ಮೈಸೂರು: ಡೆತ್ನೋಟ್ ಬರೆದಿಟ್ಟು ತಂದೆ, ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ (Mysuru Tragedy) ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ನಡೆದಿದೆ. ತಂದೆ ಶಿವಣ್ಣ (54), ತಾಯಿ ನಾಗರತ್ನ (44) ಹಾಗೂ ಮಗಳು ರಕ್ಷಿತಾ (21) ಆತ್ಮಹತ್ಯೆಗೆ ಶರಣಾದವರು.
ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಮ್ಮ ಸಾವಿಗೆ ಉಲ್ಲಾಸ್ ಗೌಡ ಕಾರಣ ಎಂದು ಬರೆಯಲಾಗಿದೆ. ಮೂರು ತಿಂಗಳ ಹಿಂದೆ ಯುವತಿ ರಕ್ಷಿತಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಅವರ ನಿಶ್ಚಿತಾರ್ಥದ ಸಮಯದಲ್ಲೂ ಉಲ್ಲಾಸ್ ಗೌಡ ಓಡಾಡಿಕೊಂಡಿದ್ದ. ಜೂನ್ 23-24ರಂದು ಮದುವೆ ನಿಗದಿಯಾಗಿತ್ತು. ಆದರೆ ಒಂದು ವಾರದ ಹಿಂದಷ್ಟೇ ಉಲ್ಲಾಸ್ ರಕ್ಷಿತಾಳನ್ನು ಲವ್ ಮಾಡುತ್ತಿದ್ದೇನೆ, ಮದುವೆ ಮಾಡಿಕೊಡಿ ಎಂದು ಆಕೆಯ ಪೋಷಕರ ಬಳಿ ಕೇಳಿದ್ದ. ಆಗ ಬೈದು ಬುದ್ದಿಮಾತು ಹೇಳಿದ್ದರು. ಅವರ ಮಾತು ಕೇಳದೇ ಗಲಾಟೆ ಮಾಡಿದ್ದ. ರಾತ್ರಿ ಗ್ರಾಮದಲ್ಲಿ ಹಿರಿಯರನ್ನು ಸೇರಿಸಿ ನ್ಯಾಯ ಪಂಚಾಯತಿ ಮಾಡಿದ್ದರು.
ಅದಾದ ಬಳಿಕ ಈ ಹಿಂದೆ ರಕ್ಷಿತಾ ತನಗೆ ಕಳುಹಿಸಿದ್ದ ಕೆಲವು ಮೆಸೇಜ್ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಆಕೆಗೆ ನಿರಂತರವಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡುತ್ತಿದ್ದ. ಅಷ್ಟಕ್ಕೇ ನಿಲ್ಲಿಸದೇ ರಕ್ಷಿತಾಳ ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಆ ಮೆಸೇಜ್ ಹಾಗೂ ಫೋಟೋಗಳನ್ನು ಕಳುಹಿಸಿದ್ದ. ಇದರಿಂದ ಅವಮಾನಕ್ಕೊಳಗಾದ ಕುಟುಂಬಸ್ಥರು ಡೆತ್ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ವರುಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.