ಬಳ್ಳಾರಿ: ರೇಣುಕಾಸ್ವಾಮಿ ಕೊಲೆ (Renukaswamy Murder Case) ಮಾದರಿಯಲ್ಲೇ ಯುವಕನೊಬ್ಬನನ್ನು ಹತ್ಯೆ ಮಾಡಿರುವ ಪ್ರಕರಣ (Bellary Murder Case) ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ವಾರದ ಹಿಂದೆ ನಡೆದ ಬಸನಗೌಡ ಕೊಲೆ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ.
ಖಾಸಗಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದ ಬಸನಗೌಡನನ್ನು ಬಳ್ಳಾರಿ ತಾಲೂಕಿನ ಮೋಕಾ ಸಮೀಪ ಕೊಲೆ ಮಾಡಿ, ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿತ್ತು. ಮರುದಿನ ಬೆಳಗ್ಗೆ ಮೋಕಾ ಬಳಿಯ ಎಲ್ಎಲ್ಸಿ ಕಾಲುವೆ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಮೋಕಾ ಠಾಣೆ ಪೊಲೀಸರು, ಇದು ಪೂರ್ವಯೋಜಿತ ಕೊಲೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಬಸನಗೌಡನ ಅಣ್ಣನಿಗೆ ಮಹಿಳೆಯ ತಂಗಿಯನ್ನು ಮದುವೆ ಮಾಡಿಕೊಡಲಾಗಿತ್ತು. ಸಂಬಂಧದಲ್ಲಿ ಅತ್ತಿಗೆಯಾಗಬೇಕಿದ್ದ ಮಹಿಳೆಗೆ ಬಸನಗೌಡ ಕಳೆದ ಎರಡು ವರ್ಷಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದ. ಮದುವೆ ಸಮಾರಂಭವೊಂದರಲ್ಲಿ ಪರಿಚಯವಾದ ಬಳಿಕ ಬಸನಗೌಡ, ಮಹಿಳೆಗೆ ಕೆಟ್ಟ ಮೆಸೇಜ್ಗಳು ಹಾಗೂ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದ. ಒಂದು ವರ್ಷದಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಈ ವಿಷಯವನ್ನು ತನ್ನ ಪತಿ ದೊಡ್ಡಬಸವನಗೌಡ ಹಾಗೂ ಸಹೋದರ ವಿಜಯ್ಗೆ ತಿಳಿಸಿದ್ದಾಳೆ.
ಇದಾದ ಬಳಿಕ ಮೂವರು ಸೇರಿ ಬಸನಗೌಡನ ಕೊಲೆಗೆ ಸಂಚು ರೂಪಿಸಿದ್ದಾರೆ. ಮಹಿಳೆಯಿಂದ ಪೋನ್ ಮಾಡಿಸಿ ಬಸನಗೌಡನನ್ನು ಕರೆಸಿಕೊಂಡಿದ್ದಾರೆ. ಆಕೆಯ ಗಂಡ ಮತ್ತು ಸಹೋದರ ಸೇರಿ ಬಸನಗೌಡನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಸುಮಾರು 10 ಕಿಲೋಮೀಟರ್ ದೂರದ ಕಾಲುವೆ ಸಮೀಪದ ನಿರ್ಜನ ಪ್ರದೇಶಕ್ಕೆ ಮೃತದೇಹವನ್ನು ಕೊಂಡೊಯ್ದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಅನೈತಿಕ ಸಂಬಂಧದ ಶಂಕೆ; ಲಿವ್ ಇನ್ ಪಾರ್ಟ್ನರ್ ಸಂಗಾತಿಯ ಕತ್ತು ಸೀಳಿದ ವ್ಯಕ್ತಿ
ಪ್ರಕರಣ ಸಂಬಂಧ ಮಹಿಳೆ, ಆಕೆಯ ಪತಿ ದೊಡ್ಡಬಸವನಗೌಡ ಹಾಗೂ ಸಹೋದರ ವಿಜಯ್ನನ್ನು ಪೊಲೀಸರು ಬಂಧಿಸಿದ್ದಾರೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.