Jyothiradithya Sindhia Column: ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈಶಾನ್ಯ ಭಾರತ
ಈಶಾನ್ಯ ವಲಯದ ರೈಲ್ವೆಯಲ್ಲಿ ಆಗಿರುವ 80000 ಕೋಟಿ ರುಪಾಯಿಯಷ್ಟು ಹೂಡಿಕೆ ಮತ್ತು ವಿಮಾನ ನಿಲ್ದಾಣಗಳ ಸಂಖ್ಯೆಯು 9 ರಿಂದ 17ಕ್ಕೆ ಏರಿರುವುದು ಕೂಡ ಒಂದು ಕಾಲಕ್ಕೆ land-locked ಎಂದು ಕರೆಯಲ್ಪಡುತ್ತಿದ್ದ ಈ ವಲಯವು ಈಗ land-linked ಎನಿಸಿಕೊಳ್ಳುವಷ್ಟರ ಮಟ್ಟಿಗೆ ರೂಪಾಂತರವನ್ನು ಉಂಟುಮಾಡಿದೆ ಹಾಗೂ ಭವಿಷ್ಯದ ಕಾರ್ಯಾಚರಣೆಗಳಿಗೆ ಸಜ್ಜಾಗಿದೆ.


ದೇವಮೂಲೆ
ಜ್ಯೋತಿರಾದಿತ್ಯ ಸಿಂಧಿಯಾ
ಗದ್ದಲವೇ ತುಂಬಿರುವ ದುಬೈನ ಮಾರುಕಟ್ಟೆಗಳಲ್ಲಿ ಜನರು ವಿಲಕ್ಷಣವಾದ ಸತ್ಕಾರವನ್ನು ಬಯಸುತ್ತಾರೆ, ಅದನ್ನು ಅರಸಿಕೊಂಡು ಹೋಗುತ್ತಾರೆ. ಅದುವೇ ‘ತ್ರಿಪುರಾದ ಚಿನ್ನದ ರಾಣಿ’ ಎಂದೇ ಕರೆಯಲ್ಪಡುವ ಅನಾನಸ್ ಹಣ್ಣು. ಇದರ ಸವಿರುಚಿಯು ಮಾನ್ಸೂನ್ ಮಳೆ ಮೋಡಗಳಿಂದ ಚುಂಬಿಸಲ್ಪಟ್ಟ ಬೆಟ್ಟಗಳನ್ನು ಮಾತ್ರವಲ್ಲದೆ, ತಲೆ ತಲಾಂತರದಿಂದ ಸಾಗಿಬಂದ ಬುಡಕಟ್ಟು ಜನರ ಬುದ್ಧಿವಂತಿಕೆಯನ್ನೂ ನೆನಪಿಸುತ್ತದೆ.
ಭಾರತದ ಒಂದು ಮೂಲೆಯಿಂದ ಬಂದ ಈ ಹಣ್ಣನ್ನು ಮಧ್ಯಪ್ರಾಚ್ಯ ವಲಯದಲ್ಲಿ ಸತ್ಕಾರದ ಭಾಗವಾಗಿ ಬಡಿಸಲಾಗುತ್ತದೆ ಎಂಬುದನ್ನು ಸುಮಾರು 11 ವರ್ಷಗಳ ಹಿಂದೆ ಯಾರಾದರೂ ಊಹಿಸಿ ಕೊಳ್ಳಲು ಸಾಧ್ಯವಿತ್ತೇ? ಅಂಥ ಸ್ವರ್ಣ ಸದೃಶ ಅನಾನಸ್ ಹಣ್ಣುಗಳನ್ನು ಸುಮಾರು 10000 ಟನ್ ಗಳಷ್ಟು ಪ್ರಮಾಣದಲ್ಲಿ ಬೆಳೆಯುವ ಹಾಗೂ ವಿಶ್ವದ ವಿವಿಧ ದೇಶಗಳಿಗೆ ಅವನ್ನು ರವಾನಿಸುವ ತ್ರಿಪುರಾ ಎಂಬ ತಾಣ ನಮ್ಮ ಭಾರತದಲ್ಲೇ ಇರುವಂಥದ್ದು ಎಂಬುದು ನಮಗೆ ಹೆಮ್ಮೆಯ ಸಂಗತಿ ಯಾಗಬೇಕು.
ಹಾಗೆಂದ ಮಾತ್ರಕ್ಕೆ, ಇದು ಅನಾನಸ್ ಕುರಿತಾದ ಕಥಾನಕ ಮಾತ್ರವೇ ಅಲ್ಲ; ಇದು ಪ್ರದೇಶವೊಂದರ ಉದಯ ಮತ್ತು ಅಭ್ಯುದಯಕ್ಕೆ ಸಂಬಂಧಿಸಿದ ಬಾಬತ್ತು ಕೂಡ ಹೌದು! ಭಾರತದ ಅಭಿವೃದ್ಧಿ ಮಾದರಿಯ ವಿಷಯದಲ್ಲಿ ಒಂದು ಕಾಲಕ್ಕೆ ಮೂಲೆಗುಂಪಾಗಿದ್ದ ಈಶಾನ್ಯ ಪ್ರದೇಶವು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದಾಗಿ, ರಾಷ್ಟ್ರದ ಪೂರ್ವವಲಯದ ಮಹಾದ್ವಾರವಾಗಿ ಹೊರಹೊಮ್ಮುತ್ತಿದೆ, ಆ ನಿಟ್ಟಿನಲ್ಲಿ ತನ್ನ ಹೊರಪೊರೆಯನ್ನು ಕಳಚಿಕೊಳ್ಳುತ್ತಿದೆ.
ಅರ್ಥಶಾಸ್ತ್ರದಲ್ಲಿ ‘ಸುವರ್ಣಕುದ್ಯಕ’ ಎಂಬುದಾಗಿ ಉಲ್ಲೇಖಿಸಲ್ಪಟ್ಟಿರುವ ಬಂಗಾರದ ಛಾಯೆಯ ರೇಷ್ಮೆಯನ್ನು ಉತ್ಪಾದಿಸುತ್ತಿದ್ದ ಪ್ರಾಚೀನ ಕಾಮರೂಪ ಪ್ರದೇಶದ ವ್ಯಾಪಾರ ಮಾರ್ಗಗಳಿಂದ ಮೊದಲ್ಗೊಂಡು, ಸಿಲಿಕಾನ್ ಕನಸುಗಳ ಭರವಸೆಯನ್ನು ನೀಡುವ ಸೆಮಿಕಂಡಕ್ಟರ್ ಸ್ಲ್ಯಾಬ್ ಗಳವರೆಗೆ, ಈ ಪ್ರದೇಶವು ತನ್ನ ಹಣೆಬರಹವನ್ನು ತಾನೇ ಬರೆದುಕೊಳ್ಳುತ್ತಿದೆ, ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದೆ.
ಇದನ್ನೂ ಓದಿ: Roopa Gururaj Column: ಅಮೃತಕ್ಕಾಗಿ ದೇವ ದಾನವರ ಹರಸಾಹಸ
2047ರ ವೇಳೆಗೆ ‘ವಿಕಸಿತ ಭಾರತ’ ಎನಿಸಿಕೊಳ್ಳುವ ಮತ್ತು ‘30 ಟ್ರಿಲಿಯನ್ ಡಾಲರ್ ಆರ್ಥಿಕತೆ’ ಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತದ ಪಯಣದಲ್ಲಿ, ಈ ಪ್ರದೇಶವು ನೀಡಲಿರುವ ಕೊಡುಗೆ ಯನ್ನು ತಳ್ಳಿಹಾಕಲಾಗದು. ಹನ್ನೊಂದು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ತರುವಾಯದಲ್ಲಿ ಭಾರತದ ಅಭಿವೃದ್ಧಿಗೆ ವೇಗ ದಕ್ಕಿತು ಹಾಗೂ ಈಶಾನ್ಯ ಭಾರತವು ಪುನರುಜ್ಜೀವನಗೊಂಡಿತು ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು.
ಅಭಿವೃದ್ಧಿ ಚಟುವಟಿಕೆಗಳಿಗೆ ಹೊಸ ದೃಷ್ಟಿಕೋನವನ್ನೇ ನೀಡಿದ ಮೋದಿಯವರು ಈಶಾನ್ಯ ವಲಯದ ಎಂಟು ರಾಜ್ಯಗಳನ್ನು ‘ಭಾರತದ ಅಷ್ಟಲಕ್ಷ್ಮಿಯರು’ ಎಂದೇ ಘೋಷಿಸಿದರು. ಅಧಿಕಾರ ವಹಿಸಿಕೊಂಡ ಮೊದಲ ಕೆಲವು ತಿಂಗಳುಗಳಲ್ಲೇ ಅವರು ಈಶಾನ್ಯ ಭಾರತದ ಈ ಪ್ರದೇಶಗಳಲ್ಲಿ ಕಾಲ ಕಳೆದಿದ್ದುಂಟು, ಸುತ್ತುಹಾಕಿದ್ದುಂಟು. ಈ ಬೆಳವಣಿಗೆಯನ್ನು ಈಶಾನ್ಯ ಭಾರತದ ಹೊರಗಿನ ಕೆಲವರು ಗಮನಿಸಿದ್ದು ಹೌದಾದರೂ, ಆ ಭೇಟಿಗಿರುವ ಮಹತ್ವ ಬಹುಮಂದಿಗೆ ಗೊತ್ತಾಗಿದ್ದೇ ಕಮ್ಮಿ ಎನ್ನಬೇಕು.
ಅದೇನೇ ಇರಲಿ, ಮೋದಿಯವರು ನೀಡಿದ ಈ ಭೇಟಿ ಹಾಗೂ ಆ ನೆಲದಲ್ಲಿ ನಿಂತು ಅವರು ನೀಡಿದ ಭರವಸೆಗಳು, ಒಂದು ದಶಕದಷ್ಟು ಸುದೀರ್ಘವಾಗಿದ್ದ ಕಾರ್ಯಾಚರಣೆಯೊಂದಕ್ಕೆ ನಾಂದಿ ಹಾಡಿ ದವು ಎನ್ನಲಡ್ಡಿಯಿಲ್ಲ; ಅಂದರೆ, ಬಹುತೇಕವಾಗಿ ‘ನಿರ್ಲಕ್ಷಿತ ಮೂಲೆ’ ಎಂದೇ ಕರೆಸಿಕೊಂಡಿದ್ದ ಈಶಾನ್ಯ ಭಾರತವನ್ನು, ಬೆಳವಣಿಗೆ, ಭದ್ರತೆ ಮತ್ತು ಅಂತಾರಾಷ್ಟ್ರೀಯ ಅವಕಾಶಗಳಿಗೆ ಸಂಬಂಧಿಸಿದ ಒಂದು ‘ರಾಷ್ಟ್ರೀಯ ಮುನ್ನೆಲೆ’ಯಾಗಿ ಪರಿವರ್ತಿಸುವ ಧ್ಯೇಯಕ್ಕೆ ಆ ಭೇಟಿ ನಾಂದಿ ಹಾಡಿತು.
ಹಣಕಾಸಿನ ಬದ್ಧತೆಯ ವಿಷಯದಲ್ಲಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಅಡಿಯಲ್ಲಿ ಶುರುವಾಗಿರುವ ಈಶಾನ್ಯ ಭಾರತದ ರೂಪಾಂತರದ ಸಾಹಸಕ್ಕೆ ಐತಿಹಾಸಿಕ ಎನ್ನಬಹುದಾದ ಮಟ್ಟಿಗಿನ ಹಣಹಾಸು ಹೂಡಿಕೆಯಾಗಿದೆ. ಕೇಂದ್ರದ ಸಚಿವಾಲಯ ಗಳಿಂದ ದಕ್ಕಿರುವ ಶೇ.10ರಷ್ಟು ಬಜೆಟ್ ಅನುದಾನದ ಬೆಂಬಲದ ಮೂಲಕ ಈ ಪ್ರದೇಶಕ್ಕೆ 6.2 ಲಕ್ಷ ಕೋಟಿ ರುಪಾಯಿಗಳಿಗೂ ಹೆಚ್ಚು ಹಣವನ್ನು ಹರಿಸಲಾಗಿದೆ.
ಈ ಪೈಕಿ, ಮೂಲಸೌಕರ್ಯಗಳಿಗಾಗಿನ ಹೂಡಿಕೆಗಳೇ 5 ಲಕ್ಷ ಕೋಟಿಯನ್ನು ದಾಟಿವೆ. ಈಶಾನ್ಯ ವಲಯಕ್ಕಾಗಿನ ತೆರಿಗೆ ಹಂಚಿಕೆಯ ಪ್ರಮಾಣವೂ ಅನೇಕ ಪಟ್ಟು ಬೆಳೆದು ಈಗ 5.74 ಲಕ್ಷ ಕೋಟಿ ಯಷ್ಟಾಗಿದ್ದರೆ, ‘ಅನುದಾನದ ನೆರವಿನ’ ರೂಪದಲ್ಲಿನ ಹಣದ ಹರಿವು ಬಹುತೇಕ ದ್ವಿಗುಣ ಗೊಂಡು 5.66 ಲಕ್ಷ ಕೋಟಿಯನ್ನು ಮುಟ್ಟಿದೆ.
ಈ ಗುಡ್ಡಗಾಡು ಪ್ರದೇಶದಲ್ಲಿನ ನಾಲ್ಕು ಲೇನ್ಗಳ ಸಿಲ್ಚಾರ್-ಷಿಲ್ಲಾಂಗ್ ಕಾರಿಡಾರ್, ಭೂಪೇನ್ ಹಜಾರಿಕಾ ಸೇತು ಅಥವಾ ಬೋಗಿಬೀಲ್ ಬ್ರಿಜ್ ಹೀಗೆ ಪ್ರತಿಯೊಂದು ಯೋಜನೆಯೂ ಮೋದಿ ಸರಕಾರದ ಸಾಮರ್ಥ್ಯಕ್ಕೆ ಅನನ್ಯ ನಿದರ್ಶನಗಳೇ; ಹೆಜ್ಜೆ ಹೆಜ್ಜೆಗೂ ಸವಾಲು ಒಡ್ಡುವ ಇಂಥ ಭೌಗೋಳಿಕ ಪ್ರದೇಶದಲ್ಲಿ ಇಂಥ ಸಂಕೀರ್ಣ ಸ್ವರೂಪದ ಸಂಪರ್ಕ ಶೀಲತೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಸರಕಾರಕ್ಕಿರುವ ಸಾಮರ್ಥ್ಯವೇನು ಎಂಬುದಕ್ಕೆ ಈ ಯೋಜನೆಗಳೇ ಪ್ರತ್ಯಕ್ಷ ನಿದರ್ಶನಗಳಾಗಿವೆ.
ಮಿಜೋರಾಂನಲ್ಲಿ ಇತ್ತೀಚೆಗೆ ಪೂರ್ಣಗೊಂಡ ‘ಬೈರಾಬಿ-ಸೆರಾಂಗ್’ ರೈಲುಮಾರ್ಗವು ಐಜ್ವಾಲ್ ಅನ್ನು ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುತ್ತದೆ; ಇದರಿಂದಾಗಿ ಈಶಾನ್ಯದ ಎಲ್ಲ ಎಂಟು ರಾಜ್ಯಗಳ ರಾಜಧಾನಿಗಳಿಗೆ ರೈಲುಮಾರ್ಗದಿಂದ ಸಂಪರ್ಕಶೀಲತೆ ಒದಗಿದಂತಾಗಿದೆ. ಮಾತ್ರವಲ್ಲದೆ, ಈಶಾನ್ಯ ವಲಯದ ರೈಲ್ವೆಯಲ್ಲಿ ಆಗಿರುವ 80000 ಕೋಟಿ ರುಪಾಯಿಯಷ್ಟು ಹೂಡಿಕೆ ಮತ್ತು ವಿಮಾನ ನಿಲ್ದಾಣಗಳ ಸಂಖ್ಯೆಯು 9 ರಿಂದ 17ಕ್ಕೆ ಏರಿರುವುದು ಕೂಡ ಒಂದು ಕಾಲಕ್ಕೆ land-locked ಎಂದು ಕರೆಯಲ್ಪಡುತ್ತಿದ್ದ ಈ ವಲಯವು ಈಗ land-linked ಎನಿಸಿಕೊಳ್ಳುವಷ್ಟರ ಮಟ್ಟಿಗೆ ರೂಪಾಂತರವನ್ನು ಉಂಟುಮಾಡಿದೆ ಹಾಗೂ ಭವಿಷ್ಯದ ಕಾರ್ಯಾಚರಣೆಗಳಿಗೆ ಸಜ್ಜಾಗಿದೆ.
ಈ ರೂಪಾಂತರಕ್ಕೆ ಅಡಿಪಾಯ ಹಾಕಿದ್ದು ಮೂಲಸೌಕರ್ಯಗಳು ಹೌದಾದರೂ, ಈ ಎಂಟೂ ರಾಜ್ಯಗಳಲ್ಲಿ ಹೂಡಿಕೆದಾರರ ‘ನವೀಕೃತ’ ವಿಶ್ವಾಸ ಕಂಡುಬಂದಿದ್ದು ಈ ರೂಪಾಂತರಕ್ಕೆ ನಿಜವಾದ ಅರ್ಥವನ್ನು ನೀಡಿತು ಎನ್ನಬೇಕು. ಪ್ರಧಾನಿ ಮೋದಿಯವರು ಪ್ರತಿಪಾದಿಸಿದ ಸ್ಥಿರ ಆಡಳಿತ, ಅವರ ದೂರದೃಷ್ಟಿಯ ನಾಯಕತ್ವ ಮತ್ತು ಕಾರ್ಯನೀತಿಗಳಿಗೆ ಬಲ ತುಂಬುವಿಕೆ ಮುಂತಾದವುಗಳ ನೇರ ಪರಿಣಾಮವಾಗಿ ಇದು ಹೊರಹೊಮ್ಮಿತು.
ಈ ಮೂಲಭೂತ ಬದಲಾವಣೆಯು, ಪ್ರಧಾನಿಯವರಿಂದಲೇ ಉದ್ಘಾಟಿಸಲ್ಪಟ್ಟ Rising Northeast Investors Summit 2025 ಹೆಸರಿನ ಶೃಂಗಸಭೆಗೆ ಭೂಮಿಕೆಯನ್ನು ಸಜ್ಜುಗೊಳಿಸಿತು. ಇದು ಈಶಾನ್ಯ ರಾಜ್ಯಗಳ 45 ದಶಲಕ್ಷ ನಾಗರಿಕರ ಪಾಲಿಗೆ ಒಂದು ನಿರ್ಣಾಯಕ ಮೈಲಿಗಲ್ಲಾಗಿ ಪರಿಣಮಿಸಿದ್ದರ ಜತೆಗೆ, ಒಟ್ಟಾರೆಯಾಗಿ 140 ಕೋಟಿ ಭಾರತೀಯರ ಹೆಬ್ಬಯಕೆಗಳನ್ನು ನೆರವೇರಿಸುವೆಡೆಗಿನ ಒಂದು ನಿರ್ಣಾಯಕ ಹೆಜ್ಜೆಯೂ ಆಗಿತ್ತು.
ಈ ಉಪಕ್ರಮಕ್ಕೆ ದಕ್ಕಿದ ಪ್ರತಿಕ್ರಿಯೆ ಭರ್ಜರಿಯಾಗಿದೆ. ವ್ಯವಸಾಯ, ಕೃಷಿ ತಂತ್ರಜ್ಞಾನ, ಆತಿಥ್ಯ, ಪ್ರವಾಸೋದ್ಯಮ, ನವೀಕರಿಸಬಹುದಾದ ಇಂಧನ, ಕ್ರೀಡೆ, ಸೇವೆಗಳು ಹೀಗೆ ವೈವಿಧ್ಯಮಯ ವಲಯ ಗಳಲ್ಲಿ 4.3 ಲಕ್ಷ ಕೋಟಿ ರುಪಾಯಿಗಳಿಗೂ ಹೆಚ್ಚಿನ ಮೌಲ್ಯದ ಹೂಡಿಕಾ ಪ್ರಸ್ತಾವನೆಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ.
ಜಪಾನ್ ಮತ್ತು ಐರೋಪ್ಯ ಒಕ್ಕೂಟದಂಥ ಕಾರ್ಯತಂತ್ರದ ಪಾಲುದಾರರು ಸೇರಿದಂತೆ, 80ಕ್ಕೂ ಹೆಚ್ಚು ದೇಶಗಳು ಈ ಸಭೆಯಲ್ಲಿ ಭಾಗವಹಿಸಿದ್ದವು. ಮಾತ್ರವಲ್ಲದೆ, ಭಾರತದ ಅಗ್ರಗಣ್ಯ ಕೈಗಾರಿಕೋ ದ್ಯಮಿಗಳು ಮತ್ತು ನವೋದ್ಯಮಶೀಲರ ಜತೆಜತೆಗೆ ವಿದೇಶಿ ರಾಯಭಾರಿಗಳು ಮತ್ತು ಜಾಗತಿಕ ಹೂಡಿಕೆದಾರರೂ ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದು ಮತ್ತೊಂದು ವಿಶೇಷ; ಇವರೆಲ್ಲಾ ತಂತಮ್ಮ ಉದ್ಯಮಗಳ ಪಾಲಿನ ಮುಂದಿನ ‘ಅವಕಾಶ ಕೇಂದ್ರ’ವಾಗಿ ಹಾಗೂ ‘ವಿಕಸಿತ ಭಾರತ’ ಪರಿಕಲ್ಪನೆಯ ಸಾಕಾರಕ್ಕಾಗಿ ಈಶಾನ್ಯ ವಲಯವನ್ನು ನೆಚ್ಚುವುದಕ್ಕೆ ಮತ್ತು ಜಾಗತಿಕ ಮಟ್ಟದಲ್ಲಿ ಈಶಾನ್ಯ ಭಾರತಕ್ಕೊಂದು ಮಾನ್ಯತೆ ಸಿಗುವುದಕ್ಕೆ ಈ ಸಭೆ ಕಾರಣವಾಯಿತು ಎನ್ನಲಡ್ಡಿಯಿಲ್ಲ.
ಈ ಆವೇಗವನ್ನು ಮತ್ತಷ್ಟು ಕಾಪಿಟ್ಟುಕೊಳ್ಳಲೆಂದು, ಈಶಾನ್ಯ ವಲಯದ ಅಭಿವೃದ್ಧಿಗೆ ಸಂಬಂಧಿಸಿದ ಸಚಿವಾಲಯವು ಒಂದಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದೆ. ಅಂದರೆ, ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಏಕಗವಾಕ್ಷಿ ಅನುಮತಿಗಳನ್ನು ಹಾಗೂ ಹೂಡಿಕೆದಾರ ರಿಗೆ ಅಬಾಧಿತ ನೆರವನ್ನು ನೀಡುವಂತಾಗಲೆಂದು ಈ ವಲಯದ ಎಲ್ಲಾ ಎಂಟು ರಾಜ್ಯಗಳಲ್ಲಿ ಹೂಡಿಕೆ ಪ್ರವರ್ತನಾ ಸಂಸ್ಥೆಗಳ ಸ್ಥಾಪನೆಗೆ ಅದು ಅನುವುಮಾಡಿಕೊಟ್ಟಿದೆ.
ಎಂಟು ಮಂದಿ ಮುಖ್ಯಮಂತ್ರಿಗಳ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆಗಳು, ಆಯಾ ರಾಜ್ಯದ ವಿಶಿಷ್ಟ ಸಾಮರ್ಥ್ಯಗಳಿಗೆ ಅನುಗುಣವಾಗಿ ಈ ವಲಯದ ಉದ್ದಗಲಕ್ಕೂ ಪ್ರಾದೇಶಿಕ ಕಾರ್ಯ ತಂತ್ರಗಳನ್ನು ಹೆಣೆಯುತ್ತಿವೆ. ಜತೆಗೆ, ಈ ಉಪಕ್ರಮಗಳು ಮತ್ತು ಕಾರ್ಯನೀತಿಯ ಚೌಕಟ್ಟುಗಳು, ಈಶಾನ್ಯ ವಲಯವು ತನ್ನ ಸಾಮರ್ಥ್ಯವನ್ನು ಮೀರಿ ಸಾಗಿದೆ ಎಂಬುದನ್ನು ಸೂಚಿಸುತ್ತಿದ್ದು, ಇದು ವೇಗವಽತ ಆರ್ಥಿಕ ಪ್ರವರ್ಧಮಾನತೆಗಾಗಿ ಸಜ್ಜಾಗಿದೆ.
ಈ ಕಾರ್ಯನೀತಿಗಳು ಹಾಗೂ ಅಳತೆಗೆ ದಕ್ಕುವ ಉಪಕ್ರಮಗಳು, ಪ್ರಧಾನಿ ಮೋದಿಯವರ Act East, Act Fast, and Act First ಎಂಬ ತ್ರಿವಳಿ ಸಿದ್ಧಾಂತದೊಂದಿಗೆ ಹೊಂದಿಕೆಯಾಗುತ್ತವೆ. ಈಶಾನ್ಯ ವಲಯವು ಪ್ರಸ್ತುತ ಆಗ್ನೇಯ ಏಷ್ಯಾಕ್ಕೆ ಪ್ರವೇಶದ್ವಾರವಾಗಿದೆ ಮತ್ತು ನಮ್ಮ ಬೃಹತ್ ‘ಇಂಡೋ-ಪೆಸಿಫಿಕ್ ಕಾರ್ಯತಂತ್ರ’ಕ್ಕೆ ನಿರ್ಣಾಯಕ ಊರುಗೋಲಾಗಿದೆ.
ಕೆಲ ಅಂತಾರಾಷ್ಟ್ರೀಯ ನಗರಗಳಿಗೆ ಅನನ್ಯ ರೀತಿಯಲ್ಲಿ ಭೌಗೋಳಿಕ ಸಾಮೀಪ್ಯವನ್ನು ಹೊಂದಿ ರುವುದರಿಂದಾಗಿ ಈಶಾನ್ಯ ವಲಯವು ಭಾರತದ ಆರ್ಥಿಕ ರಾಜತಾಂತ್ರಿಕತೆ ಮತ್ತು ವ್ಯಾಪಾರ ಚಟುವಟಿಕೆಗಳ ಸಮನ್ವಯತೆಗೆ ಒಂದು ಪ್ರಮುಖ ಕಾರಿಡಾರ್ ಆಗಿ ಪರಿಣಮಿಸಿದೆ. ಕೊಂಚ ಕಾವ್ಯಾ ತ್ಮಕವಾಗಿ ಅಥವಾ ‘ರೂಪಾಲಂಕಾರಿಕವಾಗಿ’ ಹೇಳುವುದಾದರೆ, ಮುಂಬೈನ ಉದ್ಯಮಿಯೊಬ್ಬರು ಚೆನ್ನೈಗೆ ಹೋಗುವುದಕ್ಕಿಂತ ಸಲೀಸಾಗಿ ಗುವಾಹಟಿಯಲ್ಲಿನ ಉದ್ಯಮಿ ಯೊಬ್ಬರು ತಮ್ಮ ಕಚೇರಿಯ ಕಿಟಕಿಯಿಂದಲೇ ಸಿಂಗಾಪುರವನ್ನು ಪ್ರಾಯೋಗಿಕವಾಗಿ ನೋಡಬಲ್ಲರು!
ಗುವಾಹಟಿ ಮತ್ತು ಅಗರ್ತಲಾದಂಥ ನಗರಗಳು ಆಗ್ನೇಯ ಏಷ್ಯಾದ ಕೇಂದ್ರಗಳಿಗೆ ಭಾರತದ ಮಿಕ್ಕ ಮೆಟ್ರೋ ನಗರಗಳಿಗಿಂತ ಹತ್ತಿರವಾಗಿರುವುದರಿಂದ, ‘ಪೂರ್ವ ವಲಯದೆಡೆಗಿನ’ ಆರ್ಥಿಕ ಚಟುವಟಿಕೆಗಳ ಸಮನ್ವಯತೆಯ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ. ವಿಶೇಷೀಕೃತ ‘ವಾಯು ಮಾರ್ಗದ ಸರಕು ಸಾಗಣೆ ಸೌಲಭ್ಯ’ದಂಥ ಉನ್ನತೀಕರಣಗೊಂಡ ಮೂಲಸೌಕರ್ಯದೊಂದಿಗೆ ಈ ವರ್ಧಿತ ಸಂಪರ್ಕಶೀಲತೆಯನ್ನು ಬಲಪಡಿಸಲಾಗುತ್ತಿದೆ ಹಾಗೂ ತನ್ಮೂಲಕ ಈಶಾನ್ಯ ವಲಯಕ್ಕೆ ಅನನ್ಯತೆಯನ್ನು ತಂದುಕೊಟ್ಟಿರುವ ಮೌಲ್ಯವರ್ಧಿತ ಉತ್ಪನ್ನಗಳ ರಫ್ತಿಗೆ ಒತ್ತಾಸೆಯಾಗಿ ನಿಲ್ಲಲಾ ಗುತ್ತಿದೆ.
ಭಾರತ-ಮ್ಯಾನ್ಮಾರ್-ಥಾಯ್ಲೆಂಡ್ ತ್ರಿಪಕ್ಷೀಯ ಹೆದ್ದಾರಿ, ‘ಕಲಾದನ್’ ಬಹು-ಮಾದರಿ ವಾಹನಗಳ ಸಾರಿಗೆ ಯೋಜನೆ ಮತ್ತು ಸಿಟ್ವೆ ಬಂದರಿನ ಕಾರ್ಯಾಚರಣೆಯಂಥ ಉಪಕ್ರಮಗಳು, ಈಶಾನ್ಯದ ರಾಜ್ಯಗಳನ್ನು ಆಗ್ನೇಯ ಏಷ್ಯಾ ಮತ್ತು ಅದರಾಚೆಗಿನ ವಲಯದೊಂದಿಗೆ ಭೌತಿಕವಾಗಿ, ವಾಣಿಜ್ಯಿಕ ವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಪರ್ಕಿಸುವಂತಾಗುವಲ್ಲಿನ ಒಂದು ಸದೃಢ ಕಾರ್ಯತಂತ್ರವಾಗಿ ಪರಿಣಮಿಸಿವೆ.
(ಲೇಖಕರು ಈಶಾನ್ಯ ವಲಯದ ಸಂವಹನ ಮತ್ತು ಅಭಿವೃದ್ಧಿ ಸಚಿವರು)