಟ್ಟಿದ್ದೇವೆ.
ಇಷ್ಟೆಲ್ಲಾ ಆದ ಮೇಲೂ ನಿಮಗೆ ಬಜೆಟ್ ಬಗ್ಗೆ ಆಕ್ಷೇಪಗಳಿದ್ದರೆ, ಅದು ರಾಜಕೀಯ ಪ್ರೇರಿತವಾದ ಆಕ್ಷೇಪಗಳೇ ಹೊರತು, ಪ್ರಾಮಾಣಿಕ ಅಭಿಪ್ರಾಯಗಳಲ್ಲ.
ಇದನ್ನೂ ಓದಿ: Honey Trap: ಹನಿ ಟ್ರ್ಯಾಪ್ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ