ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಭಾವಿ ಹೀರೋಗಳಿಗೆ ಅಭಿನಂದನೆಗಳು...!

ಒಂದು ವೇಳೆ ಯಾವುದೋ ಕಾರಣಕ್ಕೆ ಅದು ಕುಡಿಯಲು ಯೋಗ್ಯವಲ್ಲದಿದ್ದರೆ, ಅದನ್ನೂ ಬರೆದಿರು ತ್ತಾರೆ. ಇದು ಯುರೋಪ್ ದೇಶಗಳಲ್ಲಷ್ಟೇ ಅಲ್ಲ, ಇನ್ನೂ ಹಲವಾರು ಮುಂದುವರಿದ ದೇಶಗಳಲ್ಲಿ ಕಾಣಸಿಗುತ್ತದೆ. ಇನ್ನು, ಶೌಚಾಲಯದಲ್ಲಿರುವ ನಳದ ನೀರನ್ನು ಕುಡಿಯಬೇಕೋ, ಬೇಡವೋ ಎಂಬ ಮಡಿವಂತಿಕೆ, ಮನಃಸ್ಥಿತಿ, ಅವರವರಿಗೆ ಬಿಟ್ಟಿದ್ದು

ವಿದೇಶವಾಸಿ

ಇಂದು ಸೌರಶಕ್ತಿಯಿಂದ ನೀರನ್ನು ಸಂಸ್ಕರಿಸುವ, ಶುದ್ಧೀಕರಿಸುವ, ಗಾಳಿಯಿಂದ ನೀರು ಉತ್ಪಾದಿಸುವ ಹತ್ತು ಹಲವು ಉಪಕರಣಗಳು ಮಾರುಕಟ್ಟೆಗೆ ಬಂದಿವೆ. ಗಾಳಿಯಿಂದ ನೀರು ತಯಾರಿಸುವ, ನಾಲ್ಕು ನೂರರಿಂದ ಎರಡು ಸಾವಿರ ಡಾಲರ್ ಮೌಲ್ಯದ ಚಿಕ್ಕ ಚಿಕ್ಕ ಯಂತ್ರಗಳು ಅಮೆಜಾನ್‌ನಲ್ಲಿಯೇ ಲಭ್ಯವಿವೆ.

ಕಳೆದ ಹದಿನೈದು ದಿನಗಳಿಂದ ಯುರೋಪ್ನ ಕೆಲವು ದೇಶಗಳಲ್ಲಿ ಓಡಾಡುತ್ತಿದ್ದೇನೆ. ಯುರೋಪಿ ಯನ್ ಯೂನಿಯನ್‌ಗೆ ಸೇರಿದ ದೇಶಗಳಲ್ಲ ಕಂಡುಬರುವ ಒಂದು ಗಮನಾರ್ಹ ಅಂಶವೆಂದರೆ, ಕುಡಿಯುವ ನೀರಿನದ್ದು. ನಾನು ಮೊದಲ ಬಾರಿ ಜೂರಿಕ್ ನಗರಕ್ಕೆ ಬಂದಾಗ ‘ಇಲ್ಲಿಯ ಸಾರ್ವಜನಿಕ ಪ್ರದೇಶದಲ್ಲಿರುವ ಕಾರಂಜಿಯ ನೀರು ಕೂಡ ಕುಡಿಯಲು ಯೋಗ್ಯ’ ಎಂದು ನಮ್ಮ ಗೈಡ್ ಹೇಳಿದ್ದನ್ನು ಕೇಳಿಯೇ ದಂಗಾಗಿದ್ದೆ. ಆದರೆ ಅದು ಅತಿಶಯೋಕ್ತಿ ಎಂದೆನಿಸಲಿಲ್ಲ.

ಏಕೆಂದರೆ, ಯುರೋಪಿಯನ್ ಯೂನಿಯನ್ ದೇಶಗಳಲ್ಲಿ ಯಾವುದೇ ನಳದಲ್ಲಿ ಬರುವ ನೀರು ಕುಡಿಯಲು ಯೋಗ್ಯ. ಅಪಾರ್ಟ್ಮೆಂಟ್, ಮನೆಯ ನಳದಿಂದ ಹಿಡಿದು, ಶೌಚಾಲಯದಲ್ಲಿರುವ ವಾಶ್ ಬೇಸಿನ್‌ನಲ್ಲಿ ಬರುವ ‘ಟ್ಯಾಪ್ ವಾಟರ್’ ಕೂಡ ಕುಡಿಯಲು ಯೋಗ್ಯವಾದದ್ದು. ಬಹುತೇಕ ಹೋಟೆಲ್‌ಗಳಲ್ಲಿ ನಳದ ಪಕ್ಕದಲ್ಲಿ ‘ಈ ನಳದ ನೀರು ಕುಡಿಯಲು ಯೋಗ್ಯ’ ಎಂದು ಬರೆದಿದ್ದು ಕಾಣುತ್ತದೆ.

ಒಂದು ವೇಳೆ ಯಾವುದೋ ಕಾರಣಕ್ಕೆ ಅದು ಕುಡಿಯಲು ಯೋಗ್ಯವಲ್ಲದಿದ್ದರೆ, ಅದನ್ನೂ ಬರೆದಿರುತ್ತಾರೆ. ಇದು ಯುರೋಪ್ ದೇಶಗಳಲ್ಲಷ್ಟೇ ಅಲ್ಲ, ಇನ್ನೂ ಹಲವಾರು ಮುಂದುವರಿದ ದೇಶಗಳಲ್ಲಿ ಕಾಣಸಿಗುತ್ತದೆ. ಇನ್ನು, ಶೌಚಾಲಯದಲ್ಲಿರುವ ನಳದ ನೀರನ್ನು ಕುಡಿಯಬೇಕೋ, ಬೇಡವೋ ಎಂಬ ಮಡಿವಂತಿಕೆ, ಮನಃಸ್ಥಿತಿ, ಅವರವರಿಗೆ ಬಿಟ್ಟಿದ್ದು. ಅಂಥವರಿಗೆ ಬೇರೆ ನೀರು ಸಿಗುವುದಿಲ್ಲ ಎಂದೇನೂ ಅಲ್ಲ, ಸಾರ್ವಜನಿಕ ಸ್ಥಳಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಇದೆ. ಇನ್ನು ಹಣ ಕೊಟ್ಟು ಖರೀದಿಸುವುದಾದರೆ, ವಿಶ್ವದ ಯಾವ ಮೂಲೆಯದರೂ ನೀರಿನ ಬಾಟಲಿ ಸಿಗುತ್ತದೆ. ಅದಿರಲಿ, ಮೊನ್ನೆ ಒಂದು ಹೋಟೆಲಿನಲ್ಲಿ ಹಾಕಿದ್ದ ಒಂದು ಫಲಕ ನನ್ನ ಗಮನ ಸೆಳೆಯಿತು. ʼCongratulations, future heroes’ ಎಂಬ ತಲೆಬರಹದ ಅಡಿಯಲ್ಲಿ ನೀರನ್ನು ಉಳಿಸುವುದರ ಬಗ್ಗೆ ಒಂದಷ್ಟು ಮಾಹಿತಿ ನೀಡಿ, ‘ನೀವು ಇಂದು ನೀರು ಉಳಿಸಿ, ಮುಂದೊಂದು ದಿನ ಹೀರೋ ಆಗುತ್ತಿದ್ದೀರಿ, ನಿಮಗೆ ಅಭಿನಂದನೆಗಳು!’ ಎಂದು ಬರೆದಿತ್ತು.

ಇದನ್ನೂ ಓದಿ: Kiran Upadhyay Column: ಇನ್ನು ನೀರು ಬಳಸದೇ ಇದನ್ನು ಮಾಡಬಹುದು...

ಅದು ನಾವು ಹೇಗೆ ನೀರು ಉಳಿಸಬಹುದು ಎನ್ನುವುದರ ಜತೆಗೆ, ನೀರನ್ನು ಯಾವ ರೀತಿಯಿಂದ ಕುಡಿಯಲು ಯೋಗ್ಯವಾಗಿಸಬಹುದು, ಅದಕ್ಕೆ ಯಾವೆಲ್ಲ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದರ ಕಡೆಗೆ ಗಮನ ಹರಿಸಿ, ಮಾಹಿತಿ ಸಂಗ್ರಹಕ್ಕೆ ತೊಡಗುವಂತೆ ಮಾಡಿತು.

‘ವಾಟರ್‌ಕೋನ್’ ( Watercone) ಹೆಸರಿನ ಜರ್ಮನಿಯ ಒಂದು ಸಂಸ್ಥೆಯಿದೆ. ಈ ಸಂಸ್ಥೆ ಉಪ್ಪು ನೀರನ್ನು ಕುಡಿಯಲು ಯೋಗ್ಯವಾಗಿಸುವ ಸಣ್ಣ ಸಾಧನವನ್ನು ತಯಾರಿಸುತ್ತದೆ. ತೀರಾ ಸರಳ ತಂತ್ರeನದ ಈ ಸಾಧನದಲ್ಲಿರುವುದು, ತ್ಯಾಜ್ಯ ವಸ್ತುವಿನ ಮರುಬಳಕೆಯಿಂದ ತಯಾರಿಸಿದ, 80 ಸೆಂಟಿ ಮೀಟರ್ ವ್ಯಾಸದ, ಕಪ್ಪು ಬಣ್ಣದ ಒಂದು ತಟ್ಟೆ. ಇನ್ನೊಂದು, ಥರ್ಮೋ ಫಾರ್ಮಬಲ್ ಪಿಇಟಿ (PET) ಯಿಂದ ತಯಾರಿಸಿದ ಶಂಕುವಿನ ಆಕಾರದ, ಬುಡದಂದು ಸಣ್ಣ ಟ್ರೇ, ತುದಿಯಂದು ಸಣ್ಣ ಮುಚ್ಚಳ ಹೊಂದಿದ ಪಾರದರ್ಶಕ ಮುಚ್ಚಿಗೆ. ಕೆಳಗಿನ ತಟ್ಟೆಯಲ್ಲಿ ನೀರು ತುಂಬಿಸಿ, ಮೇಲೆ ಮುಚ್ಚಿಗೆ ಇಡುವುದಷ್ಟೇ ಕೆಲಸ. ಕಪ್ಪು ಬಣ್ಣದ ತಟ್ಟೆ ಸೂರ್ಯನ ಶಾಖ ಹೀರಿ ನೀರು ಆವಿಯಾಗಲು ಸಹಕರಿಸುತ್ತದೆ.

ಆವಿಯಾದ ನೀರು ಮುಚ್ಚಿಗೆಯ ಒಳಗೋಡೆಯಲ್ಲಿ ಹನಿಗಳ ರೂಪದಲ್ಲಿ ಘನೀಕರಣಗೊಂಡು, ಕ್ರಮೇಣ ಕೆಳಗಿನ ಟ್ರೇಯಲ್ಲಿ ಸಂಗ್ರಹಗೊಳ್ಳುತ್ತದೆ. ಮುಚ್ಚಳ ತೆಗೆದು, ಮುಚ್ಚಿಗೆಯನ್ನು ಬುಡ ಮೇಲಾಗಿಸಿ ಪ್ರತಿನಿತ್ಯ ಒಂದರಿಂದ ಒಂದೂವರೆ ಲೀಟರ್ ಕುಡಿಯುವ ನೀರನ್ನು ತಯಾರಿಸಿಕೊಳ್ಳ ಬಹುದಾದ, ಐದು ವರ್ಷ ಬಾಳಿಕೆ ಬರುವ ಸಾಧನ ಇದು. ಇನ್ನೊಂದು ಗಮನಿಸಬೇಕಾದ ಅಂಶ ವೆಂದರೆ ಇದಕ್ಕೆ ವಿದ್ಯುತ್ತು, ಬ್ಯಾಟರಿ, ಫಿಲ್ಟರ್ ಇತ್ಯಾದಿ ಯಾವುದರ ಅವಶ್ಯಕತೆಯೂ ಇಲ್ಲ. ಹಣ್ಣು, ಮೀನು ಒಣಗಿಸಲೂ ಇದನ್ನು ಉಪಯೋಗಿಸಬಹುದು ಎಂಬುದು ಇನ್ನೊಂದು ಸಂಗತಿ.

ಅಂದ ಹಾಗೆ, ಈ ಸಾಧನ ಕಂಡು ಹಿಡಿದವರು ಸ್ಟೀಫನ್ ಅಗಸ್ಟಿನ್. ಇಬ್ಬನಿ ಸೆರೆ ಹಿಡಿಯುವ ಬಲೆ. ಮಂಜು ಅಥವಾ ಇಬ್ಬನಿ ಎಂದರೆ ಕವಿಗಳಿಗೆ ಒಂದು ರೀತಿಯ ಪುಳಕ. ಅದೇ ಇಬ್ಬನಿ ಕೇವಲ ಕಾವ್ಯ ಕ್ಕಷ್ಟೇ ಅಲ್ಲ, ಎಷ್ಟೋ ಜನರಿಗೆ ಜೀವಧಾತುವೂ ಹೌದು. ಇಬ್ಬನಿಯನ್ನು ಹಿಡಿದಿಟ್ಟುಕೊಂಡು ಶುದ್ಧನೀರನ್ನಾಗಿ ಪರಿವರ್ತಿಸಿಕೊಳ್ಳುವ ವಿಧಾನ ಇಂದು ನಿನ್ನೆಯದಲ್ಲ.

ಹದಿಮೂರನೆಯ ಶತಮಾನದಿಂದ ಹದಿನಾರನೆಯ ಶತಮಾನದವರೆಗೆ ಅಮೆರಿಕದಲ್ಲಿದ್ದ ಇಂಕಾನ್ ಸಾಮ್ರಾಜ್ಯದಲ್ಲಿ ಇಬ್ಬನಿಯಿಂದ ನೀರು ಹಿಡಿದಿಟ್ಟುಕೊಳ್ಳುವ ಕಾರ್ಯ ಮಾಡುತ್ತಿದ್ದರಂತೆ. ಕೆಲವು ಶುಷ್ಕ ಪ್ರದೇಶದಲ್ಲಿ ಇಬ್ಬನಿಯ ನೀರೇ ಕೃಷಿಗೆ ಮೂಲಾಧಾರವಾಗಿತ್ತಂತೆ. ಆ ಕಾಲದಲ್ಲಿ ಇಬ್ಬನಿಯ ಹನಿಗಳನ್ನು ಸಂಗ್ರಹಿಸಲು ಮರಗಳ ಕೆಳಗೆ ಅಗಲ ಬಾಯಿಯ ಪಾತ್ರೆಗಳನ್ನಿಟ್ಟು ಕುಡಿಯುವ ನೀರು ಸಂಗ್ರಹಿಸುತ್ತಿದ್ದರಂತೆ ಎಂದರೆ ಇದು ಎಷ್ಟು ಪ್ರಾಚೀನ ಪದ್ಧತಿ ಎಂಬುದರ ಅರಿವಾಗುತ್ತದೆ.

ಇಂಗ್ಲೆಂಡಿನ ದಕ್ಷಿಣ ಭಾಗದಲ್ಲಿರುವ ಡ್ಯೂ ಪಾಂಡ್ ಅಥವಾ ಇಬ್ಬನಿ ಕೊಳಗಳು, ಉಕ್ರೇನ್ ದೇಶ ದಲ್ಲಿರುವ ಪುರಾತನ ಕಲ್ಲಿನ ರಾಶಿಗಳು ಇಬ್ಬನಿ ಹಿಡಿದಿಟ್ಟುಕೊಳ್ಳಲು ಮನುಷ್ಯ ಮಾಡಿದ ಪ್ರಯತ್ನ ಗಳ ಕಥೆಯನ್ನು ಹೇಳುತ್ತವೆ. ಹಳೆಯ ಕಾಲದ ಗುಡ್ಡದ ಮೇಲಿರುವ ಬಹುತೇಕ ಸಣ್ಣ ಕೊಳಗಳೆಲ್ಲ ಇದೇ ಕಾರ್ಯಕ್ಕೆ ನಿರ್ಮಿತವಾದವುಗಳು. ಅಂದು ಆರಂಭವಾದ ಇಬ್ಬನಿಯ ಸೆರೆ ಇಂದಿಗೂ ಮುಂದುವರಿದಿದೆ.

ಆಧುನಿಕವಾಗಿ ಇದನ್ನು ಹಿಡಿಯುವ ಮೊದಲ ಪ್ರಯತ್ನ ಆರಂಭವಾದದ್ದು 1970ರ ದಶಕದಲ್ಲಿ. ದಕ್ಷಿಣ ಆಫ್ರಿಕಾದ ವಾಯುಪಡೆಯ ನೆಲೆಯಲ್ಲಿ ಇದನ್ನು ಪ್ರಯೋಗ ರೂಪದಲ್ಲಿ ಆರಂಭಿಸ ಲಾಯಿತು. ನೂರು ಚದರ ಮೀಟರ್ ವಿಸ್ತಾರದ ಎರಡು ಬೇಲಿಯ ಮೇಲೆ ಬಿದ್ದ ಮಂಜಿನ ಹನಿ ಗಳಿಂದ ಹನ್ನೊಂದು ಲೀಟರ್ ನೀರು ಸಂಗ್ರಹಿಸಲಾಗಿತ್ತು. ಮುಂದುವರಿದು, ತೊಂಬತ್ತರ ದಶಕ ದಲ್ಲಿ ಇಟಲಿಯಲ್ಲಿ ಒಂದು ಚದರ ಮೀಟರ್ ಬೇಲಿಯಿಂದ ಅರ್ಧ ಲೀಟರ್ ನೀರು ಸಂಗ್ರಹಿಸ ಲಾಯಿತು.

ಈ ದಿನಗಳಲ್ಲಿ ಇಬ್ಬನಿ ಹಿಡಿಯಲು ಗುಡ್ದದ ಮೇಲೆ ಬಲೆ ಹಾಕುತ್ತಿದ್ದಾರೆ. ಬಿದಿರು ಅಥವಾ ಸ್ಟೀಲ್‌ನ ಕಂಬಕ್ಕೆ ಲಂಬವಾಗಿ ಸಣ್ಣ ಜಾಲರಿಯ ಬಲೆ ಕಟ್ಟುತ್ತಾರೆ. ಕೆಲವೊಮ್ಮೆ ಬಲೆಯನ್ನು ಕಮಾನಿನ ಆಕೃತಿಯಲ್ಲಿ ಕಟ್ಟುವುದೂ ಇದೆ. ತೀರಾ ಹಿಂದುಳಿದ ಪ್ರದೇಶದಲ್ಲಿ ಆಧುನಿಕ ಬಲೆಗೆ ಖರ್ಚು ಮಾಡುವಷ್ಟು ಹಣ ಇಲ್ಲದಿದ್ದಲ್ಲಿ ದಪ್ಪ ಬಟ್ಟೆ ಕಟ್ಟುವುದೂ ಇದೆ.

ಜಾಲರಿಯ ಬಲೆಯಲ್ಲಿ ನೀರಿನ ಹನಿಗಳ ಘನೀಕರಣ ಹೆಚ್ಚಾಗಿರುತ್ತದೆ. ಜಾಲಿಯ ರಂಧ್ರ ಸಣ್ಣದಾ ದಷ್ಟೂ ಅದರ ನೀರು ಹಿಡಿಯುವ ಸಾಮರ್ಥ್ಯ ಹೆಚ್ಚುತ್ತದೆ. ಘನೀಕರಣ ಹೆಚ್ಚಿಸಲು ರಾಸಾಯನಿಕ ಗಳ ಲೇಪನ ಮಾಡುವುದೂ ಇದೆ. ಹೈಡ್ರೋಫಿಲಿಕ್ ಮತ್ತು ಹೈಡ್ರೋಫೋಬಿಕ್ ಲೇಪನಗಳು ಘನೀಕರಣ ಹೆಚ್ಚಿಸಿ, ತನ್ಮೂಲಕ ಹೆಚ್ಚು ನೀರು ಸಂಗ್ರಹವಾಗಲು ಸಹಕರಿಸುತ್ತವೆ.

ಒಂದು ಘನ ಮೀಟರ್ ಇಬ್ಬನಿಯಲ್ಲಿ ಹೆಚ್ಚೆಂದರೆ ಅರ್ಧ ಗ್ರಾಂ ನೀರು ಇರುತ್ತದೆ. ತೀರಾ ಚಿಕ್ಕದಾದ, ಒಂದರಿಂದ ನಲವತ್ತು ಮೈಕ್ರೋಮೀಟರ್ ವ್ಯಾಸದ ನೀರಿನ ಹನಿಗಳು ಗಾಳಿಯಲ್ಲಿ ತೇಲಿ ಇಬ್ಬನಿಯ ರೂಪದಲ್ಲಿ ಬರುತ್ತವೆ. ನೀರ ಹನಿಗಳನ್ನು ಹೊತ್ತ ಗಾಳಿ ಜಾಲಿಯನ್ನು ಸವರಿಕೊಂಡು ಮುಂದೆ ಹೋಗುವಾಗ ಅದರಲ್ಲಿನ ಹನಿಗಳನ್ನು ಜಾಲಿ ಹಿಡಿದಿಟ್ಟುಕೊಳ್ಳುತ್ತದೆ. ಈ ಇಬ್ಬನಿಯ ಬಲೆಗಳು ಗಾಳಿಯಲ್ಲಿನ ಶೇಕಡಾ ಹತ್ತರಷ್ಟು ತೇವಾಂಶವನ್ನು ಸೆರೆ ಹಿಡಿಯುತ್ತವೆ.

ಸಾಮಾನ್ಯವಾಗಿ ಎರಡು ಬಲೆಯನ್ನು ಅಕ್ಕಪಕ್ಕದಲ್ಲಿ ಅಳವಡಿಸಿರುತ್ತಾರೆ. ಕಾರಣ ಸರಳ, ಬಲೆಗಳು ಒಂದಕ್ಕೊಂದು ತಾಗಿದಾಗ ಉಂಟಾಗುವ ಘರ್ಷಣೆಯಿಂದ ಘನೀಕೃತಗೊಂಡ ನೀರು ಬೇಗನೆ ಕೆಳಗೆ ಇಳಿಯುತ್ತದೆ. ಜಾಲಿಯ ಕೆಳಗೆ ಅಳವಡಿಸಿರುವ ತೊಟ್ಟಿಯಲ್ಲಿ ಶುದ್ಧ ನೀರು ಸಂಗ್ರಹವಾಗುತ್ತದೆ. ಹೀಗೆ ಕೊಯ್ಲು ಮಾಡಿದ ನೀರು ಅಂತರ್ಜಲಕ್ಕಿಂತಲೂ ಶುದ್ಧ ಮತ್ತು ಸುರಕ್ಷಿತ. ಇದರ ನಿರ್ವಹಣೆ ಸುಲಭವಷ್ಟೇ ಅಲ್ಲ, ವೆಚ್ಚವೂ ಕಡಿಮೆ.

ವಿಶ್ವದಾದ್ಯಂತ ಇಂದು ಇಪ್ಪತ್ತೈದು ದೇಶದ ಹಳ್ಳಿಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ಇಂಟರ್‌ ನ್ಯಾಷನಲ್ ಆರ್ಗನೈಸೇಷನ್ ಫಾರ್ ಡ್ಯೂ ಯುಟಿಲೈಸೇಶನ್ ಎಂಬ ಸಂಸ್ಥೆ ಇಬ್ಬನಿಯಿಂದ ನೀರು ಪಡೆಯುವ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ. ಯೆಮನ್ ಮತ್ತು ಚಿಲಿ ದೇಶಗಳಲ್ಲಿ ಕೆಲವು ಯಶಸ್ವಿ ಕಾರ್ಯಾಚರಣೆಯ ನಂತರ ಭವಿಷ್ಯದಲ್ಲಿ ಗ್ವಾಂಟೆಮಾಲಾ, ಹೈಟಿ, ನೇಪಾಳದಂಥ ದೇಶಗಳಲ್ಲಿ ಈ ಸೌಲಭ್ಯ ಒದಗಿಸಲು ಕಾರ್ಯಪ್ರವೃತ್ತವಾಗಿವೆ.

ಇಂದು ವಿಶ್ವದ ಅತಿ ದೊಡ್ದ ಇಬ್ಬನಿಯ ಬಲೆ ಇರುವುದು ಮೊರೊಕ್ಕೊ ದೇಶದ ದರ್ ಸಿ ಹಮದ್ ಗುಡ್ಡಗಾಡು ಪ್ರದೇಶದಲ್ಲಿ. ಒಟ್ಟೂ ಸುಮಾರು 900 ಚದರ ಮೀಟರ್ ಹರಡಿಕೊಂಡಿರುವ ಬಲೆ ಪ್ರತಿ ಚದರ ಮೀಟರ್‌ಗೆ ಇಪ್ಪತ್ತೆರಡು ಲೀಟರ್‌ನಂತೆ ಪ್ರತಿ ದಿನ ಸುಮಾರು ಇಪ್ಪತ್ತು ಸಾವಿರ ಲೀಟರ್ ನೀರು ಒದಗಿಸಿಕೊಡುತ್ತಿದೆ. ಆಸುಪಾಸಿನ ಸುಮಾರು ಹದಿನೈದು ಗ್ರಾಮಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿವೆ.

ಇಂದು ಸೌರಶಕ್ತಿಯಿಂದ ನೀರನ್ನು ಸಂಸ್ಕರಿಸುವ, ಶುದ್ಧೀಕರಿಸುವ, ಗಾಳಿಯಿಂದ ನೀರು ಉತ್ಪಾದಿ ಸುವ ಹತ್ತು ಹಲವು ಉಪಕರಣಗಳು ಮಾರುಕಟ್ಟೆಗೆ ಬಂದಿವೆ. ಗಾಳಿಯಿಂದ ನೀರು ತಯಾರಿಸುವ, ನಾಲ್ಕು ನೂರರಿಂದ ಎರಡು ಸಾವಿರ ಡಾಲರ್ ಮೌಲ್ಯದ ಚಿಕ್ಕ ಚಿಕ್ಕ ಯಂತ್ರಗಳು ಅಮೆಜಾನ್ ನಲ್ಲಿಯೇ ಲಭ್ಯವಿವೆ. ಅನೇಕ ಸಂಸ್ಥೆಗಳು ಜನರಿಗೆ ನೀರು ಒದಗಿಸಿಕೊಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.

ಇವೆಲ್ಲ ಸಣ್ಣ ಪ್ರಮಾಣದಲ್ಲಿ ಕುಡಿಯುವ ನೀರನ್ನು ತಯಾರಿಸುವ, ಉತ್ಪಾದಿಸುವ ಪ್ರಯತ್ನಗಳು. ಇದರ ಜತೆಗೆ ನೀರನ್ನು ಉಳಿಸುವುದಕ್ಕೆ ನಮ್ಮ ಪ್ರಯತ್ನ ಬೇಕಾಗಿದೆ. ‘ಒಂದು ಮರ ನೆಡಲಾಗದಿದ್ದ ರೇನಂತೆ, ಒಂದು ಮರ ಕಡಿಯದೇ ಉಳಿಸಿ’ ಎಂಬ ಮಾತಿದೆ. ಒಂದು ರುಪಾಯಿ ಉಳಿಸಿದರೆ ಒಂದು ರುಪಾಯಿ ಗಳಿಸಿದಂತೆ ಎಂಬ ಮಾತೂ ಇದೆ. ಹಾಗೆಯೇ, ಇಂದು ಉಳಿಸಿದ ಒಂದು ಹನಿ ನೀರು, ಮುಂದೊಂದು ದಿನ ಖಜಾನೆಯಾಗುತ್ತದೆ.

ಮನುಷ್ಯನ ದೇಹದ ತಾಪಮಾನ ಕಾಪಾಡಲು ನೀರು ಎಷ್ಟು ಅವಶ್ಯಕವೋ, ಪರಿಸರದ ತಾಪಮಾನ ಕಾಪಾಡುವುದಕ್ಕೂ ನೀರು ಅಷ್ಟೇ ಅವಶ್ಯಕ. ನಮಗಿರುವ ಜಲ ಸಂಪನ್ಮೂಲದಲ್ಲಿ ಶೇಕಡಾ ಎಪ್ಪತ್ತ ರಷ್ಟು ಕೃಷಿಗೆ, ಇಪ್ಪತ್ತರಷ್ಟು ಕಾರ್ಖಾನೆಗೆ ಉಳಿದ ಹತ್ತು ಪ್ರತಿಶತ ನಮ್ಮ ದಿನನಿತ್ಯದ ಬಳಕೆಗೆ ಉಪಯೋಗಿಸಲ್ಪಡುತ್ತದೆ.

ಸಾಮಾನ್ಯ ಮನುಷ್ಯ ಪ್ರತಿನಿತ್ಯ ಸರಾಸರಿ ನೂರರಿಂದ ನೂರ ಐವತ್ತು ಲೀಟರ್ ನೀರು ಉಪಯೋಗಿ ಸುತ್ತಾನೆ. ಅದರಲ್ಲಿ ಕುಡಿಯಲು ಬಳಸುವುದು ಒಂದರಿಂದ ಒಂದೂವರೆ ಲೀಟರ್ ಮಾತ್ರ. ಆ ಕುಡಿಯುವ ನೀರಿಗೇ ಇಂದು ಬಡಿದಾಡಿಕೊಳ್ಳುವ ಪರಿಸ್ಥಿತಿ ಇರುವಾಗ, ಇನ್ನು ಉಳಿದದ್ದರ ಕಥೆ ಯನ್ನಂತೂ ಕೇಳುವುದೇ ಬೇಡ. ಕುಡಿಯಲು ಯೋಗ್ಯವಲ್ಲದ ನೀರು ಕುಡಿದು ಉಂಟಾಗುವ ಅತಿಸಾರದಿಂದ ವಿಶ್ವದಾದ್ಯಂತ ಪ್ರತಿನಿತ್ಯ ಐದು ಸಾವಿರ ಮಕ್ಕಳು ಅಸು ನೀಗುತ್ತಿದ್ದಾರೆ.

ಇದು ಯಾರೋ ಕಾಂಜಿಪೀಂಜಿಗಳು ಕೊಟ್ಟ ಲೆಕ್ಕವಲ್ಲ, ಯುನಿಸೆಫ್ ( UNICEF) ನೀಡಿರುವ ಅಂಕಿ-ಅಂಶ. ಇದು ದುರಂತವಾದರೂ ಸತ್ಯ. ಆಫ್ರಿಕಾ ಖಂಡದ ಗ್ರಾಮೀಣ ಭಾಗದಲ್ಲಿ ಜನರು ತಮಗೆ ಸಿಗುವ ಸಮಯದ ಕಾಲುಭಾಗವನ್ನು ನೀರು ಶೇಖರಿಸಲು ವ್ಯಯಿಸುತ್ತಾರೆ. ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚು. ಮನೆಯಿಂದ ಹಲವು ಕಿಲೋಮೀಟರ್ ದೂರ ಹೋಗಿ ಇಪ್ಪತ್ತು ಲೀಟರ್ ನೀರು ತುಂಬಿಸಿದ ಬಕೆಟ್ ತಲೆಯ ಮೇಲೆ ಹೊತ್ತು ತರುವುದೆಂದರೆ ಎರಡರಿಂದ ಮೂರು ತಾಸಿನ ಕೆಲಸ.

ತೀರಾ ಇತ್ತೀಚಿನವರೆಗೂ ಒಂದು ಬಕೆಟ್ ನೀರಿನಲ್ಲಿಯೇ ಅಡುಗೆ ಮಾಡುವುದರಿಂದ ಹಿಡಿದು ಸ್ನಾನ, ಶೌಚ, ಪಾತ್ರೆ, ಬಟ್ಟೆ ಒಗೆಯುವುದು ಇತ್ಯಾದಿ ನಿತ್ಯದ ಕೆಲಸ ಮುಗಿಸಬೇಕಾಗಿತ್ತು. ಈಗಲೂ ಕೆಲವು ಪ್ರದೇಶಗಳಲ್ಲಿ ಅದೇ ಸ್ಥಿತಿಯಿದೆ. ನಮ್ಮ ದೇಶದಲ್ಲೂ ಕೆಲವು ಪ್ರದೇಶಗಳಲ್ಲಿ ಈ ಪರಿಸ್ಥಿತಿಯಿದೆ. ದೂರದಿಂದ ತಲೆಯ ಮೇಲೆ ಭಾರ ಹೊತ್ತು ನಡೆಯುವುದರಿಂದ ಸ್ವಾಭಾವಿಕವಾಗಿಯೇ ಬೆನ್ನು ಮೂಳೆಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ.

ಇದರಿಂದ ಕತ್ತು, ಬೆನ್ನು, ಸೊಂಟದ ಭಾಗದಲ್ಲಿ ಸಾಕಷ್ಟು ನೋವು ಅನುಭವಿಸುವುದರೊಂದಿಗೆ ವೃದ್ಧಾಪ್ಯವೂ ಬೇಗನೆ ಆವರಿಸಿಕೊಳ್ಳುತ್ತದೆ. ಸುಮ್ಮನೆ ಒಂದು ಸಣ್ಣ ಲೆಕ್ಕ ನೋಡಿ. ವಿಶ್ವದ 790 ಕೋಟಿ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರೂ ಕುಡಿಯಲು ಒಂದೂವರೆ ಲೀಟರ್ ಬಳಸಿದರೂ ಸಾವಿರದ ಇನ್ನೂರ ಐವತ್ತು ಕೋಟಿ ಲೀಟರ್ ಗಿಂತಲೂ ಹೆಚ್ಚು ನೀರು ಬೇಕು. ನೂರ ಐವತ್ತು ಲೀಟರ್ ದಿನಬಳಕೆಗೆ ಉಪಯೋಗಿಸಿದರೆ, ಪ್ರತಿದಿನ ಒಂದೂ ಕಾಲು ಲಕ್ಷ ಕೋಟಿ ಲೀಟರ್!

ಈಗ, ನಿತ್ಯ ಪ್ರತಿಯೊಬ್ಬರೂ ಹತ್ತು ಲೀಟರ್ ಉಳಿಸಿದರೂ, ದಿನಕ್ಕೆ, ವರ್ಷಕ್ಕೆ ಎಷ್ಟು ನೀರು ಉಳಿಸಿ ದಂತಾಯಿತು, ಲೆಕ್ಕ ಮಾಡಿ! ಇಂಥ ಭಯಾನಕ ಸನ್ನಿವೇಶದ ಮಧ್ಯೆ ಮರುಭೂಮಿಯಲ್ಲಿನ ಓಯಸಿಸ್‌ನಂತೆ ಅಲ್ಲಲ್ಲಿ ಭಗೀರಥನಂಥವರು ಕಾಣಸಿಗುತ್ತಾರೆ. ನಾವು ಭಗೀರಥರಾಗುವುದು ಬೇಡ, ಮುಂಬರುವ ದಿನದ ಸಣ್ಣ ಹೀರೋ ಆದರೂ ಆಗಲು ಪ್ರಯತ್ನಿಸೋಣ...

ಕಿರಣ್‌ ಉಪಾಧ್ಯಾಯ, ಬ‌ಹ್ರೈನ್

View all posts by this author