ಬೆಂಗಳೂರು: ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಹಾಗೂ ಪುನೀತ್ ರುದ್ರನಾಗ್ ಚೊಚ್ಚಲ ನಿರ್ದೇಶನದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ನಾಯಕರಾಗಿ ಅಭಿನಯಿಸುತ್ತಿರುವ ʼಉಗ್ರಾಯುಧಮ್ʼ ಚಿತ್ರದ (Ugrayudham Movie) ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಶ್ರೀಮುರಳಿ ಅವರ ತಂದೆ, ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಎಸ್. ಎ. ಚಿನ್ನೇಗೌಡ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಜತೆಗೂಡಿ ಶೀರ್ಷಿಕೆ ಅನಾವರಣ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ, ಇಂತಹ ಪಿರಿಯಾಡಿಕ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರವನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಈಗ ಸಾಕಷ್ಟು ಕನ್ನಡದ ಚಿತ್ರಗಳು ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಆ ಸಾಲಿಗೆ ನಮ್ಮ ಚಿತ್ರ ಕೂಡ ಸೇರುವ ಭರವಸೆ ಇದೆ. ನಮ್ಮ ಚಿತ್ರದ ನಾಯಕರಾದ ಶ್ರೀಮುರಳಿ ಹಾಗೂ ನಿರ್ದೇಶಕ ಪುನೀತ್ ರುದ್ರನಾಗ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.
ನಾನು ಚಿತ್ರರಂಗಕ್ಕೆ ಬಂದಾಗಿನಿಂದ ನನಗೆ ಪ್ರೋತ್ಸಾಹ ನೀಡುತ್ತಾ ಬಂದವರು ಶ್ರೀಮುರಳಿ ಹಾಗೂ ಕುಟುಂಬದವರು. ಇಂದು ನನ್ನ ಮೊದಲ ನಿರ್ದೇಶನದ ʼಉಗ್ರಾಯುಧಮ್ʼ ಚಿತ್ರಕ್ಕೆ ಶ್ರೀಮುರಳಿ ಅವರೇ ನಾಯಕನಾಗಿರುವುದು ಸಂತಸ ತಂದಿದೆ. ಇನ್ನೂ ಇದೊಂದು ಏಳುನೂರು ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರ. ನವೆಂಬರ್ನಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಸಕಲೇಶಪುರದ ಬಳಿ 135 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಅದ್ಧೂರಿ ಸೆಟ್ ಹಾಕಲಾಗುತ್ತಿದ್ದು, ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ನಾನು ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅವರ ಅಭಿನಯದ ಸಾಕಷ್ಟು ಐತಿಹಾಸಿಕ ಚಿತ್ರಗಳನ್ನು ನೋಡಿದ್ದೇನೆ. ಅದೇ ನನಗೆ ಈ ಚಿತ್ರ ನಿರ್ದೇಶನ ಮಾಡಲು ಸ್ಪೂರ್ತಿ. ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ನಮ್ಮ ಚಿತ್ರದಲ್ಲಿ ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ದೊಡ್ಡ ತಂಡ ಇದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುವುದಾಗಿ ನಿರ್ದೇಶಕ ಪುನೀತ್ ರುದ್ರನಾಗ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Fashion Trend 2025: ಫಂಕಿ ಲುಕ್ ನೀಡುವ ವ್ರಾಪ್ ಹೆಡ್ ಬ್ಯಾಂಡ್ಸ್
ನಾನು ʼಬಘೀರʼ ಚಿತ್ರದ ನಂತರ ಸುಮಾರು 200 ಕಥೆ ಕೇಳಿದ್ದೇನೆ. ಅದರಲ್ಲಿ ನನಗೆ ಇಷ್ಟ ಆಗಿದ್ದು ಮೂರು ಕಥೆಗಳು ಮಾತ್ರ. ಆ ಪೈಕಿ ಎರಡು ಚಿತ್ರಗಳ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿದೆ. "ಬಘೀರ" ಚಿತ್ರದ ನಂತರ ಬಿಡುಗಡೆಯಾಗುತ್ತಿರುವ ಶ್ರೀಮುರಳಿ ಅವರ ಚಿತ್ರ ಯಾವುದು ಅಂತ ಕೇಳಿದರೆ, ಅದು ʼಉಗ್ರಾಯುಧಮ್ʼ ಅಂತ ಹೇಳಬಹುದು. ನಿರ್ದೇಶಕ ಪುನೀತ್ ರುದ್ರನಾಗ್ 700 ವರ್ಷಗಳ ಹಿಂದಿನ ಕಥೆಯನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ನಿಜಕ್ಕೂ ಅವರು ಮಾಡಿಕೊಂಡಿರುವ ಕಥೆ ಬಹಳ ಚೆನ್ನಾಗಿದೆ. ಪಿರಿಯಾಡಿಕ್ ಡ್ರಾಮಾ ಕಥಾಹಂದರವನ್ನು ʼಉಗ್ರಾಯುಧಮ್ʼ ಚಿತ್ರ ಹೊಂದಿದೆ. ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಸಹ ಅದ್ಧೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರುವುದಂತು ಖಂಡಿತ. ಆದಷ್ಟು ಬೇಗ ಈ ಚಿತ್ರ ತೆರೆಗೆ ಬರಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂತಹಂತವಾಗಿ ನೀಡುತ್ತೇವೆ ಎಂದರು ನಾಯಕ ಶ್ರೀಮುರಳಿ.