ಭುವನೇಶ್ವರ, ಫೆ. 27: 23 ವರ್ಷದ ಯವತಿಯ ಮೇಲೆ ಪ್ರಿಯಕರ ಮತ್ತು ಅಪರಿಚಿತ ವ್ಯಕ್ತಿ ಒಂದೇ ದಿನ 2 ಬಾರಿ ಅತ್ಯಾಚಾರ ಎಸಗಿದ್ದು, ಬಳಿಕ 4 ಮಹಡಿಯ ಕಟ್ಟಡದಿಂದ ದೂಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಒಡಿಶಾದ ಜಗತ್ಸಿಂಘ್ಪುರ ಜಿಲ್ಲೆಯಲ್ಲಿ ನಡೆದಿದೆ (Odisha Horror). ಆರಂಭದಲ್ಲಿ ಪ್ರಿಯಕರ ಅತ್ಯಾಚಾರ ಎಸಗಿದರೆ ಬಳಿಕ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ವ್ಯಕ್ತಿ ಯುವತಿಯನ್ನು ಕರೆದೊಯ್ದು ಬಲತ್ಕರಿಸಿದ್ದಾನೆ. ಹೀಗೆ ಒಂದೇ ದಿನ ಇಬ್ಬರು 2 ಪ್ರತ್ಯೇಕ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದು, ಬಳಿಕ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಇಬ್ಬರನ್ನೂ ಬಂಧಿಸಲಾಗಿದೆ.
ಬಂಧಿತರ ವಿರುದ್ಧ ಬಿಎನ್ಎಸ್ ಅಡಿಯಲ್ಲಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳು ಹೇಳಿದ್ದೇನು?
ಜಗತ್ಸಿಂಘ್ಪುರ ಎಸ್ಪಿ ಅಂಕಿತ್ ಕುಮಾರ್ ವರ್ಮ ಘಟನೆ ಬಗ್ಗೆ ಮಾಹಿತಿ ನೀಡಿ, ʼʼಫೆಬ್ರವರಿ 22ರಂದು ಘಟನೆ ನಡೆದಿದೆ. ಅಂದು ಯುವತಿ ತನ್ನ ಬಾಯ್ಫ್ರೆಂಡ್ ಜತೆ ಓಡಿ ಹೋಗಲು ನಿರ್ಧರಿಸಿ ಮನೆಯಿಂದ ಬಂದಿದ್ದಳು. ಮದುವೆಯಾಗುವುದಾಗಿ ನಂಬಿಸಿದ ಪ್ರಿಯಕರ ದೇವಸ್ಥಾನಕ್ಕೆ ಬರಲು ಸೂಚಿಸಿದ್ದ. ಅದಾದ ಬಳಿಕ ಆಕೆಯನ್ನು ಅಜ್ಞಾತ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ನಂತರ ರಹಾಮ ಬಸ್ ನಿಲ್ದಾಣದಲ್ಲಿ ಆಕೆಯನ್ನು ಏಕಾಂಗಿಯಾಗಿ ಬಿಟ್ಟು ಹೊರಟು ಹೋಗಿದ್ದʼʼ ಎಂದು ತಿಳಿಸಿದ್ದಾರೆ.
ನವೀನ್ ಪಟ್ನಾಯಕ್ ಎಕ್ಸ್ ಪೋಸ್ಟ್:
ಸಹಾಯ ಮಾಡುವ ನೆಪದಲ್ಲಿ ಬಳಿಗೆ ಬಂದ ಅಪರಿಚಿತ
ಬಸ್ ನಿಲ್ದಾಣದಲ್ಲಿ ಸಂತ್ರಸ್ತೆ ಅಸಾಹಯಕಳಾಗಿ ನಿಂತಿದ್ದಾಗ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ಬಂದಿದ್ದ. ಜಾರ್ಖಂಡ್ ಮೂಲದ ಈತ ಬೈಕ್ನಲ್ಲಿ ತೆರಳುತ್ತಿದ್ದಾಗ ಯುವತಿಯನ್ನು ಗಮನಿಸಿದ್ದ. ಮನೆಗೆ ಬಿಡುವುದಾಗಿ ಹೇಳಿ ಪರದೀಪ್ ನಗರದ ತನ್ನ ಗೆಳೆಯನ ಬಾಡಿಗೆ ರೂಮ್ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಆಕೆಯನ್ನು ಕಟ್ಟಡದಿಂದ ತಳ್ಳಿ ಕೊಲೆ ಮಾಡಿದ್ದ. ಮಾರನೇ ದಿನ ಅಂದರೆ ಫೆಬ್ರವರಿ 23ರಂದು ಆಕೆಯ ಮೃತದೇಹ ಪತ್ತೆಯಾಗಿತ್ತು.
ಸಂತ್ರಸ್ತೆಯ ಸಹೋದರ ಈ ಬಗ್ಗೆ ಪರದೀಪ್ ಮಾಡೆಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅದರಂತೆ ಪೊಲೀಸರು ಅಸಹಜ ಮರಣ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ವೇಳೆ ಪ್ರಕರಣ ಎಳೆ ಒಂದೊಂದಾಗಿ ಬಿಚ್ಚಿಕೊಂಡಿದೆ. ಅದಕ್ಕೂ ಮೊದಲು ಮನೆಯವರು ಫೆಬ್ರವರಿ 22ರಂದು ಯುವತಿಯ ನಾಪತ್ತೆ ದೂರು ದಾಖಲಿಸಿದ್ದರು. ಸದ್ಯ ಈ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಸಮಗ್ರ ತನಿಖೆ ನಡೆಯುತ್ತಿದೆ.
ವಿದೇಶಿ ಮಹಿಳೆ ಮೇಲೆ ಬರ್ಬರ ಅತ್ಯಾಚಾರ; ಹಂಪಿ ಕೇಸ್ ಬೆನ್ನಲ್ಲೇ ದೇಶವನ್ನೇ ಬೆಚ್ಚಿ ಬೀಳಿಸುವ ಮತ್ತೊಂದು ಹೀನ ಕೃತ್ಯ!
ನವೀನ್ ಪಟ್ನಾಯಕ್ ವಾಗ್ದಾಳಿ
ಬಿಜೆಡಿ ಮುಖಂಡ, ವಿಪಕ್ಷ ನಾಯಕ ನವೀನ್ ಪಟ್ನಾಯಕ್ ಘಟನೆಗೆ ವಿಷಾಧ ವ್ಯಕ್ತಪಡಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ʼʼಇನ್ನೆಷ್ಟು ಅಮಾಯಕರು ಜೀವ ಕಳೆದುಕೊಳ್ಳಬೇಕು? ಅಪ್ರಾಪ್ತರು, ವಿಶೇಷ ಚೇತನರು ಹೀಗೆ ಯಾರೂ ಇಲ್ಲಿ ಸುರಕ್ಷಿತರಾಗಿಲ್ಲ. ರಾಜ್ಯದಲ್ಲಿ ಕಾನೂನು ಇದೆಯ ಎನ್ನುವ ಅನುಮಾನ ಮೂಡಿದೆ. ಮಹಿಳೆಯ ಸುರಕ್ಷತೆಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ದಾರೆ.