ಗುಡಿಬಂಡೆ: ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನ ಇಲ್ಲದೇ ಇರುವಂತಹವರಿಗೆ ನಿವೇಶನಗಳನ್ನು ನೀಡುವುದೇ ನನ್ನ ಗುರಿಯಾಗಿದ್ದು, ಆದಷ್ಟು ಶೀಘ್ರದಲ್ಲೇ ಗುಡಿಬಂಡೆ ತಾಲೂಕಿನಲ್ಲಿ ಒಂದು ಸಾವಿರ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಕೋರೇನಹಳ್ಳಿ ಗ್ರಾಮದ ನಿವೇಶನ ರಹಿತರರಿಗೆ ನಿವೇಶನಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾಡತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಮೂಲ ಸೌಕರ್ಯ ಗಳನ್ನು ಒದಗಿಸುವುದು ನನ್ನ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಿವೇಶನ ರಹಿತರರ ಪಟ್ಟಿಯನ್ನು ತಯಾರಿಸಲಾಗಿದೆ. 750 ಹಕ್ಕು ಪತ್ರಗಳೂ ಸಹ ಸಿದ್ದವಾಗಿದೆ. ಇನ್ನೂ 250 ಹಕ್ಕುಪತ್ರ ಗಳನ್ನು ಸಿದ್ದಪಡಿಸಿ, ಇದರ ಜೊತೆಗೆ ಭಾಗ್ಯನಗರ (ಬಾಗೇಪಲ್ಲಿ) ವ್ಯಾಪ್ತಿಯಲ್ಲಿ 2 ಸಾವಿರ ಹಕ್ಕುಪತ್ರ ಗಳನ್ನು ಒಟ್ಟುಗೂಡಿಸಿ, ವಸತಿ ಸಚಿವ ಜಮೀರ್ ಅಹ್ಮದ್ ರವರನ್ನು ಕರೆಸಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: Chikkaballapur News: ಬಿಜಿಎಸ್ ಶಾಲೆಯಲ್ಲಿ ಬೀಜದುಂಡೆ ಗಣಪನ ತಯಾರಿ ಮೂಲಕ ಪರಿಸರ ಜಾಗೃತಿ
ತಾಲೂಕಿನ ಹಲವು ಗ್ರಾಮಗಳ ನಿವೇಶನ ರಹಿತರು ಸೂರು ಕಟ್ಟಿಕೊಳ್ಳಲು ಅನೇಕ ಬಾರಿ ಮನವಿ ಮಾಡಿಕೊಂಡಿದ್ದರು ಅದರಂತೆ ತಾಲೂಕು ದಂಡಾಧಿಕಾರಿಗಳು ಅವಶ್ಯಕತೆ ಇರುವಷ್ಟು ಭೂಮಿ ಮಂಜೂರು ಮಾಡಿ, ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹಕ್ಕು ಪತ್ರಗಳನ್ನು ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೇನಹಳ್ಳಿ ಗ್ರಾಮದ ನಿವೇಶನ ರಹಿತ ಬಡವರಿಗೆ ನಿವೇಶನ ಹಂಚಿಕೆಮಾಡಲು ಸ್ಥಳೀಯವಾಗಿ ಕೆಲ ಸಮಸ್ಯೆಗಳು ಇದ್ದರಿಂದ ನಿವೇಶನಗಳಿಗೆ ಜಮೀನು ಮಂಜೂರು ಮಾಡುವುದು ತಡವಾಗಿತ್ತು, ಇಂದು ಆ ಎಲ್ಲ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಿ ಇಂದು ನಿವೇಶನಗಳ ಹಕ್ಕು ಪತ್ರಗಳ ಹಂಚಿಕೆ ಮಾಡುತ್ತಿದ್ದು ಇದನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಬಳಿಕ ಹಂಪಸಂದ್ರ ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ನಿವೇಶನ ರಹಿತರಿಗೆ ಜಾಗ ಮಂಜೂರು ಮಾಡುವಂತೆ ಕಳೆದ ನಾಲ್ಕು ವರ್ಷಗಳಿಂದ ಮನವಿ ಮಾಡಿಕೊಂಡಿದ್ದೆವು, ನಮ್ಮ ಮನವಿ ಹಾಗೂ ಬೇಡಿಕೆಗೆ ಸ್ಪಂದಿಸಿ ಇಂದು ನಿವೇಶನ ರಹಿತರಿಗೆ ಭೂಮಿ ಮಂಜೂರು ಮಾಡಿಕೊಡುವ ಮೂಲಕ ನಮ್ಮ ದಶಕಗಳ ಬೇಡಿಕೆಗೆ ಸ್ಪಂದಿಸಿರುವ ಶಾಸಕರಿಗೆ ಸದಾ ಚಿರಋಣಿಯಾಗಿರುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿಗ್ಬತ್ ವುಲ್ಲಾ, ತಾಪಂ ಇಒ ನಾಗಮಣಿ, ಹಂಪಸಂದ್ರ ಗ್ರಾಪಂ ಅಧ್ಯಕ್ಷ ಮುನಿಲಕ್ಷ್ಮಮ್ಮ, ಉಪಾಧ್ಯಕ್ಷರಾದ ಮುದ್ದುಗೌರಮ್ಮ, ಹಂಪಸಂದ್ರ ಗ್ರಾಪಂ ಪಿಡಿಒ ಮಮತಾ, ತಾಲೂಕು ಗ್ಯಾರೆಂಟಿ ಯೋಜನಾ ಸಮಿತಿಯ ಅಧ್ಯಕ್ಷ ಆದಿರೆಡ್ಡಿ, ಪಪಂ ಅಧ್ಯಕ್ಷ ವಿಕಾಸ್, ಕೆಡಿಪಿ ಸದಸ್ಯರು, ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಫಲಾನು ಭವಿಗಳು, ಸಾರ್ವಜನಿಕರು ಸೇರಿದಂತೆ ಹಲವರು ಹಾಜರಿದ್ದರು.