ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೆಡಿಎಸ್ ಕಾರ್ಯಕರ್ತರಿಗೂ ನನ್ನ ಮನೆ ಬಾಗಿಲು ತೆರೆದಿದೆ: ಸಿಎಂ ಡಿ.ಕೆ. ಶಿವಕುಮಾರ್

ಕನಕಪುರ ಕ್ಷೇತ್ರದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು. ಲೋಕಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಕೊಡಲಿಲ್ಲ ಎಂದು ಯಾರನ್ನೂ ದೂಷಣೆ ಮಾಡುವುದಿಲ್ಲ. ಏನೋ ಒಮ್ಮೆ ಹೆಚ್ಚು ಕಮ್ಮಿ ಆಗಿ ತಪ್ಪಾಗಿದೆ. ನಮ್ಮ ಮುಖಂಡರು ಯಾರ ವಿರುದ್ಧವೂ ದ್ವೇಷ ಸಾಧಿಸಬಾರದು. ಅವರ ಮನಪರಿವರ್ತನೆ ಆಗಲಿ ಎಂದು ಪ್ರಾರ್ಥಿಸಿ ಎಂದು ಕಾರ್ಯಕರ್ತರಿಗೆ ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕನಕಪುರ ಕ್ಷೇತ್ರಕ್ಕೆ ಭೇಟಿ ನೀಡಿದ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಜನರಿಂದ ಅದ್ಧೂರಿ ಸ್ವಾಗತ.

ಕನಕಪುರ, ಜೂ. 07: "ಜನತಾದಳದ ಕಾರ್ಯಕರ್ತರಿಗೂ ಈ ಡಿ.ಕೆ. ಶಿವಕುಮಾರ್ ಇದ್ದಾನೆ. ನನ್ನ ಮನೆ ಬಾಗಿಲು ನಿಮಗೂ ತೆರೆದಿದೆ. ನೀವು ನನ್ನನ್ನು ಬಳಸಿಕೊಂಡು, ಸಹಾಯ ಪಡೆಯಬಹುದು" ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್‌ನವರಿಗೆ ಮುಕ್ತ ಕರೆ ನೀಡಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಭಾನುವಾರ ತವರು ಕ್ಷೇತ್ರ ಕನಕಪುರದ ವಿವಿಧ ಭಾಗಗಳಿಗೆ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.

"ನಿಮಗೆ ಒಳ್ಳೆಯದು ಮಾಡಲು ನಾನು ಸಿದ್ಧನಾಗಿದ್ದೇ‌ನೆ. ದೇವರು ವರ, ಶಾಪ ನೀಡುವುದಿಲ್ಲ‌‌. ಅವಕಾಶ ಮಾತ್ರ ನೀಡುತ್ತಾನೆ. ನೀವು ಸಿಕ್ಕಂತಹ ಅವಕಾಶವನ್ನು ಬಳಸಿಕೊಳ್ಳಬೇಕು‌‌‌. ಬಿಜೆಪಿಯನ್ನು ದೂರ ಇಡಬೇಕು ಎಂದು ಹಿಂದೆ ಅನಿತಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರಿಗೆ ನಾವು ಬೆಂಬಲ ನೀಡಿದ್ದೆವು. ಈ ಹಿಂದೆ ಆಗಿದ್ದನ್ನು ನಾನು ಈಗ ಚರ್ಚೆ ಮಾಡುವುದಿಲ್ಲ" ಎಂದು ಹೇಳಿದರು.‌

DK Shivakumar - 2026-06-07T184618.116

ಯಾರನ್ನೂ ದ್ವೇಷ ಮಾಡಬೇಡಿ, ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗಿ

ಈ ಕ್ಷೇತ್ರದಲ್ಲಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು. ಲೋಕಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಕೊಡಲಿಲ್ಲ ಎಂದು ದೂಷಣೆ ಮಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಏನೋ ಒಮ್ಮೆ ಹೆಚ್ಚು ಕಮ್ಮಿ ಆಗಿ ತಪ್ಪಾಗಿದೆ. ಅದನ್ನು ಕ್ಷಮಿಸಿ, ಮುಂದೆ ನನ್ನನ್ನು ಯಾವ ರೀತಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದೀರೋ ಅದೇ ರೀತಿ ನಮ್ಮವರನ್ನು ಮುಂದೆಯೂ ಬೆಂಬಲಿಸಿ. ಎಲ್ಲಾರೂ ಒಂದಾಗಿ ಹೋಗೋಣ. ನಮ್ಮ ಮುಖಂಡರು ಯಾರ ವಿರುದ್ಧವೂ ದ್ವೇಷ ಸಾಧಿಸಬಾರದು. ಅವರ ಮನಪರಿವರ್ತನೆ ಆಗಲಿ ಎಂದು ಪ್ರಾರ್ಥಿಸಿ ಎಂದರು.

DK Shivakumar -

ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ

ನನ್ನ ಕಷ್ಟ ಕಾಲದಲ್ಲಿ ನೀವು ನನಗಾಗಿ ಪ್ರಾರ್ಥನೆ ಮಾಡಿದ್ದೀರಿ, ಹರಕೆ ಕಟ್ಟಿಕೊಂಡಿದ್ದೀರಿ, ಹೋರಾಟ ಮಾಡಿದ್ದೀರಿ, ಕೇಸ್ ಹಾಕಿಸಿಕೊಂಡಿದ್ದೀರಿ. ನಿಮ್ಮ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಎರಡು ದಿನ ತಡವಾದರೂ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. ನಾನು ಪಕ್ಷದ ಮಾರ್ಗದರ್ಶನದಂತೆ ನಡೆಯಬೇಕು. ನಾನು ಹಾಗೂ ಸಿದ್ದರಾಮಯ್ಯ ಅವರು ಸೇರಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ,ಸರ್ಕಾರ ರಚಿಸಲು ನೀವು ಅನುವು ಮಾಡಿಕೊಡಬೇಕು ಎಂದರು.

ನನಗೆ ಜಾತಿ, ಧರ್ಮ ಭೇದ ಭಾವದ ಮೇಲೆ ನಂಬಿಕೆ ಇಲ್ಲ. ಕುವೆಂಪು ಅವರು ಹೇಳಿರುವಂತೆ ಈ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಮಾಡಬೇಕು. ಎಲ್ಲ ಸಮುದಾಯದವರನ್ನು ನಾನು ನನ್ನ ಅಣ್ಣ ತಮ್ಮಂದಿರೆಂದು ಕಂಡಿದ್ದೇನೆ ಎಂದು ಹೇಳಿದರು.

DK Shivakumar -

ಕನಕಪುರ ಕ್ಷೇತ್ರದ ಒಂದು ಮತವೂ ಹೊರಹೋಗಬಾರದು

"ಎಸ್‌ಐಆರ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ನಮ್ಮ ಮತ ಇದೆ ಎಂದು ಭಾವಿಸಿ ಸುಮ್ಮನಾದರೆ ಮತ ಹೋಗುತ್ತದೆ. ಮತ್ತೊಮ್ಮೆ ಎಲ್ಲರೂ ಅರ್ಜಿ ಸಲ್ಲಿಸಬೇಕು. ನೀವು ಅರ್ಜಿ ಸಲ್ಲಿಸದಿದ್ದರೆ ಮತವೂ ಇಲ್ಲ ಜೊತೆಗೆ ಯಾವುದೇ ಸರ್ಕಾರಿ ಯೋಜನೆಗಳ ಲಾಭವೂ ಸಿಗುವುದಿಲ್ಲ. ಗೃಹಲಕ್ಷ್ಮೀ, ಗೃಹಜ್ಯೋತಿ ಯಾವುದೂ ಸಿಗುವುದಿಲ್ಲ. ನಿಮ್ಮ ಮತವನ್ನು ಕನಕಪುರ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಬಿಜೆಪಿ, ದಳದವರ ಟೀಕೆಗಳು ಸತ್ತಿವೆ, ನಮ್ಮ ಕೆಲಸಗಳು ಉಳಿದಿವೆ:

"ಯಾರೂ ವ್ಯವಸಾಯ ಬಿಡಬೇಡಿ, ರೇಷ್ಮೆ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮಾಡಿಕೊಂಡಿರಿ. ನೀವು ಬೆಂಗಳೂರಿಗೆ ಹೋಗಿ ಬೀದಿಯಲ್ಲಿ ವ್ಯಾಪಾರ ಮಾಡಿಕೊಂಡು, ಅಂಗಡಿಗಳಲ್ಲಿ ಕೆಲಸ ಮಾಡಬೇಡಿ. ಇಲ್ಲೇ ಇದ್ದು ಸ್ವಾಭಿಮಾನದ ಬದುಕು ಸಾಗಿಸಿ. ಅದಕ್ಕಾಗಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಕಲ್ಪಿಸಲಾಗಿದೆ. ನಿಮ್ಮ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬೇಡಿ. ಈ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಎಂದು ಮಾಡಿದ ನಂತರ ಇಲ್ಲಿನ ಭೂಮಿ ಬೆಲೆ ಏನಾಗಿದೆ ಎಂದು ನಿಮಗೆ ಗೊತ್ತಿದೆ. ಈ ಜಿಲ್ಲೆಯ ಹೆಸರು ಬದಲಾವಣೆ ಮಾಡುವಾಗ ಬಿಜೆಪಿ ಹಾಗೂ ದಳದವರು ಟೀಕೆ ಮಾಡಿದರು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಅದೇ ರೀತಿ ಅವರ ಟೀಕೆಗಳು ಸತ್ತಿವೆ. ನೀವೆಲ್ಲರೂ ಬೆಂಗಳೂರು ಜಿಲ್ಲೆಯ ಮಕ್ಕಳು" ಎಂದರು.

"ನನ್ನನ್ನು ಜನ ಬಂಡೆ ಎಂದು ಕರೆಯುತ್ತಾರೆ. ಆದರೆ ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ನನ್ನನ್ನು ಪೂಜಿಸಬೇಡಿ. ಈ ಕಲ್ಲನ್ನು ವಿಧಾನಸೌಧಕ್ಕೆ ಪ್ರವೇಶಿಸುವ ಮೆಟ್ಟಿಲಾಗಿ ಮಾಡಿಕೊಳ್ಳಿ" ಎಂದು ತಿಳಿಸಿದರು.