ಮಂಡ್ಯ: ಕಾರು ಅಪಘಾತದಲ್ಲಿ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಆದರೆ, ಇದು ಅಪಘಾತವಲ್ಲ, ಮಗಳನ್ನು ಹುಟ್ಟುಹಬ್ಬ ಆಚರಣೆಗೆ ಕರೆದು, ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪಿ ಮಾಡಿದ್ದಾರೆ.
ಮೃತ ಯುವತಿಯನ್ನು ಹೊನ್ನೇಮಡು ಗ್ರಾಮದ ನವೀನಾ (19) ಎಂದು ಗುರುತಿಸಲಾಗಿದೆ. ಮಂಡ್ಯ ನಗರದ ಪಿಜಿಯೊಂದರಲ್ಲಿ ವಾಸವಿದ್ದ ಯುವತಿ, ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಗಸ್ಟ್ 2 ರಂದು ಸಂಜೆ ತನ್ನ ಸ್ನೇಹಿತರಾದ ಅಶ್ವಿನಿ, ವಿಷ್ಣು ಹಾಗೂ ಶಿವಕುಮಾರ್ ಅವರೊಂದಿಗೆ ಕೊಮ್ಮೇರಹಳ್ಳಿ ಬೆಟ್ಟಕ್ಕೆ ಕಾರಿನಲ್ಲಿ ತೆರಳಿದ್ದಳು. ಪಿಜಿ ಮಾಲೀಕರಿಗೆ ತಾನು ಮನೆಗೆ ಹೋಗುವುದಾಗಿ ತಿಳಿಸಿ ಹೊರಟಿದ್ದಳು ಎನ್ನಲಾಗಿದೆ.
ಕೊಮ್ಮೇರಹಳ್ಳಿ ಬಳಿ ಯುವತಿ ಹಾಗೂ ಸ್ನೇಹಿತರು ಚಲಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಈ ಭೀಕರ ಅಪಘಾತದಲ್ಲಿ ನವೀನಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಕಾರಿನಲ್ಲಿದ್ದ ಉಳಿದ ಮೂವರು ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಸಂಜೆ ನಡೆದ ಅಪಘಾತದ ವಿಷಯವನ್ನು ಸ್ನೇಹಿತರು ರಾತ್ರಿ 11 ಗಂಟೆಯ ಸುಮಾರಿಗೆ ತಡವಾಗಿ ತಿಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ನವೀನಾಳನ್ನು ಕರೆದೊಯ್ದು, ಅಲ್ಲಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ನವೀನಾ ಒಪ್ಪದಿದ್ದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ತದನಂತರ ಶವವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಕೂರಿಸಿ, ಲೈಟ್ ಕಂಬಕ್ಕೆ ಡಿಕ್ಕಿ ಹೊಡೆಸಿ ಅಪಘಾತದ ನಾಟಕವಾಡಿದ್ದಾರೆ ಎಂದು ಮೃತಳ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
Afzalpur News: ಶಾಸಕ ಎಂ.ವೈ.ಪಾಟೀಲರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ: ಇಬ್ಬರ ವಿರುದ್ಧ ಎಫ್ಐಆರ್
ಮಗಳ ಸಾವಿಗೆ ಕಾರಣರಾದ ಸ್ನೇಹಿತರಾದ ಅಶ್ವಿನಿ, ವಿಷ್ಣು ಮತ್ತು ಶಿವಕುಮಾರ್ ವಿರುದ್ಧ ತಾಯಿ ಬೊಮ್ಮಮ್ಮ ಅವರು ನೀಡಿದ ದೂರಿನನ್ವಯ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.