ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monsoon Impact: ಶಿಕ್ಷಣ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ; ಇನ್ಮುಂದೆ ಏಪ್ರಿಲ್‌-ಮೇ ಬದಲು ಜೂನ್‌-ಜುಲೈಯಲ್ಲಿ ಶಾಲೆಗೆ ವಾರ್ಷಿಕ ರಜೆ?

V. Sivankutty: ಇನ್ನುಮುಂದೆ ಶಾಲೆಗಳ ಬೇಸಗೆ ರಜೆಯನ್ನು ಏಪ್ರಿಲ್‌-ಮೇ ಬದಲು ಜೂನ್‌-ಜುಲೈಯಲ್ಲಿ ನೀಡಲು ಕೇರಳ ಸರ್ಕಾರ ಮುಂದಾಗಿದೆ. ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಈ ಬಗ್ಗೆ ಸೂಚನೆ ನೀಡಿದ್ದಾರೆ. ಮಳೆಯ ಕಾರಣದಿಂದ ಪದೇ ಪದೆ ತರಗತಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2 ತಿಂಗಳ ರಜೆಯನ್ನು ಏಪ್ರಿಲ್-ಮೇ ಬದಲು ಜೂನ್-ಜುಲೈಗೆ ಬದಲಾಯಿಸಲು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಏಪ್ರಿಲ್‌-ಮೇ ಬದಲು ಜೂನ್‌-ಜುಲೈಯಲ್ಲಿ ಶಾಲೆಗೆ ರಜೆ!

ಸಾಂದರ್ಭಿಕ ಚಿತ್ರ.

Ramesh B Ramesh B Jul 31, 2025 4:38 PM

ತಿರುವನಂತಪುರಂ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇರಳ ಸರ್ಕಾರ ಶೈಕ್ಷಣಿಕ ರಂಗದಲ್ಲಿ ಅಮೂಲಾಗ್ರ ಬದಲಾವಣೆ ತರಲು ಯೋಜನೆ ರೂಪಿಸುತ್ತಿದೆ. ಇನ್ನುಮುಂದೆ ಶಾಲೆಗಳ ಬೇಸಗೆ ರಜೆಯನ್ನು ಏಪ್ರಿಲ್‌-ಮೇ ಬದಲು ಜೂನ್‌-ಜುಲೈಯಲ್ಲಿ ನೀಡಲು ಮುಂದಾಗಿದೆ. ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ (V. Sivankutty) ಈ ಬಗ್ಗೆ ಸೂಚನೆ ನೀಡಿದ್ದಾರೆ. ಮಳೆಯ ಕಾರಣದಿಂದ ಪದೇ ಪದೆ ತರಗತಿ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2 ತಿಂಗಳ ರಜೆಯನ್ನು ಏಪ್ರಿಲ್-ಮೇ ಬದಲು ಜೂನ್-ಜುಲೈಗೆ ಬದಲಾಯಿಸಲು ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ (Monsoon Impact). ಅದಾಗ್ಯೂ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಜೂನ್‌-ಜುಲೈಯಲ್ಲಿ ಭಾರಿ ಮಳೆ ಸುರಿಯುವ ಕಾರಣದಿಂದ ಹಲವು ಬಾರಿ ತರಗತಿ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಇತರ ರಜಾ ದಿನಗಳಲ್ಲಿ ಹೆಚ್ಚುವರಿ ತರಗತಿ ನಡೆಸಬೇಕಾಗುತ್ತದೆ. ಇದನ್ನು ತಪ್ಪಿಸಲು ಈ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Sadhvi Pragya Singh: 'ಅವಮಾನ ಸಹಿಸಿಕೊಂಡೆ'; ಮಾಲೆಗಾಂವ್‌ ತೀರ್ಪಿನ ಸಂದರ್ಭದಲ್ಲಿ ಭಾವುಕರಾದ ಪ್ರಜ್ಞಾ ಸಿಂಗ್‌

ಸಚಿವ ಶಿವನ್‌ಕುಟ್ಟಿ ಹೇಳಿದ್ದೇನು?

ʼʼಪ್ರತಿ ವರ್ಷ ಮುಂಗಾರು ಮಳೆ ತರಗತಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಶಾಲೆಗಳನ್ನು ನಿರಾಶ್ರಿತರ ತಾಣವನ್ನಾಗಿ ಮಾಡಬೇಕಾದ ಸ್ಥಿತಿಯೂ ನಿರ್ಮಾಣವಾಗುತ್ತದೆ. ಜತೆಗೆ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆʼʼ ಎಂದು ವಿವರಿಸಿದ್ದಾರೆ.

ಫೇಸ್‌ಬುಕ್‌ನಲ್ಲಿಯೂ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ʼʼಸದ್ಯ ಕೇರಳದಲ್ಲಿ ಶಾಲೆಗಳಿಗೆ ಬೇಸಗೆ ರಜೆಯನ್ನು ಏಪ್ರಿಲ್‌-ಮೇಯಲ್ಲಿ ನೀಡಲಾಗುತ್ತದೆ. ಈ ವೇಳೆ ವಾತಾವರಣದ ತಾಪಮಾನ ಅಧಿಕವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಈ ತಿಂಗಳಲ್ಲಿ ರಜೆ ನೀಡುವ ಪದ್ಧತಿ ಆರಂಭವಾಗಿದೆ. ಇತ್ತ ಜೂನ್‌-ಜುಲೈಯಲ್ಲಿ ಧಾರಾಕಾರ ಸುರಿಯುವ ಮಳೆಯಿಂದಾಗಿ ಅನೇಕ ಬಾರಿ ತರಗತಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಕೆಲವೊಮ್ಮೆ ರಜೆ ನೀಡಬೇಕಾಗುತ್ತದೆ. ಹೀಗಾಗಿ ಬೇಸಗೆ ರಜೆಯನ್ನು ಏಪ್ರಿಲ್‌-ಮೇ ಬದಲು ಧಾರಾಕಾರ ಮಳೆ ಸುರಿಯುವ ಜೂನ್‌-ಜುಲೈಗೆ ಬದಲಾಯಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. ಇದರ ಜತೆಗೆ ಮೇ-ಜೂನ್‌ ಅವಧಿಯಲ್ಲಿ ರಜೆ ನೀಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಈ ವಿಚಾರದಲ್ಲಿ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆʼʼ ಎಂದಿದ್ದಾರೆ.

ಅದಾಗ್ಯೂ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದೂ ಹೇಳಿದ್ದಾರೆ. ಸಾರ್ವಜನಿಕರು, ಪಾಲಕರು, ಶಿಕ್ಷಣ ತಜ್ಞರು ಮತ್ತು ಸರ್ಕಾರದ ಅಭಿಪ್ರಾಯ ಪಡೆದು ಈ ಬಗ್ಗೆ ನಿರ್ಧರಿಸಲಾಗುವುದು ಎಂದು ವಿವರಿಸಿದ್ದಾರೆ.

ʼʼಈ ನಿಯಮ ಜಾರಿಯಿಂದ ವಿದ್ಯಾರ್ಥಿಗಳಿಗಾಗುವ ಅನುಕೂಲ, ಅನಾನುಕೂಲಗಳೇನು? ಇದು ಅವರ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು? ನಮ್ಮ ಈ ನಿರ್ಧಾರ ಇತರ ರಾಜ್ಯ ಮತ್ತು ದೇಶಗಳ ಮೇಲೆ ಪರಿಣಾಮ ಬೀರುತ್ತಾ? ಮುಂತಾದ ಅಂಶಗಳ ಬಗ್ಗೆಯೂ ಅಧ್ಯಯನ ನಡೆಯಲಿದೆʼʼ ಎಂದು ಅವರು ಹೇಳಿದ್ದಾರೆ.

ಒಂದುವೇಳೆ ಈ ನಿಯಮ ಜಾರಿಯಾದರೆ ಕೇರಳದ ಶೈಕ್ಷಕಣಿಕ ಕ್ಯಾಲಂಡರ್‌ ಬದಲಾಗಲಿದೆ. ಶಾಲೆಗಳ ವೇಳಾಪಟ್ಟಿಯನ್ನೇ ಅಮೂಲಾಗ್ರವಾಗಿ ಬದಲಾಯಿಸಲಿದೆ. ಜತೆಗೆ ಬೇರೆ ರಾಜ್ಯಗಳಲ್ಲಿ ಶಿಕ್ಷಣ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.