ಚೆನ್ನೈ, ನ. 10: ಕಾಲಿವುಡ್ನ ಜನಪ್ರಿಯ ನಟ, ಬಹುಭಾಷಾ ಕಲಾವಿದ ಅಭಿನಯ್ (Tamil actor Abhinay) ನವೆಂಬರ್ 10ರಂದು ನಿಧನ ಹೊಂದಿದರು. ಅವರಿಗೆ 44 ವರ್ಷ ವಯಸ್ಸಾಗಿತ್ತು. ಅವರು ಕೆಲವು ದಿನಗಳಿಂದ ಲಿವರ್ಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿಧನ ಹೊಂದಿದ್ದಾರೆ. ಲಿವರ್ಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ವಿಡಿಯೊ ಮೂಲಕ ಮನವಿ ಮಾಡಿದ್ದರು. ಸದ್ಯ ಮೃತದೇಹವನ್ನು ಅವರ ಚೆನ್ನೈ ನಿವಾಸದಲ್ಲಿ ಇರಿಸಲಾಗಿದೆ.
ಅಭಿನಯ್ ಅವರಿಗೆ ಹತ್ತಿರದ ಸಂಬಂಧಿಕರು ಯಾರೂ ಇಲ್ಲದ ಕಾರಣ ಅಂತ್ಯಕ್ರಿಯೆ ನಡಿಗರ್ ಸಂಘದ ಪ್ರತಿನಿಧಿಗಳ ಮೇಲ್ವಿಚಾರಣೆಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಅಭಿನಯ್ 2002ರಲ್ಲಿ ತೆರೆಕಂಡ ಧನುಷ್ ನಟನೆಯ ಮೊದಲ ತಮಿಳು ಚಿತ್ರ ʼತುಲ್ಲುವದೋ ಇಲಮೈʼ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಅಭಿನಯ್ ನಿಧನಕ್ಕೆ ಕಂಬನಿ ಮಿಡಿದ ನಟ ಕಾಯಲ್ ದೇವರಾಜ್:
ವೈರಲ್ ಆಗಿತ್ತು ವಿಡಿಯೊ
ಈ ಹಿಂದೆ ಅಭಿನಯ್ ತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ವಿಚಾರವನ್ನು ವಿಡಿಯೊ ಮೂಲಕ ಬಹಿರಂಗಪಡಿಸಿದ್ದರು. ಈ ಬಗ್ಗೆ ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ ಎಂದೂ ತಿಳಿಸಿದ್ದರು. "ನಾನು ಹೆಚ್ಚು ಕಾಲ ಇರುತ್ತೇನೆಯೋ ಇಲ್ಲವೋ ತಿಳಿದಿಲ್ಲ. ವೈದ್ಯರು ಇನ್ನೂ ಒಂದೂವರೆ ವರ್ಷ ಮಾತ್ರ ಬದುಕಬಹುದು ಎಂದಿದ್ದಾರೆʼʼ ಎಂದು ಹೇಳಿದ್ದರು. ಈ ವಿಡಿಯೊ ವೈರಲ್ ಆಗಿತ್ತು. ಅಭಿಮಾನಿಗಳು ಅಭಿನಯ್ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ್ದರು.
ಈ ಸುದ್ದಿಯನ್ನೂ ಓದಿ: Harish Rai Death: ʼಕೆಜಿಎಫ್ ಚಾಚಾʼ ಹರೀಶ್ ರಾಯ್ ನಿಧನ, ಕ್ಯಾನ್ಸರ್ಗೆ ನಟ ಬಲಿ
23 ವರ್ಷಗಳ ವೃತ್ತಿ ಜೀವನದಲ್ಲಿ ಅವರು ತಮಿಳು, ಮಲಯಾಳಂನ ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಜತೆಗೆ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡಬ್ಬಿಂಗ್ ಕಲಾವಿದರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2014ರಲ್ಲಿ ರಿಲೀಸ್ ಆದ ತಮಿಳಿನ ʼವಲ್ಲವನುಕ್ಕು ಪುಲ್ಲುಂ ಆಯುಧಮ್ʼ ಅಭಿನಯ್ ಅಭಿನಯದ ಕೊನೆಯ ಚಿತ್ರ. ಅದಾದ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.
ಮಾಲಿವುಡ್ನಲ್ಲೂ ಜನಪ್ರಿಯ
ತಮಿಳಿನ ಜತೆಗೆ ಮಲಯಾಳಂ ಸಿನಿಮಾದಲ್ಲಿಯೂ ಅಭಿನಯ್ ಅಭಿನಯಿಸಿದ್ದಾರೆ. 2002ರಲ್ಲಿ ಬಿಡುಗಡೆಯಾದ ʼಕೈಯೆತುಮ್ ದೂರತ್ʼ ಅವರ ಮೊದಲ ಮಲಯಾಳಂ ಸಿನಿಮಾ. ಇನ್ನು ಡಬ್ಬಿಂಗ್ ಕಲಾವಿದರಾಗಿಯೂ ಅವರು ಛಾಪು ಮೂಡಿಸಿದ್ದಾರೆ. ತಮಿಳಿನ ʼತುಪಾಕಿʼ ಮತ್ತು ʼಅಂಜಾನ್ʼ ಚಿತ್ರದಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ಮ್ವಾಲ್, ʼಪೈಯಾʼದಲ್ಲಿ ಮಿಲಿಂದ್ ಸೋಮನ್ ಮತ್ತು ʼಕಾಕ ಮುಟ್ಟೈʼಯಲ್ಲಿ ಬಾಬು ಆಂಟೋನಿ ಅವರಿಗೆ ಧ್ವನಿ ನೀಡಿ ಗಮನ ಸೆಳೆದಿದ್ದರು. ಜಾಹೀರಾತಿನಲ್ಲೂ ಮೋಡಿ ಮಾಡಿದ್ದರು. ಒರಿಯೋ ಬಿಸ್ಕೆಟ್ ಮುಂತಾದ ಬ್ರ್ಯಾಂಡ್ನ ರಾಯಭಾರಿಯಾಗಿದ್ದರು.
ಧನ ಸಹಾಯ ಮಾಡಿದ್ದ ಧನುಷ್
ಅಭಿನಯ್ ಅವರ ನೆರವಿಗೆ ಚಿತ್ರರಂಗದ ಹಲವು ಕಲಾವಿದರು ಧಾವಿಸಿದ್ದರು. ಈ ಪೈಕಿ ಚಿಕಿತ್ಸೆಗಾಗಿ ಧನುಷ್ 5 ಲಕ್ಷ ರೂ., ಕೆ.ಪಿ.ವೈ. ಬಾಲ 1 ಲಕ್ಷ ರೂ. ನೆರವು ನೀಡಿದ್ದರು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಅಭಿನಯ್ ಚಿಕ್ಕ ವಯಸ್ಸಿಎ ಇಹಲೋಕ ತ್ಯಜಿಸಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ.