ಬೆಂಗಳೂರು, ಆ. 18: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರಿನ ನಿಗೂಢ ಜೋಡಿ ಕೊಲೆಯ ರಹಸ್ಯ ಕೊನೆಗೂ ಬಿಚ್ಚಿಕೊಂಡಿದೆ (Bengaluru News). ಚಿಕ್ಕಬಾವಣಾವರದ ಮನೆಯೊಂದರಲ್ಲಿ ಟೆಕ್ಕಿ ಮತ್ತು ಅವರ ಪುತ್ರನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಈ ಪ್ರಕರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಇದೀಗ ಸಾವಿಗೆ ಕಾರಣ ತಿಳಿದು ಬಂದಿದ್ದು, ಅನೈತಿಕ ಸಂಬಂಧ ಇದರ ಹಿಂದಿದೆ ಎನ್ನುವುದು ಗೊತ್ತಾಗಿದೆ. ಮೃತರನ್ನು ಅಭಿನವ್ (38) ಹಾಗೂ ಅವರ ಪುತ್ರ ಯದುವೀರ್ (5) ಎಂದು ಗುರುತಿಸಲಾಗಿದೆ. ಅಭಿನವ್ ಅವರ ಪತ್ನಿ ಹರಿಣಿಯೇ ಈ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಣಿ ತನ್ನ ಪ್ರಿಯಕರ ವಿನಯ್ ಜತೆಗೆ ಸೇರಿ ಪತಿ, ಮಗುವನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. 6 ವರ್ಷಗಳ ಹಿಂದೆ ಹರಿಣಿ ಜತೆಗೆ ಅಭಿನಂದನ್ ಮದುವೆಯಾಗಿತ್ತು. ಅನೈತಿಕ ಸಂಬಂಧಕ್ಕೆ 6 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಂಡಿದೆ.
ಕೊಲೆ ಮಾಡಿದ್ದೇಗೆ?
ಬೆಂಗಳೂರಿನ ಚಿಕ್ಕಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಬಸವಪುರದಲ್ಲಿರುವ ನಿವಾಸದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಅಭಿನವ್ ಹಾಗೂ ಯದುವೀರ್ ಆಗಸ್ಟ್ 17ರಂದು ಶವವಾಗಿ ಪತ್ತೆಯಾಗಿದ್ದರು. ಹರಿಣಿ ಸ್ವತಃ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂತು. ಸಂಬಂಧಿಕರ ಮನೆಗೆ ಹೋಗಿ ಭಾನುವಾರ ಸಂಜೆ ವಾಪಸ್ ಆಗಿದ್ದಾಗಿಯೂ, ಸೋಮವಾರ ಬೆಳಗ್ಗೆ ನೋಡಿದಾಗ ಪತಿ-ಪುತ್ರ ಮೃತಪಟ್ಟಿದ್ದರು ಎಂದು ಹರಿಣಿ ಪೊಲೀಸರಿಗೆ ತಿಳಿಸಿದ್ದಳು.
ಮಲಗಿದಲ್ಲೇ ಶವವಾದ ಟೆಕ್ಕಿ, 5 ವರ್ಷದ ಪುತ್ರ; ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ ನಿಗೂಢ ಸಾವು
ಆರಂಭದಲ್ಲಿ ಈ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿತ್ತು. ಪೊಲೀಸರು ಅನುಮಾದ ಮೇರೆಗೆ ಹರಿಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಿದ್ದಿದೆ. ಆಗಸ್ಟ್ 16ರ ರಾತ್ರಿ 11 ಗಂಟೆಗೆ ಪ್ರಿಯಕರ ವಿನಯ್ಗೆ ಹರಿಣಿ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಸಿಸಿ ಕ್ಯಾಮರಾ ಆಫ್ ಮಾಡಿದ್ದಳು. ಗಂಡ ಅಭಿನಂದನ್ ತಲೆಗೆ ಸೌಟ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಳು. ಆರಂಭದಲ್ಲಿ ಆಕೆಗೆ ಯದುವೀರ್ನನ್ನು ಕೊಲೆಗೈಯ್ಯುವ ಉದ್ದೇಶ ಇರಲಿಲ್ಲವಂತೆ. ಕೊಲೆಯನ್ನು ಆತ ನೋಡಿದ ಕಾರಣ ಮಗ ಎಂದೂ ನೋಡದೆ ಆತನನ್ನೂ ಹತ್ಯೆ ಮಾಡಿದ್ದಳು.
ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದವರಾದ ಅಭಿನಂದನ್ ಪತ್ನಿ ಹರಿಣಿ ಹಾಗೂ ಪುತ್ರ ಯದುವೀರ್ನೊಂದಿಗೆ ಗುಡ್ಡೆ ಬಸವಪುರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಉತ್ತರ-ಪಶ್ಚಿಮ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್., ʼʼಘಟನಾ ಸ್ಥಳದಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಕಂಡುಬಂದಿದ್ದವು. ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳು ಸರಿಯಾಗಿ ಸೇವ್ ಆಗದಿರುವುದು ಬೆಳಕಿಗೆ ಬಂದಿದ್ದು ಇದು ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತ್ತು. ಜತೆಗೆ ಅಭಿನಂದನ್ ಅವರ ತಾಯಿ ಪೊಲೀಸರನ್ನು ಸಂಪರ್ಕಿಸಿ, ತನ್ನ ಮಗ ಮತ್ತು ಮೊಮ್ಮಗನನ್ನು ಯೋಜಿತವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರಿಂದ ತನಿಖೆಯನ್ನು ಆ ನಿಟ್ಟಿನಲ್ಲಿ ನಡೆಸಲಾಗಿತ್ತುʼʼ ಎಂದಿದ್ದಾರೆ.
ಇನ್ನಷ್ಟು ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.