ಚಿಕ್ಕಮಗಳೂರು, ಏ.10 : ಕಳೆದ ನಾಲ್ಕು ದಿನಗಳಿಂದ ಚಿಕ್ಕಮಗಳೂರು (chikkamagaluru) ತಾಲೂಕಿನ ಚಂದ್ರದ್ರೋಣ ಪರ್ವತದ ಮಾಣಿಕ್ಯಧಾರಾದಲ್ಲಿ (manikyadhara) ನಾಪತ್ತೆಯಾಗಿದ್ದ ಬಾಲಕಿ ಶ್ರೀನಂದ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ಯಾರಾದರೂ ಕಿಡ್ನಾಪ್ (kidnap) ಮಾಡಿರಬಹುದು ಎಂದು ಆಕೆಯ ತಾಯಿ ನಿನ್ನೆ ಸಂಶಯ ವ್ಯಕ್ತಪಡಿಸಿದ್ದರು. ಆದರೆ ಬಾಲಕಿಯ ಶವ ಸುಮಾರು 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ.
ನಾಲ್ಕು ದಿನಗಳಿಂದ ಶ್ರೀನಂದಗಾಗಿ ಬಹಳ ಹುಡುಕಾಟ ನಡೆಸಲಾಗಿತ್ತು. ಚಿಕ್ಕಮಂಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಶೋಲಾ ಪ್ರದೇಶದಲ್ಲಿ ಈಕೆ ನಾಪತ್ತೆಯಾಗಿದ್ದಳು. ಈಕೆ ಕೂಡ ಕೇರಳ ಮೂಲದ ಬಾಲಕಿಯಾಗಿದ್ದು, 41 ಮಂದಿಯ ಜೊತೆಗೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದಳು. ಒಂದು ಹಂತದಲ್ಲಿ ಈಕೆ ಕುಟುಂಬದಿಂದ ಬೇರ್ಪಟ್ಟಿದ್ದಳು. ಅದಕ್ಕೂ ಮುನ್ನ ಆಕೆ ಲವಲವಿಕೆಯಿಂದ ರೀಲ್ಸ್ ಮಾಡಿದ್ದು ಕಂಡುಬಂದಿತ್ತು.
ಕೊಡಗಿನ ತಡಿಯಂಡಮೋಳ್ನಲ್ಲಿ ನಾಪತ್ತೆಯಾಗಿದ್ದ ಶರಣ್ಯ ಎಂಬ ಕೇರಳದ ಯುವತಿ ನಾಲ್ಕು ದಿನದ ಬಳಿಕ ಪತ್ತೆಯಾದ ಹಿನ್ನೆಲೆಯಲ್ಲಿ, ಈಕೆ ಕೂಡ ಪತ್ತೆಯಾಗಬಹುದು ಎಂಬ ಆಸೆ ಇತ್ತು. ಆದರೆ ಶ್ರೀನಂದ ಶವ ಪತ್ತೆಯಾಗಿರುವುದು ಕುಟುಂಬಸ್ಥರನ್ನು ತೀರದ ದುಃಖದಲ್ಲಿ ಕೆಡವಿದೆ. ಮಾಣಿಕ್ಯಧಾರಾದಿಂದ 2000 ಅಡಿ ಕೆಳಗಡೆ ಆಕೆಯ ದೇಹ ಪತ್ತೆಯಾಗಿದೆ.
ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆಯೇ, ಆತ್ಮಹತ್ಯೆ ಮಾಡಿಕೊಂಡಿರಬಹುದೇ, ಅಥವಾ ಯಾರಾದರೂ ನೂಕಿರಬಹುದೇ, ಆಕೆ ಪ್ರತ್ಯೇಕವಾಗಿದ್ದನ್ನು ಅಥವಾ ಬಿದ್ದುದನ್ನು ಯಾರಾದರೂ ನೋಡಿದ್ದಾರಾ ಎಂಬಿತ್ಯಾದಿಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಬೇಸಿಗೆ ರಜೆಯಾಗಿದ್ದು, ಈ ಪ್ರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕಾವಾಗಿದೆ. ಆದರೂ ಈಕೆ ಬಿದ್ದುದನ್ನು ಯಾರೂ ನೋಡಿಲ್ಲದಿರುವುದು ಇನ್ನಷ್ಟು ಸಂಶಯಕ್ಕೆ ಕಾರಣವಾಗಿದೆ.