Sowmya Sanath Column: ಜಗದ್ರಕ್ಷಕ ಜಗನ್ನಾಥನ ಜಗದ್ವಿದಿಖ್ಯಾತ ರಥೋತ್ಸವ
ವಿಗ್ರಹಗಳಿಗೆ ಇನ್ನೂ ಕೈಗಳೇ ರೂಪುಗೊಂಡಿರಲಿಲ್ಲ. ಆದರೂ ಅವನ್ನು ದೇಗುಲದಲ್ಲಿ ಪ್ರತಿಷ್ಠಾಪಿಸು ವಂತೆ ದೈವಿಕ ಧ್ವನಿಯೊಂದು ಇಂದ್ರದ್ಯುಮ್ನನಿಗೆ ಆದೇಶಿಸಿತು. ಅಂತೆಯೇ, ಈ ವಿಗ್ರಹಗಳಿಗೆ ಕೈಗಳಿ ಲ್ಲದಿದ್ದರೂ ಅವು ವಿಶ್ವವನ್ನು ಕಾಪಾಡುತ್ತವೆ ಎಂಬ ಬಲವಾದ ನಂಬಿಕೆ ಭಕ್ತರದ್ದು. ರಥ ಯಾತ್ರೆಯ ಸಡಗರ: ಆಷಾಢ ಮಾಸ ಶುಕ್ಲ ಪಕ್ಷದ ಎರಡನೇ ದಿನ ಬಂತು ಎಂದರೆ ಒಡಿಶಾದಲ್ಲಿ ಇನ್ನಿಲ್ಲದ ಸಂಭ್ರಮ-ಸಡಗರ.


ಜಾತ್ರೆ ಸ್ಪೆಷಲ್
ಸೌಮ್ಯ ಸನತ್
ಶ್ರೀಕೃಷ್ಣ’ ಎಂದಾಕ್ಷಣ ಸಾಮಾನ್ಯವಾಗಿ ನೆನಪಿಗೆ ಬರುವುದು ದ್ವಾರಕೆ ಮತ್ತು ಮಥುರಾ ಕ್ಷೇತ್ರಗಳು. ಇವುಗಳ ಜತೆಗೆ ಮತ್ತೊಂದು ಕ್ಷೇತ್ರವೂ ಶ್ರೀಕೃಷ್ಣನ ಪೌರಾಣಿಕ ಹೆಜ್ಜೆಗುರುತುಗಳಿಗೆ ಸಾಕ್ಷಿಯಾಗಿದೆ. ಅದುವೇ ಒಡಿಶಾದ ಪುರಿ ಕ್ಷೇತ್ರ. ಪರಮಪುರುಷ ‘ಜಗನ್ನಾಥ’ನೇ ನೆಲೆನಿಂತ ಜಾಗವಿದು. ಅಪಾರ ಮಹಿಮೆಗಳು, ಪವಾಡಗಳನ್ನು ಮಡಿಲಲ್ಲಿ ತುಂಬಿಕೊಂಡಿರುವ ಈ ಕ್ಷೇತ್ರದಲ್ಲಿಂದು (ಜೂನ್ 27) ಜಗದ್ವಿಖ್ಯಾತ ‘ಜಗನ್ನಾಥ ರಥಯಾತ್ರೆ’ ನಡೆಯಲಿದೆ.
ತೀರ್ಥಯಾತ್ರೆ ಎಂದಾಕ್ಷಣ ನೆನಪಾಗುವ ‘ಚಾರ್ ಧಾಮ್’ಗಳ ಪಟ್ಟಿಯಲ್ಲಿ ಬದರಿನಾಥ, ದ್ವಾರಕಾ, ರಾಮೇಶ್ವರಗಳ ಜತೆ ಸೇರಿಕೊಂಡಿರುವ ‘ಪುರಿ’ ಕ್ಷೇತ್ರವು ತನ್ನದೇ ಆದ ಮಹತ್ವವನ್ನು ಪಡೆದು ಕೊಂಡಿದೆ. ಇಲ್ಲಿನ ಜಗನ್ನಾಥನ ದಿವ್ಯಸನ್ನಿಧಿಯಲ್ಲಿ ಶತಮಾನಗಳಿಂದ ಅನೇಕ ಪವಾಡಗಳು ನಡೆಯುತ್ತಾ, ವಿಜ್ಞಾನ ಕ್ಷೇತ್ರವೇ ಬೆಕ್ಕಸ ಬೆರಗಾಗುವಂತಾಗಿದೆ.
ಇಲ್ಲಿನ ಅನೇಕ ಮಹಿಮೆಗಳು, ಅಚ್ಚರಿಗಳು ವಿಜ್ಞಾನದ ತಾರ್ಕಿಕತೆಗೂ ನಿಲುಕದ ಸಂಗತಿಗಳಾಗಿವೆ. ಹೀಗಿದೆ ಐತಿಹ್ಯ: ಜಗನ್ನಾಥ ದೇಗುಲದ ಉಗಮಕ್ಕೆ ಸಂಬಂಧಿಸಿ ಅನೇಕ ಐತಿಹ್ಯ ಅಥವಾ ದಂತಕಥೆ ಗಳಿವೆ. ಅವುಗಳಲ್ಲಿ ಒಂದನ್ನು ಅವಲೋಕಿಸೋಣ: ಪುರಿಯ ಸಮುದ್ರ ತೀರದಲ್ಲಿ ಮರದ ತುಂಡೊಂದು ಉಜ್ವಲ ಪ್ರಕಾಶದೊಂದಿಗೆ ತೇಲುತ್ತಿರುವುದನ್ನು ಕಂಡ ನಾರದರು, “ಇದರಿಂದ ಮೂರು ವಿಗ್ರಹಗಳನ್ನು ತಯಾರಿಸಿ ದೇಗುಲದ ಮಂಟಪದಲ್ಲಿ ಪ್ರತಿಷ್ಠಾಪಿಸು" ಎಂದು ಅಲ್ಲಿನ ರಾಜ ಇಂದ್ರದ್ಯುಮ್ನನಿಗೆ ಸೂಚಿಸಿದರಂತೆ.
ಇದನ್ನೂ ಓದಿ: Dr Karaveeraprabhu Kyalakonada Column: ಮಾದಕವಸ್ತು ಬಳಕೆ: ಸಮಾಜಕ್ಕೆ ಶಾಪ
ಅಂತೆಯೇ ವಿಗ್ರಹಗಳ ಪ್ರತಿಷ್ಠಾಪನೆಗೆಂದು ಭವ್ಯ ದೇಗುಲವನ್ನು ನಿರ್ಮಿಸಲು ದೇವತೆಗಳ ವಾಸ್ತು ಶಿಲ್ಪಿ ವಿಶ್ವಕರ್ಮನನ್ನು ಇಂದ್ರದ್ಯುಮ್ನ ಕರೆಸಿದ. ಸ್ವತಃ ‘ಬಡಗಿ-ಶಿಲ್ಪಿ’ಯ ವೇಷದಲ್ಲಿ ಬಂದು ವಿಗ್ರಹಗಳನ್ನು ತಯಾರಿಸಲು ಒಪ್ಪಿದ ವಿಷ್ಣುವು, “ಮೂರ್ತಿಗಳನ್ನು ರೂಪಿಸುವ ನನ್ನ ಕೆಲಸ ಮುಗಿಯುವವರೆಗೂ ಯಾರೂ ದೇಗುಲವನ್ನು ಪ್ರವೇಶಿಸಬಾರದು, ಕೆಲಸಕ್ಕೆ ಭಂಗ ತರಬಾರದು" ಎಂದು ಷರತ್ತು ವಿಧಿಸಿದನಂತೆ.
ಆದರೆ 2 ವಾರಗಳಾದರೂ ದೇಗುಲದಿಂದ ಶಿಲ್ಪದ ಕೆತ್ತನೆಯ ಯಾವುದೇ ಶಬ್ದ ಬಾರದ ಕಾರಣ ಆತಂಕಕ್ಕೊಳಗಾದ ರಾಣಿಯು, ಶಿಲ್ಪಿ ಸತ್ತಿದ್ದಾನೆ ಎಂದು ಭಾವಿಸಿ, ದೇಗುಲದ ಬಾಗಿಲು ತೆರೆಸುವಂತೆ ರಾಜನನ್ನು ವಿನಂತಿಸಿದಳು. ಹೀಗಾಗಿ, ಶಿಲ್ಪಿಯು ಕೆಲಸದಲ್ಲಿ ತೊಡಗಿರುವನೋ ಇಲ್ಲವೋ ಅಥವಾ ಏನಾದನೋ ಎಂದು ನೋಡಲು ರಾಜ ಪರಿವಾರದವರು ದೇಗುಲವನ್ನು ಪ್ರವೇಶಿಸಿದಾಗ, ಮಾತಿಗೆ ತಪ್ಪಿ ಒಳಗೆ ಬಂದುದಕ್ಕೆ ಶಿಲ್ಪಿಯು (ವಿಷ್ಣುವು) ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ಅಲ್ಲಿಂದ ನಿರ್ಗಮಿಸಿದ.
ವಿಗ್ರಹಗಳಿಗೆ ಇನ್ನೂ ಕೈಗಳೇ ರೂಪುಗೊಂಡಿರಲಿಲ್ಲ. ಆದರೂ ಅವನ್ನು ದೇಗುಲದಲ್ಲಿ ಪ್ರತಿಷ್ಠಾಪಿಸು ವಂತೆ ದೈವಿಕ ಧ್ವನಿಯೊಂದು ಇಂದ್ರದ್ಯುಮ್ನನಿಗೆ ಆದೇಶಿಸಿತು. ಅಂತೆಯೇ, ಈ ವಿಗ್ರಹಗಳಿಗೆ ಕೈಗಳಿ ಲ್ಲದಿದ್ದರೂ ಅವು ವಿಶ್ವವನ್ನು ಕಾಪಾಡುತ್ತವೆ ಎಂಬ ಬಲವಾದ ನಂಬಿಕೆ ಭಕ್ತರದ್ದು. ರಥ ಯಾತ್ರೆಯ ಸಡಗರ: ಆಷಾಢ ಮಾಸ ಶುಕ್ಲ ಪಕ್ಷದ ಎರಡನೇ ದಿನ ಬಂತು ಎಂದರೆ ಒಡಿಶಾದಲ್ಲಿ ಇನ್ನಿಲ್ಲದ ಸಂಭ್ರಮ-ಸಡಗರ. ಕಾರಣ, ಅದು ಜಗದ್ವಿಖ್ಯಾತ ಜಗನ್ನಾಥ ರಥಯಾತ್ರೆ ಆರಂಭವಾಗುವ ದಿನ.

ಅಂದು ಜಗನ್ನಾಥನು ತನಗಾಗಿ ವಿಶೇಷವಾಗಿ ತಯಾರಾದ ಮರದ ರಥದಲ್ಲಿ ಸಕಲ ವೈಭವ ಗಳೊಂದಿಗೆ ಆಸೀನನಾಗಿ, ತನ್ನ ಚಿಕ್ಕಮ್ಮ ‘ಗುಂಡಿಚಾ’ ಮನೆಗೆ ತೆರಳುತ್ತಾನೆ ಎಂಬ ನಂಬಿಕೆಯಿದೆ. ಈ ರಥಯಾತ್ರೆಯಲ್ಲಿ ಸಾಕ್ಷಾತ್ ಶ್ರೀಕೃಷ್ಣನು ಜಗನ್ನಾಥನಾಗಿ, ಸೋದರ ಬಲಭದ್ರ ಮತ್ತು ಸೋದರಿ ಸುಭದ್ರೆಯ ಜತೆಗೆ ನಗರಸಂಚಾರಕ್ಕೆ ಬರುತ್ತಾನೆ ಎಂಬ ಪ್ರತೀತಿಯಿದ್ದು, ಇದನ್ನು ಕಣ್ತುಂಬಿಸಿ ಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಪುರಿಗೆ ಆಗಮಿಸುತ್ತಾರೆ.
ಜಗನ್ನಾಥ- ಬಲಭದ್ರ-ಸುಭದ್ರೆಯರ ಮೂರ್ತಿಗಳನ್ನು ಬೃಹತ್ ರಥಗಳಲ್ಲಿ ಕುಳ್ಳಿರಿಸಿ, ‘ಗುಂಡಿಚಾ’ ದೇವಿಯ ದೇಗುಲಕ್ಕೆ ಜಯಘೋಷಗಳೊಂದಿಗೆ ಕರೆದೊಯ್ಯುವುದು ಇಲ್ಲಿನ ಸಂಪ್ರದಾಯವಾಗಿದೆ. ದೇಗುಲದ ರಥಗಳಿಗೆ 4 ಚಕ್ರಗಳಿರುವುದು ವಾಡಿಕೆ, ಆದರೆ ಪುರಿ ದೇಗುಲದಲ್ಲಿ ಇದಕ್ಕೊಂದು ವೈಶಿಷ್ಟ್ಯವಿದೆ.
16 ಚಕ್ರಗಳನ್ನು ಹೊಂದಿರುವ ಜಗನ್ನಾಥನ ರಥಕ್ಕೆ ‘ನಂದಿಘೋಷ’ ಎಂದೂ, 14 ಚಕ್ರಗಳಿರುವ ಬಲ ಭದ್ರನ ರಥಕ್ಕೆ ‘ತಳಧ್ವಜ’ ಎಂದೂ, 12 ಚಕ್ರಗಳಿರುವ ಸುಭದ್ರೆಯ ರಥಕ್ಕೆ ‘ದೇವದಲನ’ ಎಂದೂ ಕರೆಯಲಾಗುತ್ತದೆ. ಮಿಡಿಯುವ ಹೃದಯ: ಶ್ರೀಕೃಷ್ಣನ ದೇಗುಲಗಳಲ್ಲಿ ಕೃಷ್ಣ-ರುಕ್ಮಿಣಿ, ಕೃಷ್ಣ-ರಾಧೆ ವಿಗ್ರಹಗಳು ಪೂಜಿಸಲ್ಪಡುವುದು ವಾಡಿಕೆ; ಆದರೆ ಈ ದೇಗುಲದಲ್ಲಿ ಮಾತ್ರ ‘ಕೃಷ್ಣ-ಬಲಭದ್ರ-ಸುಭದ್ರೆ’ ಯರ ವಿಗ್ರಹಗಳನ್ನು ಪೂಜಿಸಲಾಗುತ್ತದೆ ಎಂಬುದು ವಿಶೇಷ.
ಜತೆಗೆ ಕಲ್ಲಿನಲ್ಲಿ ಅಥವಾ ಲೋಹದಲ್ಲಿ ಕಡೆದ ವಿಗ್ರಹಗಳ ಬದಲಿಗೆ ಮರದಲ್ಲಿ ಕೆತ್ತಿದ ವಿಗ್ರಹಗಳು ಇಲ್ಲಿ ಪೂಜಿಸಲ್ಪಡುತ್ತವೆ. ಈ ಮೂರ್ತಿಗಳನ್ನು 12 ವರ್ಷಗಳಿಗೊಮ್ಮೆ ಶಾಸ್ತ್ರೋಕ್ತವಾಗಿ ದಲಿಸು ವುದು ಇಲ್ಲಿ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಪ್ರಕ್ರಿಯೆ ಯನ್ನು ಬಹಳ ರಹಸ್ಯವಾಗಿ ಕೈಗೊಳ್ಳಲಾಗುತ್ತದೆ. ಮೊದಲಿಗೆ ಹೊಸ ಬೇವಿನ ಮರದಿಂದ ಮೂರ್ತಿ ಗಳನ್ನು ಮಾಡಿಸಿ, ಅವನ್ನು ತಂದು ಪ್ರತಿಷ್ಠಾಪಿಸಲಾಗುತ್ತದೆ. ಈ ಕೈಂಕರ್ಯವನ್ನು ‘ನವಕಲೇವರ ಹಬ್ಬ’ ಎನ್ನುತ್ತಾರೆ.
ಈ ಹೊಸ ಮೂರ್ತಿಗಳ ಪ್ರತಿಷ್ಠಾಪನೆಯ ವೇಳೆ ಅರ್ಚಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಹಳೆಯ ಮೂರ್ತಿಯಿಂದ ಒಂದು ‘ವಿಶೇಷ ವಸ್ತು’ವನ್ನು ತೆಗೆದು ಹೊಸಮೂರ್ತಿಯೊಳಗೆ ಇರಿಸುತ್ತಾರೆ. ‘ಬ್ರಹ್ಮಂ ಪದಾರ್ಥ’ ಎಂದು ಕರೆಯಲ್ಪಡುವ ಈ ವಿಶೇಷ ವಸ್ತುವೇ ಶ್ರೀಕೃಷ್ಣನ ಹೃದಯವೆಂಬ ನಂಬಿಕೆಯಿದೆ. ಅದನ್ನು ಕೈಯಲ್ಲಿ ಹಿಡಿದಾಗ ‘ಜೀವಂತಿಕೆ’ಯ ಅನುಭವವಾಗುತ್ತದೆ ಎನ್ನುತ್ತಾರೆ ಅಲ್ಲಿನ ಅರ್ಚಕರು!
ಇವ ‘ಪುರಾಣ ಪುರುಷೋತ್ತಮ’: ಹಿಂದಿನ ಕಾಲದಲ್ಲಿ ಜಗನ್ನಾಥನ ರಥವನ್ನು ಎಳೆಯುವ ಮುನ್ನ ಮಹಾರಾಜರು ಆ ಪ್ರದೇಶವನ್ನು ಚಿನ್ನದ ಪೊರಕೆಯಿಂದ ಗುಡಿಸುತ್ತಿದ್ದರಂತೆ; ಅವರ ಮನೆತನ ದವರು ಈಗಲೂ ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬ್ರಹ್ಮಪುರಾಣ, ಪದ್ಮಪುರಾಣ, ಸ್ಕಂದ ಪುರಾಣಗಳಲ್ಲಿ ಈ ರಥೋತ್ಸವದ ಉಲ್ಲೇಖವಿದೆ. ಕಪಿಲಸಂಹಿತೆ, ಮಹಾ ಭಾರತ (ಬಾಣಪರ್ವ) ಮತ್ತು ಶ್ರೀಮದ್ ಭಗವದ್ಗೀತೆಯಲ್ಲೂ ಜಗನ್ನಾಥನ ಹೆಸರನ್ನು ಉಲ್ಲೇಖಿಸ ಲಾಗಿದೆ.
ಸಾಧಾರಣವಾಗಿ ಮಿಕ್ಕ ದೈವಸನ್ನಿಧಿಗಳಲ್ಲಿ ಬ್ರಹ್ಮರಥೋತ್ಸವವು ಒಂದು ಅಥವಾ ಮೂರು ದಿನಗಳ ಕಾಲ ನಡೆದರೆ, ಇಲ್ಲಿ ಮಾತ್ರ ನಿರಂತರ 9 ದಿನಗಳವರೆಗೆ ಅತ್ಯಂತ ಸಂಭ್ರಮ-ಸಡಗರಗಳಿಂದ ನಡೆಯುತ್ತದೆ. ಈ ಮೂರೂ ರಥಗಳನ್ನು ಲಕ್ಷಾಂತರ ಜನರು ಎಳೆಯುತ್ತಾ, ಡಮರು-ನಗಾರಿ-ಶಂಖಗಳ ನಾದವನ್ನು ಮೊಳಗಿಸುತ್ತಾ ಸಂಭ್ರಮಿಸುವುದು ನೋಡುಗರ ಕಣ್ಣಿಗೆ ಹಬ್ಬ.
ವಿಭಿನ್ನ ವಾಸ್ತುಶಿಲ್ಪ: ಶ್ರೀ ಜಗನ್ನಾಥ ದೇಗುಲವು ಪುರಿಯ ರೈಲುನಿಲ್ದಾಣದಿಂದ ಸುಮಾರು 2.8 ಕಿ.ಮೀ., ಬಸ್ ನಿಲ್ದಾಣದಿಂದ 1.9 ಕಿ.ಮೀ. ದೂರದಲ್ಲಿದ್ದು, ದೇಗುಲಕ್ಕೆ ತೆರಳಲು ಖಾಸಗಿ ಟ್ಯಾಕ್ಸಿ, ಆಟೋರಿಕ್ಷಾ ಮತ್ತು ಸೈಕಲ್ ರಿಕ್ಷಾಗಳು ಸುಲಭವಾಗಿ ದೊರೆಯುತ್ತವೆ. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಗುಲಕ್ಕೆ ಸನಿಹ ಇರುವ ವಿಮಾನ ನಿಲ್ದಾಣ. ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಜಗನ್ನಾಥನ ದರ್ಶನವನ್ನು ಪಡೆಯಬಹುದು.
ಕಳಿಂಗ ವಾಸ್ತುಶಿಲ್ಪ ಶೈಲಿಯಲ್ಲಿ ರೂಪುಗೊಂಡಿರುವ ಈ ದೇಗುಲವು ‘ವಿಮಾನ’, ‘ಜಗಮೋಹನ’, ‘ನಟ ಮಂಟಪ’ ಮತ್ತು ‘ಭೋಗ ಮಂಟಪ’ ಎಂಬ 4 ಭಾಗಗಳನ್ನು ಹೊಂದಿದೆ. ದೇಗುಲದ ಒಳಾವರಣದಲ್ಲಿ 76 ಸಣ್ಣ ದೇಗುಲಗಳಿದ್ದು, ಶ್ರೀ ಸತ್ಯನಾರಾಯಣ, ಶ್ರೀ ನೃಸಿಂಹ, ಶ್ರೀ ಭುವನೇಶ್ವರಿ, ಶ್ರೀ ನೃತ್ಯ ಗಣಪತಿ ಮುಂತಾದ ದೇವರುಗಳನ್ನು ಅಲ್ಲಿ ಪ್ರತಿಷ್ಠಾಪಿಸಲಾಗಿದೆ.
ವಿಸ್ಮಯಗಳ ಆಗರ
ಜಗನ್ನಾಥ ದೇಗುಲದ ಗೋಪುರದ ಮೇಲಿರುವ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ, ಅಂದರೆ ದೇಗುಲದ ಹಿಂಭಾಗಕ್ಕೆ ಹಾರಾಡುತ್ತದೆ. ಅರ್ಚಕರು ಈ ಧ್ವಜವನ್ನು ದಿನನಿತ್ಯವೂ ಬದಲಿ ಸುತ್ತಿರುತ್ತಾರೆ. ಆದರೂ ಈ ಧ್ವಜ ಎಂದಿಗೂ ತನ್ನ ಹಾರಾಟದ ದಿಕ್ಕನ್ನು ಬದಲಿಸಿದ್ದಿಲ್ಲ.
ದೇಗುಲದ ಗೋಪುರದ ಮೇಲೆ ಸುಮಾರು 20 ಅಡಿ ಎತ್ತರದಲ್ಲಿ ಒಂದು ದಿವ್ಯವಾದ ಸುದರ್ಶನ ಚಕ್ರವಿದ್ದು, ಇದನ್ನು ಕೆಳಗಿನಿಂದ ನೋಡಿದಾಗ, ಎಲ್ಲ ದಿಕ್ಕುಗಳಿಂದಲೂ ಒಂದೇ ರೀತಿ ಕಾಣುತ್ತದೆ. ಅತ್ಯಂತ ಭಾರವಿರುವ ಈ ಚಕ್ರವನ್ನು ಗೋಪುರದ ಮೇಲೆ ಸ್ಥಾಪಿಸಿದ್ದಾದರೂ ಹೇಗೆ ಎಂಬುದು ಈಗಲೂ ಒಂದು ವಿಸ್ಮಯವಾಗಿಯೇ ಉಳಿದಿದೆ, ಏಕೆಂದರೆ ಈ ಚಕ್ರವನ್ನು 2000 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ ಉಲ್ಲೇಖವಿದೆ.
ಈ ದೇಗುಲವಿರುವ ವಾಯುಪ್ರದೇಶದಲ್ಲಿ ಯಾವ ಪಕ್ಷಿಯಾಗಲೀ ವಿಮಾನವಾಗಲೀ ಹಾರಾ ಡುವುದಿಲ್ಲ; ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ವಿವರಣೆಯನ್ನು ಇದುವರೆಗೂ ನೀಡಲಾಗಿಲ್ಲ ಎಂಬುದು ಮತ್ತೊಂದು ಬೆರಗಿನ ಸಂಗತಿ. ಈ ದೇಗುಲದ ಗೋಪುರದ ನೆರಳು ಎಂದಿಗೂ ನಮಗೆ ಕಾಣಿಸುವುದಿಲ್ಲ, ಇದು ಆಶ್ಚರ್ಯವಾದರೂ ಸತ್ಯ.
ದೇಗುಲದ ಅಡುಗೆ ಮನೆಯಲ್ಲಿರುವ 250 ಒಲೆಗಳಲ್ಲಿ ಪ್ರತಿದಿನ ಸುಮಾರು 20000 ಜನರಿಗೆ 56 ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಒಂದು ತುತ್ತು ಕೂಡ ವ್ಯರ್ಥವಾಗುವು ದಿಲ್ಲ. ಇಲ್ಲಿ ಮಣ್ಣಿನ ಮಡಕೆಗಳನ್ನು ಒಂದರ ಮೇಲೆ ಒಂದರಂತೆ ಇಟ್ಟು ಬೇಯಿಸಲಾಗುತ್ತದೆ, ಆದರೆ ಮೇಲಿನ ಮಡಕೆಯಲ್ಲಿ ಮೊದಲಿಗೆ ಪ್ರಸಾದ ತಯಾರಾಗುತ್ತದೆ ಎಂಬುದು ಅಚ್ಚರಿದಾಯಕ ಸಂಗತಿ.
(ಲೇಖಕಿ ಹವ್ಯಾಸಿ ಬರಹಗಾರ್ತಿ)