ಕಾಬುಲ್: ಕಳೆದ ಶನಿವಾರ ಪಾಕಿಸ್ತಾನ ಸೇನೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಆಫ್ಗನ್ನ ಮೂವರು ಕ್ರಿಕೆಟಿಗರು(Afghanistan players) ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಟಿ20 ತ್ರಿಕೋನ ಸರಣಿಯಿಂದ ಹಿಂದೆ ಸರಿಯುವ ಅಫ್ಘಾನಿಸ್ತಾನದ ನಿರ್ಧಾರದ ನಂತರ ಇದೀಗ ಆಫ್ಗಾನ್ ಆಟಗಾರರು ಪಾಕಿಸ್ತಾನದ ಸಹವಾಸವೇ ಬೇಡ ಎಂದು ಪಾಕಿಸ್ತಾನ ಪ್ರೀಮಿಯರ್ ಲೀಗ್ನಿಂದ ಹಿಂದೆ ಸರಿಯಲು ನಿರ್ಧಾರಿಸಿದ್ದಾರೆ ಎಂದು ತಿಳಿದುಬಂದಿದೆ.
ಉರ್ಗುನ್ ಜಿಲ್ಲೆಯಲ್ಲಿ ನಡೆದ ಗುರಿ ದಾಳಿಯಲ್ಲಿ ಮೂವರು ಯುವ ಆಟಗಾರರಾದ ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಹುತಾತ್ಮರಾದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಮತ್ತು ಶ್ರೀಲಂಕಾ ಒಳಗೊಂಡ ತ್ರಿಕೋನ ಸರಣಿಯಿಂದ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಹಿಂದೆ ಸರಿಯುವುದಾಗಿ ಘೋಷಿಸಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಸಿಬಿಗೆ ಬೆಂಬಲ ವ್ಯಕ್ತಪಡಿಸಿತ್ತು.
ಇದನ್ನೂ ಓದಿ Rashid Khan: ವೈಮಾನಿಕ ದಾಳಿ ಖಂಡಿಸಿ ಪಾಕ್ ಕ್ರಿಕೆಟ್ ಲೀಗ್ ಹೆಸರನ್ನೇ ಡಿಲೀಟ್ ಮಾಡಿದ ರಶೀದ್ ಖಾನ್
ರಶೀದ್ ಖಾನ್ ಅವರು ಪಾಕಿಸ್ತಾನ ಪ್ರೀಮಿಯರ್ ಲೀಗ್ಗೆ (ಪಿಎಸ್ಎಲ್) ಗುಡ್ಬೈ ಹೇಳಲಿದ್ದಾರೆ ಎಂಬ ಸುದ್ದಿ ಆರಂಭಿಕ ಹಂತದಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ದಾಳಿಯನ್ನು ಖಂಡಿಸಿ ಪಿಎಸ್ಎಲ್ನಲ್ಲಿ ಲಾಹೋರ್ ಖಲಂದರ್ಸ್ ಪರ ಆಡುವ ರಶೀದ್, ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ತಮ್ಮ ಖಾತೆಯ ಬಯೊದಿಂದ ಫ್ರಾಂಚೈಸಿ ಹೆಸರನ್ನು ತೆಗೆದುಹಾಕಿದ್ದರು. 2021ರಲ್ಲಿ ಲಾಹೋರ್ ತಂಡ ಸೇರಿರುವ ರಶೀದ್, ಈವರೆಗೆ ಮೂರು ಬಾರಿ ಪ್ರಶಸ್ತಿ ಜಯಿಸಿದ್ದಾರೆ.