ಇದು ನಿಜಕ್ಕೂ ಗಂಭೀರವಾಗಿ ಆಲೋಚಿಸಬೇಕಾದ ವಿಷಯವೇ. ‘ನಮ್ಮ ಮೆಟ್ರೋ’ದ ಹಳದಿ ಮಾರ್ಗದ ಉದ್ಘಾಟನೆಯಾದ ಬಳಿಕ ಈಗ ‘ಕಿತ್ತಳೆ ಮಾರ್ಗ’ ಸಂಬಂಧಿತ ಕಾಮಗಾರಿಗೂ ಸಿದ್ಧತೆ ನಡೆದಿದೆ. ಆದರೆ ಇದಕ್ಕಾಗಿ ಬರೋಬ್ಬರಿ 6500 ಮರಗಳಿಗೆ ಕೊಡಲಿಯೇಟು ಬೀಳಬೇಕಿದೆ ಎಂಬ ಸುದ್ದಿಯು ಪರಿಸರ ಪ್ರೇಮಿಗಳಲ್ಲಿ ತಲ್ಲಣವನ್ನು ಉಂಟು ಮಾಡಿದೆ.
ಒಂದು ಕಾಲಕ್ಕೆ ಬೆಂಗಳೂರು ಪಡೆದುಕೊಂಡಿದ್ದ ‘ಉದ್ಯಾನ ನಗರಿ’ ಎಂಬ ಹೆಸರಿಗೆ ಕಾಲಕ್ರಮೇಣ ಸಂಚಕಾರ ಒದಗಿ ‘ಕಾಂಕ್ರೀಟ್ ಜಂಗಲ್’ ಎಂಬ ಹಣೆಪಟ್ಟಿ ಏರಿಕೊಳ್ಳುವಂತಾಯಿತು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗಾದರೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಬಿಡಬೇಕೇ? ಅದನ್ನು ನೆಚ್ಚಿ ರುವ ಆರ್ಥಿಕ ಚಟುವಟಿಕೆಗಳನ್ನು ಮೂಲೆಗುಂಪು ಮಾಡಬೇಕೇ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸು ತ್ತದೆ.
ಇದನ್ನೂ ಓದಿ: Vishwavani Editorial: ಸನಾತನ ಎಂದರೆ ಸದರವೇ?
ಅಭಿವೃದ್ಧಿ ಕಾರ್ಯ ಮತ್ತು ಪರಿಸರದ ಸಂರಕ್ಷಣೆ ಎರಡೂ ನಮ್ಮ ಸಮಾಜಕ್ಕೆ ಮುಖ್ಯವೇ. ಆದರೆ ಒಂದನ್ನು ಬಲಿಕೊಟ್ಟು ಇನ್ನೊಂದಕ್ಕೆ ಉಸಿರು ತುಂಬುವುದು ಎಷ್ಟರ ಮಟ್ಟಿಗೆ ಸರಿ? ಎಂಬುದು ಸಹೃದಯಿಗಳ ಪ್ರಶ್ನೆ. ಈ ಹಿಂದೆ ಕಿತ್ತಳೆ ಮಾರ್ಗದ ಕಾಮಗಾರಿ ಸಂಬಂಧವಾಗಿ 11 ಸಾವಿರ ಮರ ಗಳನ್ನು ಕಡಿಯಲು ಯೋಜಿಸಿದ್ದ ಬಿಎಂಆರ್ಸಿಎಲ್, ಈ ಉದ್ದೇಶಕ್ಕೆ ಪರಿಸರ ಹೋರಾಟಗಾರ ರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಸಂಖ್ಯೆಯನ್ನು ಕಡಿತಗೊಳಿಸಿ 6500ಕ್ಕೆ ಇಳಿಸಿತ್ತು ಎಂಬುದೇನೋ ನಿಜವೇ.
ಆದರೆ ಇದು ಕೂಡ ಸಣ್ಣ ಸಂಖ್ಯೆ ಅಲ್ಲವಲ್ಲಾ ಎಂಬುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣ ವಾಗಿರುವ ಸಂಗತಿ. ಈಗಾಗಲೇ ‘ವಿಭಿನ್ನ ಧ್ವನಿ ತರಂಗಗಳ’ ಹಾವಳಿಯಿಂದಾಗಿ ಬೆಂಗಳೂರು ಮಹಾ ನಗರಿಯ ವ್ಯಾಪ್ತಿಯೊಳಗೆ ಗುಬ್ಬಚ್ಚಿಗಳನ್ನು ಕಾಣಲಾಗುತ್ತಿಲ್ಲ; ಈಗ ಹೀಗೆ ಗಣನೀಯ ಸಂಖ್ಯೆಯಲ್ಲಿ ಮರಗಳ ಹನನವಾದರೆ ಉತ್ತಮ ಗಾಳಿಯೂ ದುಸ್ತರವಾಗುತ್ತದಲ್ಲಾ? ಎಂಬುದು ಪರಿಸರ ಪ್ರೇಮಿ ಗಳ ಪ್ರಶ್ನೆ.
ಒಟ್ಟಿನಲ್ಲಿ, ಅಭಿವೃದ್ಧಿ ಚಟುವಟಿಕೆಗಳನ್ನೂ ಕೈ ಬಿಡದೆ, ಪರಿಸರ ಸಂರಕ್ಷಣೆಯನ್ನೂ ನಿರ್ಲಕ್ಷಿಸದೆ, ಸಮನ್ವಯ ಮಾರ್ಗವೊಂದನ್ನು ಕಂಡುಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ ಎನ್ನಲಡ್ಡಿಯಿಲ್ಲ.