ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೀಪಾವಳಿಯಂದು ದೀಪ ಹಚ್ಚೋದ್ಯಾಕೆ? ಹಿಂದುಗಳ ಆಚರಣೆ ವಿರುದ್ಧ ನಾಲಗೆ ಹರಿಯಬಿಟ್ಟ ಅಖಿಲೇಶ್‌ ಯಾದವ್‌; ವಿಎಚ್‌ಪಿ ತಿರುಗೇಟು

Akhilesh Yadav: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಕ್ಟೋಬರ್‌ 19ರಂದು 26,11,101 ಹಣತೆ ಬೆಳಗುವ ದಾಖಲೆ ಬರೆಯಲು ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಸಜ್ಜಾಗಿದೆ. ಈ ವೇಳೆ ದೀಪೋತ್ಸವದ ವಿರುದ್ಧ ಎಸ್‌ಪಿ ನಾಯಕ ಅಖಿಲೇಶ್‌ ಯಾದವ್‌ ನಾಲಗೆ ಹರಿಯಬಿಟ್ಟಿದ್ದಾರೆ.

ಲಖನೌ, ಅ. 19: ದೀಪಾವಳಿ ಆಚರಣೆಗೆ (Deepavali 2025) ಇಡೀ ದೇಶವೇ ಸಜ್ಜಾಗಿದೆ. ಇದರ ಭಾಗವಾಗಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ (Yogi Adityanath) ನೇತೃತ್ವದ ಸರ್ಕಾರ ಅಯೋಧ್ಯೆಯಲ್ಲಿ ದೀಪೋತ್ಸವ ಆಚರಿಸಲು ಮುಂದಾಗಿದೆ. ಇದರ ವಿರುದ್ಧ ಸಮಾಜವಾದಿ ಪಾರ್ಟಿಯ (SP) ಮುಖಂಡ ಅಖಿಲೇಶ್‌ ಯಾದವ್‌ (Akhilesh Yadav) ನೀಡಿದ ಹೇಳಿಕೆ ಹಿಂದುಗಳ, ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ದೀಪಗಳು ಮತ್ತು ಮೇಣದ ಬತ್ತಿಗಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಖರ್ಚು ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼʼನಾವು ದೀಪಗಳು ಮತ್ತು ಮೇಣದ ಬತ್ತಿಗಳಿಗಾಗಿ ಹಣವನ್ನು ಏಕೆ ಖರ್ಚು ಮಾಡಬೇಕು? ಅದರ ಬಗ್ಗೆ ಯಾಕೆ ಇಷ್ಟು ಯೋಚಿಸಬೇಕು?ʼʼ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಕ್ರಿಸ್ಮಸ್‌ ಆಚರಣೆಯನ್ನು ನೋಡಿ ನಾವು ಕಲಿಯಬೇಕು ಎಂದು ʼಬಿಟ್ಟಿʼ ಸಲಹೆಯನ್ನೂ ನೀಡಿದ್ದಾರೆ.

ʼʼಇಡೀ ಜಗತ್ತಿನಲ್ಲಿ, ಕ್ರಿಸ್ಮಸ್ ಸಮಯದಲ್ಲಿ ಎಲ್ಲ ನಗರಗಳು ಬೆಳಗುತ್ತವೆ. ಅದು ತಿಂಗಳುಗಟ್ಟಲೆ ಮುಂದುವರಿಯುತ್ತದೆ. ನಾವು ಅವರಿಂದ ಕಲಿಯಬೇಕು" ಎಂಬ ಅಖಿಲೇಶ್‌ ಯಾದವ್‌ ಹೇಳಿಕೆ ರಾಜಕೀಯವಾಗಿ ಬಿರುಗಾಳಿ ಎಬ್ಬಿಸಿದೆ.

ಅಖಿಲೇಶ್‌ ಯಾದವ್‌, ವಿನೋದ್‌ ಬನ್ಸಾಲ್‌ ಹೇಳಿಕೆ:



ಈ ಸುದ್ದಿಯನ್ನೂ ಓದಿ: Ayodhya Diwali 2025: ಅಯೋಧ್ಯೆಯಲ್ಲಿ ಬೆಳಗಲಿದೆ 25 ಲಕ್ಷ ಹಣತೆ, ಮತ್ತೊಂದು ಗಿನ್ನೆಸ್ ದಾಖಲೆ ಸಜ್ಜು!

ಅಖಿಲೇಶ್‌ ಯಾದವ್‌ ಹೇಳಿದ್ದೇನು?

ʼʼಭಗವಂತ ಶ್ರೀರಾಮನ ಹೆಸರಿನಲ್ಲಿ ನಾನೊಂದು ಸಲಹೆ ನೀಡಲು ಬಯಸುತ್ತೇನೆ. ಕ್ರಿಸ್‌ಮಸ್‌ ಸಮಯದಲ್ಲಿ ಎಲ್ಲ ನಗರಗಳು ಬೆಳಗುತ್ತವೆ ಮತ್ತು ಅದು ತಿಂಗಳ ಕಾಲ ಹಾಗೇ ಇರುತ್ತದೆ. ಅವರಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ. ಹಣತೆ ಮತ್ತು ಕ್ಯಾಂಡಲ್‌ಗಾಗಿ ನಾವು ಹಣವನ್ನು ಯಾಕೆ ಖರ್ಚು ಮಾಡಬೇಕು? ಸರ್ಕಾರದಿಂದ ನಾವು ಏನನ್ನು ನಿರೀಕ್ಷಿಸಬಹುದು? ಇದು ನಿಲ್ಲಬೇಕು. ಇದಕ್ಕಿಂತ ಚಂದದ ದೀಪಗಳಿವೆʼʼ ಎಂದು ನಾಲಗೆ ಹರಿಯಬಿಟ್ಟಿದ್ದಾರೆ.

ಅಯೋಧ್ಯೆಯ ದೀಪೋತ್ಸವಕ್ಕೆ ಮೊದಲು ನೀಡಿದ ಈ ಹೇಳಿಕೆಗಳನ್ನು ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಬಿಜೆಪಿ ನಾಯಕರು, ಹಿಂದು ಮುಖಂಡರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.

ಈ ಬಾರಿ ಅಯೋಧ್ಯೆಯಲ್ಲಿ 26,11,101 ಹಣತೆ ಬೆಳಗುವ ಮೂಲಕ ಅಪರೂಪದ ದೀಪೋತ್ಸವ ಆಚರಿಸಿ ದಾಖಲೆ ಬರೆಯಲು ರಾಜ್ಯ ಸರ್ಕಾರ ಸಜ್ಜಾದ ಬೆನ್ನಲ್ಲೇ ಅಖಿಲೇಶ್‌ ಯಾದವ್‌ ಅವರ ಹೇಳಿಕೆ ಹೊರಬಿದ್ದಿದೆ. ಭಾನುವಾರ ರಾತ್ರಿ (ಅಕ್ಟೋಬರ್‌ 19) ಈ ಅಪರೂಪದ ದಾಖಲೆ ನಿರ್ಮಾಣವಾಗಲಿದೆ. ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಸುಮಾರು 33,000 ಸ್ವಯಂಸೇವಕರು ಬೆಳಕಿನ ಹಬ್ಬವನ್ನು ಚಂದಗಾಣಿಸಲು ಕೈ ಜೋಡಿಸಿದ್ದು, ರಾಮ್ ಕಿ ಪೈಡಿ ಘಾಟ್‌ ಸೇರಿದಂತೆ ಒಟ್ಟು ಇಲ್ಲಿನ 56 ಘಾಟ್‌ಗಳಲ್ಲಿಹಣತೆ ಜೋಡಿಸುವ ಕಾರ್ಯ ನಡೆಯುತ್ತಿದೆ.

ಅಖಿಲೇಶ್‌ ಹೇಳಿಕೆ ಖಂಡನೆ

ಅಖಿಲೇಶ್‌ ಯಾದವ್ ಅವರ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. "ಅಯೋಧ್ಯೆ ಜಾಗತಿಕವಾಗಿ ಗುರುತಿಸ್ಪಡುತ್ತಿರುವುದು ಕೆಲವರಿಗೆ ಸಮಸ್ಯೆ ತಂದೊಡ್ಡಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಆಳ್ವಿಕೆಯಲ್ಲಿ ಅಯೋಧ್ಯೆಯನ್ನು ಕತ್ತಲೆಯಲ್ಲಿ ಇರಿಸಲಾಗಿತ್ತು. ಹಿಂದೆ ರಾಮ ಭಕ್ತರ ಮೇಲೆ ಆಗಿನ ಸಮಾಜವಾದಿ ಪಕ್ಷದ ಸರ್ಕಾರ ಗುಂಡು ಹಾರಿಸಿತ್ತು. ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದರೆ, ಅಖಿಲೇಶ್ ಯಾದವ್ ಅವರಿಗೆ ಕಸಿವಿಸಿಯಾಗುತ್ತಿದೆ" ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಲ್ಲ ಹೇಳಿದ್ದಾರೆ.

ವಿಶ್ವ ಹಿಂದು ಪರಿಷತ್ (VHP) ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ʼʼಅಖಿಲೇಶ್‌ ಯಾದವ್‌ ಭಾರತೀಯ ಸಂಸ್ಕೃತಿಗಿಂತ ವಿದೇಶಿ ಸಂಪ್ರದಾಯಗಳನ್ನು ವೈಭವೀಕರಿಸುತ್ತಿದ್ದಾರೆ. ದೀಪಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕ್ರಿಸ್‌ಮಸ್ ಅನ್ನು ಹೊಗಳುತ್ತಿದ್ದಾರೆ. ದೀಪಗಳ ಸಾಲುಗಳು ಅವರ ಹೃದಯವನ್ನು ಎಷ್ಟು ಸುಟ್ಟುಹಾಕಿವೆಯೆಂದರೆ ಅವರು ಹಿಂದುಗಳಿಗೆ ಹಣತೆ ಮತ್ತು ಮೇಣದಬತ್ತಿಗಳಿಗಾಗಿ ಹಣವನ್ನು ವ್ಯರ್ಥ ಮಾಡಬೇಡಿ, ಕ್ರಿಸ್‌ಮಸ್‌ನಿಂದ ಕಲಿಯಿರಿ ಎಂದು ಹೇಳುತ್ತಿದ್ದಾರೆ. ಜಿಹಾದಿಗಳು ಮತ್ತು ಮತಾಂತರ ಗ್ಯಾಂಗ್‌ಗಳ ನೆಚ್ಚಿನ ನಾಯಕ, ತನ್ನನ್ನು ತಾನು ಯಾದವ್ ಎಂದು ಕರೆದುಕೊಳ್ಳುವವನು ಹಿಂದುಗಳಿಗಿಂತ ಕ್ರಿಶ್ಚಿಯನ್ನರನ್ನು ಹೆಚ್ಚು ಪ್ರೀತಿಸುತ್ತಾನೆ" ಎಂದು ದೂರಿದ್ದಾರೆ.