ಮುಂಬೈ: ಗುಜರಾತ್ನ ಕಾಂಡ್ಲಾದಿಂದ (Kandla) 75 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸ್ಪೈಸ್ಜೆಟ್ ವಿಮಾನವು ಶುಕ್ರವಾರ ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai airport) ತುರ್ತು ಭೂಸ್ಪರ್ಶ (Emergency landing) ಮಾಡಿದೆ. ಕಾಂಡ್ಲಾ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವ ಸಮಯದಲ್ಲಿ ಅದರ ಹೊರ ಚಕ್ರಗಳಲ್ಲಿ ಒಂದು ಕಳಚಿ ಬಿದ್ದಿತು. ಕಾಂಡ್ಲಾದಿಂದ ಮುಂಬೈಗೆ ಹಾರುತ್ತಿದ್ದ ಎಸ್ ಜಿ 2906 ವಿಮಾನವು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವಾಗ ಈ ಘಟನೆ ನಡೆದಿದೆ. ವಿಮಾನಯಾನ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ವಿಮಾನದ ಹೊರ ಚಕ್ರಗಳಲ್ಲಿ ಒಂದಾದ ಕ್ಯೂ400 ಬೊಂಬಾರ್ಡಿಯರ್ ಟೇಕ್ ಆಫ್ ಆದ ಸ್ವಲ್ಪ ಸಮಯದ ಅನಂತರ ರನ್ವೇಯಲ್ಲಿ ಬಿದ್ದಿತು.
ಸ್ಪೈಸ್ ಜೆಟ್ ವಿಮಾನ ಇಳಿಯುವ ವೇಳೆಗೆ ಚಕ್ರ ನಾಪತ್ತೆಯಾಗಿದ್ದರಿಂದ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ವಿಮಾನ ಟೇಕ್ ಆಫ್ ವೇಳೆ ವಿಮಾನದ ಔಟರ್ ವೀಲ್ ಪತ್ತೆಯಾಗಿದ್ದು, ವೀಲ್ ಕಳಚಿ ರನ್ ವೇ ಯಲ್ಲಿ ಬಿದ್ದಿತ್ತು. ಹೀಗಾಗಿ ತಕ್ಷಣ ಸ್ಪೈಸ್ ಜೆಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಸ್ಪೈಸ್ ಜೆಟ್, ವಿಮಾನ ತನ್ನ ಪ್ರಯಾಣವನ್ನು ಸುರಕ್ಷಿತವಾಗಿ ಮುಂದುವರಿಸಿದೆ. ಲ್ಯಾಂಡಿಂಗ್ ಸುರಕ್ಷಿತವಾಗಿ ಆಗಿದೆ. ವಿಮಾನವು ಟರ್ಮಿನಲ್ ಗೆ ಟ್ಯಾಕ್ಸಿ ಮಾಡಿದ್ದು ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಎಂದು ತಿಳಿಸಿದೆ.
ದೆಹಲಿಯಿಂದ ನೇಪಾಳದ ಕಠ್ಮಂಡುವಿಗೆ ಗುರುವಾರ ಹೊರಟಿದ್ದ ವಿಮಾನದ ಎಸಿಯಲ್ಲಿ ದೋಷ ಉಂಟಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದ್ದು, ವಿಮಾನದೊಳಗೆ ಗಲಾಟೆ ಉಂಟಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ವಿಮಾನಯಾನ ಸಂಸ್ಥೆಯು ಪ್ರಯತ್ನಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: Arshdeep Singh: ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಕಣಕ್ಕೆ ಇಳಿಯಲಿರುವ ನಂ.1 ವೇಗಿ!
ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸಂಸ್ಥೆ ನಿರ್ವಹಿಸುವ ಮತ್ತೊಂದು ವಿಮಾನದಲ್ಲಿ ಟೈಲ್ಪೈಪ್ ಬೆಂಕಿ ಕಾಣಿಸಿಕೊಂಡಿತ್ತು. ಎಸ್ ಜಿ041 ಬೋಯಿಂಗ್ 737-8 ವಿಮಾನವು ಮಧ್ಯಾಹ್ನ 3 ಗಂಟೆ ಸುಮಾರಿಗೆ ದೆಹಲಿಯಿಂದ ಹೊರಟು ಸಂಜೆ 5.10 ರ ಸುಮಾರಿಗೆ ಕಠ್ಮಂಡುವಿನಲ್ಲಿ ಇಳಿಯಿತು. ಇದರ ಟೇಕ್-ಆಫ್ ಸುಮಾರು ಏಳು ಗಂಟೆಗಳ ಕಾಲ ವಿಳಂಬವಾಯಿತು ಎನ್ನಲಾಗಿದೆ.