ಪಾಟ್ನಾ, ನ. 11: ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ರಿಸಲ್ಟ್ ಹೊರ ಬಿದ್ದಿದೆ (Bihar Exit Polls). ಮಂಗಳವಾರ (ನವೆಂಬರ್ 11) 2ನೇ ಮತ್ತು ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ವರದಿ ಬಿಡುಗಡೆ ಮಾಡಲಾಯಿತು. ಬಹುತೇಕ ಎಲ್ಲ ಸಮೀಕ್ಷೆಗಳು ಎನ್ಡಿಎ (NDA) ಮತ್ತೊಮ್ಮೆ ಅಧಿಕಾರಕ್ಕೆ ಬರುವ ಬಗ್ಗೆ ಭವಿಷ್ಯ ನುಡಿದಿವೆ. ಬಿಹಾರದಲ್ಲಿ ಈ ಬಾರಿ ದಾಖಲೆಯ ಪ್ರಮಾಣದ ಮತದಾನವಾಗಿದ್ದು, ಇದು ಎನ್ಡಿಎಯನ್ನು ಮತ್ತೆ ಅಧಿಕಾರಕ್ಕೆ ತರಲು ಮುಖ್ಯ ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸುಮಾರು 7 ಸಮೀಕ್ಷೆಗಳು ಎನ್ಡಿಎ ಸರಳ ಬಹುಮತ ಪಡೆಯಲಿದೆ ಎಂದು ಹೇಳಿವೆ. ಇನ್ನು ವಿಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟ ತೀವ್ರ ಪೈಪೋಟಿ ಒಡ್ಡಿಯೂ ಮುಖಭಂಗ ಅನುಭವಿಸಲಿದೆ ಎಂದು ವರದಿಗಳು ಉಲ್ಲೇಖಿಸಿವೆ. 243 ಕ್ಷೇತ್ರಗಳ ಪೈಕಿ ಎನ್ಡಿಎ 150 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಮ್ಯಾಜಿಕ್ ನಂಬರ್: 122.
ಎಕ್ಸಿಟ್ ಪೋಲ್ ಬಗ್ಗೆ ಎಕ್ಸ್ ಪೋಸ್ಟ್:
ವಿವಿಧ ಸಮೀಕ್ಷೆಗಳಲ್ಲಿ ಎನ್ಡಿಎಗೆ ದೊರೆತ ಸೀಟ್ಗಳ ವಿವರ
ಚಾಣಕ್ಯ ಸ್ಟ್ರಾಟಜೀಸ್: 130-138
ದೈನಿಕ್ ಭಾಸ್ಕರ್: 145-160
ಡಿವಿ ರಿಸರ್ಚ್: 137-152
ಜೆವಿಸಿ: 135-150
ಮ್ಯಾಟ್ರಿಝ್: 147-167
ಪಿ-ಮಾರ್ಕ್: 142-162
ಪೀಪಲ್ಸ್ ಇನ್ಸೈಟ್: 133-148
ಪೀಪಲ್ಸ್ ಪಲ್ಸ್: 133-159
ಟಿಐಎಫ್ ರಿಸರ್ಚ್: 145-163
ಈ ಸುದ್ದಿಯನ್ನೂ ಓದಿ: Bihar Assembly Election: ಬಿಹಾರ ಎಕ್ಸಿಟ್ ಪೋಲ್ ರಿಸಲ್ಟ್ ಔಟ್; ಎನ್ಡಿಎಗೆ ಮತ್ತೆ ಅಧಿಕಾರ ಸಾಧ್ಯತೆ: ಮಹಾಘಟಬಂಧನ್ ಕಥೆ ಏನಾಗಲಿದೆ?
ಬಿಜೆಪಿ ನೇತೃತ್ವದ ಎನ್ಡಿಎ ಮಿತ್ರಪಕ್ಷದೊಳಗಿನ ಸೀಟ್ ಹಂಚಿಕೆಯನ್ನು ಅಳೆದೂ ತೂಗಿ ನಿರ್ವಹಿಸಿತ್ತು. ರಾಜ್ಯದಲ್ಲಿ ಒಟ್ಟು 243 ಕ್ಷೇತ್ರಗಳಿದ್ದು, ಈ ಪೈಕಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ತಲಾ 101 ಕಡೆ ಕಣಕ್ಕಿಳಿದಿದ್ದವು. ಇನ್ನು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ಎನ್ಡಿಎಯ ಮಿತ್ರ ಪಕ್ಷಗಳಾದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ತಲಾ 6 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು. ಇದೇ ಮೊಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿರಲಿಲ್ಲ ಎನ್ನುವುದು ವಿಶೇಷ. 2020ರ ಚುನಾವಣೆಯಲ್ಲಿ ಜೆಡಿಯು 115 ಸ್ಥಾನಗಳಲ್ಲಿ ಮತ್ತು ಬಿಜೆಪಿ 110 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಪ್ರತೇಕವಾಗಿ ಕಣಕ್ಕಿಳಿದಿತ್ತು.
ಮತ್ತೆ ಕುಸಿದ ಮಹಾಘಟಬಂಧನ್?
ಇತ್ತ ಕಾಂಗ್ರೆಸ್-ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ಮತ್ತೊಮ್ಮೆ ಮುಖಭಂಗ ಅನುಭವಿಸುವ ಸಾಧ್ಯತೆ ಇದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿಗಣಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದಾದ್ಯಂತ ಓಡಾಡಿ ಪ್ರಚಾರ ನಡೆಸಿದ್ದರು. ಆರ್ಜೆಡಿ ಕೂಡ ಈ ಬಾರಿಯಾದರೂ ಅದಿಕಾರಕ್ಕೆ ಬರಲೇಬೇಕೆಂಬ ಪಣ ತೊಟ್ಟಿತ್ತು. ಅದಾಗ್ಯೂ ಚುನಾವಣೋತ್ತರ ಸಮೀಕ್ಷಾ ವರದಿಗಳು ಬದಲಾಗುವ ಸಾಧ್ಯತೆ ಇದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾದ ಬಳಿಕವೇ ಸ್ಪಷ್ಟ ಚಿತ್ರ ಸಿಗಲಿದೆ.