ಬೆಂಗಳೂರು, ನ.24: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಈಶಾನ್ಯ ಮಾನ್ಸೂನ್ ಭಾನುವಾರ ಸಾಮಾನ್ಯವಾಗಿತ್ತು. ಇದರಿಂದ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಆದರೆ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸೈಕ್ಲೋನ್ ಸೃಷ್ಟಿ (Cyclone Senyar) ಸಾಧ್ಯತೆ ಹಿನ್ನೆಲೆಯಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಚಂಡಮಾರುತ ಪ್ರಭಾವದಿಂದ ತಮಿಳುನಾಡು, ಕೇರಳ ಮಾತ್ರವಲ್ಲದೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29°C ಮತ್ತು 20°C ಇರುವ ಸಾಧ್ಯತೆ ಇದೆ.
ಮಲಕ್ಕಾ ಜಲಸಂಧಿ ಮತ್ತು ಅದಕ್ಕೆ ಹೊಂದಿಕೊಂಡಿರುವ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶವು ಇಂದು ಮಲೇಷ್ಯಾ ಮತ್ತು ಅದಕ್ಕೆ ಹೊಂದಿಕೊಂಡಿರುವ ಮಲಕ್ಕಾ ಜಲಸಂಧಿಯ ಮೇಲೆ ಇತ್ತು. ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 7.6 ಕಿ.ಮೀ ವರೆಗೆ ವಿಸ್ತರಿಸಿದೆ. ಇದು ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ-ಉತ್ತರ ಪಶ್ಚಿಮಕ್ಕೆ ಚಲಿಸುವ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ವಾಯುಭಾರ ಕುಸಿತ ತೀವ್ರಗೊಳ್ಳುವ ಸಾಧ್ಯತೆಯಿದೆ. ಪಶ್ಚಿಮ-ವಾಯುವ್ಯ ಕಡೆಗೆ ಚಲಿಸುವುದನ್ನು ಮುಂದುವರಿದು, ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ : ಚಳಿಗಾಲದಲ್ಲಿ ಮೆಂತೆ ಸೊಪ್ಪು ಸೇವಿಸುವುದರಿಂದ ಸಿಗಲಿದೆ ಹತ್ತಾರು ಪ್ರಯೋಜನ
ಕೊಮೊರಿನ್ ಪ್ರದೇಶ ಮತ್ತು ನೆರೆಹೊರೆಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 5.8 ಕಿ.ಮೀ ವರೆಗೆ ವಿಸ್ತರಿಸಿರುವ ಮೇಲ್ಭಾಗದ ವಾಯು ಚಂಡಮಾರುತದ ಪರಿಚಲನೆ ಇಂದು ಅದೇ ಪ್ರದೇಶದಲ್ಲಿ ಮುಂದುವರಿಯಿತು. ಇದರ ಪ್ರಭಾವದಿಂದ ನವೆಂಬರ್ 25 ರ ಸುಮಾರಿಗೆ ಕೊಮೊರಿನ್ ಮತ್ತು ನೈರುತ್ಯ ಬಂಗಾಳ ಕೊಲ್ಲಿಯ ಪಕ್ಕದ ಪ್ರದೇಶಗಳಲ್ಲಿ ಮತ್ತು ಶ್ರೀಲಂಕಾದ ಪಕ್ಕದ ಪ್ರದೇಶಗಳಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ನಂತರ ಇದು ಹೆಚ್ಚು ಸ್ಪಷ್ಟವಾಗುವ ಸಾಧ್ಯತೆಯಿದೆ.
ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ವರೆಗೆ ವಿಸ್ತರಿಸಿರುವ ಚಂಡಮಾರುತದ ಪರಿಚಲನೆಯು ಇಂದು ಬೆಳಗ್ಗೆ ಪ್ರದೇಶದಲ್ಲಿ ಮುಂದುವರಿಯಿತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸೆನ್ಯಾರ್ ಚಂಡಮಾರುತ ಭೀತಿ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ನವೆಂಬರ್ 26ರ ವೇಳೆ ಸೆನ್ಯಾರ್ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಸೈಕ್ಲೋನ್ ಪರಿಣಾಮ ಅಂಡಮಾನ್-ನಿಕೋಬಾರ್ ಮಾತ್ರವಲ್ಲ, ದಕ್ಷಿಣದ ಆಂಧ್ರ, ತಮಿಳುನಾಡು, ಕರ್ನಾಟಕದಲ್ಲಿ ಭಾರಿ ಮಳೆಯಾಗಲಿದೆ. ಹೀಗಾಗಿ ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಚಂಡಮಾರುತ್ತಕ್ಕೆ ʼಸೆನ್ಯಾರ್ʼ ಎಂದು ಹೆಸರಿಡಲಾಗಿದೆ. ಸೆನ್ಯಾರ್ ಎಂದರೆ ʼಸಿಂಹʼ ಎಂದರ್ಥ. ಈ ಪದವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೂಚಿಸಿದೆ.
ಇತ್ತೀಚೆಗೆ ಅಕ್ಟೋಬರ್ನಲ್ಲಿ ಭಾರತದ ಕರಾವಳಿಗೆ ಅಪ್ಪಳಿಸಿದ್ದ ಚಂಡಮಾರುತ್ತಕ್ಕೆ ಮೋಂಥಾ ಎಂದು ಹೆಸರಿಡಲಾಗಿತ್ತು. ಇದನ್ನು ಥೈಲ್ಯಾಂಡ್ ದೇಶ ಸೂಚಿಸಿತ್ತು. ಇದರ ಅರ್ಥ ಸುಂದರವಾದ ಅಥವಾ ಪರಿಮಳಯುಕ್ತ ಹೂವು ಎಂದಾಗಿದೆ. ಸೆನ್ಯಾರ್ ಚಂಡಮಾರುತದ ಬಳಿಕ ಬರುವ ಚಂಡಮಾರುತಗಳಿಗೆ ದಿತ್ವಾ (ಯೆಮೆನ್), ಅರ್ನಾಬ್ (ಬಾಂಗ್ಲಾದೇಶ) ಮತ್ತು ಮುರಾಸು (ಭಾರತ) ಎಂದು ಹೆಸರು ನೀಡಲಾಗಿದೆ.
ಇದನ್ನೂ ಓದಿ : ಮಾನ್ಸೂನ್ನಲ್ಲಿ IMD ಹೊರಡಿಸುವ ರೆಡ್, ಆರೆಂಜ್, ಯೆಲ್ಲೋ ಅಲರ್ಟ್ನ ಅರ್ಥವೇನು?
ಚಂಡಮಾರುತಕ್ಕೆ ಹೆಸರು ಯಾರು ನೀಡುತ್ತಾರೆ?
ವಿಶ್ವಾದ್ಯಂತ 6 ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (ಆರ್ಎಸ್ಎಂಸಿ) ಮತ್ತು 5 ಪ್ರಾದೇಶಿಕ ಉಷ್ಣವಲಯದ ಚಂಡಮಾರುತ ಎಚ್ಚರಿಕೆ ಕೇಂದ್ರಗಳಿದ್ದು, ಇವು ಹವಾಮಾನ ಕುರಿತು ಸಲಹೆ ನೀಡುವ ಹಾಗೂ ಚಂಡಮಾರುತಗಳಿಗೆ ಹೆಸರಿಡುವ ಕಾರ್ಯ ಮಾಡುತ್ತವೆ. ಬಾಂಗ್ಲಾದೇಶ, ಭಾರತ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ಸೇರಿದಂತೆ ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ESCAP ಜಂಟಿ ಸಮಿತಿಯ 13 ಸದಸ್ಯ ರಾಷ್ಟ್ರಗಳಿಗೆ ಉಷ್ಣವಲಯದ ಚಂಡಮಾರುತ ಹಾಗೂ ಹವಾಮಾನ ಮುನ್ಸೂಚನೆ ನೀಡುವ 6 ಆರ್ಎಸ್ಎಂಸಿಗಳಲ್ಲಿ ಭಾರತ ಹವಾಮಾನ ಇಲಾಖೆ (IMD) ಕೂಡ ಒಂದಾಗಿದೆ. ಈ ಮೇಲ್ಕಂಡ ದೇಶಗಳು ಸರದಿ ಪ್ರಕಾರ ಚಂಡಮಾರುತಗಳಿಗೆ ಹೆಸರು ಸೂಚಿಸುತ್ತವೆ.