ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಒಬ್ಬನನ್ನು ಭೀಕರವಾಗಿ ಕೊಲೆ (Murder case) ಮಾಡಿರುವ ಘಟನೆ ಮಂಡ್ಯ (Mandya crime news) ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಸಮೀಪ ಶುಕ್ರವಾರ ತಡರಾತ್ರಿ ಜರುಗಿದೆ. ರೌಡಿಶೀಟರ್ (Rowdy sheeter) ಅರುಣ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದಾನೆ. ಶುಕ್ರವಾರ ರಾತ್ರಿ 9.30 ವೇಳೆ ಸುಮಾರಿಗೆ ಅರುಣ್ ಮತ್ತು ಆತನ ಸ್ನೇಹಿತರು ಎಂ.ಟಿ.ಆರ್ ಬಾರ್ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವೇಳೆ ಹಳೇ ವಿಚಾರವೊಂದಕ್ಕೆ ಪರಸ್ಪರ ಜಗಳ ಉಂಟಾಗಿದೆ. ಬಳಿಕ ಬಾರ್ನಿಂದ ಸಿಬ್ಬಂದಿಗಳು ಎಲ್ಲರನ್ನು ಹೊರಗಡೆ ಕಳುಹಿಸಿ ಜಗಳವಾಡಿಕೊಂಡಿದ್ದಾರೆ.
ಬಳಿಕ ಅರುಣ್ ಸ್ವಗ್ರಾಮ ವಡ್ಡರದೊಡ್ಡಿಗೆ ತೆರಳುವ ವೇಳೆ ಸೋಮನಹಳ್ಳಿ ಬಳಿಯ ಸ್ಕಂದ ಲೇಔಟ್ ಬಳಿ ಎಂಟತ್ತು ಮಂದಿ ಅರುಣ್ ಮೇಲೆ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ನರಳಿ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕೆಸ್ತೂರು ಪೋಲೀಸರು ಶವವನ್ನು ಮಂಡ್ಯ ಮಿಮ್ಸ್ಗೆ ರವಾನಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಪತ್ನಿಯನ್ನು ಕೊಂದ ಪತಿಯ ಹತ್ಯೆ
ಚಿಕ್ಕಮಗಳೂರು: ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿ ಮರಳಿ ಬಂದಿದ್ದ ಪತಿಯನ್ನು ಆತ ಬೈಕ್ನಲ್ಲಿ ತೆರಳುತ್ತಿದ್ದ ವೇಳೆಯಲ್ಲೇ ಯಾರೋ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ಬಾವಿಕೆರೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿದ್ದ ಚರಣ್ (26) ಎಂಬಾತ ಬೈಕ್ನಲ್ಲಿ ತೆರಳುತ್ತಿದ್ದ ವೇಳೆಯಲ್ಲೇ ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪತ್ನಿ ಮೇಘನಾಳನ್ನು ಪತಿ ಚರಣ್ ಹತ್ಯೆಗೈದು ಚೈಲು ಸೇರಿದ್ದನು. ಮೂರು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದನು. ಇಂದು ಬೈಕ್ನಲ್ಲಿ ತೆರಳುವಾಗ ಚರಣ್ ನನ್ನು ಹಿಂಬಾಲಿಸಿ ಹೋದಂತ ಹಂತಕರು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಬೇರೆ ವಿಷಯಕ್ಕೆ ಸಂಬಂಧಿಸಿ ಕೊಲೆ ಮಾಡಲಾಗಿದೆಯೇ ಅಥವಾ ಆತನ ಪತ್ನಿಯ ಕೊಲೆಯ ದ್ವೇಷ ತೀರಿಸಿಕೊಳ್ಳಲಾಗಿದೆಯೇ ಎಂಬಿತ್ಯಾದಿ ವಿಚಾರಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Crime News: ಪ್ರಿಯಕರನ ಜತೆ ಸೇರಿ ಕಿವಿಗೆ ವಿಷ ಸುರಿದು ಗಂಡನ ಕೊಲೆ; ಯೂಟ್ಯೂಬ್ ವಿಡಿಯೊ ನೋಡಿ ಕೃತ್ಯ