Muhammad Yunus: ಬಾಂಗ್ಲಾದೇಶದಲ್ಲಿ ‘ತಾಲಿಬಾನಿ ಯುಗ’? ಮಹಿಳೆಯರ ಬಟ್ಟೆ ಮೇಲೆ ನಿರ್ಬಂಧ!
ಬಾಂಗ್ಲಾದೇಶದ (Bangladesh) ಮೊಹಮ್ಮದ್ ಯೂನುಸ್ (Muhammad Yunus) ಆಡಳಿತದಲ್ಲಿ ಮಹಿಳೆಯರ ಬಟ್ಟೆಯ ಮೇಲಿನ ನಿರ್ಬಂಧ ಮತ್ತು ಸರ್ಕಾರದ ವಿರುದ್ಧ ಪ್ರತಿಭಟಿಸುವ ಸಿಬ್ಬಂದಿಯ ಹಕ್ಕನ್ನು ಕಿತ್ತುಕೊಂಡ ಆದೇಶವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಾರದ ಆರಂಭದಲ್ಲಿ, ಬಾಂಗ್ಲಾದೇಶ ಬ್ಯಾಂಕ್ ಮಹಿಳಾ ಉದ್ಯೋಗಿಗಳಿಗೆ ಚಿಕ್ಕ ಉಡುಪು, ಕಿರು ತೋಳಿನ ಬಟ್ಟೆ, ಮತ್ತು ಲೆಗ್ಗಿಂಗ್ಸ್ ಧರಿಸುವುದನ್ನು ನಿಷೇಧಿಸಿತ್ತು.


ಢಾಕಾ: ಬಾಂಗ್ಲಾದೇಶದ (Bangladesh) ಮೊಹಮ್ಮದ್ ಯೂನುಸ್ (Muhammad Yunus) ಆಡಳಿತದಲ್ಲಿ ಮಹಿಳೆಯರ ಬಟ್ಟೆಯ ಮೇಲಿನ ನಿರ್ಬಂಧ ಮತ್ತು ಸರ್ಕಾರದ ವಿರುದ್ಧ ಪ್ರತಿಭಟಿಸುವ ಸಿಬ್ಬಂದಿಯ ಹಕ್ಕನ್ನು ಕಿತ್ತುಕೊಂಡ ಆದೇಶವು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆಳವಣಿಗೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದು, ಕೆಲವರು ಇದನ್ನು ಅಫ್ಘಾನಿಸ್ತಾನದ (Afghanistan) ತಾಲಿಬಾನ್ (Taliban) ಆಡಳಿತದ ಆದೇಶಗಳಿಗೆ ಹೋಲಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಬಾಂಗ್ಲಾದೇಶ ಬ್ಯಾಂಕ್ ಮಹಿಳಾ ಉದ್ಯೋಗಿಗಳಿಗೆ ಚಿಕ್ಕ ಉಡುಪು, ಕಿರು ತೋಳಿನ ಬಟ್ಟೆ, ಮತ್ತು ಲೆಗ್ಗಿಂಗ್ಸ್ ಧರಿಸುವುದನ್ನು ನಿಷೇಧಿಸಿತು, ಸೀರೆ ಅಥವಾ ಸಲ್ವಾರ್ ಕಮೀಜ್ ಧರಿಸುವಂತೆ ಸೂಚಿಸಿತು. ಹಿಜಾಬ್ ಮತ್ತು ಫಾರ್ಮಲ್ ಶೂಸ್ ಧರಿಸುವಂತೆಯೂ ಆದೇಶಿಸಲಾಗಿತ್ತು. ಪುರುಷರಿಗೆ ಜೀನ್ಸ್ ಮತ್ತು ಚಿನೋ ಪ್ಯಾಂಟ್ಗಳನ್ನು ನಿಷೇಧಿಸಲಾಗಿತ್ತು. ಈ ನಿಯಮಗಳನ್ನು ಪಾಲಿಸದಿದ್ದರೆ ಶಿಕ್ಷಾಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಈ ಆದೇಶವು ರಾತ್ರೋರಾತ್ರಿ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು “ದಬ್ಬಾಳಿಕೆ” ಎಂದು ಟೀಕಿಸಲಾಯಿತು “ತಾಲಿಬಾನ್ ಶೈಲಿಯ ಆಡಳಿತ ಎಂದು ಕರೆಯಲಾಯಿತು”. ಬಾಂಗ್ಲಾದೇಶ ಮಹಿಳಾ ಪರಿಷತ್ನ ಅಧ್ಯಕ್ಷೆ ಫೌಜಿಯಾ ಮೊಸ್ಲೇಮ್, “ಈ ಆದೇಶವು ಒಂದು ನಿರ್ದಿಷ್ಟ ಸಾಂಸ್ಕೃತಿಕ ವಾತಾವರಣವನ್ನು ರೂಪಿಸುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ” ಎಂದು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಆಕ್ರೋಶದ ಬಳಿಕ, ಬಾಂಗ್ಲಾದೇಶ ಬ್ಯಾಂಕ್ ಗುರುವಾರ ಈ ಆದೇಶವನ್ನು ಹಿಂಪಡೆಯಿತು. “ಇದು ಕೇವಲ ಸಲಹಾತ್ಮಕವಾಗಿದ್ದು, ಹಿಜಾಬ್ ಅಥವಾ ಬುರ್ಖಾ ಧರಿಸುವ ಕುರಿತು ಯಾವುದೇ ಕಡ್ಡಾಯವಿಲ್ಲ” ಎಂದು ವಕ್ತಾರ ಅರಿಫ್ ಹೊಸೈನ್ ಖಾನ್ ತಿಳಿಸಿದ್ದಾರೆ.
ಈ ಬೆಳವಣಿಗೆಯು ಇಸ್ಲಾಮಿಕ್ ಗುಂಪುಗಳು ಮಹಿಳೆಯರಿಗೆ ಸಮಾನ ಹಕ್ಕುಗಳು, ವಿಶೇಷವಾಗಿ ಆಸ್ತಿಗೆ ಸಂಬಂಧಿಸಿದ ಸರ್ಕಾರದ ಶಿಫಾರಸುಗಳನ್ನು ವಿರೋಧಿಸುತ್ತಿರುವ ಸಂದರ್ಭದಲ್ಲಿ ಸಂಭವಿಸಿದೆ. ಕಳೆದ ತಿಂಗಳು, ಒಂದು ಇಸ್ಲಾಮಿಕ್ ಗುಂಪು ವಿಶ್ವವಿದ್ಯಾಲಯದ ಶಿಕ್ಷಕರ ವಿರುದ್ಧ “ಹಿಜಾಬ್ ವಿರೋಧಿ” ಎಂದು ಆರೋಪಿಸಿ ಪ್ರತಿಭಟನೆ ನಡೆಸಿತು.
ಈ ಸುದ್ದಿಯನ್ನೂ ಓದಿ: Child Marriage: 6 ವರ್ಷದ ಬಾಲಕಿ ಜೊತೆ 45 ವರ್ಷದ ವ್ಯಕ್ತಿಯ ವಿವಾಹ-ಇದು ತಾಲಿಬಾನ್ ವಿಕೃತಿ!
ಇದೇ ವೇಳೆ, ಬುಧವಾರ ರಾತ್ರಿ ಜಾರಿಯಾದ ಆದೇಶವು ಸರ್ಕಾರದ ವಿರುದ್ಧ ಪ್ರತಿಭಟಿಸುವ ಉದ್ಯೋಗಿಗಳ ವಿರುದ್ಧ ಕ್ರಮವನ್ನು ಪ್ರಸ್ತಾಪಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. “ಅವಿಧೇಯತೆ” ಎಂಬ ಪದವನ್ನು “ಸಾರ್ವಜನಿಕ ಕರ್ತವ್ಯಕ್ಕೆ ಭಂಗ ತರುವ ದುರ್ನಡತೆ” ಎಂದು ಬದಲಾಯಿಸಲಾಗಿದೆ. ಈ ಕಾನೂನು, ಸರ್ಕಾರಿ ಆದೇಶವನ್ನು ಉಲ್ಲಂಘಿಸುವ ಉದ್ಯೋಗಿಗಳನ್ನು ವಜಾಗೊಳಿಸುವ ಅಧಿಕಾರವನ್ನು ನೀಡುತ್ತದೆ ಮತ್ತು ಆದೇಶದ ವಿರುದ್ಧ ಮೇಲ್ಮನವಿಗೆ ಅವಕಾಶವಿಲ್ಲ. ಈ ಕಾನೂನು ಈ ಹಿಂದೆ ಸರ್ಕಾರಿ ಉದ್ಯೋಗಿಗಳಿಂದ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.