ಬೆಂಗಳೂರು: ನಗರದಲ್ಲಿ ಮಂಗಳವಾರ ಸಂಜೆ ಗುಡುಗು-ಸಿಡಿಲು ಸಹಿತ ಮಳೆ (Bengaluru Rains) ಆರ್ಭಟಿಸಿದೆ. ಹಲವೆಡೆ ಮರಗಳು ನೆಲಕ್ಕುರುಳಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಇನ್ನು ನೇರಳೆ ಮಾರ್ಗದ ಮೆಟ್ರೋ ಹಳಿ ಮೇಲೆ ಮರದ ಕೊಂಬೆ ಬಿದ್ದು, ಐಟಿಪಿಎಲ್ – ಸತ್ಯಸಾಯಿ ಆಸ್ಪತ್ರೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತವಾಗಿದೆ. ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಹಳಿ ಮೇಲೆ ಬಿದ್ದ ಮರದ ಕೊಂಬೆ ಬಿದ್ದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯಿಂದ ವೈಟ್ಫೀಲ್ಡ್ – ಗರುಡಾಚಾರ ಪಾಳ್ಯ ನಡುವೆ ಮೆಟ್ರೋ ಸೇವೆ ಬಂದ್ ಆಗಿದ್ದು, ಗರುಡಾಚಾರ ಪಾಳ್ಯ – ಚಲ್ಲಘಟ್ಟ ನಡುವೆ ಮಾತ್ರ ಮೆಟ್ರೋ ಸಂಚಾರ ಲಭ್ಯವಿದೆ. ಶೀಘ್ರದಲ್ಲೇ ಮೆಟ್ರೋ ಸೇವೆ ಪುನರಾರಂಭವಾಗುವ ನಿರೀಕ್ಷೆ ಇದೆ ಎಂದು ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಆರ್ಭಟ ಆರಂಭವಾಗಿದೆ. ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.

ನಗರದ ಮೆಜೆಸ್ಟಿಕ್, ಶಾಂತಿನಗರ, ಜಯನಗರ, ಜೆ.ಪಿ.ನಗರ, ವಸಂತನಗರ, ಕೆ.ಆರ್. ಮಾರ್ಕೆಟ್, ಬನಶಂಕರಿ, ಕೋಣನಕುಂಟೆ, ಯಲಹಂಕ ಹಾಗೂ ಹೆಬ್ಬಾಳ ಭಾಗದಲ್ಲಿ ಭಾರಿ ಮಳೆಯಾಗಿದೆ. ಸದಾಶಿವನಗರ, ರಾಜಾಜಿನಗರ, ವಿಜಯನಗರ, ಲಗ್ಗೆರೆ, ಚಂದ್ರಲೇಔಟ್, ಇಂದಿರಾನಗರ, ನಂದಿನಿ ಲೇಔಟ್, ಗಿರಿನಗರ, ಮಹಾಲಕ್ಷ್ಮೀ ಲೇಔಟ್, ಸುಬ್ರಹ್ಮಣ್ಯ ನಗರ, ನಾಗರಭಾವಿ, ಮೂಡಲಪಾಳ್ಯ ಮತ್ತು ಬಸವನಗುಡಿ ಸೇರಿದಂತೆ ನಗರದ ಬಹುತೇಕ ಎಲ್ಲಾ ಕಡೆಗಳಲ್ಲೂ ಎಡಬಿಡದೆ ಮಳೆ ಸುರಿದಿದೆ.

Health Tips: 35 ವರ್ಷಗಳ ಬಳಿಕ ದಿಢೀರ್ ತೂಕ ಹೆಚ್ಚಾಗುತ್ತಿದೆಯೇ? ಥೈರಾಯ್ಡ್ ಸಮಸ್ಯೆಯೇ ಕಾರಣವಾಗಿರಬಹುದು
ಭಾರಿ ಮಳೆಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆ.ಆರ್. ಸರ್ಕಲ್ ಅಂಡರ್ ಪಾಸ್ ಕ್ಲೋಸ್ ಮಾಡಲಾಗಿದೆ. ಸಣ್ಣ ಮಳೆಗೂ ಇಲ್ಲಿನ ಅಂಡರ್ ಪಾಸ್ ಜಲಾವೃತವಾಗುತ್ತದೆ. ಹೀಗಾಗಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಅಂಡರ್ ಪಾಸ್ ಬಂದ್ ಮಾಡಿದ್ದಾರೆ.
ಇನ್ನು ಬೆಂಗಳೂರು ಸೇರಿ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಿಸಿದೆ.
ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ
ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೇ 27 ರಂದು ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ನೀಡಲಾಗಿದೆ.