ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರದಲ್ಲಿ ಹಂದೂರು ಗ್ರಾಮದಿಂದ ಎನ್.ಆರ್.ಪುರಕ್ಕೆ ಸಂಪರ್ಕಿಸುವ ನೂತನ ಭದ್ರಾ ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಸಿಎಂ ನೆರವೇರಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಿದರು.
ಭದ್ರಾ ಡ್ಯಾಂ ಹಿನ್ನೀರಿನಿಂದ ಎನ್.ಆರ್.ಪುರ ತಾಲೂಕಿನ ಹಲವು ಗ್ರಾಮಗಳು ನೀರಿನಿಂದ ಆವೃತವಾಗಿ ಪಟ್ಟಣದಿಂದ ಸಂಪರ್ಕ ಕಳೆದುಕೊಂಡಿದ್ದವು. ಇದರಿಂದ ಉಂಟಾಗಿದ್ದ ಸಮಸ್ಯೆ ನಿವಾರಿಸಲು 34.86 ಕೋಟಿ ವೆಚ್ಚದಲ್ಲಿ ಭದ್ರಾ ಹಿನ್ನೀರಿನಲ್ಲಿ ಸೇತುವೆ ನಿರ್ಮಿಸಲಾಗಿದೆ. ಇದರಿಂದ ಹೊನ್ನೇಕೊಡಿಗೆ ಭಾಗದ ಜನರ ದಶಕಗಳ ಕನಸು ನನಸಾಗಿದೆ. ಈ ನೂತನ ಸೇತುವೆಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನೇ ಇಡಲಾಗಿದೆ.

ಹೊನ್ನೇಕೊಡಿಗೆ ಭಾಗದ ಜನರು ಎನ್ಆರ್ ಪುರ ಪೇಟೆಗೆ ಬರಬೇಕಿದ್ದರೆ ಸುಮಾರು 23 ಕಿ.ಮೀ. ಸುತ್ತಿಕೊಂಡು ಬರಬೇಕಿತ್ತು. ಆದರೀಗ ಕೇವಲ ಮೂರು ಕಿಮೀ ದೂರ ಪ್ರಯಾಣ ಮಾಡಿದರೆ ಸಾಕು. 38 ಕೋಟಿ ರೂ. ಅನುದಾನದಲ್ಲಿ 504 ಮೀಟರ್ ಉದ್ದದ ಸೇತುವೆ ಹಾಗೂ 1.2 ಕಿ.ಮೀ. ಸಂಪರ್ಕ ರಸ್ತೆ ನಿರ್ಮಾಣವಾಗಿದೆ. ಸುಮಾರು 15-20 ವರ್ಷಗಳ ಸುದೀರ್ಘ ಹೋರಾಟ ಇದಾಗಿತ್ತು. 2017ರಲ್ಲಿ ಶುರುವಾದ ಈ ಕೆಲಸ ಈಗ ಪೂರ್ಣಗೊಂಡಿದೆ. ಪೇಟೆಗೆ ಬಂದು ವಾಪಸ್ ಹೋಗುವುದೆಂದರೆ ಅದು ಒಂದು ಇಡೀ ದಿನದ ಕೆಲಸವಾಗಿತ್ತು. ಈಗ ಕೆಲವು ಗಂಟೆಗಳಲ್ಲಿ ಬಂದು ಹೋಗಬಹುದು. ಇದರ ಜತೆಗೆ ಲಕ್ಕುಂದ, ಸಾಲೂರು, ಬಿಳಳ್ಕೊಪ್ಪ ಸೇರಿದಂತೆ ಏಳು ಗ್ರಾಮಗಳ 2000 ಜನಗಳಿಗೆ ಇದು ಅನುಕೂಲವಾಗಲಿದೆ.

ಈ ಸೇತುವೆ ನಿರ್ಮಾಣವಾಗಲು ಮುಖ್ಯ ಕಾರಣ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಶ್ರೀನಿವಾಸ್. ಇವರು ಎನ್ಆರ್ ಪುರದವರೇ ಆಗಿದ್ದರಿಂದ ಅಲ್ಲಿನ ಜನರ ಕಷ್ಟಗಳನ್ನು ತಿಳಿದುಕೊಂಡಿದ್ದರು. ಹೀಗಾಗಿ ತಾವೇ ನೇತೃತ್ವ ವಹಿಸಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಸೇತುವೆ ನಿರ್ಮಾಣಕ್ಕೆ ಬೇಕಾದ ಧನ ಸಹಾಯದ ಜತೆಗೆ ಎಲ್ಲ ಬೆಂಬಲವನ್ನು ಪಡೆಯಲು ಸಹಾಯ ಮಾಡಿದ್ದಾರೆ.
N R Pura Bridge: ಮಲೆನಾಡಿನ ಸಂಪರ್ಕ ಕ್ರಾಂತಿ
ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡ, ಕಡೂರು ಶಾಸಕರಾದ ಆನಂದ್, ತರೀಕೆರೆ ಶಾಸಕರಾದ ಶ್ರೀನಿವಾಸ್, ಮಾಗಡಿ ಶಾಸಕ ಬಾಲಕೃಷ್ಣ ಸೇರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಮುಖಂಡರು ಹಾಗೂ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕೆಎಸ್ಟಿಡಿಸಿ ಅಧ್ಯಕ್ಷರಾದ ಸರೋವರ್ ಶ್ರೀನಿವಾಸ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.