ಇಸ್ಲಾಮಾಬಾದ್: ಭಾರತದಲ್ಲಿ ನಡೆದ ಹಲವು ಪ್ರಮುಖ ಭಯೋತ್ಪಾದಕ ದಾಳಿಗಳ ಮಾಸ್ಟರ್ ಮೈಂಡ್, ಲಷ್ಕರ್-ಎ-ತೊಯ್ಬಾ (Lashkar-e-Taiba)ದ ಪ್ರಮುಖ ಕಾರ್ಯಕರ್ತ ಸೈಫುಲ್ಲಾ ಖಾಲಿದ್ (Saifullah Khalid)ನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹೊಡೆದುರುಳಿಸಲಾಗಿದೆ ಎಂದು ಇಂಡಿಯಾ ಟುಡೇ ಟಿವಿ ಭಾನುವಾರ ವರದಿ ಮಾಡಿದೆ. ಕೆಲವು ಅಪರಿಚಿತರು ಆತನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದಾರೆ ಎನ್ನಲಾಗಿದೆ.
ಖಾಲಿದ್ ಭಾರತದಲ್ಲಿ ನಡೆದ 3 ಪ್ರಮುಖ ಭಯೋತ್ಪಾದಕ ದಾಳಿಗಳ ಪ್ರಮುಖ ಮಾಸ್ಟರ್ ಮೈಂಡ್ ಎನಿಸಿಕೊಂಡಿದ್ದ. 2001ರ ಉತ್ತರ ಪ್ರದೇಶದ ರಾಂಪುರ ಸಿಆರ್ಪಿಎಫ್ ಶಿಬಿರದ ಮೇಲಿನ ದಾಳಿ, 2005ರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ಮೇಲಿನ ದಾಳಿ ಮತ್ತು 2006ರ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪ್ರಧಾನ ಕಚೇರಿಯ ಮೇಲಿನ ದಾಳಿಯನ್ನು ಈತನೇ ನಡೆಸಿದ್ದ ಎನ್ನಲಾಗಿದೆ.
ಸೈಫುಲ್ಲಾ ಖಾಲಿದ್ ಹತನಾದ ಬಗ್ಗೆ ಎಕ್ಸ್ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್:
ಈ ಸುದ್ದಿಯನ್ನೂ ಓದಿ: JeM Terrorist: ಸೇನೆ ಬರಲಿ ನೋಡಿಕೊಳ್ತೇನೆ; ಎನ್ಕೌಂಟರ್ನಲ್ಲಿ ಹತನಾಗುವ ಮುನ್ನ ಉಗ್ರ ಅಮೀರ್ ತಾಯಿಯೊಂದಿಗೆ ನಡೆಸಿದ ವಿಡಿಯೊ ಕರೆ ವೈರಲ್
ವಿನೋದ್ ಕುಮಾರ್ ಎಂಬ ಹೆಸರಿನಲ್ಲಿ ಹಲವು ವರ್ಷಗಳಿಂದ ನೇಪಾಳದಲ್ಲಿ ನೆಲೆಸಿದ್ದ ಖಾಲಿದ್ ಸ್ಥಳೀಯ ಮಹಿಳೆ ನಗ್ಮಾ ಬಾನು ಅವರನ್ನು ವಿವಾಹವಾಗಿದ್ದ. ನೇಪಾಳದಿಂದ ಪಾಕಿಸ್ತಾನಕ್ಕೆ ಮರಳಿದ ಆತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗಾಗಿ ಹಲವು ಚಟುವಟಿಕೆಗಳನ್ನು ನಡೆಸುತ್ತಿದ್ದ. ನೇಮಕಾತಿ ಮತ್ತು ಲಾಜಿಸ್ಟಿಕ್ಸ್ನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಖಾಲಿದ್ ತನ್ನ ನೆಲೆಯನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮಟ್ಲಿಗೆ ಸ್ಥಳಾಂತರಿಸಿದ್ದ. ಅಲ್ಲಿ ಆತ ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಮತ್ತು ಅದರ ಸಂಘಟನೆಯಾದ ಜಮಾತ್-ಉದ್-ದವಾ ಪರ ಕೆಲಸ ಮಾಡುತ್ತಿದ್ದ. ಮುಖ್ಯವಾಗಿ ಭಯೋತ್ಪಾದಕ ಕಾರ್ಯಾಚರಣೆಗಳಿಗೆ ನೇಮಕಾತಿ ಮತ್ತು ಹಣ ಸಂಗ್ರಹಣೆ ನಡೆಸುತ್ತಿದ್ದ.
ಕಾಶ್ಮೀರದಲ್ಲೂ ಉಗ್ರ ಸಂಹಾರ
ಕಳೆದ ವಾರ ಶಾಹಿದ್ ಕುಟ್ಟಾಯ್ ಸೇರಿದಂತೆ ಇನ್ನೂ ಮೂವರು ಲಷ್ಕರ್ ಭಯೋತ್ಪಾದಕರು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗಿನ ಎನ್ಕೌಂಟರ್ನಲ್ಲಿ ಹತರಾಗಿದ್ದರು. ಶಾಹಿದ್ ಮತ್ತು ಶೋಪಿಯಾನ್ನ ವಂಡುನಾ ಮೆಲ್ಹುರಾ ಪ್ರದೇಶದ ನಿವಾಸಿ ಅದ್ನಾನ್ ಶಫಿ ಮತ್ತು ನೆರೆಯ ಪುಲ್ವಾಮಾ ಜಿಲ್ಲೆಯ ಮುರ್ರಾನ್ ಪ್ರದೇಶದ ನಿವಾಸಿ ಅಹ್ಸಾನ್ ಉಲ್ ಹಕ್ ಶೇಖ್ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತರಾಗಿದ್ದರು. ಅವರ ಬಳಿಯಿಂದ 2 ಎಕೆ ಸರಣಿಯ ರೈಫಲ್ಗಳು, ದೊಡ್ಡ ಪ್ರಮಾಣದ ಮದ್ದುಗುಂಡುಗಳು, ಗ್ರೆನೇಡ್ಗಳು ವಶಪಡಿಸಿಕೊಳ್ಳಲಾಗಿತ್ತು.
ದಕ್ಷಿಣ ಕಾಶ್ಮೀರದಲ್ಲಿ ಎಲ್ಇಟಿ ಕಾರ್ಯಾಚರಣೆ ಕಮಾಂಡರ್ ಆಗಿದ್ದ ಶಾಹಿದ್, ಕಾಶ್ಮೀರದಲ್ಲಿ ಭಯೋತ್ಪಾದಕ ನೇಮಕಾತಿಯನ್ನು ಉತ್ತೇಜಿಸುತ್ತಿದ್ದ. ಅನೇಕ ಯುವಕರನ್ನು ದಾರಿ ತಪ್ಪಿಸಿದ್ದ ಮತ್ತು ಅನೇಕ ಅಮಾಯಕ ಜನರನ್ನು ಕೊಂದಿದ್ದ ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದರು.
ಆಪರೇಷನ್ ಸಿಂದೂರ್ನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK)ದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ನಿಖರವಾದ ದಾಳಿಗಳ ಮೂಲಕ ನಾಶಪಡಿಸಲಾಗಿದೆ. ಜೈಷ್ನ ಪ್ರಧಾನ ಕಚೇರಿಯಾದ ಬಹವಲ್ಪುರ್ ಮತ್ತು ಲಷ್ಕರ್ನ ಪ್ರಮುಖ ತರಬೇತಿ ತಾಣವಾದ ಮುರಿದ್ಕೆ ಈ ದಾಳಿಯ ಗುರಿಗಳಲ್ಲಿ ಸೇರಿದ್ದವು.