Rangaswamy Mookanahalli Column: ಕಾಲದ ಲೆಕ್ಕಾಚಾರ ತಪ್ಪಿದ್ದೆಲ್ಲಿ..?
‘ಸರಳ ಬದುಕು, ಸುಂದರ ಬದುಕು’ ಎಂಬುದು ಬದುಕಿನ ಸಾಮಾನ್ಯ ಸೂತ್ರವೆಂಬುದನ್ನು ಮರೆತು ನಮ್ಮ ಗ್ರಹವನ್ನ ನಾವೇ ಕುಲಗೆಡಿಸಿದ್ದೇವೆ. ಅದನ್ನು ಸಾಧ್ಯವಾ ದಷ್ಟು ಪುನಃ ಕಟ್ಟುವ ಹೊಣೆ ನಮ್ಮ ಮೇಲಿದೆ. ಅದರಲ್ಲೂ ವ್ಯಾಪಾರಿ ಬುದ್ಧಿ ತೋರುವುದನ್ನು, ಹಣ ಮಾಡಬೇಕು ಎಂಬ ಹಪಹಪಿಯನ್ನು ಬಿಟ್ಟು ಒಮ್ಮನಸ್ಸಿನಿಂದ ಈ ಕಾರ್ಯ ಮಾಡಬೇಕಿದೆ.

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ

‘ಸರಳ ಬದುಕು, ಸುಂದರ ಬದುಕು’ ಎಂಬುದು ಬದುಕಿನ ಸಾಮಾನ್ಯ ಸೂತ್ರವೆಂಬು ದನ್ನು ಮರೆತು ನಮ್ಮ ಗ್ರಹವನ್ನ ನಾವೇ ಕುಲಗೆಡಿಸಿದ್ದೇವೆ. ಅದನ್ನು ಸಾಧ್ಯವಾ ದಷ್ಟು ಪುನಃ ಕಟ್ಟುವ ಹೊಣೆ ನಮ್ಮ ಮೇಲಿದೆ. ಅದರಲ್ಲೂ ವ್ಯಾಪಾರಿ ಬುದ್ಧಿ ತೋರುವುದನ್ನು, ಹಣ ಮಾಡಬೇಕು ಎಂಬ ಹಪಹಪಿಯನ್ನು ಬಿಟ್ಟು ಒಮ್ಮನಸ್ಸಿ ನಿಂದ ಈ ಕಾರ್ಯ ಮಾಡಬೇಕಿದೆ. ವಾತಾವರಣ ಬದಲಾವಣೆ ಅಥವಾ ಕ್ಲೈಮೇಟ್ ಚೇಂಜ್ ಎನ್ನುವುದೆಲ್ಲಾ ಬೊಗಳೆ; ಇದು ವಾತಾವರಣ ವಿಜ್ಞಾನಿಗಳು ಸೃಷ್ಟಿಸಿರುವ ಕಲ್ಪಿತ ಭಯ. ಇದೊಂದು ಡ್ರಾಮಾ, ಸುಳ್ಳಾಟ ಎನ್ನುವುದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ನಿಲುವು. ಪ್ಯಾರಿಸ್ ಒಪ್ಪಂದದಿಂದ 2016 ರಲ್ಲಿ ಅಮೆರಿಕ ಹೊರಬಂದಿದ್ದು ಟ್ರಂಪ್ ಅವರ ಈ ನಿಲುವುಗಳಿಂದ. ಬೈಡೆನ್ ಆಡಳಿತ ದಲ್ಲಿ ಮತ್ತೆ ಪ್ಯಾರಿಸ್ ಒಪ್ಪಂದವನ್ನು ಒಪ್ಪಿಕೊಳ್ಳ ಲಾಗಿತ್ತು. ಇದೀಗ ಟ್ರಂಪ್ ಮತ್ತೊಮ್ಮೆ ಈ ಒಪ್ಪಂದದಿಂದ ಹೊರಬರುವುದಾಗಿ ಧಮಕಿ ಹಾಕಿದ್ದಾರೆ. ಈ ಮಧ್ಯೆ ನಮ್ಮ ಕರ್ನಾಟಕ ದಲ್ಲಿ ಫೆಬ್ರವರಿಯಲ್ಲೇ ಇನ್ನಿಲ್ಲದ ಸೆಖೆ ಶುರು ವಾಗಿದೆ. ಹೀಗಾಗಿ ಏಪ್ರಿಲ್ ವೇಳೆಗೆ ಮಳೆ ಬರುತ್ತದೆ ಎನ್ನಲಾಗುತ್ತಿದೆ.
ವಾತಾವರಣ ಬದಲಾವಣೆ ಆಗಿರುವುದಂತೂ ಸತ್ಯ. ಪ್ರತಿವರ್ಷ ಜೂನ್ ತಿಂಗಳ 5ನೇ ದಿನ ವನ್ನ ವಿಶ್ವ ಪರಿಸರ ದಿನವೆಂದು ಆಚರಿಸಲಾಗುತ್ತದೆ. ಆ ದಿನ ಸಾಮಾಜಿಕ ಜಾಲತಾಣದಲ್ಲಿ ಅಬ್ಬರ!
ಹೌದು, ‘ನೀರು ಉಳಿಸಿ, ಗಿಡ ಬೆಳೆಸಿ’ ಎನ್ನುವುದು, ಅರಣ್ಯನಾಶದ ಬಗ್ಗೆ ವಿಷಾದ ವ್ಯಕ್ತ ಪಡಿಸುವುದು, ಹೀಗೆ ಒಂದಲ್ಲ ಹಲವು ರೀತಿಯ ಸಂದೇಶಗಳನ್ನು ತಮ್ಮ ಗೋಡೆಯ ಮೇಲೆ ಹಂಚಿಕೊಂಡು ಪ್ರತಿಯೊಬ್ಬರೂ ಆ ದಿನದ ಮಟ್ಟಿಗೆ ಪುಟ್ಟ ಪರಿಸರವಾದಿಯಾಗಿ ಪರಿವರ್ತ ನೆಗೊಂಡಿರುತ್ತಾರೆ. ಇದೊಂದು ಸಮೂಹಸನ್ನಿ!
ಇಂಥ ಸಮೂಹಸನ್ನಿ ರಸ್ತೆಗಿಳಿದು ಕೆಲಸ ಮಾಡುವ ಮಟ್ಟಕ್ಕೆ ಬೆಳೆದುಬಿಟ್ಟರೆ ಸಾಕು! ಅಲ್ಲಿಗೆ ನಾವು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪ್ಲಾನೆಟ್ ಅನ್ನು ಬಿಟ್ಟುಹೋಗ ಬಹುದು. ಇಷ್ಟೆಲ್ಲಾ ಪೀಠಿಕೆ ಹಾಕಿದ್ದರ ಉದ್ದೇಶ ಬಹಳ ಸರಳ. ಗಮನಿಸಿ ನೋಡಿ- ಜಗತ್ತಿ ನಲ್ಲಿ ಅತಿಸಣ್ಣ ಅಥವಾ ಅತಿದೊಡ್ಡದೆನ್ನುವ ಯಾವುದೇ ಘಟನೆ ಘಟಿಸಲಿ, ಅದರ ಹಿಂದೆ ‘ಹಣ’ ಎನ್ನುವುದು ಇದ್ದೇ ಇರುತ್ತದೆ. ಬದುಕಿಗೆ ಉಸಿರು ಹೇಗೋ, ಹಾಗೆ ಜಗತ್ತಿಗೆ ‘ಹಣ’ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂಥ ಅವಶ್ಯಕ ಹಣವನ್ನ ಗಳಿಸಲು ಮನುಷ್ಯ ಯಾವ ಹಂತಕ್ಕೂ ಹೋಗಬಲ್ಲ ಎನ್ನುವು ದಕ್ಕೆ ಉದಾಹರಣೆಯಾಗಿ, ಆನೆಗಳನ್ನು ಕೊಂದು ಅವುಗಳ ದಂತವನ್ನ, ಕಾಡನ್ನು ಕಡಿದು ಮರವನ್ನ ಮಾರಿಕೊಂಡ ಒಬ್ಬ ವೀರಪ್ಪನ್ ಹೆಸರು ನೆನಪಿಗೆ ಬರುತ್ತದೆ. ಇಂಥ ವೀರಪ್ಪನ್ ವ್ಯವಸ್ಥೆಯ ಅತ್ಯಂತ ಚಿಕ್ಕ ಕೊಂಡಿ. ಅಮೆರಿಕ, ಯುರೋಪ್, ಚೀನಾ ದೇಶಗಳು ವಿಶ್ವದ ದೊಡ್ಡಣ್ಣನಾಗುವ ಜಟಾಪಟಿಯಲ್ಲಿ ಯಾವುದನ್ನೂ ಲೆಕ್ಕಿಸದೆ, ತಾವು ಕುಳಿತ ರೆಂಬೆ ಯನ್ನೇ ಕತ್ತರಿಸುವ ಹುಂಬತನಕ್ಕೆ ಬಿದ್ದಿವೆ.
ಈಗಾಗಲೇ ನಮ್ಮ ಭೂಮಿಗೆ ನಾವು ಹೊಡೆದಿರುವ ಮೊಳೆಗಳ ಲೆಕ್ಕ ಇಡುವವರಾರು? ಹಾಗೆಂದು ಪ್ರಕೃತಿ ಸುಮ್ಮನೆ ಬಿಡುವುದಿಲ್ಲ. ನಾವು ಮಾಡಿದ ತಪ್ಪುಗಳಿಗೆ ಅಂದು ದಂಡ ವನ್ನು ವಿಧಿಸುವುದು ಖಂಡಿತ. ಕ್ಲೈಮೇಟ್ ಚೇಂಜ್ ಅಥವಾ ವಾತಾವರಣ ಬದಲಾವಣೆ ಎನ್ನುವ ಮಾತು ಕಳೆದ ಒಂದು ದಶಕದಿಂದ ಹೆಚ್ಚಾಗಿ ಚಾಲ್ತಿಗೆ ಬಂದಿರುವಂಥದ್ದು. ನಮ್ಮ ಲ್ಲಿರುವ ನೈಸರ್ಗಿಕ ಸಂಪತ್ತನ್ನು ಹಿತಮಿತವಾಗಿ ಬಳಸುತ್ತಾ ಬಂದಿದ್ದರೆ ಎಲ್ಲರಿಗೂ ಒಳ್ಳೆಯ ದಿತ್ತು.
ಅಮೆರಿಕ ಎನ್ನುವ ದೇಶ ಕೈಗಾರಿಕಾ ಕ್ರಾಂತಿಗೆ ಮುಂದಾಯಿತು. ಈ ಕ್ರಾಂತಿಯ ಮೂಲಕ ಅದು ಸೃಷ್ಟಿಮಾಡಿದ ಸಂಪತ್ತು, ಅದರಿಂದಾಗಿ ಅಲ್ಲಿನ ಜನಜೀವನದಲ್ಲಾದ ಬದಲಾವಣೆ, ಜಗತ್ತಿನ ಇತರ ರಾಷ್ಟ್ರಗಳ ಕಣ್ಣನ್ನು ಕುಕ್ಕಿತು. ಉಳಿದದ್ದು ಇತಿಹಾಸ. ಒಬ್ಬರ ಹಿಂದೆ ಒಬ್ಬರು ಹಠಕ್ಕೆ ಬಿದ್ದವರಂತೆ ತಂತಮ್ಮ ದೇಶದ ನೈಸರ್ಗಿಕ ಸಂಪನ್ಮೂಲವನ್ನು ಲೂಟಿ ಹೊಡೆದರು.
ಅದು ಸಾಲದು ಎನಿಸಿದಾಗ, ಇತರ ಬಡದೇಶಗಳಿಂದ ಅದನ್ನು ಆಮದು ಮಾಡಿಕೊಂಡು ಸಿದ್ಧವಸ್ತುವನ್ನಾಗಿ ಮಾರ್ಪಡಿಸಿ, ಮತ್ತೆ ಅದನ್ನ ಅದೇ ಬಡದೇಶಕ್ಕೆ ಹೆಚ್ಚಿನ ಬೆಲೆಗೆ ರ-ಮಾಡಲು ಶುರುಮಾಡಿದರು. ಇದೊಂದು ವಿಷವರ್ತುಲ. ಒಮ್ಮೆ ಇಂಥ ಚಕ್ರದಲ್ಲಿ ಸಿಕ್ಕರೆ ಅಲ್ಲಿಗೆ ಮುಗಿಯಿತು.
ಹೀಗೆ ಪ್ರಕೃತಿಗೆ ಆಗಿರುವ ಹಾನಿಯ ಮೊತ್ತ ಇಷ್ಟು ಎಂದು ಸಂಖ್ಯೆಯಲ್ಲಿ ಹೇಳಿದರೆ ಅದೊಂದು ಅಂದಾಜು ಸಂಖ್ಯೆಯೇ ಹೊರತು, ನಿಜವಾಗಿ ಆದ ಹಾನಿಯನ್ನು ವರ್ಣಿಸಲು ಕೂಡ ಸಾಧ್ಯವಿಲ್ಲ. 20-30 ವಯಸ್ಸಿನ ಜನರು ಹೃದಯಾಘಾತ, ಕ್ಯಾನ್ಸರ್ನಂಥ ಮಾರಕ ರೋಗದಿಂದ ಸಾಯುತ್ತಿರುವುದನ್ನು ನಾವು ಒಪ್ಪಿಕೊಂಡಿದ್ದೆವು. ಈಗ ನಾವು ಇನ್ನೊಂದು ಹಂತಕ್ಕೆ ಬಡ್ತಿ ಪಡೆದಿದ್ದೇವೆ. ಇತ್ತೀಚಿನ ದಿನಗಳಲ್ಲಿ 8-10 ವಯೋಮಾನದ ಮಕ್ಕಳು ಕೂಡ ಹೃದಯಾಘಾತಕ್ಕೆ ತುತ್ತಾಗಿ ಜೀವಬಿಡುತ್ತಿರುವುದು ಸುದ್ದಿಯಾಗುತ್ತಿದೆ.
ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹುಡುಗನೊಬ್ಬ ಫೆಬ್ರವರಿ 22ರಂದು ಹೃದಯಾಘಾತದಿಂದ ಸತ್ತಿದ್ದಾನೆ ಎಂಬುದು ಸುದ್ದಿಯಾಗಿದೆ. ಮಾನಸಿಕ ಖಿನ್ನತೆ ಮತ್ತು ಒತ್ತಡದ ಬಳುವಳಿಯದು.
ವಾತಾವರಣ ಬದಲಾವಣೆಯಿಂದ ಆಗುವ ತೊಂದರೆಗಳನ್ನು ಪಟ್ಟಿಮಾಡುತ್ತಾ ಹೋದರೆ ಅದೊಂದು ವಿಜ್ಞಾನಬರಹವಾಗುತ್ತದೆ. ಇಲ್ಲಿನ ಉದ್ದೇಶವು ವಾತಾವರಣ ಬದಲಾವಣೆಗೆ ಜಗತ್ತಿನ ದೊಡ್ಡ ಮತ್ತು ಅತಿದೊಡ್ಡ ಸಂಸ್ಥೆಗಳು ಏನು ಮಾಡುತ್ತಿವೆ? ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಸೀಮಿತವಾಗಿದೆ. 2018ರಲ್ಲಿ ಜಗತ್ತಿನ 7000 ಸಂಸ್ಥೆಗಳು ‘ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಬಹಿರಂಗಪಡಿಸುವ’ (ಅಂದರೆ, ‘ಕಾರ್ಬನ್ ಡಿಸ್ ಕ್ಲೋಷರ್’ ಮಾಡುವ) ಒಂದು ಸಮೀಕ್ಷೆಯಲ್ಲಿ ಪಾಲ್ಗೊಂಡು ವಿವರಗಳನ್ನ ಹಂಚಿಕೊಂಡಿ ವೆ. ಇನ್ನೂ ಸಾವಿರಾರು ಸಂಸ್ಥೆಗಳು ಈ ಸಮಸ್ಯೆಯನ್ನ ಇನ್ನೂ ಅಷ್ಟೊಂದು ತೀವ್ರವಾಗಿ ತೆಗೆದುಕೊಂಡಿಲ್ಲ.
ಇಂಥ ಒಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ 80 ಪ್ರತಿಶತ ಸಂಸ್ಥೆಗಳು, ‘ಇದೊಂದು ಜಾಗತಿಕ ಸಮಸ್ಯೆ, ಇದಕ್ಕೆ ಅತ್ಯಂತ ಬೇಗ ಪರಿಹಾರ ಕಂಡುಕೊಳ್ಳಬೇಕಿದೆ’ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಹೀಗೆ ಹದಗೆಡುತ್ತಿರುವ ವಾತಾವರಣವನ್ನು ಒಂದು ಹಂತಕ್ಕೆ ತರಲು ಆಗುವ ಖರ್ಚು ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎನ್ನುವ ಅಂದಾಜು-ಖರ್ಚಿನ ಲೆಕ್ಕವನ್ನು ಮುಂದಿಟ್ಟಿವೆ.
ಇದೆಷ್ಟು ದೊಡ್ಡ ಹಣ ಎನ್ನುವುದಕ್ಕೆ ಒಂದರ ಮುಂದೆ ಹನ್ನೆರಡು ಸೊನ್ನೆ ಹಾಕಿ ನೀವೇ ಲೆಕ್ಕಹಾಕಿ! ಜಗತ್ತು, ತಂತ್ರಜ್ಞಾನ ಎಷ್ಟೆಲ್ಲಾ ಮುಂದುವರಿದಿದೆ ಎಂದು ಉಬ್ಬುವ ನಾವು, ಬದುಕಿನ ಸಾಮಾನ್ಯ ತತ್ವವನ್ನು ಮರೆತದ್ದು ಇದಕ್ಕೆ ಕಾರಣ. ಇದು ಹೇಗಾಯಿತೆಂದರೆ, ನಿದ್ರೆಗೆಟ್ಟು ವಾರಗಟ್ಟಲೆ ಹಣವನ್ನು ಸಂಪಾದಿಸಿ ಅದರ 90 ಪ್ರತಿಶತ ಹಣವನ್ನ ‘ಸ್ಲೀಪ್ ಡಿಸಾರ್ಡರ್’ ಗುಣಪಡಿಸಲು ಖರ್ಚುಮಾಡಿದಂತೆ!
ಎಂಥ ಸಮಯದಲ್ಲೂ ಲಾಭ-ನಷ್ಟದ ಲೆಕ್ಕಾಚಾರ ಹಾಕುವ ಪಕ್ಕಾ ವ್ಯಾಪಾರಿ ಮನೋ ಭಾವದ ಸಂಸ್ಥೆಗಳು ಇದರಲ್ಲಿ ಕೂಡ ಒಂದು ಹೊಸ ವ್ಯಾಪಾರವನ್ನು ಕಂಡುಕೊಂಡಿವೆ. ಮುಂಬರುವ ದಿನಗಳಲ್ಲಿ, ನವೀಕರಿಸಬಹುದಾದ ಇಂಧನ ಮತ್ತು ವಿದ್ಯುಚ್ಚಾಲಿತ ಕಾರು ಗಳ ಬೇಡಿಕೆ ಗಗನ ಮುಟ್ಟಲಿದೆ. ಇಂಥ ಸಂಸ್ಥೆಗಳ ವ್ಯಾಪಾರ ವಹಿವಾಟಿನ ಅಂದಾಜು 2.1 ಟ್ರಿಲಿಯನ್ ಅಮೆರಿಕನ್ ಡಾಲರ್. ಅಂದರೆ ವಾತಾವರಣವು ಕೆಡದಂತೆ ತಡೆಯಲು ಮಾಡುವ ಖರ್ಚಿನ ಎರಡು ಪಟ್ಟು ವ್ಯಾಪಾರದ ವಾಸನೆ ಅವುಗಳ ಮೂಗಿಗೆ ಆಗಲೇ ಬಡಿದಿದೆ.
ವಿಶ್ವ ಬದುಕುವ ರೀತಿಯನ್ನು ನಿರ್ಧರಿಸುವ ಕೆಲವೇ ಕೆಲವು ಮಂದಿ, ಮುಂದಿನ ದಿನಗಳು ಹೀಗಿರಬೇಕು ಎನ್ನುವ ನೀಲನಕ್ಷೆಯನ್ನ ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಕ್ಲೈಮೇಟ್ ಚೇಂಜ್ ಅನ್ನು ಚೀನಾ ಮತ್ತು ಭಾರತ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಮಾತುಗಳು ದಶಕದಿಂದ ಕೇಳಿಬರುತ್ತಿವೆ. ಆದರೆ ಅಮೆರಿಕ ಮತ್ತು ಚೀನಾ ದೇಶಗಳು ಭೂಮಿಗೆ ಮಾಡಿರುವ ಹಾನಿಯ ಹತ್ತನೇ ಒಂದು ಭಾಗದಷ್ಟನ್ನು ಕೂಡ ಭಾರತ ಮಾಡಿಲ್ಲ.
ಅಂದ ಮಾತ್ರಕ್ಕೆ ನಾವೇನೂ ಕಡಿಮೆ ದೇಣಿಗೆ ನೀಡುತ್ತಿಲ್ಲ. ಕಾರುಗಳ ಸಂಖ್ಯೆ, ಮರಗಳನ್ನು ಕಡಿದು ನಿವೇಶನ ಮಾಡುತ್ತಿರುವವರ ಸಂಖ್ಯೆ ನಮ್ಮಲ್ಲೂ ಹೆಚ್ಚುತ್ತಾ ಹೋಗುತ್ತಿದೆ. ಜಿದ್ದಿಗೆ ಬಿದ್ದವರಂತೆ ನಾವು ಕೂಡ ಅಮೆರಿಕ ಮತ್ತು ಚೀನಾದ ಅಭಿವೃದ್ಧಿ ಮಾದರಿಯ ಹಿಂದೆ ಓಡುತ್ತಿದ್ದೇವೆ. ಆದರೆ ಅದು ಹೀನಾಯವಾಗಿ ಸೋತಿರುವ ಮಾದರಿ ಎಂಬುದು ಭಾರತಕ್ಕೆ ಅರಿವಾಗುವುದು ಯಾವಾಗ? ಅಭಿವೃದ್ಧಿ ಎಂದರೆ ಜಿಡಿಪಿ ಹೆಚ್ಚಳ ಎನ್ನುವ ನಂಬಿಕೆ ತಲೆಯಲ್ಲಿ ಹೊಕ್ಕಿರುವಾಗ, ನಾವು ಬೇರೆ ಸಾಧ್ಯತೆಗಳ ಕಡೆಗೆ ನೋಡುವ ಸಂಭಾವ್ಯತೆ ಕಡಿಮೆ.
ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ತಯಾರಾಗುತ್ತಿರುವ ಕಂಪ್ಯೂಟರ್, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನುಗಳು ತಲೆನೋವಾಗಿ ಬದಲಾಗಲಿವೆ. ಬಳಸಿ ಕೆಟ್ಟ ಇಂಥ ಉಪಕರಣ ಗಳನ್ನು ಬಿಸಾಡುವುದಾದರೂ ಎಲ್ಲಿ? ಹಾಗೆಯೇ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳು ನೇಪಥ್ಯ ಸೇರಲಿವೆ. ಇವುಗಳ ಹಲವು ಭಾಗವನ್ನು ಮರುಬಳಕೆ ಮಾಡಿಕೊಂಡರೂ ಉಳಿ ದಿದ್ದನ್ನು ಎಸೆಯುವುದೆಲ್ಲಿ? ಹೀಗೆ ಒಂದಲ್ಲ ಹತ್ತು ಪ್ರಶ್ನೆಗಳು, ಸವಾಲುಗಳು ನಮ್ಮ ಮುಂದಿವೆ.
ಇವತ್ತು ಎಲ್ಲವನ್ನೂ ಹಣದ ಮೂಲಕ ಅಳೆಯುತ್ತೇವೆ. ಜಗತ್ತಿನ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡುವ ‘ಫೋರ್ಬ್ಸ್’ ಸಂಸ್ಥೆಯು, ‘ಇಂಥ ಸಾಹುಕಾರರ ಒಟ್ಟು ಮೌಲ್ಯ ಇಷ್ಟು’ ಎಂದು ನಮೂದಿಸುತ್ತದೆ. ಸಮಯವಲ್ಲದ ಸಮಯದಲ್ಲಿ ಮಳೆ, ಚಳಿ, ಗಾಳಿ ಇವುಗಳು ನಮ್ಮ ಮನೆಯನ್ನು ಮುಳುಗಿಸಿದರೆ? ಸದ್ಯ ಜೀವ ಉಳಿದರೆ ಸಾಕು ಎಂದು ಹಪಹಪಿಸುವ ಸಮಯ ಬಂದರೆ? ಆಗ ನಮ್ಮ ನಿಮ್ಮ ಮನೆಯ ಮೌಲ್ಯ ಎಷ್ಟಾದರೂ ಇರಲಿ ಅದನ್ನ ಕೊಳ್ಳುವವರು ಯಾರು? ಬ್ಯಾಂಕಿನಲ್ಲಿರುವ ನಿಮ್ಮ ಹಣದ ಮೊತ್ತವು, ಕೇವಲ ಕಂಪ್ಯೂ ಟರ್ ಪರದೆಯ ಮೇಲಿನ ಒಂದು ಸಂಖ್ಯೆಯಾಗಿ ಉಳಿದುಕೊಳ್ಳುತ್ತದೆ.
‘ಸರಳ ಬದುಕು, ಸುಂದರ ಬದುಕು’ ಎಂಬುದು ಬದುಕಿನ ಸಾಮಾನ್ಯ ಸೂತ್ರವೆಂಬುದನ್ನು ಮರೆತು ನಮ್ಮ ಗ್ರಹವನ್ನ ನಾವೇ ಕುಲಗೆಡಿಸಿದ್ದೇವೆ. ಅದನ್ನು ಸಾಧ್ಯವಾದಷ್ಟು ಪುನಃ ಕಟ್ಟುವ ಹೊಣೆ ನಮ್ಮ ಮೇಲಿದೆ. ಅದರಲ್ಲೂ ವ್ಯಾಪಾರಿ ಬುದ್ಧಿ ತೋರುವುದನ್ನು, ಹಣ ಮಾಡಬೇಕು ಎಂಬ ಹಪಹಪಿಯನ್ನು ಬಿಟ್ಟು ಒಮ್ಮನಸ್ಸಿನಿಂದ ಈ ಕಾರ್ಯ ಮಾಡಬೇಕಿದೆ.
ನಾಲ್ಕು ಜನ ಸೇರಿದ ಕಡೆ ಎಂಟು ಗುಂಪಾಗುವ ಮನುಷ್ಯ ಈ ಕಾರ್ಯದಲ್ಲಿ ಒಗ್ಗಟ್ಟು ತೋರಿಯಾನೇ? ಎನ್ನುವುದು ಸದ್ಯದ ಪ್ರಶ್ನೆ. ನಮ್ಮ ಬಳಿ ಹೆಚ್ಚಿನ ಸಮಯವಿಲ್ಲ. 2050ರ ವೇಳೆಗೆ ಹಲವು ಕಡೆ ಬಿಸಿಲು ಹೆಚ್ಚಾಗುತ್ತದೆ. ಮತ್ತೆ ಹಲವು ಕಡೆ ಚಳಿ, ಪ್ರವಾಹ ಹೀಗೆ ಹತ್ತು ಹಲವು ಬದಲಾವಣೆಗಳಾಗುತ್ತವೆ. ಮುಂದಿನ 5 ವರ್ಷದಲ್ಲಿ ನಮ್ಮ ತಪ್ಪನ್ನು ತಿದ್ದಿಕೊಳ್ಳುವ ಕೆಲಸ ಮಾಡದಿದ್ದರೆ, ತಕ್ಕ ಶಾಸ್ತಿ ಖಂಡಿತ ಆಗುತ್ತದೆ. ಆ ದಿನ ಯಾರೂ, “ನಿಮ್ಮ ನೆಟ್ವರ್ತ್ ಎಷ್ಟು?" ಎಂದು ಕೇಳುವುದಿಲ್ಲ, ಎದೆಯುಬ್ಬಿಸಿ ಹೇಳುವ ಹುಮ್ಮಸ್ಸು ನಮ್ಮಲ್ಲೂ ಇರುವು ದಿಲ್ಲ.