Shiva Rajkumar: ಕಮಲ್ ಹಾಸನ್ ಕನ್ನಡ ಹೇಳಿಕೆಗೆ ಚಪ್ಪಾಳೆ ಹೊಡೆದಿಲ್ಲ: ಶಿವ ರಾಜ್ಕುಮಾರ್ ಸ್ಪಷ್ಟನೆ
Kamal Haasan: ಕಾಲಿವುಡ್ನ ಜನಪ್ರಿಯ ನಟ ಕಮಲ್ ಹಾಸನ್ ಕನ್ನಡ ತಮಿಳಿನಿಂದಲೇ ಹುಟ್ಟಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸ್ಯಾಂಡಲ್ವು ನಟ ಶಿವ ರಾಜ್ಕುಮಾರ್ ಅವರ ಸಮ್ಮುಖದಲ್ಲಿ ಅವರು ಈ ಹೇಳಿಕೆ ನೀಡಿದ್ದು ಕನ್ನಡಪರ ಸಂಘಟನೆಗಳು ಕಮಲ್ ವಿರುದ್ದ ಹೋರಾಟ ಬಿಗಿಗೊಳಿಸಿವೆ. ಈ ಮಧ್ಯೆ ಶಿವಣ್ಣ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕಮಲ್ ಹಾಸನ್ ಮತ್ತು ಶಿವ ರಾಜ್ಕುಮಾರ್.

ಬೆಂಗಳೂರು: ಕಾಲಿವುಡ್ನ ಜನಪ್ರಿಯ ನಟ ಕಮಲ್ ಹಾಸನ್ (Kamal Haasan) ಮತ್ತೊಮ್ಮೆ ವಿವಾದದ ಅಲೆ ಎಬ್ಬಿಸಿದ್ದಾರೆ. ತಮ್ಮ ಮುಂಬರುವ ʼಥಗ್ ಲೈಫ್ʼ (Thug Life) ಚಿತ್ರದ ಆಡಿಯೋ ಲಾಂಚ್ ವೇಳೆ ಸ್ಯಾಂಡಲ್ವುಡ್ ನಟ ಶಿವ ರಾಜ್ಕುಮಾರ್ (Shiva Rajkumar) ಸಮ್ಮುಖದಲ್ಲಿ ತಮಿಳಿನಿಂದ ಕನ್ನಡ ಹುಟ್ಟಿಕೊಂಡಿದೆ ಎಂದು ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜತೆಗೆ ಕ್ಷಮೆ ಕೋರುವುದಿಲ್ಲ ಎಂದು ಹೇಳುವ ಮೂಲಕ ಉದ್ಧಟತನ ಮುಂದುವರಿಸಿದ್ದಾರೆ. ಜತೆಗೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವ ರಾಜ್ಕುಮಾರ್ ಅವರು ಕಮಲ್ ಅವರ ಹೇಳಿಕೆಗೆ ಚಪ್ಪಾಳೆ ಹೊಡೆದಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಶಿವಣ್ಣ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಈ ಹಿಂದೆ ಕಮಲ್ ಹಾಸನ್ ನಡೆಯನ್ನು ಸಮರ್ಥಿಸಿಕೊಂಡಿದ್ದ ಶಿವಣ್ಣ ಇದೀಗ ಕನ್ನಡ ವಿರುದ್ಧದ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ʼʼಕಲಾವಿದರಿಗೆ ಎಲ್ಲ ಭಾಷೆಯೂ ಮುಖ್ಯ. ಆದರೆ ಮಾತೃಭಾಷೆ ಎಂದು ಬಂದಾಗ ನಮ್ಮ ಮೊದಲ ಆದ್ಯತೆ ಕನ್ನಡ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಕನ್ನಡಕ್ಕಾಗಿ ಜೀವವನ್ನೇ ಕೊಡಲು ನಾನು ಸಿದ್ಧ ಎನ್ನುವುದನ್ನು ಹಿಂದೆಯೇ ಹೇಳಿದ್ದೆ. ಕಮಲ್ ಹಾಸನ್ ಬಳಿ ಕ್ಷಮೆ ಕೋರುವಂತೆ ಹೇಳಲು ನನಗೆ ಸಾಧ್ಯವಿಲ್ಲ. ಅವರು ಹಿರಿಯ ನಟರು. ನಾನು ಅವರ ದೊಡ್ಡ ಅಭಿಮಾನಿʼʼ ಎಂದು ತಿಳಿಸಿದ್ದಾರೆ.
ಶಿವಣ್ಣ ಅವರ ಮಾತು:
#WATCH | Bengaluru | On actor Kamal Haasan's remarks on Kannada, actor Shiva Rajkumar says, "Kannada is my first option, no doubt about it... All the languages are important for me... As a mother tongue, Kannada is a priority... I can give my life for Kannada. Whenever an issue… pic.twitter.com/1OraiuUi4Q
— ANI (@ANI) May 31, 2025
ಈ ಸುದ್ದಿಯನ್ನೂ ಓದಿ: Actor Shiva Rajkumar: ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ನಟ ಶಿವರಾಜ್ ಕುಮಾರ್ ಸ್ಪಷ್ಟನೆ
ಚಪ್ಪಾಳೆ ಹೊಡೆದದ್ದು ಅದಕ್ಕಲ್ಲ
ಈ ಕಾರ್ಯಕ್ರಮದಲ್ಲಿ ಭಾವಹಿಸಿದ್ದ ಶಿವಣ್ಣ ಕಮಲ್ ಅವರ ಕನ್ನಡ ಹೇಳಿಕೆಗೆ ಚಪ್ಪಾಳೆ ತಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಶಿವಣ್ಣ ಸ್ಪಷ್ಟನೆ ನೀಡಿ, ʼʼಈ ಕಾರ್ಯಕ್ರಮದ ವೇಳೆ ಏನಾಯ್ತು ಎನ್ನುವುದೇ ನನಗೆ ಗೊತ್ತಾಗಲಿಲ್ಲ. ಕಮಲ್ ಮಾತಿಗೆ ನಾನು ಚಪ್ಪಾಳೆ ತಟ್ಟುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆದರೆ ಚಪ್ಪಾಳೆ ಹೊಡೆದಿದ್ದು ಬೇರೆ ಕಾರಣಕ್ಕೆ. ಅವರ ನನ್ನ ಚಿಕ್ಕಪ್ಪ ಎಂದು ಹೇಳಿದ್ದರು. ಇದಕ್ಕೆ ನಾನು ಖುಷಿಯಿಂದ ತಪ್ಪಾಳೆ ಹೊಡೆದಿದ್ದೆʼʼ ಎಂದು ತಿಳಿಸಿದ್ದಾರೆ. ʼʼಟ್ರಿಕ್ಸ್ ನನ್ನ ಹತ್ರ ತೋರಿಸಬೇಡಿ. ನಾನು ಕೂಡ ನಟ. ಅದನ್ನು ನಾನು ಪತ್ತೆ ಮಾಡಬಲ್ಲೆʼʼ ಎಂದು ಗರಂ ಆಗಿದ್ದಾರೆ.
ಕನ್ನಡ ಪರ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ
ಈ ಮಧ್ಯೆ ಕಮಲ್ ಹಾಸನ್ ಕ್ಷಮೆ ಕೋರಬೇಕೆಂದು ಪಟ್ಟು ಹಿಡಿದಿರುವ ಕನ್ನಡಪರ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿವೆ. ಈಗಾಗಲೇ ʼಥಗ್ ಲೈಫ್ʼ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ. ಕರ್ನಾಟಕ ಪರ ಸಂಘಟನೆಯ ಮುಖಂಡ ಪ್ರವೀಣ್ ಶೆಟ್ಟಿ ಮಾತನಾಡಿ, ʼʼಕಮಲ್ ಹಾಸನ್ ಕನ್ನಡದ ವಿರುದ್ಧ ಮಾತನಾಡಿದ್ದಾರೆ. ಕಮಲ್ ಹಾಸನ್ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡುವುದಿಲ್ಲʼʼ ಎಂದು ಎಚ್ಚರಿಸಿದ್ದಾರೆ.
ಇದೀಗ ʼಥಗ್ ಲೈಫ್ʼ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದ್ದು, ಕರ್ನಾಟಕದಲ್ಲಿ ಯಾವುದೇ ಶೋ ಲಭ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಕಮಲ್ ಹಾಸನ್-ಮಣಿರತ್ನಂ ಜೋಡಿಯ ಚಿತ್ರಕ್ಕೆ ಸಾಕಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ.