ಚಾಮರಾಜನಗರ: ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ (Male Mahadeshwar hill) ವಿಷವಿಕ್ಕಿ 5 ಹುಲಿಗಳ ಹತ್ಯೆ (Tiger kill) ಪ್ರಕರಣ ಮಾಸುವ ಮುನ್ನವೇ ಎರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಮತ್ತೊಂದು ಹುಲಿಯನ್ನು ವಿಷವಿಕ್ಕಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಒಬ್ಬ ಶಂಕಿತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಶಂಕಿತ ಪರಾರಿಯಾಗಿದ್ದಾನೆ.
ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ಅರ್ಧ ದೇಹ ಮಣ್ಣಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇನ್ನರ್ಧ ದೇಹಕ್ಕಾಗಿ ಅರಣ್ಯ ಸಿಬ್ಬಂದಿ ಶೋಧ ಕಾರ್ಯ ನಡೆಸಿದಾಗ ಅನತಿ ದೂರದಲ್ಲಿರುವ ಪೊಟರೆಯೊಂದರಲ್ಲಿ ಹುಲಿಯ ಇನ್ನರ್ಧ ದೇಹವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. ಮುಖ್ಯ ಆರೋಪಿ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲು ಆಲಿಯಾಸ್ ಸಣ್ಣ ಬಂಧನವಾಗಿದ್ದು, ಮತ್ತೆ ಇಬ್ಬರು ಶಂಕಿತ ವ್ಯಕ್ತಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಇದೇ ವೇಳೆ ಇನ್ನೊಬ್ಬ ಶಂಕಿತ ಪರಾರಿಯಾಗಿದ್ದು, ಎಲ್ಲಾ ಶಂಕಿತ ಆರೋಪಿಗಳು ಹನೂರಿನ ಪಚ್ಚೆದೊಡ್ಡಿ ಗ್ರಾಮದವರಾಗಿದ್ದಾರೆ.
12 ವರ್ಷ ವಯಸ್ಸಿನ 250 ಕೆಜಿಗೂ ಹೆಚ್ಚು ತೂಕದ ಭಾರೀ ಗಾತ್ರದ ಹುಲಿ ಇದಾಗಿದ್ದು, ಇದರ ಹಲ್ಲು ಹಾಗು ಉಗುರುಗಳನ್ನು ಕಿತ್ತಿರಲಿಲ್ಲ. ಹುಲಿಯನ್ನು ಕೊಡಲಿಯಿಂದ ಮೂರು ತುಂಡುಗಳಾಗಿ ಮಾಡಿ ಭೀಕರವಾಗಿ ಕೊಲ್ಲಲಾಗಿದೆ. ಹುಲಿ ಹತ್ಯೆ ಮಾಹಿತಿ ತಿಳಿದ ಕೂಡಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತನಿಖೆ ನಡೆಸಲು ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು, ಎಂಟು ದಿನಗಳಲ್ಲಿ ತನಿಖಾ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿರುವ ಪ್ರಾಣಿಗಳ ಹತ್ಯೆ ಹಾಗು ಬೇಟೆ ಪ್ರಕರಣಗಳ ಬಗ್ಗೆ ವರದಿ ಸೇರಿದಂತೆ ಕಳ್ಳ ಬೇಟೆಗಾರರನ್ನು ಕೂಡಲೇ ಪತ್ತೆ ಹಚ್ಚುವುದಲ್ಲದೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ಅವರು ಸೂಚಿಸಿದ್ದಾರೆ.
ಇದನ್ನೂ ಓದಿ: Tiger Kill: ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ, ತನಿಖೆಗೆ ಆದೇಶ