ಬೆಂಗಳೂರು, ಮಾ. 6: ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್ (Karnataka Budget 2026-27) ಮಂಡಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ನಲ್ಲಿ ಮೂಡಿರುವ ನಾಯಕತ್ವದ ಗೊಂದಲ, ಗ್ಯಾರಂಟಿ ಅನುಷ್ಠಾನದ ಸವಾಲಿನ ನಡುವೆ ಸಿದ್ದರಾಮಯ್ಯ ದಾಖಲೆಯ 17ನೇ ಮುಂಗಡ ಪತ್ರ ಮಂಡಿಸಿದ್ದಾರೆ. ಬರೋಬ್ಬರಿ 4.5 ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಇದಾಗಿದೆ. ಇದರಲ್ಲಿ ಅವರು ಕರ್ನಾಟಕದ್ದೇ ಆದ ಸಶಕ್ತ ಹಾಗೂ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ರೂಪಿಸಿರುವುದಾಗಿ ತಿಳಿಸಿದರು. ಅವುಗಳನ್ನು 11ಜಿ ಮಾದರಿ ಆರ್ಥಿಕತೆಗಳೆಂದು ವ್ಯಾಖ್ಯಾನಿಸಿದರು.
ಸಿಎಂ ಘೋಷಿಸಿದ 11ಜಿ ಮಾದರಿ ಆರ್ಥಿಕತೆ
- ಗ್ಯಾರಂಟಿ ಎಕಾನಮಿ-ಕಲ್ಯಾಣ ಹಾಗೂ ಲಿಂಗ ಸಮಾನತೆಯ ಹಾದಿಯತ್ತ ಕರ್ನಾಟಕ
- ಗುಡ್ ಪಬ್ಲಿಕ್ ಎಜುಕೇಶನ್-ಸರ್ವರ ಏಳಿಗೆ ಬಯಸುವ ಸಮರ್ಥ ಸಾರ್ವಜನಿಕ ಶಿಕ್ಷಣ
- ಗುಡ್ ಹೆಲ್ತ್ ಟು ಆಲ್-ಸಮಗ್ರ ಆರೋಗ್ಯ - ಸದೃಢ ಕರ್ನಾಟಕ
- ಗ್ರಾಸ್ ರೂಟ್ ಎಕಾನಮಿ- ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು
- ಗುಡ್ ಗವರ್ನೆನ್ಸ್- ಜನಸ್ನೇಹಿ ಆಡಳಿತ
- ಗಿಗ್ ಎಕಾನಮಿ – ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು
- ಜಿಯೋಗ್ರಾಫಿಕಲ್ ಈಕ್ವಾಲಿಟಿ- ಪ್ರಾದೇಶಿಕ ಅಸಮಾನತೆಯ ನಿವಾರಣೆ
- ಗ್ಲೋಬಲ್ ಟ್ರೇಡ್ ಎಕಾನಮಿ ಅಥವಾ ವ್ಯಾಪಾರ ಮತ್ತು ಕೈಗಾರಿಕಾಭಿವೃದ್ಧಿ
- ಗ್ಲೋಬ್ ಟ್ರೋಟಿಂಗ್ ಎಕಾನಮಿ- ಪ್ರವಾಸೋದ್ಯಮ ಆರ್ಥಿಕತೆ
- ಗ್ರೀನ್ ಎಕಾನಮಿ- ನವೀಕರಿಸಬಹುದಾದ ಇಂಧನ ಸೇರಿದಂತೆ ಪರಿಸರ ಪೂರಕ ಆರ್ಥಿಕ ಚಟುವಟಿಕೆಗಳು
- ಗ್ರೋಯಿಂಗ್ ಅರ್ಬನ್ ಎಕಾನಮಿ- ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆ
ಬಜೆಟ್ನ ನೇರ ಪ್ರಸಾರ:
ಈ ಮಾದರಿ ಆಧಾರವಾಗಿಟ್ಟುಕೊಂಡು ನಾಡಿನ ಅಭಿವೃದ್ಧಿ ರಥವನ್ನು ಮುನ್ನಡೆಸುವುದಾಇ ಅವರು ತಿಳಿಸಿದರು. ʼʼಕರ್ನಾಟಕದ 45ಕ್ಕೂ ಹೆಚ್ಚಿನ ಉತ್ಪನ್ನಗಳಿಗೆ ಜಿಐ ಮಾನ್ಯತೆಗಳು ದೊರೆತಿವೆ. ಈ ಮಾನ್ಯತೆಗಳು ನಮ್ಮ ಜನರ ಪಾರಂಪರಿಕ ಕ್ರಿಯಾಶೀಲತೆಗೆ ಸಾಕ್ಷಿಯಾಗಿದ್ದು ಹೊಸ ಉದ್ಯೋಗಗಳ ಸೃಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆʼʼ ಎಂದರು.
ಕರ್ನಾಟಕ ಬಜೆಟ್ನ ಪಿಡಿಎಫ್ ಪ್ರತಿ ಹೀಗೆ ಡೌನ್ಲೋಡ್ ಮಾಡಿ
''ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರ ಜತೆಯಲ್ಲಿ ರಾಜ್ಯದ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಇಲಾಖಾವಾರು ನೀಡುವ ಅನುದಾನಗಳನ್ನು ಹೊರತುಪಡಿಸಿ ಕಳೆದ ವರ್ಷ ರಸ್ತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ʼಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮʼವನ್ನು ಜಾರಿಗೊಳಿಸಿ 8,600 ಕೋಟಿ ರು. ಗಳ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರ 2ನೇ ಹಂತವಾಗಿ 2026-27ನೇ ಸಾಲಿನಲ್ಲಿ 4,000 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದುʼʼ ಎಂದು ಸಿದ್ದರಾಮಯ್ಯ ಘೋಷಿಸಿದರು.
ʼʼವಸತಿರಹಿತರಿಗೆ ಮನೆಗಳು, ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ. ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ತಲ್ಲಣಗಳನ್ನು ನಿಭಾಯಿಸಲು ಸೂಕ್ತ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆʼʼ ಎಂದು ತಿಳಿಸಿದರು.
ಕಾರವಾರ, ಯಾದಗಿರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಕೋಲಾರ, ವಿಜಯಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು
ಅಸಮತೋಲನ ನಿವಾರಣೆಗೆ ಕ್ರಮ
ʼʼಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮತ್ತಷ್ಟು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಪ್ರೊ.ಎಂ. ಗೋವಿಂದರಾವ್ ಸಮಿತಿಯ ಶಿಫಾರಸ್ಸುಗಳಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ರಾಜ್ಯ ನೀತಿ ಮತ್ತು ಯೋಜನಾ ಆಯೋಗ, ಐದನೇ ಹಣಕಾಸು ಆಯೋಗ, ಆಡಳಿತ ಸುಧಾರಣಾ ಆಯೋಗಗಳ ಶಿಫಾರಸ್ಸುಗಳನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆʼʼ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.