ಕೊಪ್ಪಳ: ಖ್ಯಾತ ಪ್ರವಾಸಿ ಕ್ಷೇತ್ರ ಹಂಪಿಯ (Hampi Horror) ಬಳಿಯ ಸಾನಾಪುರ ಕೆರೆಯ ಸಮೀಪ ವಿದೇಶಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲೀಕ ಮಹಿಳೆ ಮೇಲೆ ಗ್ಯಾಂಗ್ ರೇಪ್ (Physical Abuse) ಹಾಗೂ ಹತ್ಯೆ (Murder case) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿ ನ್ಯಾಯಾಲಯ, ಆರೋಪಿಗಳಾದ ಮಲ್ಲೇಶ್, ಚೇತನಸಾಯಿ, ಶರಣಬಸವನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಮಾರ್ಚ್ 6ರಂದು ರಾತ್ರಿ 11 ಗಂಟೆಗೆ ಆರೋಪಿಗಳು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದರು. ಸಾನಾಪುರ ಕೆರೆಯ ಬಳಿಯ ತುಂಗಭದ್ರಾ ಕಾಲುವೆಯ ಬಳಿ ರಾತ್ರಿ ಇದ್ದ ಪ್ರವಾಸಿಗರ ಬಳಿ ಬಂದಿದ್ದ ಇವರು ಹಣ ಕೇಳಿದ್ದರು. ಹಣ ಕೊಡದೇ ಹೋದಾಗ ಹಲ್ಲೆ ನಡೆಸಿದ್ದಲ್ಲದೆ, ಮೂವರು ಗಂಡಸರನ್ನು ಕಾಲುವೆಗೆ ತಳ್ಳಿದ್ದರು. ಇವರಲ್ಲಿ ಇಬ್ಬರು ಈಜಿ ದಡ ಸೇರಿದ್ದು, ಮತ್ತೊಬ್ಬ ಮುಳುಗಿ ಸತ್ತುಹೋಗಿದ್ದ. ನಂತರ ಈ ಪಾತಕಿಗಳು ಇಸ್ರೇಲ್ ಮೂಲದ ಪ್ರವಾಸಿ ಮಹಿಳೆ ಹಾಗೂ ಹೋಂ ಸ್ಟೇ ಮಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದರು.
ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಖಚಿತ ಮಾಹಿತಿಯ ಮೇಲೆ ಮೂವರನ್ನೂ ಬಂಧಿಸಿದ್ದರು. ಇವರಲ್ಲಿ ಒಬ್ಬಾತ ತಮಿಳುನಾಡಿಗೆ ಪರಾರಿಯಾಗಿದ್ದ. ಆತನನ್ನು ಹಿಡಿತರಲಾಗಿತ್ತು. ಸೋಮವಾರ ರಾತ್ರಿ ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮೂವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಇಂದು ಗಂಗಾವತಿ ಪೊಲೀಸರು ಗಂಗಾವತಿ ಸುತ್ತಮುತ್ತಲಿನ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ಗಳ ಮೇಲೆ ದಿಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ತಂಗುವ ವಿದೇಶಿಯರ ಮಾಹಿತಿಯನ್ನು ನೀಡದಿರುವುದು, ಅಕ್ರಮ ಚಟುವಟಿಕೆಗಳ ಆರೋಪದ ಮೇರೆಗೆ ದಾಳಿ ನಡೆಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನೇತೃತ್ವದಲ್ಲಿ ಹೋಂ ಸ್ಟೇ, ರೆಸಾರ್ಟ್ಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ರಿಜಿಸ್ಟರ್ ಬುಕ್ ಸೇರಿ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.