ಲಂಡನ್: ಭಾರತದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಇದೇ ಮೊದಲ ಬಾರಿ ಇಂಗ್ಲಿಷ್ ಕೌಂಟಿಯಲ್ಲಿ ಆಡಲಿದ್ದು, ಯಾರ್ಕ್ಷೈರ್ ಕೌಂಟಿಯನ್ನು ಪ್ರತಿನಿಧಿಸಲಿದ್ದಾರೆ. ಕೌಂಟಿ ಚಾಂಪಿಯನ್ಶಿಪ್ ಮತ್ತು ಏಕದಿನ ಕಪ್ ಪಂದ್ಯಗಳಲ್ಲಿ ಅವರು ಆಡಲಿದ್ದಾರೆ. ಜುಲೈನಲ್ಲಿ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸರ್ರೆ ವಿರುದ್ಧದ ಪಂದ್ಯಕ್ಕಾಗಿ ಗಾಯಕ್ವಾಡ್ ಯಾರ್ಕ್ಷೈರ್ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ ಮತ್ತು ಋತುವಿನ ಅಂತ್ಯದವರೆಗೆ ತಂಡದೊಂದಿಗೆ ಇರಲಿದ್ದಾರೆ ಎಂದು ಯಾರ್ಕ್ಷೈರ್ ಮಂಗಳವಾರ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
"ಯಾರ್ಕ್ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಋತುರಾಜ್ ಗಾಯಕ್ವಾಡ್ ಜತೆ ಒಪ್ಪಂದ ಮಾಡಿದ ವಿಚಾರ ಘೋಷಿಸಲು ಸಂತೋಷಪಡುತ್ತಿದೆ. 28 ವರ್ಷದ ಭಾರತೀಯ ಬ್ಯಾಟ್ಸ್ಮನ್ ಜುಲೈನಲ್ಲಿ ಸ್ಕಾರ್ಬರೋದಲ್ಲಿ ಸರ್ರೆ ವಿರುದ್ಧದ ರೋಥೆಸೆ ಕೌಂಟಿ ಚಾಂಪಿಯನ್ಶಿಪ್ ಪಂದ್ಯಕ್ಕೂ ಮೊದಲು ಯಾರ್ಕ್ಷೈರ್ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಎ ತಂಡದಲ್ಲಿದ್ದ ಗಾಯಕ್ವಾಡ್, ಮೆಟ್ರೋ ಬ್ಯಾಂಕ್ ಏಕದಿನ ಕಪ್ನಲ್ಲಿ ಆಯ್ಕೆಗೆ ಲಭ್ಯವಿರುತ್ತಾರೆ" ಎಂದು ಯಾರ್ಕ್ಷೈರ್ ಕೌಂಟಿ ಕ್ಲಬ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಯಾರ್ಕ್ಷೈರ್ಗೆ ಸೇರಿದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಋತುರಾಜ್ ಗಾಯಕ್ವಾಡ್, ಇಂಗ್ಲಿಷ್ ದೇಶೀಯ ಋತುವಿನ ಉಳಿದ ಭಾಗಕ್ಕೆ ಯಾರ್ಕ್ಷೈರ್ ಜತೆ ಸೇರಲು ನಾನು ಉತ್ಸುಕನಾಗಿದ್ದೇನೆ. ಈ ದೇಶದಲ್ಲಿ ಕ್ರಿಕೆಟ್ ಅನುಭವಿಸುವುದು ಯಾವಾಗಲೂ ನನ್ನ ಗುರಿಯಾಗಿತ್ತು ಮತ್ತು ಇಂಗ್ಲೆಂಡ್ನಲ್ಲಿ ಯಾರ್ಕ್ಷೈರ್ಗಿಂತ ದೊಡ್ಡ ಕ್ಲಬ್ ಇನ್ನೊಂದಿಲ್ಲ. ಋತುವಿನ ನಿರ್ಣಾಯಕ ಭಾಗವಾಗಿರುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವುದು ಎಷ್ಟು ಮುಖ್ಯ ಎಂದು ನನಗೆ ತಿಳಿದಿದೆ. ಕೌಂಟಿ ಚಾಂಪಿಯನ್ಶಿಪ್ನಲ್ಲಿ ನಮಗೆ ಕೆಲವು ಪ್ರಮುಖ ಪಂದ್ಯಗಳಿವೆ ಮತ್ತು ಏಕದಿನ ಕಪ್ನಲ್ಲಿಯೂ ಗೆಲ್ಲಲು ಉತ್ತಮ ಅವಕಾಶವಾಗಿದೆ" ಎಂದು ಋತುರಾಜ್ ಹೇಳಿದರು.
ಇದನ್ನೂ ಓದಿ ICC WTC 2025 Final: ನಾಳೆಯಿಂದ ವಿಶ್ವ ಟೆಸ್ಟ್ ಫೈನಲ್ ಫೈಟ್; ಚೋಕರ್ಸ್ ಹಣೆಪಟ್ಟಿ ಕಳಚುವುದೇ ದಕ್ಷಿಣ ಆಫ್ರಿಕಾ?
ಋತುರಾಜ್ ಇದುವರೆಗೆ ಭಾರತ ಪರ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಗಾಯಕ್ವಾಡ್ 18ನೇ ಆವೃತ್ತಿಯಲ್ಲಿ ಗಾಯಗೊಂಡು ಅರ್ಧದಲ್ಲೇ ಟೂರ್ನಿಯಿಂದ ಹೊರಬಿದ್ದಿದ್ದರು. ಹೀಗಾಗಿ ಧೋನಿ ಅವರು ಉಳಿದ ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದರು.