ಕಲಬುರಗಿ, ಜ.13: ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿನ್ನೆ ಗುಜರಾತ್ನ (Gujarat) ಐತಿಹಾಸಿಕ ಕ್ಷೇತ್ರ ಸೋಮನಾಥ ದೇಗುಲಕ್ಕೆ (Somnath Temple) ಭೇಟಿ ನೀಡಿದ್ದರು. ಈ ಭೇಟಿಗೆ ಎಐಸಿಸಿ ಅಧ್ಯಕ್ಷ (AICC President) ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಕಲಬುರಗಿ (Kalaburagi) ಜಿಲ್ಲೆಯ ಯಡ್ರಾಮಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಮೋದಿ ಬಡವರಿಗಾಗಿ ಏನು ಮಾಡಿದ್ದಾರೆ ಹೇಳಿ? ಬರೀ ಹಳೆಯ ಗುಡಿ ಗುಂಡಾರಗಳಿಗೆ ಅಡ್ಡಾಡುತ್ತಿದ್ದಾರೆ. ದೇವರು ನಿಮ್ಮ ಕೆಲಸಗಳಿಂದ ಪ್ರಸನ್ನವಾಗುತ್ತಾನೆಯೇ ಹೊರತು ಗುಡಿಗೆ ಹೋಗಿ ಗಂಟೆ ಬಾರಿಸಿದರೆ ದೇವರು ಪ್ರಸನ್ನ ಆಗ್ತಾನಾ ಎಂದು ವ್ಯಂಗ್ಯವಾಡಿದ್ದಾರೆ.
ಸೋಮನಾಥ ದೇವಸ್ಥಾನಕ್ಕೆ ಸಾವಿರ ವರ್ಷ ಆಯ್ತು ಎಂದು ಈಗ ಮೋದಿಗೆ ಆ ದೇವಾಲಯ ನೆನಪಾಗಿದೆ. ಈ ಮುಂಚೆ ಏಕೆ ಈ ದೇವಸ್ಥಾನ ನೆನಪಾಗಲಿಲ್ಲ? ಮುಂಬರುವ ಹಲವು ರಾಜ್ಯಗಳ ಚುನಾವಣೆ ದೃಷ್ಟಿಯಿಂದ ಮೋದಿ ಈ ರೀತಿ ಮಾಡುತ್ತಿದ್ದಾರೆ. ಇಂತಹ ಜನರಿಗೆ ಬುದ್ದಿ ಕಲಿಸುವ ಕೆಲಸ ಜನ ಮಾಡಬೇಕು ಅಂತ ಖರ್ಗೆ ಕರೆಕೊಟ್ಟರು.
ರೈತರ ಬಗ್ಗೆ ಮೂರು ಕೆಟ್ಟ ಕಾನೂನು ತಂದರು. ಕೊನೆಗೆ ರೈತರು ದಂಗೆ ಎದ್ದ ಮೇಲೆ, 700 ಜನ ಸತ್ತ ಮೇಲೆ ಮೋದಿ ವಾಪಸ್ ತಗೊಂಡರು. ಇದೇ ಸ್ಥಿತಿ ಮನರೇಗಾ ವಿಚಾರದಲ್ಲೂ ಬರುತ್ತದೆ. ಅದಕ್ಕೂ ಮುನ್ನವೇ ಮೋದಿ ಅವರೇ ಎಚ್ಚರಗೊಳ್ಳಿ, ಮನರೇಗಾ ಯೋಜನೆ ವಾಪಸ್ ಕೊಡಿ ಎಂದು ಖರ್ಗೆ ಆಗ್ರಹಿಸಿದರು.
ಜಿ ರಾಮ್ ಜಿ ವಿರುದ್ಧ ಖರ್ಗೆ ಆಕ್ರೋಶ
ಕೇಂದ್ರ ಸರ್ಕಾರ ಮನರೆಗಾ ತೆಗೆದು ಜಿ ರಾಮ್ ಜಿ ಅಂತ ತಂದಿದ್ದಾರೆ. ಬಡವರ ಹಕ್ಕು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಇದನ್ನು ತಂದಿದೆ. ಮನರೆಗಾವನ್ನು ಬಡವರ ಹೊಟ್ಟೆ ತುಂಬಲು ನಮ್ಮ ಸರ್ಕಾರ ಜಾರಿಗೆ ತಂದಿತ್ತು. ಆದರೆ ಈ ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯಲು ಮುಂದಾಗಿದೆ. ಆದರೆ ಅದರ ಬಗ್ಗೆ ನಮ್ಮ ಭಾಗದ ಜನ ನಮ್ಮ ನಾಯಕರು ಮಾತಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಂದರ್ಭ ಬಂದರೆ ಅದರ ವಿರುದ್ಧ ಹೋರಾಡಲು ಸಜ್ಜಾಗಿ ಎಂದು ಕರೆ ನೀಡಿದರು.
ಸೋಮನಾಥ ದೇವಾಲಯಕ್ಕೆ ಮೋದಿ ಭೇಟಿ; 72 ಗಂಟೆಗಳ ಓಂ ಪಠಣದಲ್ಲಿ ಪ್ರಧಾನಿ ಭಾಗಿ
ಒಂದು ಸಾವಿರ ಕೋಟಿ ರೂಪಾಯಿ ಅಡಿಗಲ್ಲು ಸಮಾರಂಭ ಇಲ್ಲಿ ನೆರವೇರಿಸಲು ಬಂದಿದ್ದೇವೆ. 2 ಸಾವಿರ ಕೋಟಿ ರೂಪಾಯಿ ಕಾಮಗಾರಿಗೆ ಸರ್ಕಾರ ಖರ್ಚು ಮಾಡ್ತಾ ಇದೆ. 371 ಜೆ ಲಾಭ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಿಕ್ಕಿದೆ ಎಂದರು.
ಅನೇಕ ಕಡೆ ಶಾಲೆಗಳಿವೆ, ಶಿಕ್ಷಕರ ಕೊರತೆ ಇದೆ. ಎಲ್ಲಿವರೆಗೆ ಶಿಕ್ಷರನ್ನು ಕೊಡಲ್ಲ ಅಲ್ಲಿವರೆಗೆ ನಮ್ಮ ಭಾಗ ಸುಧಾರಣೆ ಆಗಲ್ಲ. ನಮ್ಮ ಭಾಗ ಹಿಂದೆ ಉಳಿಯಲು ಕಾರಣ ಶಿಕ್ಷಕರ ಕೊರತೆ. ಶಿಕ್ಷಕರೇ ಇಲ್ಲದೆ ಮಕ್ಕಳು ಹೇಗೆ ಓದಲು ಸಾಧ್ಯ? ಹಣ ಇದ್ದವರು ಖಾಸಗಿ ಶಾಲೆಗೆ ಹಾಕ್ತಾರೆ. ಇದರಿಂದ ಬಡವರ ಮಕ್ಕಳಿಗೆ ಶಿಕ್ಷಣ ಪಡೆಯಲು ತೊಂದರೆ ಆಗ್ತಾ ಇದೆ. ಹಾಗಾಗಿ ನಮ್ಮ ಭಾಗದಲ್ಲಿ ಶಿಕ್ಷಕರನ್ನು ನೇಮಕ ಮಾಡಿ ಎಂದರು.