ಕಠ್ಮಂಡು: ಸುಮಾರು 26 ಸಾಮಾಜಿಕ ಜಾಲತಾಣ ನಿಷೇಧಿಸಿದ ನೇಪಾಳ ಸರ್ಕಾರದ ವಿರುದ್ಧ ಅಲ್ಲಿನ ಜನತೆ ರೊಚ್ಚಿಗೆದ್ದಿದ್ದು, ಬೀದಿಗಳಿದು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುತ್ತಿದೆ (Nepal Gen Z Protest). ಕಠ್ಮಂಡುವಿನಲ್ಲಿ ಸೋಮವಾರ (ಸೆಪ್ಟೆಂಬರ್ 8) ನಡೆದ ಜನರೇಷನ್ ಝಡ್ (ಯುವ ಜನಾಂಗ) ಹೋರಾಟ ಹಿಂಸಾರೂಪ ತಾಳಿದ್ದು, ಮೃತರ ಸಂಖ್ಯೆ 18ಕ್ಕೆ ಏರಿದೆ. ಇದೀಗ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಂಡಲ್ಲಿ ಗುಂಡು ಆದೇಶ ಹೊರಡಿಸಿದೆ.
ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಮತ್ತು ಫೇಸ್ಬುಕ್, ಇನ್ಸ್ಟಾಗ್ರಾಮ್, ವ್ಯಾಟ್ಸ್ಆ್ಯಪ್, ಯೂಟ್ಯೂಬ್, ಸ್ನ್ಯಾಪ್ಚಾಟ್ ಮುಂತಾದ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿರುವುದನು ವಿರೋಧಿಸಿ ಸಾವಿರಾರು ಮಂದಿ ಕಠ್ಮಂಡುವಿನ ಮೈಥಿಘರ್ನಲ್ಲಿ ಸೇರಿ ಪ್ರತಿಭಟನೆ ಆರಂಭಿಸಿದರು.
ಈ ಸುದ್ದಿಯನ್ನೂ ಓದಿ: Gen Z Protest: ಸೋಶಿಯಲ್ ಮೀಡಿಯಾ ಬ್ಯಾನ್; Gen Z ಗಳಿಂದ ಭಾರೀ ಪ್ರತಿಭಟನೆ, ಗುಂಡೇಟಿಗೆ 14 ಬಲಿ
ಪ್ರತಿಭಟನಾಕಾರರು ರೊಚ್ಚಿಗೆದ್ದು ನಿಷೇಧಿತ ಪ್ರದೇಶ ಮತ್ತು ಸಂಸತ್ತಿನ ಆವರಣಕ್ಕೆ ಪ್ರವೇಶಿಸುವುದರೊಂದಿಗೆ ಹೋರಾಟ ಹಿಂಸೆಯ ರೂಪ ತಾಳಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು, ಜಲ ಫಿರಂಗಿ ಪ್ರಯೋಗಿಸಬೇಕಾಯ್ತು. ಜತೆಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಗುಂಡಿನ ದಾಳಿ ನಡೆಸಿದರು. ನೇಪಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಭಾರತ ಎಚ್ಚೆತ್ತುಕೊಂಡಿದ್ದು, ವಿವಿಧ ಕಡೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಸಶಸ್ತ್ರ ಸೀಮಾ ಬಲ್ (SSB) ಭಾರತ-ನೇಪಾಳ ಗಡಿಯಲ್ಲಿ ತನ್ನ ಕಣ್ಗಾವಲು ಇನ್ನಷ್ಟು ತೀವ್ರಗೊಳಿಸಿದೆ ಮತ್ತು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ ಎಂದು ಮೂಲಗಳು ತಿಳಿಸಿವೆ.
ಪ್ರತಿಭಟನಾನಿರತ ರೋನೆಷ್ ಪ್ರಧಾನ್ ಮಾತನಾಡಿ ದೇಶದ ಆಡಳಿತವನ್ನು ಕೈಗೆತ್ತಿಕೊಳ್ಳಲು ಯುವ ಜನತೆ ಸಿದ್ಧವಾಗಿದೆ ಎಂದಿದ್ದಾರೆ. ʼʼಯುವ ಜನತೆಯ ಧ್ವನಿ ಮುಖ್ಯವಾಗುತ್ತದೆ. ಅದೇ ಹಿರಿಯ ವ್ಯಕ್ತಿಯ ಆಡಳಿತದಿಂದ ರೋಸಿ ಹೋಗಿದ್ದೇವೆ. ನಮ್ಮ ಸಮುದಾಯದ ಕೈಯಲ್ಲಿದೆ ಭವಿಷ್ಯʼʼ ಎಂದು ಹೇಳಿದ್ದಾರೆ.
ತೀವ್ರಗೊಳ್ಳುತ್ತಿರುವ ಪ್ರತಿಭಟನೆಗಳ ನಡುವೆಯೇ ಕಠ್ಮಂಡುವಿನ ಅಧಿಕಾರಿಗಳು ಕರ್ಫ್ಯೂ ವಲಯವನ್ನು ವಿಸ್ತರಿಸಿದ್ದಾರೆ. ಪ್ರತಿಭಟನಾಕಾರರು ನಿರ್ಬಂಧಿತ ಪ್ರದೇಶಗಳನ್ನು ಉಲ್ಲಂಘಿಸಿದ ನಂತರ ಬನೇಶ್ವರದ ಕೆಲವು ಭಾಗಗಳಲ್ಲಿ ವಿಧಿಸಲಾದ ಸೀಮಿತ ಕರ್ಫ್ಯೂ ಅನ್ನು ಈಗ ಪ್ರಮುಖ ಸರ್ಕಾರಿ ಮತ್ತು ವಸತಿ ವಲಯಗಳಿಗೆ ವಿಸ್ತರಿಸಲಾಗಿದೆ.
ಹೊಸ ನಿರ್ಬಂಧಿತ ಪ್ರದೇಶಗಳಲ್ಲಿ ಶೀತಲ್ ನಿವಾಸ್ನಲ್ಲಿರುವ ರಾಷ್ಟ್ರಪತಿ ನಿವಾಸ, ಬಳುವತಾರ್ನಲ್ಲಿರುವ ಪ್ರಧಾನಿ ನಿವಾಸ, ಲೈನ್ಚೌರ್ನಲ್ಲಿರುವ ಉಪರಾಷ್ಟ್ರಪತಿ ನಿವಾಸ, ಮಹಾರಾಜ್ಗುಂಜ್ ಮತ್ತು ಸಿಂಘಾ ದರ್ಬಾರ್ ಆಡಳಿತ ಸಂಕೀರ್ಣ ಸೇರಿದೆ.
ಪ್ರಧಾನಿ ರಾಜೀನಾಮೆಗೆ ಆಗ್ರಹ
ಸದ್ಯ ದೇಶದಲ್ಲಿ ಅಶಾಂತಿಯ ವಾತಾವರಣ ತಲೆದೋರಿರುವ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡಬೇಕು ಎಂದು ಅಲ್ಲಿನ ಪ್ರಮುಖ ಪಕ್ಷ ಸಿಪಿಎನ್ ಆಗ್ರಹಿಸಿದೆ.
ಸೋಶಿಯಲ್ ಮೀಡಿಯಾ ಬ್ಯಾನ್ ಏಕೆ?
ನೇಪಾಳದಲ್ಲಿ ವ್ಯಾಪಕವಾಗಿ ಬಳಸಲಾಗುವ ಸುಮಾರು 26ಕ್ಕೂ ಅಧಿಕ ಸೋಶಿಯಲ್ ಮೀಡಿಯಾಗಳ ಕಂಪನಿಗಳಿಗೆ ಅಧಿಕೃತವಾಗಿ ತಮ್ಮ ಕಂಪನಿಗಳನ್ನು ನೋಂದಾಯಿಸಲು ಪದೇ ಪದೆ ನೋಟಿಸ್ ನೀಡಲಾಗುತ್ತಿದ್ದರೂ ನೋಂದಾಯಿಸಲು ವಿಫಲವಾದ ಕಂಪನಿಗಳನ್ನು ಕಳೆದ ವಾರದಿಂದ ನಿರ್ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನೋಂದಾಯಿಸಲು ಆಗಸ್ಟ್ 28ರಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು.