ನೈರೋಬಿ: ಕತಾರ್ನಿಂದ (Qatar) 28 ಭಾರತೀಯರು ಪ್ರಯಾಣಿಸುತ್ತಿದ್ದ ಬಸ್ ಕೀನ್ಯಾದಲ್ಲಿ (Kenya) ಅಪಘಾತಕ್ಕೀಡಾಗಿ (Accident) ರಜೆಗೆಂದು ತೆರಳಿದ್ದ ಕೇರಳದ (Kerala) ಐವರು ಸಾವನ್ನಪ್ಪಿದ್ದಾರೆ ಎಂದು ದೋಹಾದ ಭಾರತೀಯ ರಾಯಭಾರ ಕಚೇರಿ ಎಕ್ಸ್ನಲ್ಲಿ ತಿಳಿಸಿದೆ. ಮೃತರನ್ನು ಕೇರಳದ ಗುರುವಾಯೂರಿನ ವೆಂಕಿಟಂಗಿನ ಜಸ್ನಾ (29) ಮತ್ತು ಅವರ ಮಗಳು ರೂಹಿ ಮೆಹ್ರಿನ್, ಮಾವೇಲಿಕ್ಕರದ ಚೆರಕೋಲ್ನ ಗೀತಾ ಶೋಜಿ (58) ಮತ್ತು ಪಾಲಕ್ಕಾಡ್ ಜಿಲ್ಲೆಯ ಕನ್ಹಿರಂಪರದ ಮನ್ನೂರಿನ ರಿಯಾ ಪುತ್ತನ್ಪುರಯಿಲ್ (41) ಮತ್ತು ಅವರ ಮಗಳು ತೈರಾ ಎಂದು ಗುರುತಿಸಲಾಗಿದೆ. ಈ ಐವರು ಕತಾರ್ನಲ್ಲಿ ವಾಸಿಸುತ್ತಿದ್ದರು.
ಅಪಘಾತದಲ್ಲಿ ಜಸ್ನಾಳ ಪತಿ ಮುಹಮ್ಮದ್ ಹನೀಫಾ, ಗೀತಾ ಅವರ ಪತಿ ಶೋಜಿ ಐಸಾಕ್ ಮತ್ತು ಮಗ ಅಬೆಲ್, ರಿಯಾಳ ಪತಿ ಜೋಯಲ್ ಮತ್ತು ಮಗ ಟ್ರಾವಿಸ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಜೋಯಲ್ನ ಸಹೋದರ ಅಬೆಲ್ಗೆ ಮೂಳೆ ಮುರಿತವಾಗಿದೆ. ಕತಾರ್ನಲ್ಲಿ ಕೆಲಸ ಮಾಡುವ ಶೋಜಿ ಐಸಾಕ್ಗೆ ತನ್ನ ಪತ್ನಿಯ ಸಾವಿನ ಸುದ್ದಿಯನ್ನು ಇನ್ನೂ ತಿಳಿಸಿಲ್ಲ ಎಂದು ಜೋಯಲ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Mass Shooting: ಆಸ್ಟ್ರಿಯನ್ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು, ಶೂಟರ್ ಆತ್ಮಹತ್ಯೆ
ನೈರೋಬಿಯ ಭಾರತೀಯ ಉನ್ನತ ಆಯೋಗವು ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದೆ. “ನಯಾಂದಾರುವಾ ಕೌಂಟಿಯ ಒಲ್ ಜೊರೊರೊಕ್-ನಕುರು ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಭಾರತೀಯರು ಸಾವನ್ನಪ್ಪಿರುವುದು ತೀವ್ರ ದುಃಖ ತಂದಿದೆ,” ಎಂದು ಆಯೋಗವು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ನೈರೋಬಿಯ ಭಾರತೀಯ ಉನ್ನತ ಆಯೋಗದ ಅಧಿಕಾರಿಗಳು ಸ್ಥಳದಲ್ಲಿದ್ದು, ಎಲ್ಲ ಅಗತ್ಯ ಸಹಾಯವನ್ನು ಒದಗಿಸುತ್ತಿದ್ದಾರೆ. “ಮೃತರ ಕುಟುಂಬಗಳಿಗೆ ನಮ್ಮ ಹೃದಯಪೂರ್ವಕ ಸಂತಾಪ. ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇವೆ. ನಮ್ಮ ಕಾನ್ಸುಲರ್ ತಂಡವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲ ನೀಡುತ್ತಿದೆ” ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.