ಬೆಂಗಳೂರು: ಚಿತ್ರದರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಸದ್ಯ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದು ಮತ್ತು ಜೈಲಿನೊಳಗೆ ಮೂಲಭೂತ ಸೌಲಭ್ಯಗಳನ್ನು ಕೋರಿ ದರ್ಶನ್ ಸ್ವತಃ ಸಲ್ಲಿಸಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಸೆಪ್ಟೆಂಬರ್ 9ಕ್ಕೆ ಕಾಯ್ದಿರಿಸಲಾಗಿತ್ತು. ಇಂದು ಅದರ ವಿಚಾರಣೆ ನಡೆಸಿದ ಸಿಸಿಎಚ್ ಕೋರ್ಟ್ ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ಕಾಯ್ದಿರಿಸಿದೆ.
ವಿಚಾರಣೆ ವೇಳೆ ದರ್ಶನ್ ನ್ಯಾಯಾಧೀಶರ ಎದುರು ಭಾವುಕರಾದರು. ನನಗೆ ವಿಷ ಕೊಡಿ ಎಂದು ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ. ನನ್ನದೊಂದು ಮನವಿ ಇದೆ ಸ್ವಲ್ಪ ಪಾಯಿಸನ್ ಬೇಕು. ನನಗೆ ಅದನ್ನು ನೀಡಬೇಕು. ನಾನು ಬಿಸಿಲನ್ನು ನೋಡದೇ ತಿಂಗಳುಗಳು ಕಳೆದಿದೆ. ಕೈಯಲ್ಲ ಫಂಗಸ್ ಆಗಿದೆ. ನನ್ನ ಬಟ್ಟೆಗಳಿಂದ ವಾಸನೆ ಬರುತ್ತಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಜಡ್ಜ್ ಹಾಗೆಲ್ಲಾ ಮಾತನಾಡಬಾರದು, ನೀವು ಹೇಳಿದ ಹಾಗೆಲ್ಲ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೆ.3 ರಂದು ಕೋರ್ಟ್ಗೆ ಮನವಿ ಸಲ್ಲಿಸಿದ್ದ ದರ್ಶನ್, ಬಳ್ಳಾರಿಗೆ ಸ್ಥಳಾಂತರಿಸುವ ಕುರಿತು ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು. ಅವರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ, ಬಳ್ಳಾರಿ ಬೆಂಗಳೂರಿನಿಂದ ಸುಮಾರು 310 ಕಿ.ಮೀ ದೂರದಲ್ಲಿದೆ. ಇದರಿಂದಾಗಿ ನಟ ಪ್ರತಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದು ಕಷ್ಟವಾಗುತ್ತದೆ ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ, ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್ಪಿಪಿ) ಪ್ರಸನ್ನ ಕುಮಾರ್ ಸುಪ್ರೀಂ ಕೋರ್ಟ್ ಈಗಾಗಲೇ ದರ್ಶನ್ ಅವರ ಜಾಮೀನು ರದ್ದುಗೊಳಿಸುವಾಗ ಜೈಲಿನಲ್ಲಿ ಅವರ ನಡವಳಿಕೆಯನ್ನು ಗಮನಿಸಿದೆ. ಆದ್ದರಿಂದ ಅವರ ವರ್ಗಾವಣೆಗೆ ಯಾವುದೇ ಹೆಚ್ಚುವರಿ ಸಮರ್ಥನೆಯ ಅಗತ್ಯವಿಲ್ಲ ಎಂದು ವಾದಿಸಿದರು. ಆರೋಪಿಯನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಆಡಳಿತಾತ್ಮಕ ಕಾರಣಗಳು ಮಾತ್ರ ಸಾಕು ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ:
ವಾದವನ್ನು ಆಲಿಸಿದ ನಂತರ, ನ್ಯಾಯಾಲಯವು ಈ ವಿಷಯದ ಕುರಿತು ತನ್ನ ನಿರ್ಧಾರವನ್ನು ಸೆಪ್ಟೆಂಬರ್ 9 ರವರೆಗೆ ಕಾಯ್ದಿಸಿತ್ತು. ಇದೀಗ ಇಂದು ಮಧ್ಯಾಹ್ನ ಮೂರು ಗಂಟೆಗೆ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.