Bike Taxi: ಬೈಕ್ ಟ್ಯಾಕ್ಸಿ ಸೇವೆ ಮತ್ತೆ ಆರಂಭ; ಅನುಮತಿ ನೀಡಿಲ್ಲ ಎಂದ ಹೈಕೋರ್ಟ್
high court: ಬೈಕ್ಸ್ ಟ್ಯಾಕ್ಸಿ ಸೇವೆ ನೀಡುವ ಕಂಪನಿಗಳ ಮೇಲೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬಹುದು. ಆದರೆ ಬೈಕ್ಗಳ ಮಾಲೀಕರಿಗೆ ಕಿರುಕುಳ ನೀಡಬೇಡಿ ಎಂದು ಕರ್ನಾಟಕ ಹೈಕೋರ್ಟ್ ಪೀಠವು ರಾಜ್ಯ ಸರ್ಕಾರಕ್ಕೆ ತಿಳಿಸಿದೆ. ಬೆಂಗಳೂರು ನಗರದಲ್ಲಿ ರ್ಯಾಪಿಡೋ ಹಾಗೂ ಉಬರ್ನಂತಹ ಕಂಪನಿಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿನ್ನೆ ಪುನರಾರಂಭಿಸಿದ್ದವು.


ಬೆಂಗಳೂರು: ಹಲವು ದಿನಗಳ ಸೇವೆ ನಿಲ್ಲಿಸಿದ್ದ ಬೈಕ್ ಟ್ಯಾಕ್ಸಿಗಳು (Bike Taxi) ಮತ್ತೆ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಾಣಿಸಲು ಆರಂಭಿಸಿವೆ. ಆದರೆ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸಲು ಯಾವುದೇ ಅಗ್ರಿಗೇಟರ್ ಕಂಪನಿಗಳಿಗೆ ತಾವು ಅನುಮತಿ ನೀಡಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka high court) ಶುಕ್ರವಾರ ಸ್ಪಷ್ಟಪಡಿಸಿದೆ. ಅಲ್ಲದೆ, ನಿಯಮ ಉಲ್ಲಂಘಿಸಿ ಸೇವೆ ಆರಂಭಿಸಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಸಂಪೂರ್ಣ ಸ್ವತಂತ್ರವಾಗಿದೆ ಎಂದು ಮಹತ್ವದ ಸ್ಪಷ್ಟನೆ ನೀಡಿದೆ.
ಬೆಂಗಳೂರು ನಗರದಲ್ಲಿ ರ್ಯಾಪಿಡೋ ಹಾಗೂ ಉಬರ್ನಂತಹ ಕಂಪನಿಗಳು ತಮ್ಮ ಬೈಕ್ ಟ್ಯಾಕ್ಸಿ ಸೇವೆಗಳನ್ನು ಪುನರಾರಂಭಿಸಿದ ಒಂದು ದಿನದ ಬಳಿಕ ಹೈಕೋರ್ಟ್ನಿಂದ ಈ ಸ್ಪಷ್ಟನೆ ಬಂದಿದೆ. ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರು, 'ಬೈಕ್ ಟ್ಯಾಕ್ಸಿಗಳ ಮೇಲಿನ ಸಂಪೂರ್ಣ ನಿಷೇಧವನ್ನು ಪ್ರಶ್ನಿಸಿ ನ್ಯಾಯಾಲಯವು ಅಭಿಪ್ರಾಯ ವ್ಯಕ್ತಪಡಿಸಿದ ಕೂಡಲೇ, ಅಗ್ರಿಗೇಟರ್ ಅಪ್ಲಿಕೇಶನ್ಗಳು ತಮ್ಮ ಕಾರ್ಯಾಚರಣೆಯನ್ನು ಮತ್ತೆ ಪ್ರಾರಂಭಿಸಿವೆʼ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠವು, ʼನಾವು ಯಾವುದೇ ಆದೇಶವನ್ನು ನೀಡಿಲ್ಲ. ಅವರು ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ್ದರೆ, ನಿಮಗೆ (ರಾಜ್ಯ ಸರ್ಕಾರ) ಬೇಕಾದ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಹುದುʼ ಎಂದು ವಿವರಿಸಿತು. ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ನ್ಯಾಯಾಲಯಕ್ಕೆ ಮಾಹಿತಿ ನೀಡುವುದು ತಮ್ಮ ಕರ್ತವ್ಯ ಎಂದು ಇದಕ್ಕೆ ಅಡ್ವೊಕೇಟ್ ಜನರಲ್ ಪ್ರತಿಕ್ರಿಯಿಸಿದರು.
ಈ ಹಿಂದಿನ ಆದೇಶದಲ್ಲಿ ಕೇವಲ ವೈಯಕ್ತಿಕ ಬೈಕ್ ಮಾಲೀಕರನ್ನು ಗುರಿಯಾಗಿಸಿಕೊಂಡು ಕ್ರಮ ಜರುಗಿಸುವುದಕ್ಕೆ ತಡೆಯಾಜ್ಞೆ ನೀಡಲಾಗಿತ್ತೇ ವಿನಃ ಅಗ್ರಿಗೇಟರ್ ಕಂಪನಿಗಳಿಗೆ ಅಲ್ಲ ಎಂದು ಪೀಠವು ಸ್ಪಷ್ಟಪಡಿಸಿತು. ʼಬೈಕ್ ಟ್ಯಾಕ್ಸಿ ನೀತಿಯು ಸರ್ಕಾರದ ಪರಿಗಣನೆಯಲ್ಲಿದೆ. ಇದೇ ವೇಳೆ, ಆದೇಶದ ನಂತರವೂ ವೈಯಕ್ತಿಕ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ," ಎಂದು ವಕೀಲರೊಬ್ಬರು ದೂರಿದಾಗ, ಅಡ್ವೊಕೇಟ್ ಜನರಲ್ ಅದನ್ನು ನಿರಾಕರಿಸಿದರು. ಆಗ ಪೀಠವು, ʼಬೈಕ್ಗಳ ಮಾಲೀಕರಿಗೆ ಕಿರುಕುಳ ನೀಡಬೇಡಿʼ ಎಂದು ಪೀಠವು ಪುನರುಚ್ಚರಿಸಿತು.
ಬುಧವಾರದಂದು, ಓಲಾ, ಉಬರ್ ಮತ್ತು ರ್ಯಾಪಿಡೋ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬೈಕ್ ಟ್ಯಾಕ್ಸಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ಬದಲು ಅವುಗಳನ್ನು ನಿಯಂತ್ರಿಸಲು ಏಕೆ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು. ʼಇಲ್ಲಿ ಜನರ ಜೀವನೋಪಾಯವು ಅಡಗಿದೆ, ಗಂಭೀರವಾಗಿ ಯೋಚಿಸಿ. ಯಾವುದೇ ವ್ಯಾಪಾರವನ್ನು ನಿಯಂತ್ರಿಸುವವರೆಗೆ ಅದು ಕಾನೂನುಬದ್ಧವಾಗಿರುತ್ತದೆʼ ಎಂದು ಪೀಠ ಅಭಿಪ್ರಾಯಪಟ್ಟಿತ್ತು.
ಸರ್ಕಾರದ ನೀತಿ ನಿರ್ಧಾರಗಳಲ್ಲಿ ತಾವು ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ಸರ್ಕಾರದ ಕ್ರಮವು ಸ್ವೇಚ್ಛಾಚಾರದಿಂದ ಕೂಡಿದೆಯೇ ಅಥವಾ ದುರುದ್ದೇಶದಿಂದ ಕೂಡಿದೆಯೇ ಎಂಬುದನ್ನು ಮಾತ್ರ ಪರಿಶೀಲಿಸುವುದಾಗಿ ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ.
ಇದನ್ನೂ ಓದಿ: Bike Taxi Service: ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರ ಅಸ್ತು, ರಾಜ್ಯದಲ್ಲಿ ಈಗೇನಾಗುತ್ತೆ?