ಡಿಯೋರಿಯಾ: ತೃತೀಯ ಲಿಂಗಿಗಳ ಗುಂಪೊಂದು ರೈಲು ನಿಲ್ದಾಣದಲ್ಲಿ ದಾಂಧಲೆ ಎಬ್ಬಿಸಿದ್ದಲ್ಲದೆ ಆರ್ಪಿಎಫ್ ಇನ್ಸ್ಪೆಕ್ಟರ್ ( RPF Inspector) ಮೇಲೆ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಡಿಯೋರಿಯಾ ಸದರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲು ಪ್ರಯಾಣಿಕರಿಂದ ಅಕ್ರಮ ಹಣ ಸುಲಿಗೆ ಮಾಡಿದ್ದಕ್ಕಾಗಿ ಆರ್ಪಿಎಫ್ ಇನ್ಸ್ಪೆಕ್ಟರ್ಗೆ ಮಾಹಿತಿ ನೀಡಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ತೃತೀಯ ಲಿಂಗಿಗಳ (Transgenders) ಗುಂಪು, ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಮನಸೋ ಇಚ್ಛೆ ಥಳಿಸಿದ್ದಾರೆ.
ಆರ್ಪಿಎಫ್ ಇನ್ಸ್ಪೆಕ್ಟರ್ ಅವರನ್ನು ಥಳಿಸಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಘಟನೆ ಸಂಬಂಧ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ರೈಲ್ವೆ ನಿಲ್ದಾಣದ ಬಳಿಯ ವ್ಯಾಪಾರಿಗಳು, ಪ್ರಯಾಣಿಕರು ತೃತೀಯ ಲಿಂಗಿಗಳ ಹಿಂಸಾತ್ಮಕ ದಾಳಿಯಿಂದ ಅಧಿಕಾರಿಯನ್ನು ರಕ್ಷಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಭಾನುವಾರ ತಡರಾತ್ರಿ, ಆರ್ಪಿಎಫ್ ಇನ್ಸ್ಪೆಕ್ಟರ್ ಮೊಹಮ್ಮದ್ ತಮ್ಮ ಸಹೋದ್ಯೋಗಿಗಳೊಂದಿಗೆ ಡಿಯೋರಿಯಾ ರೈಲ್ವೆ ನಿಲ್ದಾಣದಲ್ಲಿ ಅವಧ್ ಅಸ್ಸಾಂ ಎಕ್ಸ್ಪ್ರೆಸ್ ರೈಲನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಕೆಲವು ಪ್ರಯಾಣಿಕರು ತೃತೀಯ ಲಿಂಗಿ ವ್ಯಕ್ತಿಗಳು ಸುಲಿಗೆ ಮಾಡುತ್ತಿದ್ದಾರೆ ಎಂದು ಇನ್ಸ್ಪೆಕ್ಟರ್ಗೆ ದೂರು ನೀಡಿದರು. ಹಣವನ್ನು ನೀಡದಿದ್ದರೆ ಕೆಟ್ಟದಾಗಿ ವರ್ತಿಸುತ್ತಾರೆ ಎಂದು ಪ್ರಯಾಣಿಕರು ದೂರಿದ್ದಾರೆ.
ವಿಡಿಯೊ ವೀಕ್ಷಿಸಿ:
ಇನ್ನು ಪ್ರಯಾಣಿಕರ ದೂರಿನ ಮೇರೆಗೆ, ನಿಲ್ದಾಣದಲ್ಲಿ ಸುತ್ತಾಡುತ್ತಿರುವ ತೃತೀಯ ಲಿಂಗಿ ವ್ಯಕ್ತಿಗಳಿಗೆ ಪ್ರಯಾಣಿಕರಿಂದ ಹಣ ವಸೂಲಿ ಮಾಡದಂತೆ ಸೂಚನೆ ನೀಡಿದರು. ಹೆಚ್ಚಿನ ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಇದಕ್ಕೆ ಕೋಪಗೊಂಡ ತೃತೀಯ ಲಿಂಗಿಗಳು ಗಲಾಟೆ ಎಬ್ಬಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ, ತೃತೀಯ ಲಿಂಗಿಗಳ ಗುಂಪು ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ ಪ್ಲಾಟ್ಫಾರ್ಮ್ ಸಂಖ್ಯೆ 1 ರಲ್ಲಿ ಗಲಾಟೆ ಮಾಡಲು ಪ್ರಾರಂಭಿಸಿದರು. ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು.
ಗಲಾಟೆಯ ಬಗ್ಗೆ ಮಾಹಿತಿ ಪಡೆದ ಆರ್ಪಿಎಫ್ ಇನ್ಸ್ಪೆಕ್ಟರ್ ಮೊಹಮ್ಮದ್, ಪೊಲೀಸ್ ಸಿಬ್ಬಂದಿಯೊಂದಿಗೆ ಸಾಮಾನ್ಯ ಉಡುಪಿನಲ್ಲಿ ಸ್ಥಳಕ್ಕೆ ಬಂದರು. ಕೋಪಗೊಂಡ ಅವರು ಆರ್ಪಿಎಫ್ ಇನ್ಸ್ಪೆಕ್ಟರ್ ಬಳಿಯಿದ್ದ ಲಾಠಿ ಕಸಿದುಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರನ್ನು ಬೆನ್ನಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ತೃತೀಯ ಲಿಂಗಿಗಳು ಜಮಾಯಿಸಿದ್ದರಿಂದ ಪೊಲೀಸರಿಗೆ ನಿಯಂತ್ರಣ ಮಾಡಲು ಆಗಲಿಲ್ಲ.
ಅಷ್ಟೇ ಅಲ್ಲ ಆರ್ಪಿಎಫ್ ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಇನ್ಸ್ಪೆಕ್ಟರ್ ಅವರನ್ನು ಬೆನ್ನಟ್ಟಿ ಥಳಿಸಿದ್ದಾರೆ. ಈ ವೇಳೆ ಧೈರ್ಯವಾಗಿ ಮುಂದೆ ಬಂದ ವ್ಯಾಪಾರಿಗಳು ಹಾಗೂ ಪ್ರಯಾಣಿಕರು ಪೊಲೀಸರ ಪರವಾಗಿ ನಿಂತರು. ಹಲ್ಲೆ ಮಾಡದಂತೆ ಅವರನ್ನು ತಡೆದರು. ಇದರಿಂದ ದಾಳಿಕೋರರು ಹಿಂದೆ ಸರಿದರು. ಹೀಗಾಗಿ ಇನ್ಸ್ಪೆಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಿಯೋರಿಯಾ ರೈಲು ನಿಲ್ದಾಣದಲ್ಲಿ ತೃತೀಯ ಲಿಂಗಿಗಳು ಸೃಷ್ಟಿಸಿದ ಗದ್ದಲದಿಂದಾಗಿ ಬಹಳ ಸಮಯದವರೆಗೆ ಭೀತಿ ಭುಗಿಲೆದ್ದಿತು. ಗದ್ದಲದ ಬಗ್ಗೆ ಮಾಹಿತಿ ಪಡೆದ ನಂತರ, ಜಿಆರ್ಪಿ ಕೂಡ ಸ್ಥಳಕ್ಕೆ ತಲುಪಿತು. ಆದರೆ, ಅದಕ್ಕೂ ಮೊದಲೇ, ತೃತೀಯ ಲಿಂಗಿಗಳು ಪರಾರಿಯಾಗಿದ್ದರು. ದಾಳಿಕೋರರಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: Viral Video: ಗಣೇಶ ಪೆಂಡಾಲ್ನಲ್ಲಿ ಅಹಮದಾಬಾದ್ ವಿಮಾನ ದುರಂತದ ಮರುಸೃಷ್ಟಿ; ವಿಡಿಯೊ ವೈರಲ್, ನೆಟ್ಟಿಗರು ಟೀಕೆ