ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Hassan controversy: ಕಮ‌ಲ್ ಹಾಸನ್‌ ವಿವಾದ: 'ಕತ್ತೆಗೆ ಹೆಚ್ಚಿನ ಬೆಲೆ ನೀಡಬಾರದುʼ ಎಂದ ರಮ್ಯಾ

Kamal Hassan controversy: ʼಅಜ್ಞಾನವು ಬೊಬ್ಬೆ ಹೊಡೆಯುತ್ತಿರುವಾಗ ಬುದ್ಧಿವಂತಿಕೆ ಮೌನವಾಗಿರುತ್ತದೆ. ನಿಮ್ಮ ಶಾಂತಿ ಮತ್ತು ಮೌನವು ಹೆಚ್ಚು ಯೋಗ್ಯವಾದುದು. ಕತ್ತೆಯ ಬಗ್ಗೆ ಹೆಚ್ಚಿನ ಗಮನ ನೀಡಿದರೆ ಅದು ತನ್ನನ್ನು ಸಿಂಹ ಎಂದು ಭಾವಿಸುತ್ತದೆʼ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಕಮ‌ಲ್ ಹಾಸನ್‌ ವಿವಾದ: 'ಕತ್ತೆಗೆ ಹೆಚ್ಚಿನ ಬೆಲೆ ನೀಡಬಾರದುʼ ಎಂದ ರಮ್ಯಾ

ನಟಿ ರಮ್ಯಾ ಪೋಸ್ಟ್

ಹರೀಶ್‌ ಕೇರ ಹರೀಶ್‌ ಕೇರ Jun 2, 2025 9:16 AM

ಬೆಂಗಳೂರು: ಕಮ‌ಲ್ ಹಾಸನ್‌ (Actor Kamal Hassan controversy) ಅವರ ಕನ್ನಡ ವಿರೋಧಿ ಹೇಳಿಕೆಗೆ ಸಂಬಂಧಿಸಿದ ವಿವಾದದಲ್ಲಿ ತಮ್ಮದೇ ಅಭಿಪ್ರಾಯ ನೀಡಿದ್ದ ನಟಿ ರಮ್ಯಾ (Actress Ramya), ಇದೀಗ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ (Social media) ಈ ವಿವಾದಕ್ಕೆ ಸಂಬಂಧಿಸಿ ʼಕತ್ತೆಗಳಿಗೆ (Donkeys) ಹೆಚ್ಚಿನ ಬೆಲೆ ನೀಡಬಾರದುʼ ಎಂದಿದ್ದಾರೆ. ಕಮಲ್‌ ವಿರುದ್ಧ ಕನ್ನಡಿಗರು ಒಟ್ಟಾಗುತ್ತಿರುವ ಈ ಸಂದರ್ಭದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಟ್ರೋಲ್‌ ಮಾಡಿದವರನ್ನು ಕತ್ತೆಗಳು ಎಂದಿರುವುದು ಮತ್ತಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಿವಾದದಲ್ಲಿ, ಕಮಲ್ ಹಾಸನ್ ಪರ ಬ್ಯಾಟಿಂಗ್ ಮಾಡಿದವರಲ್ಲಿ ರಮ್ಯಾ ಒಬ್ಬರು. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ರಮ್ಯಾ ದ್ರಾವಿಡ ಭಾಷೆಯ ಅಡಿಯಲ್ಲಿಯೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಬರುತ್ತವೆ. ನಮ್ಮ ಭಾಷೆಗಳಲ್ಲಿ ಸಾಮ್ಯತೆ ಇರಬಹುದು. ಆದರೆ ಯಾವ ಭಾಷೆ ಕೂಡ ಇನ್ನೊಂದು ಭಾಷೆಗಿಂತ ಶ್ರೇಷ್ಠ ಎಂದಿಲ್ಲ. ನಮ್ಮಲ್ಲಿ ಹಲವರು ಸಂಸ್ಕ್ರತ ಎಲ್ಲ ಭಾಷೆಗಳ ತಾಯಿ ಎಂದು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಅದು ಕೂಡ ತಪ್ಪು. ಯಾಕೆಂದರೆ ಸಂಸ್ಕ್ರತ ಇಂಡೋ-ಆರ್ಯನ್ ಭಾಷೆ. ಇಂಡೋ ಆರ್ಯನ್ನರು ಇಲ್ಲಿ ವಲಸೆ ಬರುವುದಕ್ಕಿಂತ ಬಹಳ ವರ್ಷಗಳ ಮುಂಚೆಯಿಂದ ನಾವು ಇಲ್ಲಿ ಇದ್ದೇವೆ ಎಂದು ಹೇಳಿದ್ದರು.

ತಮ್ಮ ಹೇಳಿಕೆಗೆ ಪೂರಕವಾಗಿ ದ್ರಾವಿಡ ಭಾಷೆಗಳ ಉಗಮದ ಚಾರ್ಟ್‌ನ್ನು ಕೂಡ ರಮ್ಯಾ ಹಂಚಿಕೊಂಡಿದ್ದರು. ಆದರೆ ಇದೇ ಸಮಯದಲ್ಲಿ ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಕೂಗಿಗೆ ಕೂಡ ಉತ್ತರ ನೀಡಿದ್ದ ರಮ್ಯಾ, ಕಮಲ್ ಹಾಸನ್ ಅವರ ಹೇಳಿಕೆ ತಪ್ಪಿದೆ. ಹಾಗೆಂದ ಮಾತ್ರಕ್ಕೆ ಅವರ ಚಿತ್ರವನ್ನು ನಿಷೇಧ ಮಾಡಲು ಮುಂದಾಗಿದ್ದು ತುಸು ಅತಿರೇಕ ಅನಿಸುವುದಿಲ್ಲವೆ ಎಂದು ಪ್ರಶ್ನೆ ಮಾಡಿದ್ದರು. ‌ʼನಾವೆಲ್ಲರು ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು, ಅದಕ್ಕಾಗಿ ಒಂದಾಗಬೇಕು, ಆದರೆ ಅದಕ್ಕೂ ಮೊದಲು ಪರಸ್ಪರ ಗೌರವ ಕೊಡುವುದನ್ನು ನಾವು ಕಲಿಯಬೇಕುʼ ಎಂದು ರಮ್ಯಾ ಹೇಳಿದ್ದರು.

ರಮ್ಯಾ ಅವರ ಈ ಹೇಳಿಕೆ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಟ್ರೋಲಿಗರ ಬಾಯಿಗೆ ಕೂಡ ಆಹಾರವಾಗಿತ್ತು. ಟ್ರೋಲ್ ಹೆಸರಿನಲ್ಲಿ ಅನೇಕರು ರಮ್ಯಾ ಅವರನ್ನು ವ್ಯೆಯಕ್ತಿಕವಾಗಿ ನಿಂದಿಸಲು ಶುರು ಮಾಡಿದ್ದರು.ಇವರೆಲ್ಲರಿಗೆ ಈಗ ರಮ್ಯಾ ಉತ್ತರ ನೀಡಿದ್ದಾರೆ. ʼಮೂರ್ಖರ ಜೊತೆ ಮತಾಂಧರರ ಜೊತೆ ಯಾವತ್ತೂ ವಾದ ಮಾಡಬೇಡಿʼ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಮ್ಯಾ, ʼನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವ ಕೆಟ್ಟ ಮಾರ್ಗವೆಂದರೆ ಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ವಹಿಸದ, ತನ್ನದೇ ಆದ ನಂಬಿಕೆಗಳು ಮತ್ತು ಅವಾಸ್ತವಿಕ ಭ್ರಮೆಗಳನ್ನು ಮಾತ್ರ ನಂಬುವ ಮೂರ್ಖ ಮತ್ತು ಮತಾಂಧರೊಂದಿಗೆ ವಾದ ಮಾಡುವುದು. ಅರ್ಥಹೀನ ವಾದಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ನಾವು ಎಷ್ಟೇ ಪುರಾವೆಗಳನ್ನು ಪ್ರಸ್ತುತಪಡಿಸಿದರೂ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಜನರಿದ್ದಾರೆ. ಅವರು ಅಹಂಕಾರ, ದ್ವೇಷ ಮತ್ತು ಅಸಮಾಧಾನದಿಂದ ಕುರುಡರಾಗಿದ್ದಾರೆ. ಅವರು ಸರಿಯಲ್ಲದಿದ್ದರೂ ತಾವು ಸರಿ ಎಂದು ಭಾವಿಸುತ್ತಾರೆ. ಅಜ್ಞಾನವು ಬೊಬ್ಬೆ ಹೊಡೆಯುತ್ತಿರುವಾಗ ಬುದ್ಧಿವಂತಿಕೆ ಮೌನವಾಗಿರುತ್ತದೆ. ನಿಮ್ಮ ಶಾಂತಿ ಮತ್ತು ಮೌನವು ಹೆಚ್ಚು ಯೋಗ್ಯವಾದುದು. ಕತ್ತೆಯ ಬಗ್ಗೆ ಹೆಚ್ಚಿನ ಗಮನ ನೀಡಿದರೆ ಅದು ತನ್ನನ್ನು ಸಿಂಹ ಎಂದು ಭಾವಿಸುತ್ತದೆʼ ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Shiva Rajkumar: ಕಮಲ್‌ ಹಾಸನ್‌ ಕನ್ನಡ ಹೇಳಿಕೆಗೆ ಚಪ್ಪಾಳೆ ಹೊಡೆದಿಲ್ಲ: ಶಿವ ರಾಜ್‌ಕುಮಾರ್‌ ಸ್ಪಷ್ಟನೆ