ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನವನ್ನು ಅಭಿವೃದ್ಧಿಪಡಿಸುತ್ತಿದ್ದು, ಉದ್ಯಾನವನದಲ್ಲಿ ಶೌಚಾಲಯ ಕೆಡವಿ, ವಿದ್ಯುತ್ ಕಡಿತಗೊಳಿಸಲಾಗಿದೆ. ಇದರಿಂದ ಹೋರಾಟಗಾರರು ನರಕಯಾತನೆ ಅನುಭವಿಸುವಂತಾಗಿದೆ ಎಂದು ಸ್ವಾತಂತ್ರ್ಯ ಉದ್ಯಾನವನ ಉಳಿಸಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಸ್ವಾತಂತ್ರ್ಯ ಉದ್ಯಾನವನದ ಅವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಮಿತಿ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಪ್ರತಿನಿತ್ಯ ಸಹಸ್ರಾರು ಮಂದಿ ಹೋರಾಟ ಮಾಡುತ್ತಿದ್ದು, ಅವರಿಗೆ ತಾತ್ಕಾಲಿಕವಾಗಿ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಕನಿಷ್ಠ ಹತ್ತರಿಂದ ಹದಿನೈದು ಸಂಚಾರಿ ಶೌಚಾಲಯ, ಜನರೇಟರ್ ಮೂಲಕ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕಿತ್ತು.
ಇದನ್ನೂ ಓದಿ: Bangalore News: ಹಬ್ಬಗಳ ಸಂದರ್ಭದ ಸೊನಾಟಾ ಸಂಗ್ರಹ ತಂದಿದೆ ಹೊಳಪು, ಸೂಕ್ತ ವಿನ್ಯಾಸ
ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಆದರೆ ಇಲ್ಲಿರುವ ನೀರಿನ ಸಂಪರ್ಕ ವನ್ನೂ ಕೂಡ ಸ್ಥಗಿತಗೊಳಿಸಿದ್ದು, ಉದ್ಯಾನವನ ಗಬ್ಬೆದ್ದು ನಾರುತ್ತಿದೆ ಎಂದರು. ಹೋರಾಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಕೂಡ ಪಾಲ್ಗೊಳ್ಳುತ್ತಿದ್ದು, ಹೆಣ್ಣುಮಕ್ಕಗಳಿಗೆ ಇಲ್ಲಿ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.
ಇದು ರಾತ್ರಿ ವೇಳೆಯಲ್ಲಿ ಮದ್ಯಪಾನ, ಗಾಂಜಾ, ಮಾದಕ ದ್ರವ್ಯ ವ್ಯಸಿನಿಗಳ ತಾಣವಾಗಿದೆ. ಹೆಣ್ಣು ಮಕ್ಕಳಿಗೆ ಇಲ್ಲಿ ರಕ್ಷಣೆ ಇಲ್ಲ. ಪೊಲೀಸರು ಕೂಡ ನಿಯಮಿತವಾಗಿ ಇಲ್ಲಿ ಪಹರೆ ನಡೆಸುವು ದಿಲ್ಲ. ಸ್ವಾತಂತ್ರ್ಯ ಉದ್ಯಾನವನ ಅಭಿವೃದ್ಧಿ ಸ್ವಾಗತಾರ್ಹ. ಆದರೆ ಹೋರಾಟಕ್ಕೆ ಬರುವ ಸಹಸ್ರಾರು ಮಂದಿ ಹೋರಾಟಗಾರರನ್ನು ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ. ಇಲ್ಲಿ ಶಾಶ್ವತ ಕಾಮಗಾರಿ ಪೂರ್ಣಗೊಳಿಸುವವರೆಗೆ ತಾತ್ಕಾಲಿಕ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲವಾದಲ್ಲಿ ಇಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡುವುದನ್ನು ನಿಲ್ಲಿಸಬೇಕು ಎಂದು ಗಂಡಸಿ ಸದಾನಂದ ಸ್ವಾಮಿ ಆಗ್ರಹಿಸಿದರು.